ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲಿ ಮಾಡಿದ ಎಲ್ಲ ತಪ್ಪುಗಳ ಜವಾಬ್ದಾರಿ ಹೊರಲು ಸಿದ್ಧ: ರಾಹುಲ್ ಗಾಂಧಿ
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಘಟಿಸಿದ ಎಲ್ಲ ತಪ್ಪುಗಳಿಗೂ ಜವಾಬ್ದಾರಿ ಹೊರಲು ನಾನು ಸಿದ್ದನಿದ್ದೇನೆ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ನವದೆಹಲಿ: 1984 ರ ಸಿಖ್ ವಿರೋಧಿ ದಂಗೆಯ ಸಮಯದಲ್ಲಿ ತಮ್ಮ ಪಕ್ಷವು ಮಾಡಿದ ಐತಿಹಾಸಿಕ ತಪ್ಪುಗಳನ್ನು ಒಪ್ಪಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಆ ಘಟನೆಗಳ ಸಮಯದಲ್ಲಿ ನಾನು ಹಾಜರಿರದಿದ್ದರೂ, ಕಾಂಗ್ರೆಸ್ ಪಕ್ಷವು ತನ್ನ ಇತಿಹಾಸದಲ್ಲಿ ಮಾಡಿದ ಎಲ್ಲದಕ್ಕೂ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧನಿದ್ದೇನೆ ಎಂದು ಪ್ರತಿಪಾದಿಸಿದ್ದಾರೆ. ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ವ್ಯಾಟ್ಸನ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಅಂಡ್ ಪಬ್ಲಿಕ್ ಅಫೇರ್ಸ್ನಲ್ಲಿ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ರಾಹುಲ್ ಗಾಂಧಿ ಈ ಮಾತುಗಳನ್ನು ಹೇಳಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರದ ಹಿಂಸಾತ್ಮಕ ಪರಿಣಾಮಗಳಲ್ಲಿ ಕಾಂಗ್ರೆಸ್ ಪಾತ್ರದ ಬಗ್ಗೆ ಸಿಖ್ ವಿದ್ಯಾರ್ಥಿಯೊಬ್ಬರು ರಾಹುಲ್ ಗಾಂಧಿಗೆ ಪ್ರಶ್ನೆ ಕೇಳಿದ್ದಾರೆ. ಇಂದಿರಾ ಗಾಂಧಿ ಹತ್ಯೆ ಬಳಿಕ, ದೆಹಲಿಯಲ್ಲಿ 3,000 ಕ್ಕೂ ಹೆಚ್ಚು ಸಿಖ್ಖರನ್ನು ಹತ್ಯೆ ಮಾಡಲಾಗಿತ್ತು.
ಬಿಜೆಪಿ ಹೇಗಿರುತ್ತದೆ ಎಂಬ ಬಗ್ಗೆ ನೀವು ಸಿಖ್ಖರಲ್ಲಿ ಭಯವನ್ನು ಸೃಷ್ಟಿಸುತ್ತೀರಿ. ಆದರೆ ಈ ಹಿಂದೆ ಕಾಂಗ್ರೆಸ್ ಪಕ್ಷದ ಅಡಿಯಲ್ಲಿ ಅನುಮತಿಸದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವು ಬಯಸುತ್ತೇವೆ ಎಂದು ವಿದ್ಯಾರ್ಥಿ ಹೇಳಿದ್ದು, ಬಿಜೆಪಿ ಆಡಳಿತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ರಾಹುಲ್ ಗಾಂಧಿ ಅವರ ಹಿಂದಿನ ಹೇಳಿಕೆಗಳನ್ನು ಪ್ರಸ್ತಾಪಿಸಿ, ಪ್ರಶ್ನೆಗಳನ್ನು ಕೇಳಿದ್ದಾರೆ.
ಆನಂದಪುರ ಸಾಹಿಬ್ ನಿರ್ಣಯವನ್ನು ಉಲ್ಲೇಖಿಸಿದ ವಿದ್ಯಾರ್ಥಿ, ಇದನ್ನು ಕಾಂಗ್ರೆಸ್ ಪ್ರತ್ಯೇಕತಾವಾದಿ ಪ್ರಣಾಳಿಕೆ ಎಂದು ತಪ್ಪಾಗಿ ನಿರೂಪಿಸಿದೆ ಎಂದು ಹೇಳಿದ್ದಾರೆ. ಸಿಖ್ ಸಮುದಾಯದೊಂದಿಗೆ ರಾಜಿ ಮಾಡಿಕೊಳ್ಳಲು ಪಕ್ಷ ವಿಫಲವಾಗಿದೆ ಎಂದು ಟೀಕಿಸಿದ ಅವರು, ಶಿಕ್ಷೆಗೊಳಗಾದ ಮಾಜಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರನ್ನು ಶಿಕ್ಷೆಯಿಂದ ಮುಕ್ತಗೊಳಿಸಿರುವುದಕ್ಕೆ ಪುರಾವೆಯಾಗಿ ತೋರಿಸಿದರು, ಇದೇ ರೀತಿಯಲ್ಲಿ ಇನ್ನೂ ಅನೇಕ ಸಜ್ಜನ್ ಕುಮಾರ್ರಂತಹ ವ್ಯಕ್ತಿಗಳು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ರಾಹುಲ್ ಗಾಂಧಿ 1984ರ ಗಲಭೆಯ ಕುರಿತು ತಮ್ಮ ಖಂಡನೆಯನ್ನು ಪುನರುಚ್ಚರಿಸಿದರು. 80 ರ ದಶಕದಲ್ಲಿ ನಡೆದದ್ದು ತಪ್ಪು ಎಂದು ನಾನು ಸಾರ್ವಜನಿಕವಾಗಿ ಹೇಳಿದ್ದೇನೆ. ನಾನು ಗೋಲ್ಡನ್ ಟೆಂಪಲ್ಗೆ ಅನೇಕ ಬಾರಿ ಹೋಗಿದ್ದೇನೆ. ಭಾರತದಲ್ಲಿನ ಸಿಖ್ ಸಮುದಾಯದೊಂದಿಗೆ ನಾನು ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ಕಾಂಗ್ರೆಸ್ ಪಕ್ಷದ ತಪ್ಪುಗಳಿಗೆ ಸಂಬಂಧಿಸಿದಂತೆ, ನಾನು ಇಲ್ಲದಿದ್ದಾಗ ಅವುಗಳಲ್ಲಿ ಬಹಳಷ್ಟು ಸಂಭವಿಸಿವೆ, ಆದರೆ ಕಾಂಗ್ರೆಸ್ ಪಕ್ಷವು ತನ್ನ ಇತಿಹಾಸದಲ್ಲಿ ಮಾಡಿದ ಎಲ್ಲ ತಪ್ಪುಗಳಿಗೂ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
1980 ರ ದಶಕದ ಹಿಂಸಾತ್ಮಕ ಘಟನೆಯು ಭಾರತೀಯ ರಾಜಕೀಯದಲ್ಲಿ ಅತ್ಯಂತ ಹಿಂಸಾತ್ಮಕ ಕೃತ್ಯವಾಗಿ ಇನ್ನೂ ಉಳಿದಿದೆ. ಪ್ರತ್ಯೇಕತಾವಾದಿ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ ಅವರನ್ನು ಹೊರಹಾಕುವ ಪ್ರಯತ್ನದಲ್ಲಿ 1984 ರಲ್ಲಿ ಆಪರೇಷನ್ ಬ್ಲೂ ಸ್ಟಾರ್ ಹೆಸರಿನಲ್ಲಿ ಭಾರತೀಯ ಸೇನೆಯು ಗೋಲ್ಡನ್ ಟೆಂಪಲ್ ಮೇಲೆ ದಾಳಿ ನಡೆಸಿತ್ತು. ಈ ಕಾರ್ಯಾಚರಣೆಯು ವ್ಯಾಪಕ ಅಸಮಾಧಾನಕ್ಕೆ ಕಾರಣವಾಯಿತು, ಇದು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸಿಖ್ ಅಂಗರಕ್ಷಕರಿಂದ ಹತ್ಯೆಯಾಗುವುದರೊಂದಿಗೆ ಮತ್ತು ನಂತರದ ಸಿಖ್ ವಿರೋಧಿ ಹತ್ಯಾಕಾಂಡದಲ್ಲಿ ಕೊನೆಗೊಂಡಿತು.