ಪಾಕಿಸ್ತಾನಿ ಮಹಿಳೆಯೊಂದಿಗಿನ ಮದುವೆಯನ್ನು ಮರೆಮಾಚಿದ್ದಕ್ಕಾಗಿ ಸಿಆರ್‌‌‌‌ಪಿ‌‌‌‌ಎಫ್ ಯೋಧ ವಜಾ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪಾಕಿಸ್ತಾನಿ ಮಹಿಳೆಯೊಂದಿಗಿನ ಮದುವೆಯನ್ನು ಮರೆಮಾಚಿದ್ದಕ್ಕಾಗಿ ಸಿಆರ್‌‌‌‌ಪಿ‌‌‌‌ಎಫ್ ಯೋಧ ವಜಾ

ಪಾಕಿಸ್ತಾನಿ ಮಹಿಳೆಯೊಂದಿಗಿನ ಮದುವೆಯನ್ನು ಮರೆಮಾಚಿದ್ದಕ್ಕಾಗಿ ಸಿಆರ್‌‌‌‌ಪಿ‌‌‌‌ಎಫ್ ಯೋಧ ವಜಾ

ಪಹಲ್ಗಾಮ್ ಉಗ್ರ ದಾಳಿಯ ಬಳಿಕ ರಾಷ್ಟ್ರೀಯ ಭದ್ರತೆ ಕುರಿತು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಮತ್ತು ರಕ್ಷಣಾ ಇಲಾಖೆ, ವೀಸಾ ಅವಧಿ ಮೀರಿ ದೇಶದಲ್ಲಿ ನೆಲೆಸಿರುವ ಪಾಕಿಸ್ತಾನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.

ವೀಸಾ ಅವಧಿ ಮೀರಿ ದೇಶದಲ್ಲಿ ನೆಲೆಸಿರುವ ಪಾಕಿಸ್ತಾನಿಗಳ ವಿರುದ್ಧ ಕಠಿಣ ಕ್ರಮ
ವೀಸಾ ಅವಧಿ ಮೀರಿ ದೇಶದಲ್ಲಿ ನೆಲೆಸಿರುವ ಪಾಕಿಸ್ತಾನಿಗಳ ವಿರುದ್ಧ ಕಠಿಣ ಕ್ರಮ

ನವದೆಹಲಿ: ಪಾಕಿಸ್ತಾನಿ ಮಹಿಳೆಯೊಂದಿಗಿನ ತನ್ನ ಮದುವೆಯನ್ನು ಮರೆಮಾಚಿದ್ದಕ್ಕಾಗಿ ಯೋಧನನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಶನಿವಾರ ವಜಾಗೊಳಿಸಿದೆ. ರಾಷ್ಟ್ರೀಯ ಭದ್ರತೆ ಮತ್ತು ಗಂಭೀರ ಕಾಳಜಿಯ ವಿಷಯದ ಅಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಮುನೀರ್ ಅಹ್ಮದ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಸಿಆರ್‌‌‌‌ಪಿ‌‌‌‌ಎಫ್ 41 ಬೆಟಾಲಿಯನ್‌‌‌‌ನ ಸಿಟಿ/ಜಿಡಿ ಮುನೀರ್ ಅಹ್ಮದ್ ಅವರನ್ನು ಪಾಕಿಸ್ತಾನಿ ಪ್ರಜೆಯೊಂದಿಗಿನ ಮದುವೆಯನ್ನು ಮರೆಮಾಚಿದ್ದಕ್ಕಾಗಿ ಮತ್ತು ಆಕೆಯ ವೀಸಾದ ಮಾನ್ಯತೆಯನ್ನು ಮೀರಿ ಉದ್ದೇಶಪೂರ್ವಕವಾಗಿ ಆಶ್ರಯ ನೀಡಿದ್ದಕ್ಕಾಗಿ ವಜಾಗೊಳಿಸಲಾಗಿದೆ ಎಂದು ಸಿಆರ್‌‌‌‌ಪಿ‌‌‌‌ಎಫ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪಾಕಿಸ್ತಾನದ ಸಿಯಾಲ್ಕೋಟ್ ಮೂಲದ ಮಿನಾಲ್ ಖಾನ್ ಅವರನ್ನು ಮದುವೆಯಾಗಲು ಅಹ್ಮದ್ 2023 ರಲ್ಲಿ ಸಿಆರ್‌‌‌‌ಪಿ‌‌‌‌ಎಫ್‌‌‌‌ನಿಂದ ಅನುಮತಿ ಕೋರಿದ್ದರು. ಆದಾಗ್ಯೂ, ಅವರ ಕೋರಿಕೆಯ ಮೇರೆಗೆ ಇಲಾಖೆ ನಿರ್ಧಾರ ಕೈಗೊಳ್ಳುವ ಮೊದಲೇ, ಅಹ್ಮದ್ ಮೇ 24, 2024 ರಂದು ಮಿನಾಲ್ ಖಾನ್ ಅವರನ್ನು ವಿವಾಹವಾಗಿದ್ದಾರೆ. ಮುನೀರ್ ಅಹ್ಮದ್ ಸೇವಾ ನಡವಳಿಕೆಯನ್ನು ಉಲ್ಲಂಘನೆ ಮಾಡಿದ್ದು ಇದು ರಾಷ್ಟ್ರೀಯ ಭದ್ರತೆಗೆ ಹಾನಿಕಾರಕ ಎಂಬ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ಭಾರತ ರದ್ದುಪಡಿಸಿದ ನಂತರ ಮಿನಾಲ್ ಖಾನ್ ಅವರನ್ನು ಜಮ್ಮುವಿನಿಂದ ತನ್ನ ಮೂಲ ದೇಶಕ್ಕೆ ಗಡೀಪಾರು ಮಾಡಲು ಕ್ರಮ ಕೈಗೊಂಡಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಸಿಆರ್‌‌‌‌ಎಫ್ ಕಾನ್ಸ್ಟೇಬಲ್ ಆಗಿರುವ ಮುನೀರ್ ಅಹ್ಮದ್ 2.5 ತಿಂಗಳ ಹಿಂದೆ ಪಾಕಿಸ್ತಾನಿ ಪ್ರಜೆ ಮಿನಾಲ್ ಖಾನ್ ಅವರನ್ನು ವಿವಾಹವಾಗಿದ್ದರು. ಅವರು ವಿಸಿಟಿಂಗ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದರು ಮತ್ತು ದೀರ್ಘಾವಧಿಯ ವೀಸಾಗೆ ಅರ್ಜಿ ಸಲ್ಲಿಸಿದ್ದರು ಎಂದು ಹೇಳಲಾಗಿದೆ. ಮಿನಾಲ್ ಖಾನ್ ದೀರ್ಘಾವಧಿಯ ವೀಸಾಕ್ಕಾಗಿ ಸಂದರ್ಶನಕ್ಕೆ ಹಾಜರಾಗಿದ್ದು ಅವರಿಗೆ ದೀರ್ಘಾವಧಿಯ ವೀಸಾ ನೀಡಲು ಗೃಹ ಸಚಿವಾಲಯಕ್ಕೆ ಶಿಫಾರಸುಗಳನ್ನು ಕಳುಹಿಸಲಾಗಿದೆ ಎಂದು ಅವರ ಪರ ವಕೀಲ ಶರ್ಮಾ ಹೇಳಿದ್ದಾರೆ.

"ನಮಗೆ ಕುಟುಂಬದೊಂದಿಗೆ ಇರಲು ಅವಕಾಶ ನೀಡಬೇಕು" ಎಂದು ಪಿಟಿಐಗೆ ತಿಳಿಸಿರುವ ಮಿನಾಲ್ ಖಾನ್, "ದಾಳಿಯಲ್ಲಿ ಅಮಾಯಕರ ಬರ್ಬರ ಹತ್ಯೆಯನ್ನು ನಾವು ಖಂಡಿಸುತ್ತೇವೆ. ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.