ಗಸ್ತು ವೇಳೆ ಆಕಸ್ಮಿಕವಾಗಿ ಗಡಿ ದಾಟಿದ ಬಿಎಸ್ಎಫ್ ಯೋಧನನ್ನು ವಶಕ್ಕೆ ಪಡೆದ ಪಾಕಿಸ್ತಾನ ರೇಂಜರ್ಸ್, ಬಿಡುಗಡೆಗೆ ಮಾತುಕತೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಗಸ್ತು ವೇಳೆ ಆಕಸ್ಮಿಕವಾಗಿ ಗಡಿ ದಾಟಿದ ಬಿಎಸ್ಎಫ್ ಯೋಧನನ್ನು ವಶಕ್ಕೆ ಪಡೆದ ಪಾಕಿಸ್ತಾನ ರೇಂಜರ್ಸ್, ಬಿಡುಗಡೆಗೆ ಮಾತುಕತೆ

ಗಸ್ತು ವೇಳೆ ಆಕಸ್ಮಿಕವಾಗಿ ಗಡಿ ದಾಟಿದ ಬಿಎಸ್ಎಫ್ ಯೋಧನನ್ನು ವಶಕ್ಕೆ ಪಡೆದ ಪಾಕಿಸ್ತಾನ ರೇಂಜರ್ಸ್, ಬಿಡುಗಡೆಗೆ ಮಾತುಕತೆ

ಕಾಶ್ಮೀರದಲ್ಲಿ ಉಗ್ರರ ದಾಳಿ ನಂತರ ಗಡಿಯಲ್ಲಿ ಗಸ್ತು ಹೆಚ್ಚಿದ್ದು, ಈ ವೇಳೆ ಆಕಸ್ಮಿಕವಾಗಿ ಗಡಿ ದಾಟಿದ ಬಿಎಸ್ಎಫ್ ಯೋಧನನ್ನು ಪಾಕ್ ರೇಂಜರ್ಸ್ ವಶಕ್ಕೆ ಪಡೆದಿದ್ದಾರೆ. ಬಿಡುಗಡೆಗಾಗಿ ಮಾತುಕತೆ ಮುಂದುವರಿದಿದೆ.

ಭಾರತ ಹಾಗೂ ಪಾಕಿಸ್ತಾನ ಗಡಿ ಭಾಗದಲ್ಲಿ ಭದ್ರತಾ ಸಿಬ್ಬಂದಿ ಗಸ್ತು ಹೆಚ್ಚಿದೆ.
ಭಾರತ ಹಾಗೂ ಪಾಕಿಸ್ತಾನ ಗಡಿ ಭಾಗದಲ್ಲಿ ಭದ್ರತಾ ಸಿಬ್ಬಂದಿ ಗಸ್ತು ಹೆಚ್ಚಿದೆ. (ANI FILE/ Representative image )

ದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ದಿನದ ಹಿಂದೆ ನಡೆದ ಉಗ್ರರ ದಾಳಿ ಹಾಗೂ ಪ್ರವಾಸಿಗರ ಸಾವಿನ ಪ್ರಕರಣದ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿ ಗಡಿಯಲ್ಲಿ ಗಸ್ತು ಹೆಚ್ಚಿದೆ. ಗಸ್ತಿನಲ್ಲಿ ನಿರತರಾಗಿದ್ದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಕಾನ್ಸ್‌ಟೇಬಲ್ ಒಬ್ಬರು ಆಕಸ್ಮಿಕವಾಗಿ ಪಂಜಾಬ್‌ ಭಾಗದಲ್ಲಿನ ಅಂತರರಾಷ್ಟ್ರೀಯ ಗಡಿಯನ್ನು ದಾಟಿದ್ದಕ್ಕಾಗಿ ಪಾಕಿಸ್ತಾನ ರೇಂಜರ್ಸ್ ವಶಕ್ಕೆ ಪಡೆದಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಫಿರೋಜ್‌ಪುರ ಸೆಕ್ಟರ್‌ನಲ್ಲಿ 182 ನೇ ಬೆಟಾಲಿಯನ್‌ನ ಕಾನ್ಸ್‌ಟೇಬಲ್ ಪಿ.ಕೆ.ಸಿಂಗ್ ಅವರನ್ನು ಬುಧವಾರ ಬಂಧಿಸಲಾಗಿದೆ. ಅವರ ಬಿಡುಗಡೆಗಾಗಿ ಬಿಎಸ್ಎಫ್ ಮತ್ತು ಪಾಕಿಸ್ತಾನ ರೇಂಜರ್‌ಗಳ ನಡುವೆ ಸಂವಹನ ಮಾರ್ಗಗಳ ಮೂಲಕ ಪ್ರಯತ್ನಗಳು ನಡೆಯುತ್ತಿವೆ ಎಂದು ವರದಿ ತಿಳಿಸಿದೆ.

ಸಮವಸ್ತ್ರ ಧರಿಸಿದ ಮತ್ತು ಸೇವಾ ರೈಫಲ್ ಹೊಂದಿದ್ದ ಜವಾನ್ ರೈತರ ಗುಂಪಿನೊಂದಿಗೆ ನೆರಳಿನ ಪ್ರದೇಶದಲ್ಲಿ ವಿಶ್ರಾಂತಿ ಪಡೆಯಲು ಸ್ವಲ್ಪ ಮುಂದೆ ಸಾಗಿದಾಗ, ಆ ಸಮಯದಲ್ಲಿ ಅವರನ್ನು ಪಾಕಿಸ್ತಾನ ರೇಂಜರ್ಸ್ ಬಂಧಿಸಿದರು.

ಕಾನ್ಸ್‌ಟೇಬಲ್ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನದಲ್ಲಿ ಗಡಿ ಭದ್ರತಾ ಪಡೆ ಮತ್ತು ಪಾಕಿಸ್ತಾನ ರೇಂಜರ್ಸ್ ನಡುವೆ ಧ್ವಜ ಸಭೆ ನಡೆಯುತ್ತಿದೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

ಇಂತಹ ಘಟನೆಗಳು ಅಸಾಮಾನ್ಯವಲ್ಲ ಮತ್ತು ಉಭಯ ದೇಶಗಳ ನಡುವಿನ ಗಡಿಯಲ್ಲಿ ಹಿಂದಿನ ಸಂದರ್ಭಗಳಲ್ಲಿ ವರದಿಯಾಗಿವೆ. ಆಗೆ ಲ್ಲಾ ಅಧಿಕಾರಿಗಳ ಹಂತದಲ್ಲಿಯೇ ಮಾತುಕತೆ ನಡೆಸಿ ಬಿಡುಗಡೆ ಕೂಡ ಮಾಡಲಾಗಿದೆ ಎನ್ನುವುದು ಅಧಿಕಾರಿಗಳು ನೀಡುವ ವಿವರಣೆ.

ಆದರೆ ಈಗ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಉದ್ವಿಗ್ನತೆಯ ಮಧ್ಯೆ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಸರಣಿ ಪ್ರತೀಕಾರದ ಕ್ರಮಗಳನ್ನು ಜಾರಿಗೆ ತರಲು ಭಾರತ ಮುಂದಾಗಿದ್ದು.ಕೆಲವು ಜಾರಿಯಾಗಿವೆ. ಇಂತಹ ಸನ್ನಿವೇಶದಲ್ಲಿ ಇದು ಗಂಭೀರ ಪ್ರಕರಣ ಎಂದೇ ಪರಿಗಣಿಸಿ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸುವ ಸಾಧ್ಯತೆಯೂ ಹೆಚ್ಚು. ಇದರ ನಡುವೆಯೂ ಮಾತುಕತೆಗಳು ಮುಂದುವರಿದಿವೆ ಎನ್ನಲಾಗುತ್ತಿದೆ.

ಕಾಶ್ಮೀರದ ಪ್ರವಾಸಿ ತಾಣದಲ್ಲಿ ಭಯೋತ್ಪಾದಕರು ಮಂಗಳವಾರ 26 ಜನರನ್ನು ಕೊಂದಿದ್ದಾರೆ, ಇದು ಸುಮಾರು ಎರಡು ದಶಕಗಳಲ್ಲಿ ದೇಶದಲ್ಲಿ ನಾಗರಿಕರ ಮೇಲೆ ನಡೆದ ಭೀಕರ ದಾಳಿ ಇದಾಗಿ ಎನ್ನುವ ಅಭಿಪ್ರಾಯಗಳಿವೆ. ಇದರ ನಡುವೆಯೇ ಪಾಕಿಸ್ತಾನದ ಮೇಲೆ ಹಲವು ನಿರ್ಬಂಧಗಳನ್ನು ಭಾರತ ಹೇರಿದೆ. ಪಾಕಿಸ್ತಾನ ಕೂಡ ಉತ್ತರ ನೀಡುವ ಸಿದ್ದತೆಯಲ್ಲಿದೆ.

ಇದರ ನಡುವೆಯೇ ಭಾರತವೂ ಉಗ್ರರ ದಾಳಿಗೆ ತಕ್ಕ ಉತ್ತರ ನೀಡುವುದಾಗಿ ಹೇಳಿದೆ. ಕಾಶ್ಮೀರದಲ್ಲಿ ಉಗ್ರರನ್ನು ಹೊಡೆದುರುಳಿಸಲು ಭಾರತೀಯ ಸೇನಾ ಕಾರ್ಯಾಚರಣೆ ಕೂಡ ಆರಂಭಿಸಿದೆ.


Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.