L and T chairman: ಹೆಂಡ್ತಿನ ಎಷ್ಟೂಂತ ದಿಟ್ಟಿಸಿ ನೋಡ್ತಿರಿ, ಬನ್ನಿ ಭಾನುವಾರವು ಕೆಲಸ ಮಾಡಿ ಎಂದ ಎಸ್ಎನ್ ಸುಬ್ರಹ್ಮಣ್ಯನ್ ಯಾರು?
Who Is SN Subrahmanyan: ಲಾರ್ಸೆನ್ & ಟೂಬ್ರೊ ಕಂಪನಿಯ ಚೇರ್ಮನ್ ಎಸ್.ಎನ್. ಸುಬ್ರಹ್ಮಣ್ಯನ್ ಇತ್ತೀಚೆಗೆ "ಉದ್ಯೋಗಿಗಳು ವಾರಕ್ಕೆ 90 ಗಂಟೆ, ಭಾನುವಾರವೂ ಕೆಲಸ ಮಾಡಬೇಕು" ಎಂದು ಹೇಳಿ ಟೀಕೆಗೆ ಒಳಗಾಗಿದ್ದರು. ಅಂದಹಾಗೆ ಅವರ ವೇತನ ಎಲ್ಆಂಡ್ಟಿ ಕಂಪನಿಯ ಸಾಮಾನ್ಯ ಉದ್ಯೋಗಿಯ ವೇತನದ 534.57 ಪಟ್ಟು ಇದೆ.
ಎಲ್ ಆ್ಯಂಡ್ ಟಿ ಕಂಪನಿಯ ಚೇರ್ಮನ್ ಎಸ್.ಎನ್. ಸುಬ್ರಹ್ಮಣ್ಯನ್ ಇತ್ತೀಚೆಗೆ ಉದ್ಯೋಗಿಗಳ ಕೆಲಸದ ಅವಧಿಯ ಕುರಿತು ನೀಡಿರುವ ಹೇಳಿಕೆಯೊಂದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಇನ್ಫೋಸಿಸ್ನ ನಾರಾಯಣ ಮೂರ್ತಿ ಕೂಡ ಇದೇ ರೀತಿ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಲಾರ್ಸೆನ್ & ಟೂಬ್ರೊ ಕಂಪನಿಯ ಚೇರ್ಮನ್ ಎಸ್.ಎನ್. ಸುಬ್ರಹ್ಮಣ್ಯನ್ ಅವರು ಉದ್ಯೋಗಿಗಳು ಭಾನುವಾರವೂ ಕೆಲಸ ಮಾಡಬೇಕು, ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿದ್ದಾರೆ. ನೌಕರರು ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಎಸ್.ಎನ್. ಸುಬ್ರಹ್ಮಣ್ಯನ್ ಹೇಳಿರುವುದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಎಸ್ಎನ್ ಸುಬ್ರಹ್ಮಣ್ಯನ್ ವೇತನದ ಕುರಿತು ಚರ್ಚೆ
ಭಾನುವಾರವು ಸೇರಿದಂತೆ ವಾರಕ್ಕೆ 60 ಗಂಟೆ ಕೆಲಸ ಮಾಡಬೇಕೆಂದು ಹೇಳಿರುವ ಎಲ್ ಆ್ಯಂಡ್ ಟಿ ಕಂಪನಿಯ ಚೇರ್ಮನ್ ಎಸ್.ಎನ್. ಸುಬ್ರಹ್ಮಣ್ಯನ್ ಪಡೆಯುವ ವೇತನದ ಕುರಿತು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ನನ್ನಂತೆಯೇ ಉದ್ಯೋಗಿಗಳು ಕೂಡ ಭಾನುವಾರವೂ ಕೆಲಸಕ್ಕೆ ಬರಬೇಕು, ಎಷ್ಟು ಸಮಯ ನೀವು ನಿಮ್ಮ ಹೆಂಡತಿ ಮುಖ ನೋಡುತ್ತು ಕೂರುತ್ತೀರಿ ಎಂದು ಉದ್ಯೋಗಿಗಳ ಜತೆಗಿನ ಸಂವಾದದಲ್ಲಿ ಸುಬ್ರಹ್ಮಣ್ಯನ್ ಹೇಳಿದ್ದರು. ಉದ್ಯೋಗಿಗಳ ಬದುಕು ಮತ್ತು ಕೆಲಸದ ನಡುವಿನ ಸಮತೋಲನದ ಕುರಿತು ಚರ್ಚೆಗೆ ಇದು ಮುನ್ನುಡಿ ಹಾಡಿದೆ.
ಎಸ್ಎನ್ ಸುಬ್ರಹ್ಮಣ್ಯನ್ ಹೇಳಿದ್ದಿಷ್ಟು
"ನೀವು ಭಾನುವಾರವೂ ಕೆಲಸಕ್ಕೆ ಬರುವಂತೆ ಮಾಡಲಾಗದೆ ಇರುವುದಕ್ಕೆ ನನಗೆ ವಿಷಾದವಾಗುತ್ತಿದೆ. ನಾನು ಭಾನುವಾರವೂ ಕೆಲಸಕ್ಕೆ ಬರುವೆ. ಇದರಿಂದ ನನಗೆ ಹೆಚ್ಚು ಖುಷಿಯಾಗುತ್ತಿದೆ. ಮನೆಯಲ್ಲಿ ಕುಳಿತು ಏನು ಮಾಡುವಿರಿ. ಎಷ್ಟು ಹೊತ್ತು ನಿಮ್ಮ ಹೆಂಡತಿಯನ್ನು ದಿಟ್ಟಿಸಿ ನೋಡುತ್ತ ಇರಬಹುದು? ನಿಮ್ಮ ಹೆಂಡತಿ ಎಷ್ಟು ಹೊತ್ತು ನಿಮ್ಮನ್ನು ನೋಡುತ್ತ ಇರಬಹುದು. ಆಫೀಸ್ಗೆ ಬನ್ನಿ, ಕೆಲಸ ಮಾಡಿ" ಎಂದು ಎಸ್ಎನ್ ಸುಬ್ರಹ್ಮಣ್ಯನ್ ಹೇಳಿದ್ದರು.
ಸೆಲೆಬ್ರಿಟಿಗಳ ಆಕ್ರೋಶ
ದೀಪಿಕಾ ಪಡುಕೋಣೆ, ಹರ್ಷ ಗೋಯೆಂಕಾ, ಜ್ವಾಲಾ ಗುಪ್ತಾ ಸೇರಿದಂತೆ ಹಲವು ಸೆಲೆಬ್ರಿಟಿಗಳೂ ಎಸ್ಎನ್ ಸುಬ್ರಹ್ಮಣ್ಯನ್ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯು ಎಸ್ಎನ್ ಸುಬ್ರಹ್ಮಣ್ಯನ್ ಅವರ ವಾರ್ಷಿಕ ವೇತನದ ಕುರಿತು ಪ್ರಕಟಿಸಿದ ವರದಿಯು ಹೊಸ ಚರ್ಚೆಗೆ ನಾಂದಿ ಹಾಡಿದೆ. 2023-24ರಲ್ಲಿ ಎಸ್ಎನ್ ಸುಬ್ರಹ್ಮಣ್ಯನ್ ಅವರು ವಾರ್ಷಿಕ 51 ಕೋಟಿ ರೂಪಾಯಿ ವೇತನ ಪಡೆದಿದ್ದರು. ಇವರ ವೇತನ ವೇತನ ಎಲ್ಆಂಡ್ಟಿ ಕಂಪನಿಯ ಸಾಮಾನ್ಯ ಉದ್ಯೋಗಿಯ ವೇತನದ 534.57 ಪಟ್ಟು ಇದೆ. ಎಲ್ ಆ್ಯಂಡ್ ಟಿ ಕಂಪನಿಯು ಎಸ್ಎನ್ ಸುಬ್ರಹ್ಮಣ್ಯನ್ ಬೆಂಬಲಕ್ಕೆ ಬಂದರೂ ಆ ಹೇಳಿಕೆ ಮಾಡಿರುವ ಹಾನಿಯನ್ನು ತಗ್ಗಿಸಲು ಸಾಧ್ಯವಾಗಿಲ್ಲ.
ಎಸ್ಎನ್ ಸುಬ್ರಹ್ಮಣ್ಯನ್ ಯಾರು?
ಎಸ್ಎನ್ ಸುಬ್ರಹ್ಮಣ್ಯನ್ ಅವರು ಮೀನಾ ಎಂಬವರನ್ನು ವಿವಾಹವಾಗಿದ್ದಾರೆ. ಅವರಿಗೆ ಸೂರಜ್ ಮತ್ತು ಸಂಜಯ್ ಎಂಬ ಇಬ್ಬರು ಮಕ್ಕಳಿದ್ದಾರೆ. ಮೀನಾ ಸುಬ್ರಹ್ಮಣ್ಯನ್ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಮದುವೆಯಾದ ಬಳಿಕ ಮೀನಾ ಅವರು ಕುಟುಂಬದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸುಬ್ರಹ್ಮಣ್ಯನ್ ಅವರು ಎಲ್ ಆ್ಯಂಡ್ ಟಿ ಕಂಪನಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿರುವುದರಿಂದ ಮೀನಾ ಅವರು ತನ್ನ ಮಕ್ಕಳ ಶಿಕ್ಷಣ ಮತ್ತು ಮದುವೆಯ ಉಸ್ತುವಾರಿಯನ್ನೂ ನೋಡಿಕೊಂಡಿದ್ದಾರೆ. ಮೀನಾ ಕುಟುಂಬದ ಜವಾಬ್ದಾರಿಯನ್ನು ಸಂಪೂರ್ಣವಾಗಿ ವಹಿಸಿಕೊಂಡಿರುವ ಕಾರಣ ಮತ್ತು ಸುಬ್ರಹ್ಮಣ್ಯನ್ ಅವರ ಹಣಕಾಸು ಬೆಂಬಲದಿಂದ ಇವರು ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ
ಸುಬ್ರಹ್ಮಣ್ಯನ್ ಅವರು ಚೆನ್ನೈನಲ್ಲಿ ಸ್ಥಿತಿವಂತ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಎಸ್ಎಸ್ ನಾರಾಯಣ್ ಭಾರತೀಯ ರೈಲ್ವೆಯಲ್ಲಿ ಪ್ರಧಾನ ವ್ಯವಸ್ಥಾಪಕರಾಗಿದ್ದರು. ಚೆನ್ನೈನ ವಿದ್ಯಾ ಮಂದಿರ್ ಸೀನಿಯರ್ ಸೆಕೆಂಡರಿ ಸ್ಕೂಲ್ನಲ್ಲಿ ಆರಂಭಿಕ ಶಿಕ್ಷಣ ಪಡೆದರು. ಕುರುಕ್ಷೇತ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ. ಪುಣೆಯ ಸಿಂಬೊಸಿಸ್ ಇನ್ಸ್ಟಿಟ್ಯೂಟ್ಆಫ್ ಮ್ಯಾನೇಜ್ಮೆಂಟ್ನಲ್ಲಿ ಎಂಬಿಎ ಮತ್ತು ಲಂಡನ್ ಬಿಸ್ನೆಸ್ ಸ್ಕೂಲ್ನಲ್ಲಿ ಎಕ್ಸಿಕ್ಯೂಟಿವ್ ಮ್ಯಾನೇಜ್ಮೆಂಟ್ ಪ್ರೋಗ್ರಾಂ ಕೋರ್ಸ್ ಮಾಡಿದ್ದಾರೆ. 1984ರಲ್ಲಿ ಎಲ್ ಆ್ಯಂಡ್ ಟಿ ಕಂಪನಿಗೆ ಸೇರಿದ ಇವರು ವಿವಿಧ ಪ್ರಮುಖ ಹುದ್ದೆಗಳನ್ನು ನಿಭಾಯಿಸಿ ಇದೀಗ ಚೇರ್ಮನ್ ಹುದ್ದೆಯಲ್ಲಿದ್ದಾರೆ.