ಕನ್ನಡ ಸುದ್ದಿ  /  Nation And-world  /  Aap Ministers Who Went Jail Aap Arvind Kejriwal Ministers Who Went Jail Before Manish Sisodia And Satyendar Jain

AAP ministers who went jail: ಪಡಿತರಕ್ಕಾಗಿ ರೇಪ್‌, ನಕಲಿ ಕಾನೂನು ಪದವಿ, ಭ್ರಷ್ಟಾಚಾರ ಪ್ರಕರಣ; ಜೈಲು ಸೇರಿದ ಆಪ್‌ ಸಚಿವರ ಸಂಖ್ಯೆ 5

AAP ministers who went jail: ಆಮ್‌ ಆದ್ಮಿ ಪಾರ್ಟಿ ದೆಹಲಿಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿದು ಹೆಚ್ಚು ಕಡಿಮೆ ದಶಕ. ಈ ಅವಧಿಯಲ್ಲಿ ಭ್ರಷ್ಟಾಚಾರ ಸೇರಿ ವಿವಿಧ ಹಗರಣಗಳ ಕಾರಣ ಜೈಲು ಸೇರಿದ ಸಚಿವರ ಸಂಖ್ಯೆ 5. ಈ ಪೈಕಿ ಪಕ್ಷದ ಪ್ರಭಾವಿ ನಾಯಕರೂ ಸೇರಿರುವುದು ಗಮನಾರ್ಹ.

ಅರವಿಂದ್‌ ಕೇಜ್ರಿವಾಲ್‌ (ಸಂಗ್ರಹ ಚಿತ್ರ)
ಅರವಿಂದ್‌ ಕೇಜ್ರಿವಾಲ್‌ (ಸಂಗ್ರಹ ಚಿತ್ರ) (ANI)

ಕೇವಲ ಒಂದು ದಶಕದ ಅವಧಿಯಲ್ಲಿ ಚುನಾವಣಾ ರಾಜಕೀಯದಲ್ಲಿ ಭಾರಿ ಯಶಸ್ಸು ಕಂಡ ಆಮ್‌ ಆದ್ಮಿ ಪಕ್ಷ (ಎಎಪಿ) ನಾಯಕರು ಹಲವರು ವಿವಾದಗಳಿಗೆ ಗುರಿಯಾದರು. ಮನೀಶ್‌ ಸಿಸೋಡಿಯಾ, ಸತ್ಯೇಂದ್ರ ಜೈನ್‌ ಅವರಿಗಿಂತ ಮೊದಲೇ ಅರವಿಂದ ಕೇಜ್ರಿವಾಲ್‌ ಸಂಪುಟದ ಸಚಿವರು ಈ ರೀತಿ ವಿವಾದಕ್ಕೆ ಈಡಾಗಿದ್ದರು.

ಆಮ್‌ ಆದ್ಮಿ ಪಕ್ಷದ ಹುಟ್ಟಿನ ಮೂಲ ದಶಕದ ಹಿಂದೆ ನಡೆದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ. ದೆಹಲಿಯಲ್ಲಿ ಬಹುಬೇಗನೆ ಚುನಾವಣಾ ಯಶಸ್ಸನ್ನು ಅದು ಪಡೆಯಿತು. ಅಷ್ಟೇ ವೇಗದಲ್ಲಿ ಅದನ್ನು ಕಳೆದುಕೊಳ್ಳುವ ಕಡೆಗೂ ಸಾಗತೊಡಗಿದೆ.

ಕೇವಲ 10 ವರ್ಷಗಳಲ್ಲಿ ಪಕ್ಷಕ್ಕೆ 'ರಾಷ್ಟ್ರೀಯ' ಸ್ಥಾನಮಾನವನ್ನು ಸಾಧಿಸಬೇಕು ಎಂದು ಪ್ರತಿಪಾದಿಸುತ್ತಿದ್ದ ಪಕ್ಷದ ಹಲವು ನಾಯಕರು ಭ್ರಷ್ಟಾಚಾರ ಸೇರಿ ವಿವಿಧ ಹಗರಣಗಳಲ್ಲಿ ಸಿಲುಕಿ ಜೈಲಿಗೆ ಹೋದರು. ಇದುವರೆಗೆ ಎಎಪಿಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರ ಆಪ್ತವಲಯದ 5 ಸಚಿವರು ಸೆರೆಮನೆಯಲ್ಲಿದ್ದಾರೆ.

ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್‌ಗಿಂತ ಮುಂಚೆಯೇ, ಪಡಿತರ ಚೀಟಿಗೆ ಬದಲಾಗಿ ಅತ್ಯಾಚಾರ ಪ್ರಕರಣ, ನಕಲಿ ಪದವಿ ಪ್ರಮಾಣಪತ್ರ ಮತ್ತು ಇತರೆ ಭ್ರಷ್ಟಾಚಾರ ಪ್ರಕರಣದಲ್ಲಿ ಮೂವರು ಸಚಿವರ ಬಂಧನವಾಗಿದೆ. ಪಂಜಾಬ್‌ನಲ್ಲೂ ಇಬ್ಬರು ಸಚಿವರ ಬಂಧನವಾಗಿದೆ.

ಅಬಕಾರಿ ನೀತಿ ಹಗರಣದಲ್ಲಿ ಮನೀಶ್ ಸಿಸೋಡಿಯಾ ಬಂಧನ

ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ, ಹಣಕಾಸು, ಅಬಕಾರಿ ಸೇರಿದಂತೆ 18 ಇಲಾಖೆಗಳ ಉಸ್ತುವಾರಿ ಮನೀಷ್ ಸಿಸೋಡಿಯಾ ಅವರನ್ನು ಅಬಕಾರಿ ನೀತಿಯ ಹಗರಣದಲ್ಲಿ ಬಂಧಿಸಲಾಗಿದೆ. ಸಿಸೋಡಿಯಾ ಅವರು ಅಬಕಾರಿ ಸಚಿವರಾಗಿದ್ದಾಗ ಮದ್ಯದ ವ್ಯಾಪಾರಿಗಳಿಗೆ ಲಾಭ ಮಾಡಿ ಕೊಟ್ಟರೆಂಬ ಆರೋಪ ಎದುರಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಪಕ್ಷವು 100 ಕೋಟಿ ರೂಪಾಯಿ ಲಂಚವನ್ನು ಪಡೆದಿದೆ ಎಂಬ ಆರೋಪವೂ ಇದೆ.

ಅಬಕಾರಿ ನೀತಿ ಹಗರಣದಲ್ಲಿ ಸಿಸೋಡಿಯಾ ಅವರನ್ನು ಸಿಬಿಐ ಮತ್ತು ಇಡಿ ಆರೋಪಿಗಳ ಪಟ್ಟಿಗೆ ಸೇರಿಸಿವೆ. ಅವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಸಾಕ್ಷ್ಯಗಳನ್ನು ಕಲೆ ಹಾಕಲು ಶೋಧ ನಡೆಸಿದ್ದವು. ಸಿಸೋಡಿಯಾ ಅವರು ಆರೋಪಿ ಎಂದು ಸಾಬೀತು ಮಾಡುವುದಕ್ಕೆ ಅಗತ್ಯ ಸಾಕ್ಷ್ಯಗಳು ಸಿಕ್ಕಿವೆ ಎಂದು ತನಿಖಾ ಸಂಸ್ಥೆಗಳು ಹೇಳಿಕೊಂಡಿವೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸತ್ಯೇಂದ್ರ ಜೈನ್

ಕೇಜ್ರಿವಾಲ್ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಸತ್ಯೇಂದ್ರ ಜೈನ್ ಅವರನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಅವರು ಅಂದಿನಿಂದ ಜೈಲಿನಲ್ಲಿದ್ದಾರೆ. ತಿಹಾರ್‌ನಲ್ಲಿ ಕೈದಿಗಳಿಂದ ಮಸಾಜ್ ಪಡೆದ ಆರೋಪ ಮತ್ತು ಜೈಲಿನಲ್ಲಿ ಸುಖೇಶ್ ಚಂದ್ರಶೇಖರ್‌ನಿಂದ ಸುಲಿಗೆ ಮಾಡಿದ ಆರೋಪವೂ ಇದೆ. ಕಳೆದ 9 ತಿಂಗಳಲ್ಲಿ ಕೇಜ್ರಿವಾಲ್ ಸರ್ಕಾರ ಸತ್ಯೇಂದ್ರ ಜೈನ್‌ ಕಾರಣಕ್ಕೆ ಸಾಕಷ್ಟು ಟೀಕೆಗಳನ್ನು ಎದುರಿಸಿತು. ಆದಾಗ್ಯೂ, ಎಎಪಿ ನಿರಂತರವಾಗಿ ಜೈನ್‌ ನಿರಪರಾಧಿ ಎಂದು ಸಮರ್ಥಿಸಿಕೊಂಡು ಬಂದಿದೆ.

ಪಡಿತರ ಚೀಟಿಗಾಗಿ ಅತ್ಯಾಚಾರ ಎಸಗಿದ ಸಂದೀಪ್ ಜೈಲಿಗೆ

ಕೇಜ್ರಿವಾಲ್‌ ಸರ್ಕಾರದಲ್ಲಿ ಸಚಿವರಾಗಿದ್ದ ಸಂದೀಪ್‌ ಕುಮಾರ್‌ ಅವರ ಅಶ್ಲೀಲ ಸಿಡಿಗಳು 2016ರ ಸೆಪ್ಟೆಂಬರ್‌ನಲ್ಲಿ ಬಹಿರಂಗವಾಗಿ ರಾಜಕೀಯ ಸಂಚಲನಕ್ಕೆ ಕಾರಣವಾಗಿತ್ತು. ಟಿವಿ ಚಾನೆಲ್‌ಗಳಲ್ಲಿ ಈ ಸುದ್ದಿ ಪ್ರಸಾರವಾದ ಬಳಿಕ ಆ ಸಂತ್ರಸ್ತ ಮಹಿಳೆ ಸುಲ್ತಾನ್‌ಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪಡಿತರ ಚೀಟಿ ಕೊಡಿಸುವ ನೆಪದಲ್ಲಿ ಸಚಿವರು ಅತ್ಯಾಚಾರವೆಸಗಿದರು ಎಂದು ಆಕೆ ದೂರಿನಲ್ಲಿ ಆರೋಪಿಸಿದರು. ಮತ್ತು ಬರುವ ಔಷಧ ಕುಡಿಸಿ ಅತ್ಯಾಚಾರ ಎಸಗಿ ವಿಡಿಯೋ ಮಾಡಿದ್ದ ಎಂದು ಆಕೆ ದೂರಿನಲ್ಲಿ ತಿಳಿಸಿದ್ದರು. ಗಮನಾರ್ಹ ಅಂಶ ಎಂದರೆ ಸಂದೀಪ್‌ ಅವರು ಕೇಜ್ರಿವಾಲ್‌ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದರು.

ಪೊಲೀಸರು ಸಂದೀಪ್‌ ಅವರನ್ನು ಬಂಧಿಸಿದಾಗ, ಅವರ ಸಚಿವ ಸ್ಥಾನ ಹೋಗಿತ್ತು. ಆಗ, ಆ ವಿಡಿಯೋ ನಕಲಿ ಎಂದು ಅಲವತ್ತುಕೊಂಡಿದ್ದ ಸಂದೀಪ್‌, ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದರು.

ನಕಲಿ ಕಾನೂನು ಪದವಿಗಾಗಿ ಕಾನೂನು ಸಚಿವ ಬಂಧನ

ಕೇಜ್ರಿವಾಲ್ ಸರ್ಕಾರದ ಆಗಿನ ಕಾನೂನು ಸಚಿವ ಜಿತೇಂದ್ರ ತೋಮರ್ ಅವರನ್ನು ನಕಲಿ ಪದವಿ ಪ್ರಕರಣದಲ್ಲಿ 2015ರ ಜೂನ್ ನಲ್ಲಿ ಬಂಧಿಸಲಾಯಿತು. ತೋಮರ್ ವಿರುದ್ಧ ವಂಚನೆ, ಕ್ರಿಮಿನಲ್ ಪಿತೂರಿ ಸೇರಿದಂತೆ ಐಪಿಸಿಯ ಹಲವು ಸೆಕ್ಷನ್‌ಗಳ ಪ್ರಕಾರ ಪ್ರಕರಣ ದಾಖಲಾಗಿತ್ತು. ಜಿತೇಂದ್ರ ತೋಮರ್ ಅವರ ಪದವಿ ಮತ್ತು ಎಲ್‌ಎಲ್‌ಬಿ ಪದವಿಗಳು ನಕಲಿ ಎಂದು ಆರೋಪಿಸಲಾಗಿತ್ತು.

ಬಿಹಾರದ ತಿಲ್ಕಾ ಮಾಂಝಿ ವಿಶ್ವವಿದ್ಯಾಲಯ ಕೂಡ ದೆಹಲಿ ಹೈಕೋರ್ಟ್‌ಗೆ ತೋಮರ್ ಪದವಿ ಪ್ರಮಾಣ ಪತ್ರ ನಕಲಿ ಎಂದು ಹೇಳಿದೆ. 2020ರ ಜನವರಿಯಲ್ಲಿ ಸಚಿವ ಸ್ಥಾನ ಮಾತ್ರವಲ್ಲದೆ, ವಿಧಾನಸಭೆ ಸದಸ್ಯತ್ವವನ್ನೂ ಹೈಕೋರ್ಟ್ ರದ್ದುಗೊಳಿಸಿತು. ತೋಮರ್ 2015ರಲ್ಲಿ ತ್ರಿನಗರ ಕ್ಷೇತ್ರದಿಂದ ಗೆದ್ದಿದ್ದರು.

ಬಿಲ್ಡರ್ ನಿಂದ ಲಂಚ ಪಡೆದ ಆರೋಪ ಅಸೀಮ್ ಅಹ್ಮದ್ ಮೇಲಿತ್ತು

ದೆಹಲಿ ಸರ್ಕಾರದ ಸಚಿವ ಅಸೀಮ್ ಅಹ್ಮದ್ ಖಾನ್ 2018 ರಲ್ಲಿ ಬಿಲ್ಡರ್ ನಿಂದ 6 ಲಕ್ಷ ರೂಪಾಯಿ ಲಂಚ ಪಡೆದ ಆರೋಪ ಎದುರಿಸಿದ್ದರು.

ಆಡಿಯೋ ಟೇಪ್ ಹೊರಬಿದ್ದ ನಂತರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಸಿಮ್ ಅವರನ್ನು ವಜಾಗೊಳಿಸಿದ್ದರು. ಆಗ ಸುದ್ದಿಗೋಷ್ಠಿ ನಡೆಸಿದ ಅರವಿಂದ ಕೇಜ್ರಿವಾಲ್‌, ಯಾರೇ ಆಗಲಿ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಸ್ವತಃ ತನ್ನದೇ ಅಥವಾ ಮನೀಶ್ ಸಿಸೋಡಿಯಾ ಅವರ ಯಾವುದೇ ಭ್ರಷ್ಟಾಚಾರ ಬೆಳಕಿಗೆ ಬಂದರೆ, ಅವರನ್ನೂ ಬಿಡುವುದಿಲ್ಲ ಎಂದು ಹೇಳಿದ್ದರು.

ಅಸೀಮ್ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದರು. ಆದರೆ ತರುವಾಯ, ಕೇಜ್ರಿವಾಲ್‌ ಅವರಿಂದ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಅಸೀಮ್‌ ಹೇಳಿದ್ದರು.

ಜೈಲಿಗೆ ಹೋದ ಇನ್ನು ಕೆಲವರು...

ಬೇರೆ ಬೇರೆ ವಿವಾದಗಳಲ್ಲಿ ಬಂಧಿತರಾಗಿರುವ ಆಪ್ ನಾಯಕರ ಪಟ್ಟಿ ದೊಡ್ಡದಿದೆ. ಅವರಲ್ಲಿ ಸೋಮನಾಥ ಭಾರ್ತಿ ಅವರ ಹೆಸರು ಪ್ರಮುಖವಾದುದು.

ಕೇಜ್ರಿವಾಲ್ ಸರ್ಕಾರದಲ್ಲಿ ಸಚಿವರೂ ಆಗಿದ್ದ ಅವರು, ಅವರ ಪತ್ನಿಯಿಂದಲೇ ಕೌಟುಂಬಿಕ ದೌರ್ಜನ್ಯ ಪ್ರಕರಣ ಎದುರಿಸಿದ್ದರು. 2014 ರಲ್ಲಿ ವಿವಾದಗಳ ನಡುವೆ ಸೋಮನಾಥ್ ಭಾರ್ತಿ ರಾಜೀನಾಮೆ ನೀಡಬೇಕಾಯಿತು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ 8 ದಿನ ಜೈಲು ವಾಸ ಅನುಭವಿಸಿದ್ದರು. ಅವರಿಗೆ ಜಾಮೀನು ಸಿಕ್ಕಿದೆ.

ಇನ್ನು, ವಕ್ಫ್ ಮಂಡಳಿಯ ಭ್ರಷ್ಟಾಚಾರದ ಆರೋಪದ ಮೇಲೆ ಶಾಸಕ ಅಮಾನತುಲ್ಲಾ ಖಾನ್ ಕೂಡ ಜೈಲಿಗೆ ಹೋಗಿದ್ದಾರೆ.

ಇತ್ತೀಚೆಗೆ ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾದವರ ಪಟ್ಟಿಯಲ್ಲಿ ಶಾಸಕ ಪ್ರಕಾಶ್ ಜರ್ವಾಲ್ ಅಥವಾ ವಿಜಯ್ ನಾಯರ್ ಕೂಡ ಇದ್ದಾರೆ. ಹೀಗೆ ಎಎಪಿ ವಿವಾದಾತ್ಮಕ ಮುಖಗಳಿಗೆ ಏನೂ ಕೊರತೆ ಇಲ್ಲ.

IPL_Entry_Point