ವಂದೇ ಭಾರತ್ ರೈಲಿನಲ್ಲಿ ಅಯೋಧ್ಯೆಗೆ ಹೋಗಿ, ಬಾಲರಾಮನ ದರ್ಶನ ಪಡೆದು ಬನ್ನಿ, ಟಿಕೆಟ್ ದರ, ರೂಟ್ ಮತ್ತು ವೇಳಾಪಟ್ಟಿ ವಿವರ ಇಲ್ಲಿದೆ
Ayodhya Vande Bharat: ಅಯೋಧ್ಯೆಗೆ ಹೋಗಿ ರಾಮಮಂದಿರದಲ್ಲಿ ಬಾಲರಾಮನ ದರ್ಶನ ಪಡೆದು ಹಿಂದಿರುವುದು ಸುಲಭ. ಈಗ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಕೂಡ ಪ್ರಯಾಣವನ್ನು ಯೋಜಿಸಬಹುದಾಗಿದೆ. ವಂದೇ ಭಾರತ್ ರೈಲಿನಲ್ಲಿ ಅಯೋಧ್ಯೆಗೆ ಹೋಗಿ, ಬಾಲರಾಮನ ದರ್ಶನ ಪಡೆದು ಬನ್ನಿ ಎನ್ನುತ್ತಿದೆ ಭಾರತೀಯ ರೈಲ್ವೆ. ಇದರ ಟಿಕೆಟ್ ದರ, ರೂಟ್ ಮತ್ತು ವೇಳಾಪಟ್ಟಿ ವಿವರ ಹೀಗಿದೆ.

Ayodhya Vande Bharat: ದೇಶಾದ್ಯಂತ ವಿವಿಧ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಇತರೆ ರೈಲುಗಳಿಗೆ ಹೋಲಿಸಿದರೆ ಈ ರೈಲು ಬಹಳ ವೇಗವಾಗಿ ಪ್ರಯಾಣಿಕರನ್ನು ಗಮ್ಯಸ್ಥಾನಕ್ಕೆ ತಲುಪಿಸುತ್ತದೆ. ಅಷ್ಟೇ ಅಲ್ಲ, ಹೆಚ್ಚುವರಿ ಪ್ರಯಾಣಿಕ ಸೌಕರ್ಯಗಳನ್ನು ಒಳಗೊಂಡಿದೆ. ನೀವು ವಂದೇ ಭಾರತ್ ರೈಲಲ್ಲಿ ಅಯೋಧ್ಯೆ ರಾಮ ಮಂದಿರಕ್ಕೆ ಹೋಗ ಬಯಸುತ್ತೀರಾದರೆ, ಖಚಿತವಾಗಿಯೂ ಹೋಗಿ ಬರಬಹುದು. ವಂದೇ ಭಾರತ್ ರೈಲಿನಲ್ಲಿ ಅಯೋಧ್ಯೆಗೆ ಹೋಗಿ, ಬಾಲರಾಮನ ದರ್ಶನ ಪಡೆದು ಬನ್ನಿ ಎಂದು ಭಾರತೀಯ ರೈಲ್ವೆ ಆಹ್ವಾನಿಸುತ್ತಿದೆ. ಈ ರೈಲು ಎಲ್ಲಿಂದ ಅಯೋಧ್ಯೆಗೆ ಸಂಚರಿಸುತ್ತದೆ, ವೇಳಾಪಟ್ಟಿ, ಟಿಕೆಟ್ ದರ ಮುಂತಾದ ವಿವರ ಇಲ್ಲಿದೆ ಗಮನಿಸಿ.
ವಂದೇ ಭಾರತ್ ರೈಲಿನಲ್ಲಿ ಅಯೋಧ್ಯೆಗೆ ಹೋಗಿ, ಬಾಲರಾಮನ ದರ್ಶನ ಪಡೆದು ಬನ್ನಿ
ದೆಹಲಿಯಿಂದ ಅಯೋಧ್ಯೆಗೆ ರೈಲಿನಲ್ಲಿ ಸಂಚರಿಸಬಹುದು. ಹೌದು, ದೆಹಲಿಯ ಆನಂದ ವಿಹಾರ್ ಟರ್ಮಿನಸ್ನಿಂದ ಅಯೋಧ್ಯೆಗೆ ವಂದೇ ಭಾರತ್ ರೈಲು ಸಂಚಾರವಿದೆ. ಬುಧವಾರ ಹೊರತು ಪಡಿಸಿ ವಾರದ ಉಳಿದೆಲ್ಲ ದಿನಗಳಲ್ಲೂ ಅಯೋಧ್ಯೆ ವಂದೇ ಭಾರತ್ ರೈಲು ಆನಂದ ವಿಹಾರ್ನಿಂದ ಬೆಳಿಗ್ಗೆ 6.10ಕ್ಕೆ ಹೊರಡುತ್ತದೆ. ಬೆಳಿಗ್ಗೆ 7.30ಕ್ಕೆ ಆಲಿಗಡ ಜಂಕ್ಷನ್ಗೆ ತಲುಪುತ್ತದೆ. ಅದಾಗಿ ಪೂರ್ವಾಹ್ನ 11 ಗಂಟೆಗೆ ಕಾನ್ಪುರ, ಮಧ್ಯಾಹ್ನ 12.35ಕ್ಕೆ ಲಖನೌ ತಲುಪಿ ನಂತರ 2.30ಕ್ಕೆ ಅಯೋಧ್ಯೆ ಕಂಟೋನ್ಮೆಂಟ್ ತಲುಪುತ್ತದೆ. ಇದರಲ್ಲಿ ಅಯೋಧ್ಯೆಗೆ ಪ್ರಯಾಣಿಸಬಹುದು. ಈ ವಂದೇ ಭಾರತ್ ರೈಲು ಸಂಖ್ಯೆ 22426. ದೆಹಲಿ ಆನಂದ ವಿಹಾರ್ನಿಂದ ಅಯೋಧ್ಯೆಗೆ 629 ಕಿ.ಮೀ. ದೂರದ ಪ್ರಯಾಣ.
ಅಯೋಧ್ಯೆ ರಾಮ ಮಂದಿರಕ್ಕೆ ತೆರಳಿ ಬಾಲರಾಮನ ದರ್ಶನ ಪಡೆದು ವಾಪಸ್ ದೆಹಲಿಗೆ ಬರಬೇಕು ಅಂತ ಯೋಜಿಸಿದ್ದೀರಾದರೆ ಅಯೋಧ್ಯೆಯಿಂದಲೂ ದೆಹಲಿಯ ಆನಂದ ವಿಹಾರ್ಗೆ ವಂದೇ ಭಾರತ್ ರೈಲು ಸಂಚಾರವಿದೆ. ರೈಲು ಸಂಖ್ಯೆ 22425. ಈ ವಂದೇ ಭಾರತ್ ರೈಲು ಅಯೋಧ್ಯೆ ಕಂಟೋನ್ಮೆಂಟ್ನಿಂದ ಅಪರಾಹ್ನ 3.20ಕ್ಕೆ ಹೊರಡುತ್ತದೆ. ಸಂಜೆ 5.10ಕ್ಕೆ ಲಖನೌ ತಲುಪುತ್ತದೆ. ಅಲ್ಲಿಂದ ಮುಂದೆ ಮುಸ್ಸಂಜೆ 6.35ಕ್ಕೆ ಕಾನ್ಪುರ ಸೆಂಟ್ರಲ್ ರೈಲ್ವೆ ನಿಲ್ದಾಣ ತಲುಪುತ್ತದೆ. ರಾತ್ರಿ 9.33ಕ್ಕೆ ಅಲಿಗಡ ಬಂದು, ಅಲ್ಲಿಂದ ರಾತ್ರಿ 11.40ಕ್ಕೆ ಆನಂದ ವಿಹಾರ್ ಸ್ಟೇಷನ್ಗೆ ಬಂದು ಸೇರುತ್ತದೆ.
ಆನಂದ ವಿಹಾರ - ಅಯೋಧ್ಯೆ ವಂದೇ ಭಾರತ್ ಟಿಕೆಟ್ ದರ ವಿವರ
ಅಯೋಧ್ಯೆಯಿಂದ ದೆಹಲಿಯ ಆನಂದ ವಿಹಾರ್ಗೆ ವಂದೇ ಭಾರತ್ ಶುಲ್ಕ ಚೇರ್ ಕಾರ್ನಲ್ಲಾದರೆ 1570 ರೂಪಾಯಿ, ಎಕ್ಸಿಕ್ಯೂಟಿವ್ ಚೇರ್ ಕಾರ್ನಲ್ಲಾದರೆ 2,915 ರೂಪಾಯಿ. ಆದಾಗ್ಯೂ, ಈ ರೈಲು ಪ್ರಯಾಣದ ದರ ಬದಲಾಗುತ್ತಿರುತ್ತದೆ. ಇದನ್ನು ಐಆರ್ಸಿಟಿಸಿ ಪೋರ್ಟಲ್ ಅಥವಾ ಆಪ್ನಲ್ಲಿ ಟಿಕೆಟ್ ಮುಂಗಡ ಕಾಯ್ದಿರಿಸುವಾಗ ಪರಿಶೀಲಿಸುವುದು ಒಳಿತು. ದೆಹಲಿಯ ಆನಂದ ವಿಹಾರ್ನಿಂದ ಅಯೋಧ್ಯಾ ಕಂಟೋನ್ಮೆಂಟ್ಗೆ ವಂದೇ ಭಾರತ್ ರೈಲು ದರ ವಿವರ ಹೀಗಿದೆ- ಚೇರ್ ಕಾರ್ನಲ್ಲಿ 1625 ರೂಪಾಯಿ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ನ ಪ್ರಯಾಣ ದರ 2,965 ರೂಪಾಯಿ.
ಮೀರತ್ - ಲಖನೌ - ಮೀರತ್ ವಂದೇ ಭಾರತ್ ಎಕ್ಸ್ಪ್ರೆಸ್ ಕೂಡ ಅಯೋಧ್ಯೆ ಮೂಲಕ ಸಂಚರಿಸುತ್ತದೆ. ಈ ರೈಲನ್ನು ಎರಡು ತಿಂಗಳ ಹಿಂದೆ ವಾರಾಣಸಿ ತನಕ ವಿಸ್ತರಿಸಲಾಗಿತ್ತು. ಆದರೆ ಸಂಚಾರ ಪ್ರಾರಂಭವಾಗಿಲ್ಲ. ಮೀರತ್ - ಲಖನೌ - ಮೀರತ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮಾರ್ಚ್ ತಿಂಗಳ ಮೊದಲ ವಾರದಿಂದ ವಾರಾಣಸಿ ತನಕ ಸಂಚರಿಸಲಿದೆ ಎಂದು ಭಾರತೀಯ ರೈಲ್ವೆ ಮಾಹಿತಿ ತಿಳಿಸಿದೆ.
