ಪಾಕಿಸ್ತಾನ ಒಂದು ವಿಫಲ ರಾಷ್ಟ್ರ: ಬಹ್ರೇನ್ನಲ್ಲಿ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ ಅಸಾದುದ್ದೀನ್ ಒವೈಸಿ
ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ಸರ್ವಪಕ್ಷ ರಾಜತಾಂತ್ರಿಕ ನಿಯೋಗದಲ್ಲಿ ಅಸಾದುದ್ದೀನ್ ಒವೈಸಿ ಬಹ್ರೇನ್ಗೆ ತೆರಳಿದ್ದಾರೆ. ಅಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ್ದಾರೆ.

ನವದೆಹಲಿ: ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಅವರು ಭಾನುವಾರ ಬಹ್ರೇನ್ನಲ್ಲಿ ನಡೆದ ಸರ್ವಪಕ್ಷ ನಿಯೋಗದ ಸಂವಾದದಲ್ಲಿ ಪಾಕಿಸ್ತಾನವನ್ನು ವಿಫಲ ರಾಷ್ಟ್ರ ಎಂದು ಕರೆದಿದ್ದಾರೆ. ಜತೆಗೆ ನೆರೆಯ ರಾಷ್ಟ್ರದ ಯಾವುದೇ ಆಕ್ರಮಣದ ವಿರುದ್ಧ ತಮ್ಮನ್ನು ರಕ್ಷಿಸಿಕೊಳ್ಳುವ ಭಾರತದ ಸಾಮರ್ಥ್ಯವನ್ನು ಪುನರುಚ್ಚರಿಸಿದ್ದಾರೆ. ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ಸರ್ವಪಕ್ಷ ರಾಜತಾಂತ್ರಿಕ ನಿಯೋಗದಲ್ಲಿ ಅಸಾದುದ್ದೀನ್ ಒವೈಸಿ ಅವರು ಕೂಡ ಬಹ್ರೇನ್ಗೆ ತೆರಳಿದ್ದು, ಸರ್ಕಾರ ಮತ್ತು ಮಾಧ್ಯಮಗಳು, ನಮ್ಮ ವಾಯು ರಕ್ಷಣಾ ವ್ಯವಸ್ಥೆ, ನಮ್ಮ ತಂತ್ರಜ್ಞಾನ ಮತ್ತು ಯುದ್ಧ ಸಾಮರ್ಥ್ಯಗಳು ಪಾಕಿಸ್ತಾನದಂತಹ ವಿಫಲ ರಾಷ್ಟ್ರವು ಪ್ರಾರಂಭಿಸಿದ ಎಲ್ಲವನ್ನೂ ಯಶಸ್ವಿಯಾಗಿ ತಡೆದು ತಟಸ್ಥಗೊಳಿಸಿವೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಯೊಬ್ಬ ಭಾರತೀಯನ ಜೀವವನ್ನು ರಕ್ಷಿಸಲು ನಮ್ಮ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ಮುಂದಿನ ಬಾರಿ ಪಾಕಿಸ್ತಾನ ಈ ದುಷ್ಕೃತ್ಯವನ್ನು ಕೈಗೊಂಡಾಗ, ಅದು ಅವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪ್ರತೀಕಾರದ ಕ್ರಮವನ್ನು ಕೈಗೊಳ್ಳುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ ಎಂದು ಒವೈಸಿ ಹೇಳಿದ್ದಾರೆ. ಭಾರತದ ರಕ್ಷಣಾತ್ಮಕ ಶಕ್ತಿಯನ್ನು ಒತ್ತಿ ಹೇಳಿದ ಓವೈಸಿ, ಭಾರತವು ಜವಾಬ್ದಾರಿಯುತವಾಗಿ ವರ್ತಿಸಿದ್ದರೂ ಮತ್ತು ಗರಿಷ್ಠ ಸಂಯಮವನ್ನು ಪ್ರದರ್ಶಿಸಿದ್ದರೂ, ದೇಶವು ತನ್ನ ಎಲ್ಲಾ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.
ಪಾಕಿಸ್ತಾನದ ಕ್ರಮಗಳನ್ನು ಖಂಡಿಸುವಂತೆ ಮತ್ತು ಪಾಕಿಸ್ತಾನವನ್ನು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಗ್ರೇ ಲಿಸ್ಟ್ಗೆ ಮರಳಿ ತರುವ ಮೂಲಕ ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ತಡೆಯಲು ಸಹಾಯ ಮಾಡಬೇಕೆಂದು ಅವರು ಬಹ್ರೇನ್ ಸರ್ಕಾರವನ್ನು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ನಾವು ಯಾವುದೇ ರಾಜಕೀಯ ಪಕ್ಷಗಳಿಗೆ ಸೇರಿದವರಾಗಿದ್ದರೂ ನಮ್ಮ ದೇಶದಲ್ಲಿ ಒಮ್ಮತವಿದೆ. ನಮಗೆ ನಮ್ಮ ರಾಜಕೀಯ ಭಿನ್ನಾಭಿಪ್ರಾಯಗಳಿವೆ, ಆದರೆ ನಮ್ಮ ದೇಶದ ಸಮಗ್ರತೆಯ ವಿಷಯಕ್ಕೆ ಬಂದಾಗ, ನಮ್ಮ ನೆರೆಯ ದೇಶವು ಅರ್ಥಮಾಡಿಕೊಳ್ಳುವ ಸಮಯ ಬಂದಿದೆ. ಪಾಕಿಸ್ತಾನವನ್ನು ಎಫ್ಎಟಿಎಫ್ನ ಗ್ರೇ ಲಿಸ್ಟ್ಗೆ ತರಲು ಬಹ್ರೇನ್ ಸರ್ಕಾರ ನಮಗೆ ಸಹಾಯ ಮಾಡುತ್ತದೆ ಎಂದು ನಾನು ವಿನಂತಿಸುತ್ತೇನೆ ಮತ್ತು ಆಶಿಸುತ್ತೇನೆ ಏಕೆಂದರೆ ಈ ಹಣವನ್ನು ಆ ಭಯೋತ್ಪಾದಕರ ಬೆಂಬಲಕ್ಕೆ ಬಳಸಲಾಗಿದೆ ಎಂದು ಓವೈಸಿ ಹೇಳಿದರು.