ಯುದ್ಧದ ಭಯ ಬೇಡ; ಮುಂಜಾಗ್ರತಾ ಕ್ರಮವಾಗಿ ತುರ್ತು ಕಿಟ್ ಸಿದ್ಧಪಡಿಸಿಕೊಳ್ಳಿ, ಇವಿಷ್ಟೂ ನಿಮ್ಮ ಜೊತೆಗಿರಲಿ
ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಸನ್ನಿವೇಶ ಇರುವ ಕಾರಣದಿಂದಾಗಿ, ಬ್ಲ್ಯಾಕೌಟ್ ಅಥವಾ ಯುದ್ಧದ ಸಂಭಾವ ಎದುರಾಗಬಹುದು. ಈ ಹಿನ್ನೆಲೆಯಲ್ಲಿ, ಯಾವೆಲ್ಲ ಅಗತ್ಯ ವಸ್ತುಗಳು ಜೊತೆಗಿದ್ದರೆ ಒಳ್ಳೆಯದು ಎಂಬ ಮಾಹಿತಿ ಇಲ್ಲಿದೆ. ಹಾಗೆಂದೂ ಯಾವುದೇ ರೀತಿಯ ಭೀತಿಗೆ ಒಳಗಾಗುವ ಅಗತ್ಯವಿಲ್ಲ.

'ಆಪರೇಷನ್ ಸಿಂದೂರ' ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ದೇಶದಾದ್ಯಂತ ನಾಗರಿಕರನ್ನು ಸಿದ್ಧಪಡಿಸಲು ದೇಶಾದ್ಯಂತ ನಾಗರಿಕ ರಕ್ಷಣಾ ಕವಾಯತು ನಡೆಸಲಾಗುತ್ತಿದೆ. ಉತ್ತರ ಭಾರತದ ಕೆಲವು ಗಡಿ ರಾಜ್ಯಗಳಲ್ಲಿ ಭದ್ರತೆಯಯ ಜೊತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದೆ ಸಂಪೂರ್ಣ ಬ್ಲ್ಯಾಕೌಟ್ ಅಥವಾ ಯುದ್ಧದ ಸಂದರ್ಭ ಎದುರಾಗುವ ಸಾಧ್ಯತೆಯೂ ಇದೆ. ಹೀಗಾಗಿ ಅಗತ್ಯ ವಸ್ತುಗಳನ್ನು ಖರೀದಿಸಲು ಮತ್ತು ಸಂಗ್ರಹಿಸಲು ಕೆಲವರು ಮುಂದಾಗುತ್ತಾರೆ. ಇಂಥಾ ತುರ್ತು ಸಂದರ್ಭ ಎದುರಾಗುವ ಸಾಧ್ಯತೆ ಇಲ್ಲ. ಆದರೆ, ಮುಂಜಾಗ್ರತಾ ಕ್ರಮವಾಗಿ ಹೇಗೆ ಸಿದ್ಧರಾಗುವುದು ಎಂಬುದನ್ನು ತಿಳಿಯೋಣ.
ತುರ್ತು ಕಿಟ್ ಸಿದ್ಧಪಡಿಸುವುದು ಹೇಗೆ?
ಆಹಾರ ಮತ್ತು ನೀರು: ಒಣ ಹಣ್ಣುಗಳು, ನಟ್ಸ್ ಮತ್ತು ಇತರ ದೀರ್ಘಕಾಲ ತಿನ್ನಬಹುದಾದ ಹಾಳಾಗದಂತಹ ಆಹಾರಗಳನ್ನು ಇಟ್ಟುಕೊಳ್ಳಿ. ಒಣಗಿಸಿದ ಆಹಾರ ಅಥವಾ ಉಪ್ಪಿನಕಾಯಿ ದೀರ್ಘಕಾಲದವರೆಗೆ ಸಂಗ್ರಹಿಸಲು ಸಾಧ್ಯ. ಬಾಟಲಿ ನೀರು ಸಂಗ್ರಹಿಸಿಟ್ಟುಕೊಳ್ಳಿ. ನೀರು ಶುದ್ಧೀಕರಣ ಮಾತ್ರೆಗಳು ಅಥವಾ ಫಿಲ್ಟರ್ ಬಳಕೆ ಒಳ್ಳೆಯದು. ಕಡಲೆ ಹಿಟ್ಟು, ಕಡಲೆ, ಓಟ್ಸ್ನಂತಹ ಹೆಚ್ಚಿನ ಶಕ್ತಿಯ ಆಹಾರ ಉತ್ಪನ್ನಗಳನ್ನು ಸಂಗ್ರಹಿಸಿಡಬಹುದು. ಇದಕ್ಕೆ ಸುದೀರ್ಘ ಅಡುಗೆಯ ಅಗತ್ಯವಿಲ್ಲ.
ಪ್ರಥಮ ಚಿಕಿತ್ಸೆ / ವೈದ್ಯಕೀಯ ವಸ್ತುಗಳು: ಬ್ಯಾಂಡೇಜ್, ನಂಜುನಿರೋಧಕ ವೈಪ್ಸ್, ನೋವು ನಿವಾರಕ ಔಷಧ ಮತ್ತು ಇತರ ಅಗತ್ಯ ಔಷಧಿಗಳನ್ನು ಕಿಟ್ನಲ್ಲಿ ಇಟ್ಟುಕೊಳ್ಳಿ. ಅಗತ್ಯ ಪ್ರಿಸ್ಕ್ರಿಪ್ಷನ್ ಔಷಧಿಗಳು ಇರುವುದನ್ನು ಖಚಿತಪಡಿಸಿಕೊಳ್ಳಿ. ಸಣ್ಣ ಗಾಯಗಳು ಮತ್ತು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬೇಕಾದ ಔಷಧಗಳನ್ನು ಸಿದ್ಧಪಡಿಸಿಕೊಳ್ಳಿ.
ವೈಯಕ್ತಿಕ ನೈರ್ಮಲ್ಯ: ಸಾಬೂನು, ಶಾಂಪೂ, ಟೂತ್ ಪೇಸ್ಟ್ ಮತ್ತು ಇತರ ಅಗತ್ಯ ವಸ್ತುಗಳು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಅಗತ್ಯ ಮತ್ತು ಉಪಯುಕ್ತ.
ಹೆಚ್ಚುವರಿಯಾಗಿ ವಿದ್ಯುತ್ ಕಡಿತದ ಸಂದರ್ಭದಲ್ಲಿ ಬೆಳಕಿನ ವ್ಯವಸ್ಥೆಗಾಗಿ ಫ್ಲ್ಯಾಶ್ ಲೈಟ್ ಮತ್ತು ಬ್ಯಾಟರಿಗಳನ್ನು ಇಟ್ಟುಕೊಳ್ಳಿ. ದೇಶದ ಆಗುಹೋಗುಗಳ ಕುರಿತ ಮಾಹಿತಿಗಾಗಿ ಬ್ಯಾಟರಿ ಚಾಲಿತ ರೇಡಿಯೋ ಬಳಸಿ. ವ್ರೆಂಚ್, ಪ್ಲೈಯರ್ ಮತ್ತು ಸುತ್ತಿಗೆಯಂತಹ ಉಪಕರಣಗಳು ಕೆಲವೊಂದು ಕೆಲಸಗಳಿಗೆ ಬೇಕಾಗುತ್ತವೆ. ಡಿಜಿಟಲ್ ಪಾವತಿ ಎಲ್ಲಾ ಸ್ಥಳಗಳಲ್ಲಿ ಕೆಲಸ ಮಾಡುವುದಿಲ್ಲ. ಹೀಗಾಗಿ ಸ್ವಲ್ಪ ನಗದು ಹಣ ಅಗತ್ಯಕ್ಕೆ ಬರಬಹುದು.
ಈ ಮೇಲಿನ ವಸ್ತುಗಳು ತ್ವರಿತವಾಗಿ ಸಿದ್ಧಪಡಿಸಬೇಕಾಗಿಲ್ಲ. ಯುದ್ಧ ನಡೆದೇ ನಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದು ಮುಂಜಾಗ್ರತಾ ಕ್ರಮವಷ್ಟೇ. ಯುದ್ಧದ ಬಗ್ಗೆ ಯಾವುದೇ ರೀತಿಯ ಭಯ ಬೇಡ. ಭಾರತ ಸೇನೆಯು ಬಲಿಷ್ಠವಾಗಿದ್ದು, ದೇಶದ ರಕ್ಷಣೆಗೆ ಬದ್ಧವಾಗಿದೆ. ಹೀಗಾಗಿ ಅನಗತ್ಯ ಭೀತಿ ಸೃಷ್ಟಿಸುವ ಅಗತ್ಯವಿಲ್ಲ.
ಮಾಹಿತಿ ಮೂಲ: ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಜೆ.ಎಸ್.ಸೋಧಿ