ಕದನ ವಿರಾಮ ಉಲ್ಲಂಘನೆ, ಭಾರತದಲ್ಲಿ ಹೆಚ್ಚುತ್ತಿರುವ ಒತ್ತಡದ ನಡುವೆ ಪಾಕಿಸ್ತಾನ ಪರ ನಿಂತ ಚೀನಾ, ಅಲ್ಲಿನ ವಿದೇಶಾಂಗ ಸಚಿವರ ನಿಲುವೇನು
ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಬಲಗೊಳ್ಳುತ್ತಿರುವ ಮಧ್ಯೆಯೇ ನೆರೆಯ ಚೀನಾವು ಪಾಕಿಸ್ತಾನದ ಬೆಂಬಲಕ್ಕೆ ನಿಲ್ಲುವುದಾಗಿ ಘೋಷಣೆ ಮಾಡಿದೆ.

ಬೀಜಿಂಗ್: ಭಾರತ ಮತ್ತು ಪಾಕಿಸ್ತಾನದ ನಡುವೆ ಕಳೆದ ಮೂರು ವಾರಗಳಲ್ಲಿ ಉಂಟಾಗಿರುವ ಉದ್ವಿಗ್ನ ಸ್ಥಿತಿ, ನಾಲ್ಕೈದು ದಿನಗಳಿಂದ ನಡೆದಿರುವ ದಾಳಿ ಪ್ರತಿ ದಾಳಿ ನಡುವೆಯೇ ಕದನ ವಿರಾಮ ಘೋಷಣೆಯಾದ ನಂತರ ಮತ್ತೆ ದಾಳಿಗಳು ವರದಿಯಾಗಿದ್ದು, ಇದರ ನಡುವೆಯೇ ಚೀನಾ ತನ್ನ ನಿಲುವನ್ನು ಪ್ರಕಟಿಸಿದೆ. ಪಾಕಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರೀಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ತಮ್ಮ ದೇಶವು ಪಾಕಿಸ್ತಾನದೊಂದಿಗೆ ನಿಲ್ಲುವುದನ್ನು ಮುಂದುವರಿಸುತ್ತದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಶನಿವಾರ ಹೇಳಿದ್ದಾರೆ.ಈ ಮೂಲಕ ಈಗಾಗಲೇ ಪಾಕಿಸ್ತಾನಕ್ಕೆ ಆರ್ಥಿಕ, ಶಸ್ತ್ರಾಸ್ತ್ರಗಳ ಬೆಂಬಲ ನೀಡುತ್ತಿದ್ದ ಚೀನಾ ತನ್ನ ನಿಲುವನ್ನು ಮೊದಲ ಬಾರಿಗೆ ಪ್ರಕಟಿಸಿದೆ.
ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಅವರೊಂದಿಗಿನ ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಚೀನಾದ ವಿದೇಶಾಂಗ ಸಚಿವರು ಈ ಹೇಳಿಕೆ ನೀಡಿದ್ದಾರೆ ಎಂದು ಪಾಕ್ ವಿದೇಶಾಂಗ ಕಚೇರಿಯ ಹೇಳಿಕೆ ತಿಳಿಸಿದೆ. ಸಂಭಾಷಣೆಯ ಸಮಯದಲ್ಲಿ, ಚೀನಾದ ವಿದೇಶಾಂಗ ಸಚಿವ ದಾರ್ ವಾಂಗ್ ಯಿ ಅವರಿಗೆ ಪ್ರಾದೇಶಿಕ ಪರಿಸ್ಥಿತಿಯ ಸದ್ಯದ ಬಗ್ಗೆ ವಿವರಿಸಿದರು ಎಂದು ಮೂಲಗಳು ತಿಳಿಸಿವೆ.
ವಾಂಗ್ ಯಿ ಅವರು ಪಾಕಿಸ್ತಾನದ ಸಂಯಮವನ್ನು ಒಪ್ಪಿಕೊಂಡಿದ್ದಲ್ಲದೇ ಸವಾಲಿನ ಸಂದರ್ಭಗಳಲ್ಲಿ ಆ ದೇಶದ ಜವಾಬ್ದಾರಿಯುತ ವಿಧಾನವನ್ನು ಶ್ಲಾಘಿಸಿದರು ಎಂದು ತಿಳಿಸಲಾಗಿದೆ.
"ಚೀನಾ, ಪಾಕಿಸ್ತಾನದ ಎಲ್ಲಾ ಪರಿಸ್ಥಿತಿಗಳ ಕಾರ್ಯತಂತ್ರದ ಸಹಕಾರ ಪಾಲುದಾರ. ಸ್ನೇಹಿತನಾಗಿ, ಪಾಕಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರೀಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ಪಾಕಿಸ್ತಾನದೊಂದಿಗೆ ದೃಢವಾಗಿ ನಿಲ್ಲುವುದನ್ನು ಮುಂದುವರಿಸುತ್ತದೆ ಎಂದು ಅವರು ಪುನರುಚ್ಚರಿಸಿದರು" ಎಂದು ವಿದೇಶಾಂಗ ಕಚೇರಿ ತಿಳಿಸಿದೆ.
ಪ್ರತ್ಯೇಕವಾಗಿ, ದಾರ್ ಯುಎಇ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅವರೊಂದಿಗೆ ಮಾತನಾಡಿದರು, ಅವರು ಪಾಕಿಸ್ತಾನ ಮತ್ತು ಭಾರತದ ನಡುವಿನ ಕದನ ವಿರಾಮ ಒಪ್ಪಂದವನ್ನು ಸ್ವಾಗತಿಸಿದರು.ದಾರ್ ಅವರು ಟರ್ಕಿಯೆ ವಿದೇಶಾಂಗ ಸಚಿವ ಹಕನ್ ಫಿದಾನ್ ಅವರೊಂದಿಗೆ ಚರ್ಚಿಸಿ ಪ್ರದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿವರಿಸಿದರು.
ಭಾರತ ಮತ್ತು ಪಾಕಿಸ್ತಾನವು "ಸಂಪೂರ್ಣ ಮತ್ತು ತಕ್ಷಣದ" ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಘೋಷಿಸಿದ್ದರು. ಇದು ಯುಎಸ್ ಮಧ್ಯಸ್ಥಿಕೆಯ ಮಾತುಕತೆಯ ಫಲಿತಾಂಶವಾಗಿದೆ ಎಂದು ಹೇಳಿದ್ದರು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಇದನ್ನು ಯುಎಸ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಎಂದು ಪ್ರಕಟಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಶೆಹಬಾಜ್ ಷರೀಫ್ ಅವರನ್ನು "ಶಾಂತಿಯ ಮಾರ್ಗವನ್ನು ಆಯ್ಕೆ ಮಾಡುವಲ್ಲಿ ಅವರ ಬುದ್ಧಿವಂತಿಕೆ, ವಿವೇಚನೆ ಮತ್ತು ರಾಜನೀತಿ" ಯನ್ನು ಶ್ಲಾಘಿಸಿದ್ದರು.
ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮಿಲಿಟರಿ ಸೌಲಭ್ಯಗಳ ಮೇಲೆ ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ಬೆಳವಣಿಗೆಗಳು ನಡೆದಿದ್ದು, ನಡೆಯುತ್ತಿರುವ ಸಂಘರ್ಷವನ್ನು ಅಪಾಯಕಾರಿಯಾಗಿ ಹೆಚ್ಚಿಸಿದೆ. ಭಾನುವಾರ ಈ ಕುರಿತು ಇನ್ನಷ್ಟು ಬೆಳವಣಿಗೆಗಳು ನಡೆಯುವ ನಿರೀಕ್ಷೆಗಳಿವೆ.