ಪ್ಲಾಟ್ಫಾರಂ ಟಿಕೆಟ್, ಹಾಲು, ಕಾರ್ಟನ್ ಬಾಕ್ಸ್ಗೆ ಜಿಎಸ್ಟಿ ವಿನಾಯಿತಿ; ಜಿಎಸ್ಟಿ ಕೌನ್ಸಿಲ್ ಸಭೆಯ 10 ಮುಖ್ಯ ನಿರ್ಣಯಗಳಿವು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಇಂದು (ಜೂನ್ 22) ಜಿಎಸ್ಟಿ ಕೌನ್ಸಿಲ್ನ 53ನೇ ಸಭೆ ನಡೆಯಿತು. ಪ್ಲಾಟ್ಫಾರಂ ಟಿಕೆಟ್, ಹಾಲು, ಕಾರ್ಟನ್ ಬಾಕ್ಸ್ಗೆ ಜಿಎಸ್ಟಿ ವಿನಾಯಿತಿ ನೀಡಿರುವುದು ಸೇರಿ ಜಿಎಸ್ಟಿ ಕೌನ್ಸಿಲ್ ಸಭೆಯ 10 ಮುಖ್ಯ ನಿರ್ಣಯಗಳಿವು.

ನವದೆಹಲಿ: ರೈಲ್ವೆ ಪ್ಲಾಟ್ಫಾರಂ ಟಿಕೆಟ್ ಖರೀದಿಸುವಾಗ ಇನ್ನು ಜಿಎಸ್ಟಿ ಹೊರೆ ಇರಲ್ಲ. ಹಾಲು, ಕಾರ್ಟನ್ ಬಾಕ್ಸ್ಗಳ ಮೇಲಿನ ಜಿಎಸ್ಟಿ ಇಳಿಸಿದ ಕಾರಣ ಸ್ವಲ್ಪ ಅಗ್ಗವಾಗಲಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ 53ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ ಸಭೆ ಈ ಕುರಿತ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಸರ್ಕಾರದ ಅಧಿಕಾರಿಗಳು ಸಚಿವರ ಗುಂಪಿನ (ಜಿಒಎಂ) ಶಿಫಾರಸುಗಳ ಆಧಾರದ ಮೇಲೆ ವಿವಿಧ ಸರಕುಗಳು ಮತ್ತು ಸೇವೆಗಳ ತೆರಿಗೆ ದರಗಳ ಬಗ್ಗೆ ಇಂದು (ಜೂನ್ 22) ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ.
ನಕಲಿ ಇನ್ವಾಯ್ಸ್ಗಳ ಮೂಲಕ ಮಾಡಿದ ಮೋಸದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೈಮ್ಗಳನ್ನು ಎದುರಿಸುವ ಸಲುವಾಗಿ ಪ್ಯಾನ್-ಇಂಡಿಯಾ ಆಧಾರದ ಮೇಲೆ ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣವನ್ನು ಪರಿಚಯಿಸುವ ಪ್ರಸ್ತಾವನೆಯನ್ನು ಜಿಎಸ್ಟಿ ಕೌನ್ಸಿಲ್ ಇದೇ ಸಭೆಯಲ್ಲಿ ಅನುಮೋದನೆ ನೀಡಿದೆ. ಹಣಕಾಸು ಸಚಿವರ ನೇತೃತ್ವದ ಸಮಿತಿಯು ವಿವಿಧ ಮೇಲ್ಮನವಿ ಪ್ರಾಧಿಕಾರಗಳ ಮುಂದೆ ತೆರಿಗೆ ಇಲಾಖೆಯಿಂದ ಮೇಲ್ಮನವಿಗಳನ್ನು ಸಲ್ಲಿಸಲು ವಿತ್ತೀಯ ಮಿತಿಯನ್ನು ಕೂಡ ನಿಗದಿಪಡಿಸಿದೆ.
ಸಭೆಯಲ್ಲಿ ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ, ಗೋವಾ ಮತ್ತು ಮೇಘಾಲಯದ ಮುಖ್ಯಮಂತ್ರಿಗಳು, ಬಿಹಾರ, ಹರಿಯಾಣ, ಮಧ್ಯಪ್ರದೇಶ ಮತ್ತು ಒಡಿಶಾದ ಉಪಮುಖ್ಯಮಂತ್ರಿಗಳು, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು (ಶಾಸಕಾಂಗಗಳೊಂದಿಗೆ) ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಜಿಎಸ್ಟಿ ಕೌನ್ಸಿಲ್ ಸಭೆಯ 10 ಮುಖ್ಯ ನಿರ್ಣಯಗಳಿವು
ಸಚಿವರ ಗುಂಪಿನ ಸಲಹೆ, ಶಿಫಾರಸುಗಳ ಆಧಾರದ ಮೇಲೆ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು. ಈ ಪೈಕಿ 10 ಮುಖ್ಯ ನಿರ್ಣಯಗಳಿವು.
1) ಬಯೋಮೆಟ್ರಿಕ್ ದೃಢೀಕರಣ
ನಕಲಿ ಇನ್ವಾಯ್ಸ್ಗಳನ್ನು ಆಧರಿಸಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದು ವಂಚಿಸುವುದನ್ನು ತಡೆಯಲು ಭಾರತದಾದ್ಯಂತ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯುವಾಗ ಆಧಾರ್ ದೃಢೀಕರಣ ಕಡ್ಡಾಯಗೊಳಿಸಲಾಗುತ್ತಿದೆ.
2) ಶೇಕಡ 12ರ ತೆರಿಗೆ ವ್ಯಾಪ್ತಿಗೆ ಹಾಲು ಮತ್ತು ಕಾರ್ಟನ್ ಬಾಕ್ಸ್
ಸ್ಟೀಲ್ , ಕಬ್ಬಿಣ, ಅಲ್ಯೂಮಿನಿಯಂ ಸೇರಿದಂತೆ ಎಲ್ಲ ಹಾಲಿನ ಕ್ಯಾನ್ಗಳ ಮೇಲೆ ಶೇ.12 ರಷ್ಟು ಏಕರೂಪದ ಜಿಎಸ್ ಟಿ ದರವನ್ನು ನಿಗದಿಪಡಿಸಲು ಜಿಎಸ್ಟಿ ಮಂಡಳಿ ಶಿಫಾರಸು ಮಾಡಿದೆ. ತುಕ್ಕು ಹಿಡಿಯುವ ಬಾಕ್ಸ್ ಮತ್ತು ತುಕ್ಕು ಹಿಡಿಯದ ಕಾಗದ ಅಥವಾ ಪೇಪರ್ ಬೋರ್ಡ್ ನಿಂದ ತಯಾರಿಸಿದ ಎಲ್ಲಾ ರೀತಿಯ ಕಾರ್ಟನ್ ಬಾಕ್ಸ್ ಗಳು ಮತ್ತು ಕೇಸ್ಗಳ ಮೇಲಿನ ಜಿಎಸ್ಟಿಯನ್ನು ಶೇಕಡ 18 ರಿಂದ 12 ಕ್ಕೆ ಇಳಿಸಲು ಜಿಎಸ್ ಟಿ ಕೌನ್ಸಿಲ್ ಶಿಫಾರಸು ಮಾಡಿದೆ. ಇದು ತೋಟಗಾರಿಕೆ ಬೆಳೆಗಾರರಿಗೆ ಸಹಾಯ ಮಾಡುತ್ತದೆ ಮತ್ತು ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಸೇಬು ಬೆಳೆಗಾರರಿಗೆ ಪ್ರಯೋಜನವನ್ನು ನೀಡುತ್ತದೆ. ಸೌರ ಕುಕ್ಕರ್ ಗಳಿಗೆ ಏಕರೂಪದ ಜಿಎಸ್ ಟಿ ದರವನ್ನು ಶೇ.12ಕ್ಕೆ ಶಿಫಾರಸು ಮಾಡಲಾಗಿದೆ.
3) ರೈಲ್ವೆ ಪ್ಲಾಟ್ಫಾರಂ ಟಿಕೆಟ್ಗೆ ಜಿಎಸ್ಟಿ ವಿನಾಯಿತಿ
ಭಾರತೀಯ ರೈಲ್ವೆ ಸಾರ್ವಜನಿಕರಿಗೆ ನೀಡುವ ನಿರ್ದಿಷ್ಟ ಸೇವೆಗಳಿಗೆ ಮತ್ತು ಅಂತರ-ರೈಲ್ವೆ ವಹಿವಾಟುಗಳಿಗೆ ವಿನಾಯಿತಿ ನೀಡಲು ಜಿಎಸ್ಟಿ ಕೌನ್ಸಿಲ್ ಪ್ರಸ್ತಾಪಿಸಿದೆ. ಪ್ಲಾಟ್ ಫಾರ್ಮ್ ಟಿಕೆಟ್ಗಳ ಮಾರಾಟ ಮತ್ತು ವಿಶ್ರಾಂತಿ ಕೊಠಡಿಗಳು, ಕಾಯುವ ಕೊಠಡಿಗಳು, ಕ್ಲೋಕ್ ರೂಮ್ ಸೌಲಭ್ಯಗಳು ಮತ್ತು ಬ್ಯಾಟರಿ ಚಾಲಿತ ಕಾರು ಸೇವೆಗಳಂತಹ ಸೇವೆಗಳನ್ನು ಈಗ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿದೆ.
4) ಮೇಲ್ಮನವಿ ಸಲ್ಲಿಕೆಯ ವಿತ್ತೀಯ ಮಿತಿ ನಿಗದಿ
ಸರ್ಕಾರಿ ದಾವೆಗಳನ್ನು ಕಡಿಮೆ ಮಾಡಲು ವಿವಿಧ ಮೇಲ್ಮನವಿ ಪ್ರಾಧಿಕಾರಗಳ ಮುಂದೆ ತೆರಿಗೆ ಇಲಾಖೆಯಿಂದ ಮೇಲ್ಮನವಿಗಳನ್ನು ಸಲ್ಲಿಸುವುದಕ್ಕೆ ಜಿಎಸ್ಟಿ ಕೌನ್ಸಿಲ್ ವಿತ್ತೀಯ ಮಿತಿಯನ್ನು ನಿಗದಿಪಡಿಸಿದೆ. ಜಿಎಸ್ಟಿ ಮೇಲ್ಮನವಿ ನ್ಯಾಯಮಂಡಳಿಗೆ 20 ಲಕ್ಷ ರೂ., ಹೈಕೋರ್ಟ್ಗೆ 1 ಕೋಟಿ ರೂ., ಸುಪ್ರೀಂ ಕೋರ್ಟ್ಗೆ 2 ಕೋಟಿ ರೂ.ಗಳ ವಿತ್ತೀಯ ಮಿತಿಯನ್ನು ಶಿಫಾರಸು ಮಾಡಿದೆ.
5) ಪೂರ್ವ ಠೇವಣಿ ಮೊತ್ತ ಇಳಿಕೆಗೆ ಶಿಫಾರಸು
ಮೇಲ್ಮನವಿ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಲು ಪೂರ್ವ-ಠೇವಣಿಯ ಗರಿಷ್ಠ ಮೊತ್ತವನ್ನು 25 ಕೋಟಿ ರೂಪಾಯಿಯ ಸಿಜಿಎಸ್ಟಿ ಮತ್ತು 25 ಕೋಟಿ ರೂಪಾಯಿಯ ಎಸ್ಜಿಎಸ್ಟಿಯಿಂದ 20 ಕೋಟಿ ರೂಪಾಯಿಯ ಸಿಜಿಎಸ್ಟಿ ಮತ್ತು 20 ಕೋಟಿ ರೂಪಾಯಿಗೆ ಎಸ್ಜಿಎಸ್ಟಿಗೆ ಇಳಿಸಲು ಜಿಎಸ್ಟಿ ಕೌನ್ಸಿಲ್ ಶಿಫಾರಸು ಮಾಡಿದೆ.
6) ಹಾಸ್ಟೆಲ್ ವಸತಿಗಳಿಗೆ ಇಲ್ಲ ಜಿಎಸ್ಟಿ
ಜಿಎಸ್ಟಿ ಕೌನ್ಸಿಲ್ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸದ ಹೊರಗಿನ ಹಾಸ್ಟೆಲ್ ವಸತಿ ಸೇವೆಗಳಿಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 20,000 ರೂಪಾಯಿವರೆಗೆ ವಿನಾಯಿತಿ ನೀಡಿದೆ. ಇದು ವಿದ್ಯಾರ್ಥಿಗಳಿಗೆ ಅಥವಾ ಕಾರ್ಮಿಕ ವರ್ಗಕ್ಕೆ ಮೀಸಲಾಗಿದೆ. ಈ ವಸತಿ ವ್ಯವಸ್ಥೆ ಕನಿಷ್ಠ 90 ದಿನಗಳವರೆಗೆ ಇದ್ದರೆ ಮಾತ್ರ ವಿನಾಯಿತಿ ಪಡೆಯಬಹುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
7) ಡಿಮ್ಯಾಂಡ್ ನೋಟಿಸ್ಗಳ ಮೇಲಿನ ಬಡ್ಡಿ ದಂಡವನ್ನು ಮನ್ನಾ
ಜಿಎಸ್ಟಿ ಕಾಯ್ದೆಯ ಸೆಕ್ಷನ್ 73 ರ ಪ್ರಕಾರ, 2017-18, 2018-19 ಮತ್ತು 2019-20ರ ಹಣಕಾಸು ವರ್ಷಗಳಿಗೆ ಹೊರಡಿಸಲಾದ ಡಿಮ್ಯಾಂಡ್ ನೋಟಿಸ್ಗಳ ಮೇಲಿನ ಬಡ್ಡಿ ದಂಡವನ್ನು ಮನ್ನಾ ಮಾಡಲು ಜಿಎಸ್ಟಿ ಕೌನ್ಸಿಲ್ ಇಂದು ಶಿಫಾರಸು ಮಾಡಿದೆ. ಈ ವಿಭಾಗವು ವಂಚನೆ, ನಿಗ್ರಹ ಅಥವಾ ತಪ್ಪು ಹೇಳಿಕೆಯನ್ನು ಒಳಗೊಂಡಿಲ್ಲದ ಪ್ರಕರಣಗಳಿಗೆ ಸಂಬಂಧಿಸಿದೆ. 2025ರ ಮಾರ್ಚ್ 31ರೊಳಗೆ ನೋಟಿಸ್ನಲ್ಲಿ ಕೋರಲಾದ ಪೂರ್ಣ ತೆರಿಗೆ ಮೊತ್ತವನ್ನು ಪಾವತಿಸುವ ತೆರಿಗೆದಾರರು ಈ ಬಡ್ಡಿ ದಂಡ ಮನ್ನಾ ಉಪಕ್ರಮದ ಪ್ರಯೋಜನ ಪಡೆಯುತ್ತಾರೆ.
8) ಸಣ್ಣ ತೆರಿಗೆದಾರರಿಗೆ ಐಟಿಆರ್ ಗಡುವು ವಿಸ್ತರಣೆ
ಸಣ್ಣ ತೆರಿಗೆದಾರರಿಗೆ ಸಹಾಯ ಮಾಡುವ ಉಪಕ್ರಮದ ಭಾಗವಾಗಿ, ಜಿಎಸ್ಟಿ ಕೌನ್ಸಿಲ್ 2024-25ರ ಹಣಕಾಸು ವರ್ಷ ಮತ್ತು ನಂತರದ ವರ್ಷಗಳಲ್ಲಿ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಏಪ್ರಿಲ್ 30 ರಿಂದ ಜೂನ್ 30 ರವರೆಗೆ ವಿಸ್ತರಿಸಿದೆ.
"ಸಣ್ಣ ತೆರಿಗೆದಾರರಿಗೆ ಸಹಾಯ ಮಾಡುವ ಸಲುವಾಗಿ, ವಿವರ ಮತ್ತು ರಿಟರ್ನ್ಸ್ ಅನ್ನು ಜಿಎಸ್ಟಿಆರ್ 4 ಫಾರ್ಮ್ ಸಲ್ಲಿಸಲು ಸಮಯ ಮಿತಿಯನ್ನು ಏಪ್ರಿಲ್ 30 ರಿಂದ ವಿಸ್ತರಿಸಲು ಕೌನ್ಸಿಲ್ ಶಿಫಾರಸು ಮಾಡಿದೆ. ಇದನ್ನು ಜೂನ್ 30 ರವರೆಗೆ ವಿಸ್ತರಿಸಲು ಕೌನ್ಸಿಲ್ ಶಿಫಾರಸು ಮಾಡಿದೆ. ಇದು 2024-25ರ ಹಣಕಾಸು ವರ್ಷದ ರಿಟರ್ನ್ಸ್ಗೆ ಅನ್ವಯಿಸುತ್ತದೆ ಎಂದು ಸಚಿವರು ಹೇಳಿದರು.
9) ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಸಮಯ ವಿಸ್ತರಣೆ
ಸಿಜಿಎಸ್ಟಿ ಕಾಯ್ದೆಯ ಸೆಕ್ಷನ್ 16(4)ರ ಪ್ರಕಾರ, 17-18, 18-19, 19-20 ಮತ್ತು 20-21 ಹಣಕಾಸು ವರ್ಷಗಳಿಗೆ 30-11-2021 ರವರೆಗೆ ಸಲ್ಲಿಸಿದ ಯಾವುದೇ ಇನ್ವಾಯ್ಸ್ ಅಥವಾ ಡೆಬಿಟ್ ನೋಟ್ಗೆ ಸಂಬಂಧಿಸಿದಂತೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಸಮಯ ಮಿತಿಯನ್ನು 2011 ರಿಂದ 2021 ರವರೆಗೆ ಪರಿಗಣಿಸಬಹುದು. ಆದ್ದರಿಂದ ಜುಲೈ 1, 2017 ರಿಂದ ಪೂರ್ವಾನ್ವಯವಾಗುವಂತೆ ಅದೇ ಅಗತ್ಯ ತಿದ್ದುಪಡಿಗಾಗಿ, ಕೌನ್ಸಿಲ್ ಶಿಫಾರಸು ಮಾಡಿದೆ.
10) ಮೇಲ್ಮನವಿ ಸಲ್ಲಿಸಲು ಮೂರು ತಿಂಗಳ ಅವಧಿ
ಜಿಎಸ್ಟಿ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಲು ಮೂರು ತಿಂಗಳ ಅವಧಿಯನ್ನು ಸರ್ಕಾರ ಸೂಚಿಸುವ ದಿನದಿಂದ ಪ್ರಾರಂಭಿಸಲು ಸಿಜಿಎಸ್ಟಿ ಕಾಯ್ದೆಯ ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಕೌನ್ಸಿಲ್ ನಿರ್ಧರಿಸಿದೆ ಮತ್ತು ಶಿಫಾರಸು ಮಾಡಿದೆ. ಇದರಂತೆ ಜೂನ್ 5ಕ್ಕೆ ನ್ಯಾಯಾಧಿಕರಣದ ಅಧ್ಯಕ್ಷರು ಅಧಿಕಾರ ವಹಿಸಿಕೊಂಡಿದ್ದಾರೆ. ತೆರಿಗೆದಾರರು ಮೇಲ್ಮನವಿ ಸಲ್ಲಿಸುವ ಅವಧಿ 2024 ರ ಆಗಸ್ಟ್ 5 ರಂದು ಕೊನೆಗೊಳ್ಳುತ್ತದೆ" ಎಂದು ಸೀತಾರಾಮನ್ ಹೇಳಿದರು.
ಪೆಟ್ರೋಲ್, ಡೀಸೆಲ್ ಜಿಎಸ್ಟಿ ವ್ಯಾಪ್ತಿಗೆ ಸೇರಿಸುವ ವಿಚಾರ
ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸುವ ವಿಚಾರಕ್ಕೆ ಕೇಂದ್ರ ಸರ್ಕಾರದ ಸಹಮತವಿದೆ. ಆದಾಗ್ಯೂ ಈ ನಿರ್ಧಾರಕ್ಕೆ ರಾಜ್ಯಗಳೂ ಸಹಮತ ವ್ಯಕ್ತಪಡಿಸಬೇಕು. ಹಾಗಿದ್ದರೆ ಮಾತ್ರವೇ ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್ಟಿ ವ್ಯಾಪ್ತಿಗೆ ಬರಲಿದೆ. ಈ ಕುರಿತ ಪ್ರಾಥಮಿಕ ಕಾರ್ಯಗಳು ಪೂರ್ಣಗೊಂಡಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
(ಏಜೆನ್ಸಿ ಮಾಹಿತಿಗಳೊಂದಿಗೆ)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
