ರಾಜ್ಯ, ಕೇಂದ್ರಗಳ ನಡುವೆ ರಾಜಕೀಯ ಮೇಲಾಟಕ್ಕೆ ಗಣತಿಯ ಅಸ್ತ್ರ, ಏನಿದು ಜಾತಿಗಣತಿ, ಇತಿಹಾಸ ಮತ್ತು ಪ್ರಸ್ತುತತೆ- ವಿವರಣೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರಾಜ್ಯ, ಕೇಂದ್ರಗಳ ನಡುವೆ ರಾಜಕೀಯ ಮೇಲಾಟಕ್ಕೆ ಗಣತಿಯ ಅಸ್ತ್ರ, ಏನಿದು ಜಾತಿಗಣತಿ, ಇತಿಹಾಸ ಮತ್ತು ಪ್ರಸ್ತುತತೆ- ವಿವರಣೆ

ರಾಜ್ಯ, ಕೇಂದ್ರಗಳ ನಡುವೆ ರಾಜಕೀಯ ಮೇಲಾಟಕ್ಕೆ ಗಣತಿಯ ಅಸ್ತ್ರ, ಏನಿದು ಜಾತಿಗಣತಿ, ಇತಿಹಾಸ ಮತ್ತು ಪ್ರಸ್ತುತತೆ- ವಿವರಣೆ

ಭಾರತದಲ್ಲಿ ಸದ್ಯ ಜಾತಿಗಣತಿ, ಜನಗಣತಿಯದ್ದೇ ಚರ್ಚೆ. ಕರ್ನಾಟಕದಲ್ಲಿ ಜಾತಿಗಣತಿ ವಿಚಾರ ಮುನ್ನೆಲೆಗೆ ಬಂದ ಬೆನ್ನಿಗೆ ಕೇಂದ್ರ ಸರ್ಕಾರವೂ ಈ ಬಗ್ಗೆ ಗಮನಹರಿಸಿದೆ. ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದುಕೊಂಡಿದೆ. ಇಷ್ಟಕ್ಕೂ ಏನಿದು ಜಾತಿ ಗಣತಿ? ಇತಿಹಾಸ, ಪ್ರಸ್ತುತತೆ ಏನು? ಎಂಬುದರ ವಿವರಣೆ ಇಲ್ಲಿದೆ. (ಬರಹ- ಪರಿಣಿತಾ, ಬೆಂಗಳೂರು)

ರಾಜ್ಯ, ಕೇಂದ್ರಗಳ ನಡುವೆ ರಾಜಕೀಯ ಮೇಲಾಟಕ್ಕೆ ಗಣತಿಯ ಅಸ್ತ್ರವಾಗಿದೆ. ಏನಿದು ಜಾತಿಗಣತಿ, ಮತ್ತು ಅದರ ಇತಿಹಾಸದ ವಿವರ. (ಸಾಂಕೇತಿಕ ಚಿತ್ರ)
ರಾಜ್ಯ, ಕೇಂದ್ರಗಳ ನಡುವೆ ರಾಜಕೀಯ ಮೇಲಾಟಕ್ಕೆ ಗಣತಿಯ ಅಸ್ತ್ರವಾಗಿದೆ. ಏನಿದು ಜಾತಿಗಣತಿ, ಮತ್ತು ಅದರ ಇತಿಹಾಸದ ವಿವರ. (ಸಾಂಕೇತಿಕ ಚಿತ್ರ)

ಕರ್ನಾಟಕದಲ್ಲಿ ತೀವ್ರ ರೀತಿಯಲ್ಲಿ ಸದ್ದು ಮಾಡಿದ ಜಾತಿಗಣತಿ ಚರ್ಚೆಗೆ ಈಗ ಕೇಂದ್ರ ಸರ್ಕಾರವೂ ಬಲತುಂಬಿದೆ. ಬಿಹಾರ ಚುನಾವಣೆ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿರುವ ಜಾತಿಗಣತಿ, ಜನಗಣತಿ ವಿಚಾರ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ, ಜಾತಿಗಣತಿ ಹಾಗೂ ಜನಗಣತಿ ಎಂದರೇನು, ಅದರ ಇತಿಹಾಸವೇನು, ಮಹತ್ವ ಏನು ಎಂಬಿತ್ಯಾದಿ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಇದು.

ಬ್ರಿಟಿಷ್ ಅಧಿಪತ್ಯವಿದ್ದ ಭಾರತದಲ್ಲಿ 1881 ಮತ್ತು 1931 ರ ನಡುವೆ ನಡೆಸಿದ ಜನಗಣತಿಯಲ್ಲಿ ಎಲ್ಲ ಜಾತಿಗಳ ಗಣತಿಯನ್ನೂ ಮಾಡಲಾಗಿತ್ತು. ಆದರೆ ಭಾರತ ಸ್ವತಂತ್ರವಾದ ನಂತರ 1951ರಲ್ಲಿ ನಡೆದ ಮೊದಲ ಜನಗಣತಿಯ ಸಮಯದಲ್ಲಿ, ಆಗಿನ ಸರ್ಕಾರವು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟು ಸಮುದಾಯ ಹೊರತುಪಡಿಸಿ ಇನ್ನು ಮುಂದೆ ಬೇರೆ ಜಾತಿಗಳ ಗಣತಿ ಮಾಡುವುದು ಬೇಡ ಎಂದು ನಿರ್ಧರಿಸಿತು. ಒಂದು ದಶಕದ ನಂತರ 1961 ರಲ್ಲಿ, ಕೇಂದ್ರ ಸರ್ಕಾರವು ರಾಜ್ಯಗಳು ಬಯಸಿದರೆ ತಮ್ಮದೇ ಆದ ಸಮೀಕ್ಷೆಗಳನ್ನು ನಡೆಸಿ ರಾಜ್ಯಗಳಲ್ಲಿ ನಿರ್ದಿಷ್ಟ ಒಬಿಸಿಗಳ ಪಟ್ಟಿಗಳನ್ನು ಸಿದ್ಧಪಡಿಸುವಂತೆ ಕೇಳಿತು. ಆರು ದಶಕಗಳ ನಂತರ ವಿವಿಧ ಪಕ್ಷಗಳಿಂದ ಬೇಡಿಕೆ ಬಂದ ನಂತರ, ಮುಂದಿನ ರಾಷ್ಟ್ರವ್ಯಾಪಿ ಜನಗಣತಿಯಲ್ಲಿ ಜಾತಿ ಗಣತಿಯನ್ನೂ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

2011ರಲ್ಲಿ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ (SECC) ಅಡಿಯಲ್ಲಿ ದೇಶದಾದ್ಯಂತ ಜಾತಿಗಣತಿ ನಡೆದಿತ್ತು. ಈ ಜಾತಿಗಣತಿಯಲ್ಲಿ ಜಾತಿಯೂ ಸೇರಿದಂತೆ ವ್ಯಕ್ತಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ಬಗ್ಗೆ ವಿವರವಾದ ಮಾಹಿತಿ, ಸಂಗ್ರಹಿಸಲಾಯಿತು. ಜಾತಿ ಗಣತಿಯ ಇತಿಹಾಸ ಮತ್ತು ರಾಜಕೀಯ ಅಂಶಗಳ ಕಡೆಗೆ ಒಂದು ಕಿರುನೋಟ ಬೀರುವುದಕ್ಕೆ ಈ ಹೊತ್ತು ಒಂದು ನಿಮಿತ್ತ.

ಏನಿದು ಜಾತಿಗಣತಿ?

ಜಾತಿಗಣತಿ ಅಂದರೆ ವ್ಯಕ್ತಿಗಳ ಜಾತಿ ಗುರುತುಗಳ ಕುರಿತು ವ್ಯವಸ್ಥಿತ ದತ್ತಾಂಶ ಸಂಗ್ರಹ ಮಾಡುವ ಪ್ರಕ್ರಿಯೆ. ಭಾರತದಲ್ಲಿ ‘ಜಾತಿ’ ಐತಿಹಾಸಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯದಲ್ಲಿ ಪ್ರಧಾನ ಪಾತ್ರವಹಿಸಿದ್ದು, ಈ ರೀತಿಯ ಡೇಟಾ ಸಂಗ್ರಹವು ಜನಸಂಖ್ಯೆ, ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ಮತ್ತು ವಿವಿಧ ಜಾತಿ ಗುಂಪುಗಳ ಪ್ರಾತಿನಿಧ್ಯದ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆ. ಈ ಮಾಹಿತಿಯನ್ನು ಸಕಾರಾತ್ಮಕ ಕ್ರಮ, ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಕುರಿತು ನೀತಿಗಳನ್ನು ತಿಳಿಸಲು ಬಳಸಬಹುದು.

ಜಾತಿಗಣತಿಯ ಇತಿಹಾಸ

ಭಾರತದಲ್ಲಿ ಜಾತಿ ಗಣತಿಗೆ ದೀರ್ಘ ಇತಿಹಾಸವಿದೆ.

ಬ್ರಿಟಿಷ್ ಇಂಡಿಯಾ (1881–1931): ಬ್ರಿಟಿಷ್ ವಸಾಹತುಶಾಹಿ ಆಡಳಿತವು 1881 ಮತ್ತು 1931 ರ ನಡುವೆ ಪ್ರತಿ ದಶಕದಲ್ಲಿ ನಡೆಸಲಾದ ಜನಗಣತಿಯು ಜಾತಿ ಗಣತಿಯನ್ನೂ ಒಳಗೊಂಡಿತ್ತು. ಈ ಸಮೀಕ್ಷೆಗಳು ಜನಸಂಖ್ಯೆಯನ್ನು ಜಾತಿ, ಧರ್ಮ ಮತ್ತು ಉದ್ಯೋಗ ಎಂದು ವರ್ಗೀಕರಿಸಿ, ವಿವರವಾದ ಜನಸಂಖ್ಯಾ ಡೇಟಾವನ್ನು ಒದಗಿಸಿದವು.

ಸ್ವಾತಂತ್ರ್ಯಾನಂತರದ ಜನಗಣತಿ (1951): 1947 ರಲ್ಲಿ ಭಾರತ ಸ್ವತಂತ್ರಗೊಂಡ ನಂತರ, 1951 ರಲ್ಲಿ ನಡೆದ ಸ್ವತಂತ್ರ ಭಾರತದ ಮೊದಲ ಜನಗಣತಿಯು ಗಮನಾರ್ಹವಾದ ಬದಲಾವಣೆಯನ್ನು ಗುರುತಿಸಿತು. ಆಗಿನ ಪ್ರಧಾನಿ ಜವಾಹರಲಾಲ್ ನೆಹರು ನೇತೃತ್ವದ ಸರ್ಕಾರವು, ಪರಿಶಿಷ್ಟ ಜಾತಿಗಳು (SCs) ಮತ್ತು ಪರಿಶಿಷ್ಟ ಪಂಗಡಗಳು (STs) ಹೊರತುಪಡಿಸಿ ಜಾತಿ ಗಣತಿಯನ್ನು ನಿಲ್ಲಿಸಲು ನಿರ್ಧರಿಸಿತು. ಜಾತಿಯ ಮೇಲೆ ಕೇಂದ್ರೀಕರಿಸುವುದರಿಂದ ಹೊಸದಾಗಿ ಸ್ವತಂತ್ರವಾದ ರಾಷ್ಟ್ರದಲ್ಲಿ ವಿಭಜನೆಗಳು ತಲೆದೋರಬಹುದು.ಇದು ರಾಷ್ಟ್ರೀಯ ಏಕತೆಗೆ ಅಡ್ಡಿಯಾಗಬಹುದು ಎಂಬ ಕಾರಣದಿಂದ ಜಾತಿ ಗಣತಿ ಮಾಡದೇ ಇರಲು ಸರ್ಕಾರ ನಿರ್ಧರಿಸಿತ್ತು.

1961ರ ನಿರ್ದೇಶನ: ಒಂದು ದಶಕದ ನಂತರ 1961 ರಲ್ಲಿ, ಕೇಂದ್ರ ಸರ್ಕಾರವು ರಾಜ್ಯಗಳು ಇತರ ಹಿಂದುಳಿದ ವರ್ಗಗಳ (ಒಬಿಸಿ) ರಾಜ್ಯ-ನಿರ್ದಿಷ್ಟ ಪಟ್ಟಿಗಳನ್ನು ತಯಾರಿಸಲು ತಮ್ಮದೇ ಆದ ಸಮೀಕ್ಷೆ ನಡೆಸಲು ಅವಕಾಶ ಕಲ್ಪಿಸಿತ್ತು. ಇದು ಎಸ್‌ಸಿ ಮತ್ತು ಎಸ್‌ಟಿಗಳನ್ನು ಮೀರಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಸಕಾರಾತ್ಮಕ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಗಳಿಗೆ ಪ್ರತಿಕ್ರಿಯೆಯಾಗಿತ್ತು. ಆದಾಗ್ಯೂ, ದೇಶಾದ್ಯಂತ ಜಾತಿಗಣತಿ ಮಾಡಿರಲಿಲ್ಲ.

ಜಾತಿಗಣತಿ ರಾಜಕೀಯ ವಿಷಯವಾಗಿದ್ದು ಹೇಗೆ?

ಮಂಡಲ್ ಆಯೋಗ (1980): ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಒಬಿಸಿಗಳಿಗೆ ಶೇಕಡಾ 27 ರಷ್ಟು ಮೀಸಲಾತಿ ನೀಡುವ ಮಂಡಲ್ ಆಯೋಗದ ಶಿಫಾರಸು ಜಾತಿಯನ್ನು ಮತ್ತೆ ರಾಜಕೀಯ ವಿಷಯವಾಗುವಂತೆ ಮಾಡಿತು. ಸಮಗ್ರ ಜಾತಿ ದತ್ತಾಂಶದ ಕೊರತೆಯಿಂದಾಗಿ ಒಬಿಸಿ ಜನಸಂಖ್ಯೆಯನ್ನು ನಿಖರವಾಗಿ ಗುರುತಿಸುವುದು ಮತ್ತು ಪ್ರಮಾಣೀಕರಿಸುವುದು ಸವಾಲಿನ ಸಂಗತಿಯಾಗಿದ್ದು ಎಂದು ಇದು ಹೇಳಿದ್ದರಿಂದ ಜಾತಿಗಣತಿ ಬೇಕು ಎಂಬ ಬೇಡಿಕೆಯ ಕೂಗು ಎದ್ದಿತ್ತು.

ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ (SECC) 2011: 2011 ರಲ್ಲಿ, ಯುಪಿಎ ಸರ್ಕಾರವು ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ ನಡೆಸಿದ್ದು ಇದು 1931 ರ ನಂತರ ದೇಶಾದ್ಯಂತ ಜಾತಿ ಡೇಟಾ ಸಂಗ್ರಹಿಸುವ ಮೊದಲ ಪ್ರಯತ್ನ. ಆದಾಗ್ಯೂ, SECC 2011 ರಲ್ಲಿ ಸಂಗ್ರಹಿಸಿದ ಜಾತಿ ದತ್ತಾಂಶವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಲಾಗಿಲ್ಲ ಅಥವಾ ಬಳಸಿಕೊಳ್ಳಲಾಗಿಲ್ಲ.

ರಾಜ್ಯಮಟ್ಟದಲ್ಲಿ ಜಾತಿಗಣತಿ: ದೇಶದಲ್ಲಿ ಜಾತಿ ಜನಗಣತಿ ನಡೆಯದೇ ಇದ್ದರೂ, ಬಿಹಾರ, ತೆಲಂಗಾಣ ಮತ್ತು ಕರ್ನಾಟಕದಂತಹ ರಾಜ್ಯಗಳು ಇತ್ತೀಚಿನ ವರ್ಷಗಳಲ್ಲಿ ತಮ್ಮದೇ ಆದ ಜಾತಿ ಸಮೀಕ್ಷೆಗಳನ್ನು ನಡೆಸಿವೆ. ಈ ಸಮೀಕ್ಷೆಗಳು ರಾಜ್ಯ-ನಿರ್ದಿಷ್ಟ ಮೀಸಲಾತಿ ನೀತಿಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಬೆಂಬಲಿಸಲು ಡೇಟಾವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿವೆ. 2023 ರಲ್ಲಿ ಬಿಹಾರದ ಜಾತಿ ಸಮೀಕ್ಷೆಯು ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 63 ಕ್ಕಿಂತ ಹೆಚ್ಚು ಒಬಿಸಿಗಳು ಮತ್ತು ಅತ್ಯಂತ ಹಿಂದುಳಿದ ವರ್ಗಗಳು (ಇಬಿಸಿ) ಇದ್ದಾರೆ ಎಂಬುದನ್ನು ಬಹಿರಂಗಪಡಿಸಿತು.

ಜಾತಿಗಣತಿಯ ಪ್ರಾಮುಖ್ಯತೆ ಏನು?

ಜನಗಣತಿಯಂತೆ, ಜಾತಿಗಣತಿ ಕೂಡಾ ಹೆಚ್ಚು ಪ್ರಾಮುಖ್ಯತೆ ವಹಿಸಿದೆ. ಜನಗಣತಿಯಲ್ಲಿ ಜಾತಿಯನ್ನು ಸೇರಿಸುವುದರಿಂದ ಮೀಸಲಾತಿ ನೀತಿಗಳು, ರಾಜಕೀಯ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯದ ಉಪಕ್ರಮಗಳು ಯಾವ ರೀತಿ ಪರಿಣಾಮ ಬೀರಿವೆ ಎಂಬುದನ್ನು ಅರಿಯಬಹುದು ಎಂದು ಸಾಮಾಜಿಕ ಹೋರಾಟಗಾರರು ಹೇಳುತ್ತಾರೆ. ರಾಜಕೀಯ ಪಕ್ಷಗಳು ವಿವಿಧ ಜಾತಿ ಗುಂಪುಗಳ ಬೆಂಬಲಕ್ಕಾಗಿ ಪೈಪೋಟಿ ನಡೆಸುವುದರಿಂದ ಇದು ಚುನಾವಣಾ ತಂತ್ರಗಳನ್ನು ಪುನರ್ ರೂಪಿಸಲೂ ಬಹುದು.

"ಭಾರತದಲ್ಲಿ ಅಗತ್ಯ ಸೇವೆಗಳಾದ ಶಿಕ್ಷಣ, ಆರೋಗ್ಯ, ಪೋಷಣೆ ಮತ್ತು ಸಾಮಾಜಿಕ ರಕ್ಷಣೆಗೆ ಹೆಚ್ಚಿನ ಪ್ರವೇಶವು ಜಾತಿ, ಪ್ರದೇಶ, ಧರ್ಮ ಮತ್ತು ಆರ್ಥಿಕ ಸ್ಥಿತಿಯ ರಚನಾತ್ಮಕ ಅಸಮಾನತೆಗಳಿಂದ ರೂಪುಗೊಂಡಿದೆ. ಈ ಅಸಮಾನತೆಗಳನ್ನು ತೊಡೆದುಹಾಕಿ ಎಲ್ಲರನ್ನೂ ಒಳಗೊಂಡ ಸಮಾನ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲು ಜಾತಿ ಜನಗಣತಿಯು ನಿರ್ಣಾಯಕವಾಗಿದೆ ಅಂತಾರೆ ಪಾಪ್ಯುಲೇಷನ್ ಫೌಂಡೇಶನ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕಿ ಪೂನಂ ಮುತ್ರೇಜಾ.

ನಿಖರವಾದ ಜಾತಿ ಡೇಟಾ ಪ್ರಸ್ತುತ ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು ಪರಿಹರಿಸಲು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿಯಂತಹ ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಅದೇ ರೀತಿ ಅಂಚಿನಲ್ಲಿರುವ ಸಮುದಾಯಗಳನ್ನು ಗುರುತಿಸಿ ಅವರ ಅಭಿವೃದ್ಧಿಗಾಗಿ ಜಾತಿಗಣತಿ ಅತ್ಯಗತ್ಯ ಎಂದು ಹೇಳಲಾಗುತ್ತಿದೆ. ಆದರೆ ಜಾತಿಗಳ ಗುರುತಿಸುವಿಕೆ ಸಮಾಜದಲ್ಲಿ ವಿಭಜನೆಗೂ ಕಾರಣವಾಗಬಹುದು ಎಂಬ ಎಚ್ಚರಿಕೆಯ ಮಾತೂ ಜನರಿಂದ ಕೇಳಿ ಬಂದಿದೆ.

ಮುಂದೇನಾಗುತ್ತೆ?

ಸಮಗ್ರ ಜಾತಿಗಣತಿಗೆ 70 ವರ್ಷಗಳಿಗೂ ಹೆಚ್ಚು ಕಾಲದ ಪ್ರತಿರೋಧದ ನಂತರ ಕೇಂದ್ರ ಸರ್ಕಾರದ ಜಾತಿಗಣತಿ ಘೋಷಣೆಯು ಒಂದು ಪ್ರಮುಖ ತಿರುವು ಎಂದೇ ಪರಿಗಣಿಸಲಾಗುತ್ತಿದೆ. ಏತನ್ಮಧ್ಯೆ ಡೇಟಾವನ್ನು ಹೇಗೆ ಸಂಗ್ರಹಿಸಲಾಗುತ್ತದೆ, ವರ್ಗೀಕರಿಸಲಾಗುತ್ತದೆ ಮತ್ತು ಬಳಸಲಾಗುತ್ತದೆ ಎಂಬುದನ್ನೂ ನೋಡಬೇಕಾಗುತ್ತದೆ

ಮುಂಬರುವ ಜನಗಣತಿಯಲ್ಲಿ ಜಾತಿ ದತ್ತಾಂಶವನ್ನು ಸೇರಿಸುವುದರಿಂದ ಆಡಳಿತ, ಚುನಾವಣಾ ರಾಜಕೀಯ ಮತ್ತು ಅಸಮಾನತೆಯ ವಿರುದ್ಧ ಭಾರತದ ನಿರಂತರ ಹೋರಾಟದ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆಯಿದೆ. ಜಾತಿಗಣತಿಯನ್ನು ಯಾವಾಗ ನಡೆಸಲಾಗುವುದು ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ.

(ಬರಹ- ಪರಿಣಿತಾ, ಬೆಂಗಳೂರು)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.