ಕನ್ನಡ ಸುದ್ದಿ  /  Nation And-world  /  Deadliest In 100 Years: Turkey Earthquake Toll Inches Closer To 40,000

Turkey-Syria Earthquake: 40,000 ಗಡಿ ಸಮೀಪಿಸಿದ ಸಾವಿನ ಸಂಖ್ಯೆ: ಮಾರ್ಚ್​ನಲ್ಲಿ ಮನೆಗಳ ನಿರ್ಮಾಣ ಕಾರ್ಯ ಆರಂಭ ಎಂದ ಟರ್ಕಿ ಅಧ್ಯಕ್ಷ

ಕಳೆದ ವಾರ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಸರಣಿ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 39,000ಕ್ಕೆ ಏರಿಕೆಯಾಗಿದೆ. 100 ವರ್ಷಗಳ ಹಿಂದೆ (1923) ಟರ್ಕಿ ದೇಶ ಸ್ಥಾಪನೆಯಾದ ಬಳಿಕ ದೇಶ ಕಂಡ ಅತ್ಯಂತ ಮಾರಣಾಂತಿಕ ''ಶತಮಾನದ ದುರಂತ'' ಇದಾಗಿದೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ.

ಟರ್ಕಿ - ಸಿರಿಯಾ ಭೂಕಂಪ
ಟರ್ಕಿ - ಸಿರಿಯಾ ಭೂಕಂಪ

ಕಳೆದ ವಾರ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಸರಣಿ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 39,000ಕ್ಕೆ ಏರಿಕೆಯಾಗಿದೆ. 100 ವರ್ಷಗಳ ಹಿಂದೆ (1923) ಟರ್ಕಿ ದೇಶ ಸ್ಥಾಪನೆಯಾದ ಬಳಿಕ ದೇಶ ಕಂಡ ಅತ್ಯಂತ ಮಾರಣಾಂತಿಕ ''ಶತಮಾನದ ದುರಂತ'' ಇದಾಗಿದೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ.

ಭೂಕಂಪದಿಂದಾಗಿ 1,05,505 ಜನರು ಗಾಯಗೊಂಡಿದ್ದು, ಟರ್ಕಿಯಲ್ಲಿ 13,000ಕ್ಕೂ ಹೆಚ್ಚು ಜನರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1939 ರಲ್ಲಿ ಟರ್ಕಿ ಮತ್ತು ಸಿರಿಯಾದಲ್ಲಿ ನಡೆದ ಭೂಕಂಪದಲ್ಲಿ ಸುಮಾರು 33,000 ಜನರು ಬಲಿಯಾಗಿದ್ದರು. ಇದೀಗ ಇದ್ದಕ್ಕಿಂತ ಕೆಟ್ಟ ಪರಿಸ್ಥಿತಿ ಬಂದೊದಗಿದೆ.

ವಿಪತ್ತು ಏಜೆನ್ಸಿ ಎಎಫ್​ಎಡಿಯ ಪ್ರಧಾನ ಕಛೇರಿಯಲ್ಲಿ ನಡೆದ ಐದು ಗಂಟೆಗಳ ಕ್ಯಾಬಿನೆಟ್ ಸಭೆಯ ನಂತರ ಅಂಕಾರಾದಲ್ಲಿ ಮಾತನಾಡಿದ ಎರ್ಡೊಗನ್, 2,11,000 ನಿವಾಸಗಳನ್ನು ಒಳಗೊಂಡಿರುವ 47,000 ಕಟ್ಟಡಗಳು ನಾಶವಾಗಿವೆ ಅಥವಾ ನೆಲಸಮಗೊಳಿಸುವ ಅಗತ್ಯವಿರುವಷ್ಟು ಹಾನಿಗೊಳಗಾಗಿವೆ ಎಂದು ಹೇಳಿದರು.

ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವುದು ಖಚಿತವಾಗಿದ್ದರೂ, ನಾವು ನಮ್ಮ ಕೊನೆಯ ಪ್ರಜೆಯನ್ನು ನಾಶವಾದ ಕಟ್ಟಡಗಳಿಂದ ಹೊರಬರುವವರೆಗೂ ರಕ್ಷಣಾ ಕಾರ್ಯ ಮುಂದುವರಿಸುತ್ತೇವೆ. ಮಾರ್ಚ್‌ನಲ್ಲಿ 30,000 ಮನೆಗಳ ನಿರ್ಮಾಣವನ್ನು ಪ್ರಾರಂಭಿಸಲು ಸರ್ಕಾರ ಯೋಜಿಸಿದೆ. ಇಡೀ ಭೂಕಂಪ ವಲಯದಲ್ಲಿ ವಸತಿ ಅಗತ್ಯವನ್ನು ಪೂರೈಸಲು ಉತ್ತಮ ಗುಣಮಟ್ಟದ ಮತ್ತು ಸುರಕ್ಷಿತ ಕಟ್ಟಡಗಳ ನಿರ್ಮಾಣವನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಎರ್ಡೊಗನ್ ತಿಳಿಸಿದ್ದಾರೆ.

ಲಕ್ಷಾಂತರ ಜನರು ನಿರಾಶ್ರಿತರಾಗಿದ್ದು, ಅವರಿಗೆ ತಾತ್ಕಾಲಿಕ ಟೆಂಟ್​ಗಳನ್ನು ನಿರ್ಮಿಸಿ ಆಶ್ರಯ ನೀಡಲಾಗಿದೆ. ಕೆಲವರು ರೈಲು ಬೋಗಿಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. 1,500 ಕುಟುಂಬಗಳಿಗೆ ಇನ್ನೂ ಆಶ್ರಯವೇ ಸಿಗದೆ ಪರದಾಡುತ್ತಿವೆ. “ನಾವು ತಿನ್ನಬೇಕು, ಕುಡಿಯಬೇಕು, ಬದುಕಬೇಕು. ನಮ್ಮ ಉದ್ಯೋಗಗಳು, ನಮ್ಮ ಜೀವನ, ಎಲ್ಲವೂ ನಿಂತುಹೋಗಿವೆ ” ಎಂದು ನಿರಾಶ್ರಿತ ಮಹಿಳೆಯೊಬ್ಬರು ಹೇಳಿದ್ದಾರೆ.

ಮಂಗಳವಾರ ವಿಶ್ವಸಂಸ್ಥೆಯು ಮೂರು ತಿಂಗಳ ಕಾಲ ಸುಮಾರು 5 ಮಿಲಿಯನ್ ಸಿರಿಯನ್ನರಿಗೆ ತೀರಾ ಅಗತ್ಯವಿರುವ, ಜೀವ ಉಳಿಸುವ ಪರಿಹಾರ ಒದಗಿಸಲು 397 ಮಿಲಿಯನ್ ಡಾಲರ್​ ಬೇಕೆಂದು ತಿಳಿಸಿದೆ. ರಕ್ಷಣಾ ಸಿಬ್ಬಂದಿ, ವೈದ್ಯಕೀಯ ಸಾಮಗ್ರಿ, ತುರ್ತು ಪರಿಹಾರ ಸಾಮಗ್ರಿಯಿಂದ ಹಿಡಿದು ಆಹಾರದ ವರೆಗೆ ಭಾರತ ಸೇರಿದಂತೆ ಪ್ರಪಂಚದ ಅನೇಕ ರಾಷ್ಟ್ರಗಳು ಭೂಕಂಪ ಪೀಡಿತ ಟರ್ಕಿ ಹಾಗೂ ಸಿರಿಯಾಗೆ ಸಹಾಯ ಮಾಡಿವೆ. ಆದರೆ ಇನ್ನೂ ಹೆಚ್ಚಿನ ನೆರವಿನ ಅಗತ್ಯವಿದೆ.

ಭೂಕಂಪವು ಸುಮಾರು 13.5 ಮಿಲಿಯನ್ ಜನರಿಗೆ ನೆಲೆಯಾಗಿರುವ ಟರ್ಕಿಯ 10 ಪ್ರಾಂತ್ಯಗಳ ಮೇಲೆ ಪರಿಣಾಮ ಬೀರಿದೆ. ಹಾಗೆಯೇ ಲಕ್ಷಾಂತರ ಜನರು ವಾಸಿಸುವ ವಾಯುವ್ಯ ಸಿರಿಯಾ ಮೇಲೆ ಪರಿಣಾಮ ಬೀರಿದೆ. ಭೂಕಂಪ ಪೀಡಿತ ಪ್ರದೇಶದಲ್ಲಿ ನೀರಿನ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೇ ಸಿಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ.

ಪರಿಸ್ಥಿತಿ ಪರಿಶೀಲಿಸಲು ಟರ್ಕಿಗೆ ಆಗಮಿಸಿರುವ ವಿಶ್ವಸಂಸ್ಥೆಯ (ಯುಎನ್) ಮಾನವೀಯ ನೆರವು ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್‌ ಅವರು, ಸಾವಿನ ಸಂಖ್ಯೆ 50,000 ಗಡಿ ದಾಟುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

"ನಾವು ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ನಿಖರವಾಗಿ ಅಂದಾಜು ಮಾಡುವುದು ಕಷ್ಟ ಎಂದು ನಾನು ಭಾವಿಸುತ್ತೇನೆ. ಖಂಡಿತವಾಗಿಯೂ ಸಾವಿನ ಸಂಖ್ಯೆ ದ್ವಿಗುಣಗೊಳ್ಳುತ್ತದೆ ಅಥವಾ ಅದಕ್ಕಿಂತಲೂ ಹೆಚ್ಚಾಗುತ್ತದೆ. ಸಾವಿನ ಸಂಖ್ಯೆಯನ್ನು ಇನ್ನೂ ಸರಿಯಾಗಿ ಎಣಿಸಲು ಪ್ರಾರಂಭಿಸಿಲ್ಲ" ಎಂದು ಮಾರ್ಟಿನ್ ಗ್ರಿಫಿತ್ಸ್‌ ಹೇಳಿದ್ದಾರೆ.

"ಶೀಘ್ರದಲ್ಲೇ, ರಕ್ಷಣಾ ಸಿಬ್ಬಂದಿಗಳು ಮಾನವೀಯ ನೆರವು ಏಜೆನ್ಸಿಗಳಿಗೆ ದಾರಿ ಮಾಡಿಕೊಡುತ್ತಾರೆ. ಮುಂದಿನ ತಿಂಗಳುಗಳಲ್ಲಿ ಪೀಡಿತರನ್ನು ನೋಡಿಕೊಳ್ಳುವುದು ಅವರ ಕೆಲಸವಾಗಲಿದೆ." ಎಂದು ಅವರು ಹೇಳಿದರು.

ಪ್ರತಿಕೂಲ ವಾತಾವರಣದ ನಡುವೆಯೂ ಆರು ದಿನಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಬದುಕುಳಿದವರನ್ನು ರಕ್ಷಿಸುವ ಹಾಗೂ ಮೃತದೇಹಗಳನ್ನು ಹೊರಕ್ಕೆ ತೆಗೆಯುವ ಕಾರ್ಯ ನಡೆಯುತ್ತಿದೆ. ಪವಾಡವೇ ಎಂಬಂತೆ ಅವಶೇಷಗಳಡಿ ಸಿಲುಕಿ, ಊಟ-ನೀರು ಇಲ್ಲದೆಯೇ ಪುಟ್ಟ ಕಂದಮ್ಮಗಳು ಬದುಕುಳಿದಿವೆ. ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗುತ್ತಿವೆ.

ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹಾಗೂ ಅಧಿಕಾರಿಗಳ ತಂಡವು ಸಿರಿಯಾದ ಅಲೆಪ್ಪೊಗೆ ಬಂದಿದ್ದು, ಶೀಘ್ರದಲ್ಲೇ ಬಂಡುಕೋರರ ಹಿಡಿತದಲ್ಲಿರುವ ಭೂಕಂಪ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.