ಕನ್ನಡ ಸುದ್ದಿ  /  Nation And-world  /   Adani Issue Wont Accept Sealed Cover Suggestions Supreme Court To Centre

Adani issue: ಅದಾನಿ-ಹಿಂಡೆನ್‌ಬರ್ಗ್ ವಿಚಾರದಲ್ಲಿ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಶಾಕ್; ಮುಚ್ಚಿದ ಲಕೋಟೆ ಸ್ವೀಕರಿಸಲು ನಕಾರ

ಅದಾನಿ-ಹಿಂಡೆನ್‌ಬರ್ಗ್ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶಾಕ್ ನೀಡಿದ್ದು, ವಿವಾದವನ್ನು ಪರಿಶೀಲಿಸಲು ರಚಿಸಲಾಗುವ ಸಮಿತಿಯಲ್ಲಿ ಸೇರಿಸಲು ಕೆಲವು ತಜ್ಞರ ಹೆಸರುಗಳನ್ನು ಮುಚ್ಚಿದ ಲಕೋಟೆಯಲ್ಲಿ ಸ್ವೀಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಅದಾನಿ-ಹಿಂಡೆನ್‌ಬರ್ಗ್ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಕೊಂಚ ಹಿನ್ನಡೆಯಾಗಿದೆ. ಅದಾನಿ ಗ್ರೂಪ್-ಹಿಂಡನ್ ಬರ್ಗ್ ವಿವಾದವನ್ನು ಪರಿಶೀಲಿಸಲು ರಚಿಸಲಾಗುವ ಸಮಿತಿಯಲ್ಲಿ ಸೇರಿಸಲು ಕೆಲವು ತಜ್ಞರ ಹೆಸರುಗಳನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ಸಲ್ಲಿಸಲು ಕೇಂದ್ರ ಸರ್ಕಾರ ಮುಂದಾಗಿತ್ತು. ಆದರೆ ಈ ಲಕೋಟೆಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ನಿನ್ನೆ (ಫೆ.17, ಶುಕ್ರವಾರ) ನಡೆದ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶಾಕ್ ಕೊಟ್ಟಿತ್ತು. ಅದಾನಿ ಗ್ರೂಪ್ -ಹಿಂಡನ್ ಬರ್ಗ್ ಸಮಸ್ಯೆಯನ್ನು ಪರಿಶೀಲಿಸಲು ರಚಿಸಲಾಗುವ ಸಮಿತಿಯಲ್ಲಿ ಒಂದಿಷ್ಟು ತಜ್ಞರ ಹೆಸರುಗಳನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿತ್ತು.

ಆದರೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾ. ಪಿ.ಎಸ್‌. ನರಸಿಂಹನ್‌, ನ್ಯಾ. ಜೆ.ಬಿ. ಪರಿವಾಲಾ ಅವರಿದ್ದ ತ್ರಿಸದಸ್ಯ ನ್ಯಾಯಪೀಠವು, ಈ ವಿಚಾರದಲ್ಲಿ ನಾವು ಪೂರ್ಣ ಪ್ರಮಾಣದ ಪಾರದರ್ಶಕತೆ ಬಯಸುತ್ತೇವೆ. ಹೂಡಿಕೆದಾರರ ಹಿತ ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ.

ನಾವೇ ಸಮಿತಿ ರಚಿಸುತ್ತೇವೆ. ಆಗ ನ್ಯಾಯಾಲಯದ ಮೇಲೆ ವಿಶ್ವಾಸ ಮೂಡಲಿದೆ ಎಂದು ವಿಚಾರಣೆ ವೇಳೆ ಸಿಜೆಐ ಹೇಳಿದ್ದಾರೆ.

ಫೆಬ್ರವರಿ 10 ರಂದು, ಅದಾನಿ ಗ್ರೂಪ್ ವಿರುದ್ಧ ಸ್ಟಾಕ್ ಮ್ಯಾನಿಪ್ಯುಲೇಷನ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಾರುಕಟ್ಟೆ ನಿಯಂತ್ರಣ ಕಾರ್ಯವಿಧಾನವನ್ನು ಬಲಪಡಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ತಜ್ಞರ ಸಮಿತಿಯನ್ನು ರಚಿಸಲು ಸುಪ್ರೀಂ ಕೋರ್ಟ್ ಕೇಂದ್ರವನ್ನು ಕೇಳಿತ್ತು.

ಈ ಸಮಿತಿಯ ಭಾಗವಾಗಬಹುದಾದ ಸಂಭಾವ್ಯ ಸದಸ್ಯರ ಹೆಸರನ್ನು ಸೂಚಿಸುವ ಟಿಪ್ಪಣಿಯನ್ನು ಕೇಂದ್ರವು ಶುಕ್ರವಾರ ನ್ಯಾಯಾಲಯಕ್ಕೆ ಮುಚ್ಚಿದ ಕವರ್‌ನಲ್ಲಿ ಸಲ್ಲಿಸಲು ಮುಂದಾಗಿತ್ತು.

ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಎಸ್ ನರಸಿಂಹ ಮತ್ತು ಜೆಬಿ ಪರಿವಾಲಾ ಅವರಿದ್ದ ತ್ರಿಸದಸ್ಯ ಪೀಠವು ಸಮಿತಿ ರಚನೆಯ ಬಗ್ಗೆ ತನ್ನದೇ ಆದ ಸಂಶೋಧನೆ ಮತ್ತು ಕಾಯ್ದಿರಿಸುವ ಆದೇಶವನ್ನು ಮಾಡುವ ಮೂಲಕ ಸಮಿತಿಯನ್ನು ರಚಿಸುವುದಾಗಿ ಹೇಳಿದೆ.

ಅದಾನಿ-ಹಿಂಡೆನ್‌ಬರ್ಗ್ ಸಮಸ್ಯೆಗೆ ಸಂಬಂಧಿಸಿದಂತೆ ವಕೀಲರಾದ ಎಂಎಲ್ ಶರ್ಮಾ ಮತ್ತು ವಿಶಾಲ್ ತಿವಾರಿ, ಕಾಂಗ್ರೆಸ್ ನಾಯಕ ಜಯಾ ಠಾಕೂರ್ ಮತ್ತು ಕಾರ್ಯಕರ್ತ ಮುಖೇಶ್ ಕುಮಾರ್ ಅವರು ಇದುವರೆಗೆ ನಾಲ್ಕು ಸಾರ್ವಜನಿಕ ಹಿತಾಸಕ್ತಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದಾರೆ. ಎಂಎಲ್ ಶರ್ಮಾ ಹಿಂಡೆನ್‌ಬರ್ಗ್ ಬಗ್ಗೆಯೂ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಅದಾನಿ ಸಾಮ್ರಾಜ್ಯಕ್ಕೆ ಆಘಾತ ನೀಡಿದ ಒಂದೇ ಒಂದು ವರದಿ

ಒಂದೇ ಒಂದು ವರದಿಯ ಪರಿಣಾಮವಾಗಿ ಅದಾನಿ ಸಮೂಹದ ಷೇರುಗಳನ್ನು ಖರೀದಿಸಿದ್ದ ಹೂಡಿಕೆದಾರರು ಪಾತಾಳಕ್ಕೆ ಕುಸಿಯುವಂತೆ ಮಾಡಿದ್ದು, ಈವರೆಗೆ ಸುಮಾರುಪ 12 ಲಕ್ಷ ಕೋಟಿ ರೂಪಾಯಿ ಸಂಪತ್ತು ಕರಗಿ ಹೋಗಿದೆ.

ಹಿಂಡೆನ್ ಬರ್ಗ್ ರಿಸರ್ಚ್ ಸೃಷ್ಟಿಸಿದ ಕೋಲಾಹಲದೊಂದಿಗೆ ದೇಶೀಯ ಷೇರುಪೇಟೆಯಲ್ಲಿ ಅದಾನಿ ಸಮೂಹದ ಷೇರುಗಳು ತೀವ್ರ ಕುಸಿತ ಕಂಡಿವೆ.

ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ ಹೂಡಿಕೆ ಸಂಸ್ಥೆಯು ಅದಾನಿ ಗ್ರೂಪ್‌ನ ಆರ್ಥಿಕ ಸ್ಥಿತಿಗತಿಗಳ ಕುರಿತು ಸಂಚಲನ ವರದಿಯನ್ನು ಬಿಡುಗಡೆ ಮಾಡಿತ್ತು. ಅದಾನಿ ಸಮೂಹದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ತನ್ನ ವರದಿಯಲ್ಲಿ ವಿವರಿಸಿತ್ತು.

ಎಲ್ಲವೂ ಸರಿಯಾಗಿದೆ ಎಂದು ಹೊರಜಗತ್ತಿಗೆ ತೋರಿಸಲು ಅದಾನಿ ಸಿಬ್ಬಂದಿ ತಪ್ಪು ದಾರಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ ಎಂದು ಉಲ್ಲೇಖಿಸಿತ್ತು. ಇದರಿಂದಾಗಿ ಅದಾನಿ ಸಮೂಹದ ಷೇರುಗಳು ಪಾತಾಳಕ್ಕೆ ಕುಸಿದಿವೆ. ಅಲ್ಲದೆ, ಜಗತ್ತಿನ ಅಗ್ರ ಶ್ರೀಮಂತರ ಪಟ್ಟಿಯಿಂದ ಗೌತಮ್ ಅದಾನಿ ಹೊರ ಬಿದ್ದಿದ್ದಾರೆ. ಭಾರತದಲ್ಲೂ ಅವರು ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

IPL_Entry_Point