ಕೊಯಮತ್ತೂರು: ಮುಟ್ಟಾದ ವಿದ್ಯಾರ್ಥಿನಿಯನ್ನು 8ನೇ ತರಗತಿ ಹೊರಗೆ ಕುಳ್ಳಿರಿಸಿ ಪರೀಕ್ಷೆ ಬರೆಸಿದ ಖಾಸಗಿ ಶಾಲೆ
ಕೊಯಮತ್ತೂರು ಜಿಲ್ಲೆ ಪೊಲ್ಲಾಚಿಯ ಖಾಸಗಿ ಶಾಲೆಯೊಂದು ಮುಟ್ಟಾದ ವಿದ್ಯಾರ್ಥಿನಿಯನ್ನು 8ನೇ ತರಗತಿ ಹೊರಗೆ ಕುಳ್ಳಿರಿಸಿ ಪರೀಕ್ಷೆ ಬರೆಸಿದೆ. ಈ ಅಮಾನವೀಯ ಹಾಗೂ ಸಂವೇದನಾ ರಹಿತ ನಡೆ ವ್ಯಾಪಕ ಖಂಡನೆಗೆ ಒಳಗಾಗಿದೆ.

ಕೊಯಮತ್ತೂರು: ತಮಿಳುನಾಡು ಕೊಯಮತ್ತೂರು ಜಿಲ್ಲೆ ಪೊಲ್ಲಾಚಿಯ ಖಾಸಗಿ ಶಾಲೆಯಲ್ಲಿ ಮುಟ್ಟಾದ ವಿದ್ಯಾರ್ಥಿನಿಯನ್ನು 8ನೇ ತರಗತಿ ಹೊರಗೆ ಕೂರಿಸಿ ವಾರ್ಷಿಕ ಪರೀಕ್ಷೆ ಬರೆಸಿದ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಶನಿವಾರ ಈ ಘಟನೆ ನಡೆದಿದೆ. ಖಾಸಗಿ ಶಾಲೆಯ ಈ ಅಮಾನವೀಯ, ಸಂವೇದನಾ ರಹಿತ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಕೂಡಲೇ ಕಾರ್ಯಪ್ರವತ್ತವಾಗಿರುವ ಶಾಲಾ ಶಿಕ್ಷಣ ಇಲಾಖೆ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ ಎಂದು ಗುರುವಾರ ಹೇಳಿದೆ.
ಮುಟ್ಟಾದ ವಿದ್ಯಾರ್ಥಿನಿಯನ್ನು 8ನೇ ತರಗತಿ ಹೊರಗೆ ಕುಳ್ಳಿರಿಸಿ ಪರೀಕ್ಷೆ ಬರೆಸಿದ ಖಾಸಗಿ ಶಾಲೆ
ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಬಾಲಕಿಯನ್ನು ಶನಿವಾರ ಶಾಲಾ ತರಗತಿ ಹೊರಗೆ ಕೂರಿಸಿ ಪರೀಕ್ಷೆ ಬರೆಸಲಾಗಿದ್ದ ವಿಡಿಯೊ ಬುಧವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದು ಪೊಲ್ಲಾಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೀಗಾಗಿ ಪೊಲೀಸರು ಕೂಡಲೇ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ವಿವರಣೆ ಕೇಳಿದ್ದರು. ಇನ್ನೊಂದೆಡೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡುವಂತೆ ಶಾಲಾ ಆಡಳಿತ ಮಂಡಳಿಗೆ ಸೂಚಿಸಿದ್ದರು.
ಸಂತ್ರಸ್ತ ಬಾಲಕಿ ಏಪ್ರಿಲ್ 5 ರಂದು ಋತುಮತಿಯಾಗಿದ್ದು, ಅಂದು ನಿಗದಿಯಾಗಿದ್ದ ಪರೀಕ್ಷೆ ಬರೆಯಲು ಆಕೆ ಶಾಲೆಗೆ ಹೋಗಿದ್ದಳು. ಈ ಕುರಿತು ಪ್ರತಿಕ್ರಿಯಿಸಿದ ಬಾಲಕಿಯ ತಂದೆ, ‘ಕಳೆದ ವಾರ ನನ್ನ ಮಗಳು ಋತುಮತಿಯಾಗಿದ್ದಳು. ಈಗಾಗಲೇ ನಿಗದಿಯಾಗಿದ್ದ ಪರೀಕ್ಷೆ ಬರೆಯಲು ಹೋಗುತ್ತೇನೆ ಎಂದು ಹೇಳಿದ್ದಳು. ಹೀಗಾಗಿ ಶಾಲೆಗೆ ಹೋಗಿ, ಮಗಳು ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಪ್ರತ್ಯೇಕ ಮೇಜು ಮತ್ತು ಕುರ್ಚಿ ವ್ಯವಸ್ಥೆ ಮಾಡುವಂತೆ ಶಾಲಾ ಆಡಳಿತ ಮಂಡಳಿಗೆ ಮನವಿ ಮಾಡಿದ್ದೆ. ಆದರೆ, ಅವರು ತರಗತಿ ಹೊರಗಿರುವ ಮೆಟ್ಟಿಲಿನ ಮೇಲೆ ಮಗಳನ್ನು ಕುಳ್ಳಿರಿಸಿ ಪರೀಕ್ಷೆ ಬರೆಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು ಎಂದು ಪಿಟಿಐ ವರದಿ ಮಾಡಿದೆ.
ಶಾಲಾ ಪ್ರಾಂಶುಪಾಲರ ಅಮಾನತು, ಶಾಲೆ ವಿರುದ್ಧ ತನಿಖೆ
ಪ್ರೀತಿಯ ವಿದ್ಯಾರ್ಥಿ, ಇಲ್ಲಿ ನೀನು ಏಕಾಂಗಿಯಲ್ಲ! ನಿನ್ನೊಂದಿಗೆ ನಾವಿದ್ದೇವೆ ಎಂದು ಟ್ವೀಟ್ ಮಾಡಿದ ತಮಿಳುನಾಡು ಶಿಕ್ಷಣ ಸಚಿವ ಅನ್ಬಿಲ್ ಮಹೇಶ್, ‘ಈ ಘಟನೆ ಸಂಬಂಧ ಖಾಸಗಿ ಶಾಲೆಯ ವಿರುದ್ಧ ತನಿಖೆಗೆ ಆದೇಶ ನೀಡಲಾಗಿದೆ. ಶಾಲೆಯ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ. ಮಕ್ಕಳ ಮೇಲೆ ನಡೆಯುವ ಯಾವುದೇ ಬಲವಂತದ ಕ್ರಮವನ್ನು ಸಹಿಸಲಾಗದು’ ಎಂದು ಎಚ್ಚರಿಸಿದ್ದಾರೆ. ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು.
ಶಾಲಾ ಪ್ರಾಂಶುಪಾಲರು ಸೆಂಗುಟ್ಟಿಪಾಳಯಂ ಗ್ರಾಮದವರು. ಅವರನ್ನು ಅಮಾನತು ಮಾಡಲಾಗಿದೆ. ಶಾಲಾ ಆಡಳಿತ ಮಂಡಳಿಯಿಂದ ಈ ಕುರಿತು ವಿವರಣೆ ನೀಡುವಂತೆ ಆದೇಶಿಸಲಾಗಿದೆ. ಶಾಲೆಯ ವಿರುದ್ಧ ಇಲಾಖಾ ತನಿಖೆಗೂ ಕ್ರಮ ಜರುಗಿಸಲಾಗಿದೆ ಎಂದು ಸಚಿವ ಅನ್ಬಿಲ್ ಮಹೇಶ್ ತಿಳಿಸಿದ್ದಾರೆ.
