Modi in Kargil: 'ನೀವೇ ನನ್ನ ಕುಟುಂಬ, ನಿಮ್ಮೊಂದಿಗೆ ದೀಪಾವಳಿ ಆಚರಿಸುವುದು ನನ್ನ ಸೌಭಾಗ್ಯ'
ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, “ನನಗೆ ನೀವೆಲ್ಲರೂ ಹಲವು ವರ್ಷಗಳಿಂದ ನನ್ನ ಕುಟುಂಬವಾಗಿದ್ದೀರಿ. ಕಾರ್ಗಿಲ್ನಲ್ಲಿ ನಮ್ಮ ವೀರ ಯೋಧರೊಂದಿಗೆ ದೀಪಾವಳಿ ಸಮಯವನ್ನು ಕಳೆಯುವುದು ನನ್ನ ಪಾಲಿನ ಸೌಭಾಗ್ಯ” ಎಂದು ಮೋದಿ ಹೆಮ್ಮಪಟ್ಟಿದ್ದಾರೆ.
ಇತ್ತ ದೀಪಾವಳಿ ಸಂಭ್ರಮದಲ್ಲಿ ದೇಶ ಮುಳುಗಿದೆ. ಅತ್ತ ಗಡಿಯಲ್ಲಿ ಭಾರತದ ವೀರ ಯೋಧರು ದೇಶ ಕಾಯುವಲ್ಲಿ ನಿರತರಾಗಿದ್ದಾರೆ. ಮನೆ, ಕುಟುಂಬ ಎಲ್ಲವನ್ನೂ ಮರೆತು ವೀರ ಸೈನಿಕರು ಕರ್ತವ್ಯ ನಿಭಾಯಿಸುತ್ತಿದ್ದಾರೆ. ಅವರಿಗೆ ಒಂಟಿತನ ಕಾಡಬಾರದೆಂದು ದೇಶದ ಪ್ರಧಾನಿ ನರೇಂದ್ರ ಮೋದಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದಾರೆ.
ಪ್ರತಿ ಬಾರಿಯಂತೆ ಈ ಬಾರಿಯೂ, ದೇಶದ ಪ್ರಧಾನಿ ನರೇಂದ್ರ ಮೋದಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಇಂದು ಬೆಳಗ್ಗೆಯೇ ಕಾರ್ಗಿಲ್ ತಲುಪಿದ ಪ್ರಧಾನಿ ನರೇಂದ್ರ ಮೋದಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು. ಮೋದಿ 2014ರಲ್ಲಿ ಮೊದಲ ಅವಧಿಯಲ್ಲಿ ಪ್ರಧಾನಿಯಾದಾಗಿನಿಂದ ಭದ್ರತಾ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸುತ್ತಿದ್ದಾರೆ ಎನ್ನುವುದು ವಿಶೇಷ.
ಇಂದು ಕಾರ್ಗಿಲ್ಗೆ ಮೋದಿ ಭೇಟಿ ನೀಡಿರುವ ಬಗ್ಗೆ ಪ್ರಧಾನ ಮಂತ್ರಿಗಳ ಕಚೇರಿಯಿಂದ ಟ್ವೀಟ್ ಮೂಲಕ ಮಾಹಿತಿ ನೀಡಲಾಗಿದೆ. ಲಡಾಖ್ನ ಕಾರ್ಗಿಲ್ಗೆ ಬಂದಿಳಿದ ಮೋದಿ ಫೋಟೋಗಳನ್ನು ಅವರ ಕಾರ್ಯಾಲಯ ಹಂಚಿಕೊಂಡಿದೆ. “ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಗಿಲ್ಗೆ ಬಂದಿಳಿದಿದ್ದಾರೆ. ಅಲ್ಲಿ ಅವರು ನಮ್ಮ ವೀರ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸುತ್ತಾರೆ,” ಎಂದು ಪಿಎಂಒ ಟ್ವೀಟ್ ಮಾಡಿದೆ.
“ದೀಪಾವಳಿಯ ನಿಜವಾದ ಅರ್ಥ ಆತಂಕದ ಅಂತ್ಯ ಎಂಬುದಾಗಿದೆ. ಅಂದರೆ ಭಯೋತ್ಪಾದನೆಯ ಅಂತ್ಯ. ಕಾರ್ಗಿಲ್ ಅದನ್ನು ಸಾಧ್ಯವಾಗಿಸಿದೆ” ಎಂದು ಮೋದಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. “ಕಾರ್ಗಿಲ್ನಲ್ಲಿ ನಮ್ಮ ಪಡೆಗಳು ಭಯೋತ್ಪಾದನೆಯನ್ನು ಹತ್ತಿಕ್ಕಿದವು. ಇದಕ್ಕೆ ಸಾಕ್ಷಿಯಾಗುವ ಭಾಗ್ಯ ನನಗಿತ್ತು. ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ,” ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ವಿರುದ್ಧ 1999ರ ಕಾರ್ಗಿಲ್ ಯುದ್ಧವನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.
ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, “ನನಗೆ ನೀವೆಲ್ಲರೂ ಹಲವು ವರ್ಷಗಳಿಂದ ನನ್ನ ಕುಟುಂಬವಾಗಿದ್ದೀರಿ. ಕಾರ್ಗಿಲ್ನಲ್ಲಿ ನಮ್ಮ ವೀರ ಯೋಧರೊಂದಿಗೆ ದೀಪಾವಳಿ ಸಮಯವನ್ನು ಕಳೆಯುವುದು ನನ್ನ ಪಾಲಿನ ಸೌಭಾಗ್ಯ” ಎಂದು ಮೋದಿ ಹೆಮ್ಮಪಟ್ಟಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯ ದೀಪೋತ್ಸವ ಆಚರಣೆಯಲ್ಲಿ ನಿನ್ನೆ ಮೋದಿ ಭಾಗಿಯಾಗಿದ್ದರು. ದೇವಾಲಯದ ಪಟ್ಟಣ ಸರಯೂ ನದಿಯ ದಡದಲ್ಲಿ 15 ಲಕ್ಷ ದೀಪಗಳನ್ನು ಬೆಳಗಿಸುವ ಹೊಸ ವಿಶ್ವ ದಾಖಲೆಯ ಕಾರ್ಯಕ್ರಮಕ್ಕೆ ಮೋದಿ ಸಾಕ್ಷಿಯಾದರು. ಇನ್ನು ಈ ದೀಪಾವಳಿಗೂ ಮುಂಚಿತವಾಗಿ, ಪ್ರಧಾನಿ ಮೋದಿ ತಮ್ಮ ತವರು ರಾಜ್ಯವಾದ ಗುಜರಾತ್ ಮತ್ತು ಉತ್ತರಾಖಂಡಕ್ಕೆ ಭೇಟಿ ನೀಡಿದ್ದರು. ಉತ್ತರಾಖಂಡದಲ್ಲಿ, ಅವರು ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಅಲ್ಲದೆ ಐತಿಹಾಸಿಕ ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳಿಗೆ ಭೇಟಿ ನೀಡಿದರು.
ಪ್ರತಿವರ್ಷವೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಗಡಿ ಕಾಯುವ ಸೈನಿಕರೊಂದಿಗೆ ಹಬ್ಬ ಆಚರಿಸುತ್ತಾರೆ. 2014ರಿಂದಲೂ ಮೋದಿ ದೇಶದ ವೀರ ಯೋಧರೊಂದಿಗೆ ತಮ್ಮ ಅಮೂಲ್ಯ ಸಮಯವನನ್ನು ದೀಪಾವಳಿ ಹಬ್ಬದ ದಿನ ಕಳೆಯುತ್ತಾರೆ.
2015ರಲ್ಲಿ ಅವರು ಪಂಜಾಬ್ನಲ್ಲಿ ಮೂರು ಸ್ಮಾರಕಗಳಿಗೆ ಭೇಟಿ ನೀಡಿದರು. 2016ರಲ್ಲಿ ಚೀನಾ ಗಡಿ ಬಳಿ ಸೈನಿಕರನ್ನು ಭೇಟಿ ಮಾಡಲು ಹಿಮಾಚಲ ಪ್ರದೇಶಕ್ಕೆ ಮೋದಿ ತೆರಳಿದ್ದರು. ಅವರು ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP), ಡೋಗ್ರಾ ಸ್ಕೌಟ್ಸ್ ಮತ್ತು ಸೇನೆಯ ಸೈನಿಕರೊಂದಿಗೆ ಸುಮ್ದೋಹ್ನಲ್ಲಿ ಸಂವಾದ ನಡೆಸಿದರು. 2017ರಲ್ಲಿ ಉತ್ತರ ಕಾಶ್ಮೀರದ ಗುರೆಜ್ ಸೆಕ್ಟರ್ಗೆ ಹೋಗಿದ್ದ ಮೋದಿ, "ನಮ್ಮ ಸೇನಾ ಪಡೆಗಳೊಂದಿಗೆ ಸಮಯ ಕಳೆಯುವುದು ನನಗೆ ಹೊಸ ಶಕ್ತಿಯನ್ನು ನೀಡುತ್ತದೆ" ಎಂದು ಪ್ರತಿಪಾದಿಸಿದ್ದರು.
2017ರಲ್ಲಿ, ಪ್ರಧಾನಿ ಮೋದಿ ಅವರು ಉತ್ತರಾಖಂಡದ ಹರ್ಸಿಲ್ನಲ್ಲಿ ದೀಪಾವಳಿ ಆಚರಿಸಿದರು. ಅಲ್ಲಿ ಸೈನಿಕರನ್ನು ಭೇಟಿಯಾದರು.