ಎಲ್ಪಿಜಿ ದರ; ವಾಣಿಜ್ಯ ಬಳಕೆಯ 19 ಕಿಲೋ ತೂಕದ ಎಲ್ಪಿಜಿ ದರ 30 ರೂಪಾಯಿ ಇಳಿಕೆ; ಹೊಸ ದರ ವಿವರ ಹೀಗಿದೆ ಗಮನಿಸಿ
ಎಲ್ಪಿಜಿ ದರ (LPG gas price); ವಾಡಿಕೆಯಂತೆ ತೈಲ ಮಾರುಕಟ್ಟೆ ಕಂಪನಿಗಳು ಎಲ್ಪಿಜಿ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ಪರಿಷ್ಕರಿಸಿದೆ. ಜುಲೈ 1 ರಿಂದ ಅನ್ವಯವಾಗುವಂತೆ ವಾಣಿಜ್ಯ ಬಳಕೆಯ 19 ಕಿಲೋ ತೂಕದ ಎಲ್ಪಿಜಿ ದರ 30 ರೂಪಾಯಿ ಇಳಿಕೆ ಮಾಡಲಾಗಿದೆ. ಹೊಸ ದರ ವಿವರ ಹೀಗಿದೆ ಗಮನಿಸಿ.

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ಜುಲೈ 1 ರಿಂದ ಅನ್ವಯವಾಗುವಂತೆ ತಾವು ಮಾರಾಟ ಮಾಡುವ ವಾಣಿಜ್ಯ ಬಳಕೆಯ 19 ಕಿಲೋ ತೂಕದ ಎಲ್ಪಿಜಿ ದರ 30 ರೂಪಾಯಿ ಇಳಿಕೆ ಮಾಡಿವೆ. ಈ ದರ ಇಳಿಕೆಯೊಂದಿಗೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 30 ರೂಪಾಯಿ ಇಳಿಕೆಯಾಗಿ1,724 ರೂಪಾಯಿ ಆಗಿದೆ.
ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಪರಿಷ್ಕೃತ ಚಿಲ್ಲರೆ ಮಾರಾಟ ಬೆಲೆ 1646 ರೂಪಾಯಿ ಆಗಿದೆ. ಗ್ಯಾಸ್ ಏಜೆನ್ಸಿಗಳನ್ನು ಹೊಂದಿಕೊಂಡು ಚಿಲ್ಲರೆ ಮಾರಾಟ ದರದಲ್ಲಿ ಒಂದೆರಡು ರೂಪಾಯಿ ವ್ಯತ್ಯಾಸವಿರುತ್ತದೆ.
ವಾಣಿಜ್ಯ ಬಳಕೆಯ 19 ಕಿಲೋ ತೂಕದ ಎಲ್ಪಿಜಿ ಹೊಸ ದರ ವಿವರ ಹೀಗಿದೆ ಗಮನಿಸಿ
ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರ ಇಳಿಕೆಯು ಕಳೆದ ಕೆಲವು ತಿಂಗಳುಗಳ ಸರಣಿ ಕಡಿತದ ಭಾಗವಾಗಿ ಮುಂದುವರಿದಿದೆ. ಕಳೆದ ತಿಂಗಳು ಅಂದರೆ ಜೂನ್ 1 ರಂದು ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು 69.50 ರೂಪಾಯಿ ಇಳಿಕೆ ಮಾಡಲಾಗಿತ್ತು. ಇದರೊಂದಿಗೆ ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರ 1676 ರೂಪಾಯಿ ಆಗಿತ್ತು. ಇದಕ್ಕೂ ಮೊದಲ ಮೇ 1 ರಂದು 29 ರೂಪಾಯಿ ಇಳಿಸಲಾಗಿತ್ತು.
ಸತತ ಮೂರು ತಿಂಗಳಿಂದ ವಾಣಿಜ್ಯ ಎಲ್ಪಿಜಿ ಬೆಲೆಗಳ ಇಳಿಕೆ ಕ್ರಮವು ಅವುಗಳನ್ನೇ ಅವಲಂಬಿಸಿದ ವ್ಯವಹಾರಗಳ ಮೇಲಿನ ಹೊರೆಯನ್ನು ಕೊಂಚ ಕಡಿಮೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಜಾಗತಿಕ ತೈಲ ಮಾರುಕಟ್ಟೆಯ ಆಗುಹೋಗುಗಳಿಗೆ ಅನುಗುಣವಾಗಿ ಭಾರತದ ತೈಲ ಮಾರುಕಟ್ಟೆ ಕಂಪನಿಗಳು ಸಿಲಿಂಡರ್ ದರವನ್ನು ಹೊಂದಾಣಿಕೆ ಮಾಡಿಕೊಳ್ಳುತ್ತವೆ.
ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ (19 ಕಿಲೋ) ದರ ಯಾವ ನಗರದಲ್ಲಿ ಎಷ್ಟು
ಬೆಂಗಳೂರು - 1724 ರೂಪಾಯಿ ( 31 ರೂ ಇಳಿಕೆ)
ಬಾಗಲಕೋಟೆ - 1709.50 ರೂಪಾಯಿ ( 31.5 ರೂಪಾಯಿ ಇಳಿಕೆ)
ದಕ್ಷಿಣ ಕನ್ನಡ - 1,666 ರೂಪಾಯಿ ( 32 ರೂಪಾಯಿ ಇಳಿಕೆ)
ಮೈಸೂರು - 1,701.50 ರೂಪಾಯಿ ( 31 ರೂಪಾಯಿ ಇಳಿಕೆ)
ಧಾರವಾಡ - 1719 ರೂಪಾಯಿ ( 31 ರೂಪಾಯಿ ಇಳಿಕೆ)
ಗೃಹಬಳಕೆಯ ಸಿಲಿಂಡರ್ ಬೆಲೆ ಯಥಾಸ್ಥಿತಿ
ಈ ನಡುವೆ, 14.2 ಕಿಲೋ ತೂಕದ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಇಳಿಕೆ ಅಥವಾ ಏರಿಕೆ ಆಗಿಲ್ಲ. ಬೆಂಗಳೂರಿನಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ 805.50 ರೂಪಾಯಿ ಇದೆ. ದೆಹಲಿಯಲ್ಲಿ 803 ರೂ., ಕೋಲ್ಕತ್ತದಲ್ಲಿ 829 ರೂ., ಮುಂಬೈನಲ್ಲಿ 802.50 ರೂ., ಚೆನ್ನೈನಲ್ಲಿ 818.50 ರೂ. ಇದೆ.
ಹೆಚ್ಚುವರಿಯಾಗಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಂತಹ ವಿವಿಧ ಯೋಜನೆಗಳ ಮೂಲಕ ಮನೆ ಅಡುಗೆಗೆ ಎಲ್ಪಿಜಿ ಸಿಲಿಂಡರ್ಗಳನ್ನು ಬಳಸುವುದನ್ನು ಸರ್ಕಾರ ಪೂರ್ವಭಾವಿಯಾಗಿ ಉತ್ತೇಜಿಸಿದೆ. ಇದು ಅರ್ಹ ಕುಟುಂಬಗಳಿಗೆ ಸಬ್ಸಿಡಿಗಳನ್ನು ಒದಗಿಸುತ್ತದೆ, ಶುದ್ಧ ಅಡುಗೆ ಇಂಧನಗಳ ಅಳವಡಿಕೆಯನ್ನು ಉತ್ತೇಜಿಸುತ್ತದೆ ಮತ್ತು ಜೀವನ ಮಟ್ಟವನ್ನು ಸುಧಾರಿಸುತ್ತದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
