ಪಾಕಿಸ್ತಾನದಿಂದ ನಿಲ್ಲದ ದಾಳಿ; ಪಠಾಣ್ಕೋಟ್ ಜಮ್ಮು, ಹಿಮಾಚಲಪ್ರದೇಶ ಭಾಗದಲ್ಲಿ ಕ್ಷಿಪಣಿ, ಡ್ರೋಣ್ ಹಾರಾಟ; ಭಾರತದ ತಿರುಗೇಟು
ಭಾರತದ ಎಚ್ಚರಿಕೆ ನಡುವೆಯೂ ಪಾಕಿಸ್ತಾನವು ಕಾಶ್ಮೀರದಲ್ಲಿ ದಾಳಿಯನ್ನು ಮುಂದುವರಿಸಿದ್ದು ಗುರುವಾರ ರಾತ್ರಿ ಜಮ್ಮು, ಪಠಾಣ್ಕೋಟ್ ಸಹಿತ ಗಡಿ ಭಾಗದ ಹಲವೆಡೆ ಕ್ಷಿಪಣಿಗಳ ಜತೆ ಡ್ರೋಣ್ ಹಾರಾಡಿದ ವರದಿಯಾಗಿವೆ.

ದೆಹಲಿ: ಪಾಕಿಸ್ತಾನದ ವರ್ತನೆಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಭಾರತ ನೀಡಿದ ಎಚ್ಚರವನ್ನೂ ಲೆಕ್ಕಿಸದೇ ಪಾಕಿಸ್ತಾನವು ಗುರುವಾರ ರಾತ್ರಿ ಭಾರತದ ಗಡಿ ಭಾಗದಲ್ಲಿ ಕ್ಷಿಪಣಿ ಹಾಗೂ ಡ್ರೋಣ್ ಮೂಲಕ ದಾಳಿಯನ್ನು ಮುಂದುವರಿಸಿದೆ. ರುವಾರ ರಾತ್ರಿ ಜಮ್ಮು, ಪಂಜಾಬ್ನ ಪಠಾಣ್ಕೋಟ್ ಸಹಿತ ಗಡಿ ಭಾಗದ ಹಲವೆಡೆ ಕ್ಷಿಪಣಿಗಳ ಜತೆ ಡ್ರೋಣ್ ಹಾರಾಡಿದ ವರದಿಯಾಗಿವೆ. ಭಾರತದ ಸೇನಾ ಪಡೆಗಳು ಇದಕ್ಕೆ ತಕ್ಕ ಉತ್ತರ ನೀಡಿವೆ ಎಂದು ವರದಿಯಾಗಿದೆ.ಸತ್ವಾರಿ, ಸಾಂಬಾ, ಆರ್ ಎಸ್ ಪುರ ಮತ್ತು ಅರ್ನಿಯಾ ಮೇಲೆ ನಿರ್ದೇಶಿಸಲಾದ 8 ಪಾಕಿಸ್ತಾನಿ ಕ್ಷಿಪಣಿಗಳನ್ನು ಭಾರತ ಗುರುವಾರ ರಾತ್ರಿ ತಡೆದಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಪಾಕಿಸ್ತಾನದ ಎಫ್-16 ಸೂಪರ್ ಸಾನಿಕ್ ಜೆಟ್ ಅನ್ನು ಭಾರತ ಹೊಡೆದು ಉರುಳಿಸಿದೆ ಎನ್ನಲಾಗುತ್ತಿದೆ. ಈ ವೇಳೆ ಸ್ಪೋಟಗಳು ಆಲ್ಲಿ ಆಗಿವೆ. ಸ್ಫೋಟದ ನಂತರ ಜಮ್ಮು ನಿವಾಸಿಗಳಲ್ಲಿ ಭೀತಿ ಉಂಟಾಗಿತ್ತು. ಹಲವು ಭಾಗದಲ್ಲಿ ಕತ್ತಲ ವಾತಾವರಣ,ಮುಗಿಲಲ್ಲಿ ಕ್ಷಿಪಣಿಗಳ ಹಾರಾಟ ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಬಹುದು ಎನ್ನುವ ವಾತಾವರಣ ನಿರ್ಮಾಣವಾಗುತ್ತಿದೆ.
"ಜಮ್ಮುವಿನಲ್ಲಿ ಸಂಪೂರ್ಣ ವಿದ್ಯುತ್ ಕಡಿತ. ದೊಡ್ಡ ಸ್ಫೋಟಗಳು—ಬಾಂಬ್ ದಾಳಿ, ಶೆಲ್ ದಾಳಿ, ಅಥವಾ ಕ್ಷಿಪಣಿ ದಾಳಿಗಳು—ಶಂಕಿತ. ಚಿಂತಿಸಬೇಡಿ- ಮಾತಾ ವೈಷ್ಣೋ ದೇವಿ ನಮ್ಮೊಂದಿಗಿದ್ದಾರೆ, ಮತ್ತು ಧೈರ್ಯಶಾಲಿ ಭಾರತೀಯ ಸಶಸ್ತ್ರ ಪಡೆಗಳು ಸಹ" ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಶೇಶ್ ಪಾಲ್ ವೈದ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸ್ಫೋಟದ ಶಬ್ದ ಕೇಳಿದ ಕೂಡಲೇ ಅಂಗಡಿಯವರು ತಮ್ಮ ಮನೆಗಳಿಗೆ ಧಾವಿಸುತ್ತಿರುವುದು ಕಂಡುಬಂದಿದೆ. ರಾಯಿಟರ್ಸ್ ಪ್ರಕಾರ, ಕೆಲವು ನಿವಾಸಿಗಳು ಸ್ಫೋಟದ ಮೊದಲು ಆಕಾಶದಲ್ಲಿ ಕೆಂಪು ಮಿಂಚುಗಳನ್ನು ಸಂಚರಿಸುವ ರೀತಿ ಸಹ ನೋಡಿದ್ದಾರೆ.
ಜಮ್ಮುವಿನಲ್ಲಿ ಬ್ಲಾಕ್ಔಟ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡ ಎಕ್ಸ್ ಬಳಕೆದಾರರೊಬ್ಬರು, "ಇದೀಗ ಜಮ್ಮುವಿನಲ್ಲಿ ನಮ್ಮ ಮನೆಗಳ ಮೇಲೆ ಕ್ಷಿಪಣಿಗಳು ಹಾರುತ್ತಿವೆ. ಇದು ಕೇಳುವಿಕೆಯಲ್ಲ, ನಾನು ಅದನ್ನು ನೋಡುತ್ತಿದ್ದೇನೆ ಮತ್ತು ರೆಕಾರ್ಡ್ ಮಾಡುತ್ತಿದ್ದೇನೆ. ಬೆದರಿಕೆ ನಿಜವಾಗಿದೆ. ನಾಗರಿಕರ ಜೀವಗಳು ಅಪಾಯದಲ್ಲಿವೆ ಎಂದು ಹೇಳಿದ್ದಾರೆ.
ಕುಪ್ವಾರಾ, ಬಾರಾಮುಲ್ಲಾ ಮತ್ತು ಅಖ್ನೂರ್ನಲ್ಲಿಯೂ ಸೈರನ್ ಸದ್ದು ಕೇಳಿ ಬರುತ್ತಿವೆ.
ಮೆಹಬೂಬ ಪ್ರಾರ್ಥನೆ
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಜಮ್ಮುವಿನಿಂದ ಹೊರಬರುತ್ತಿರುವ ವರದಿಗಳು ಗೊಂದಲವನ್ನುಂಟು ಮಾಡುತ್ತಿವೆ, ಗಡಿಯಲ್ಲಿ ವಾಸಿಸುವ ಜನರಿಗಾಗಿ ಪ್ರಾರ್ಥಿಸುತ್ತಿದ್ದೇನೆ ಎಂದು ಹೇಳಿದರು.
"ಜಮ್ಮುವಿನಿಂದ ತೀವ್ರ ಆತಂಕಕಾರಿ ವರದಿಗಳು ಹೊರಬರುತ್ತಿವೆ, ಅಲ್ಲಿ ವಾಯು ದಾಳಿಗಳು ಕೆಲವು ಪ್ರದೇಶಗಳಿಗೆ ಅಪ್ಪಳಿಸಿವೆ ಎಂದು ವರದಿಯಾಗಿದೆ. ಸಂಘರ್ಷದ ಭಯಾನಕ ಅನಿಶ್ಚಿತತೆಯಲ್ಲಿ ಮತ್ತೊಮ್ಮೆ ಸಿಲುಕಿರುವ ಜಮ್ಮುವಿನ ಜನರಿಗೆ, ವಿಶೇಷವಾಗಿ ಗಡಿಯಲ್ಲಿ ವಾಸಿಸುವವರಿಗೆ ನನ್ನ ಹೃದಯ ಮಿಡಿಯುತ್ತದೆ" ಎಂದು ಮುಫ್ತಿ ಹೇಳಿದರು.
ವಿಮಾನ ಪ್ರಯಾಣಿಕರಿಗೆ ಸೂಚನೆ
ಪಾಕಿಸ್ತಾನ ಸೇನೆಯು ಹಲವಾರು ಗಡಿ ಜಿಲ್ಲೆಗಳ ಮೇಲೆ ದಾಳಿ ನಡೆಸಿದ ನಂತರ ಏರ್ ಇಂಡಿಯಾ ಗುರುವಾರ ರಾತ್ರಿ ಹೇಳಿಕೆ ನೀಡಿದ್ದು, ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತಾ ಕ್ರಮಗಳಿಂದಾಗಿ ಪ್ರಯಾಣಿಕರು ಮೂರು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣಗಳಿಗೆ ಆಗಮಿಸುವಂತೆ ಕರೆ ನೀಡಿದೆ.
"ವಿಮಾನ ನಿಲ್ದಾಣಗಳಲ್ಲಿ ಬಿಗಿ ಕ್ರಮಗಳ ಬಗ್ಗೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿಯ ಆದೇಶವನ್ನು ಗಮನದಲ್ಲಿಟ್ಟುಕೊಂಡು, ಭಾರತದಾದ್ಯಂತದ ಪ್ರಯಾಣಿಕರು ಸುಗಮ ಚೆಕ್-ಇನ್ ಮತ್ತು ಬೋರ್ಡಿಂಗ್ ಅನ್ನು ಖಚಿತಪಡಿಸಿಕೊಳ್ಳಲು ನಿಗದಿತ ನಿರ್ಗಮನಕ್ಕೆ ಕನಿಷ್ಠ ಮೂರು ಗಂಟೆಗಳ ಮೊದಲು ಆಯಾ ವಿಮಾನ ನಿಲ್ದಾಣಗಳಿಗೆ ಬರಲು ಸೂಚಿಸಲಾಗಿದೆ. ಚೆಕ್-ಇನ್ ನಿರ್ಗಮನಕ್ಕೆ 75 ನಿಮಿಷಗಳ ಮೊದಲೇ ಒಳ ಪ್ರವೇಶಿಸುವ ದ್ವಾರ ಮುಚ್ಚಲಾಗುತ್ತದೆ.
ಗುರುವಾರ ಬೆಳಿಗ್ಗೆಯವರೆಗೆ ಭಾರತದಾದ್ಯಂತ 27 ವಿಮಾನ ನಿಲ್ದಾಣಗಳನ್ನು ವಾಣಿಜ್ಯ ವಿಮಾನಗಳಿಗೆ ಮುಚ್ಚುವ ಘೋಷಣೆ ಮಾಡಲಾಗಿದೆ.