Manish Sisodia: ಅಬಕಾರಿ ನೀತಿ ಪ್ರಕರಣ, ತಿಹಾರ್ ಜೈಲ್ ನಂಬರ್ 1ಗೆ ಮನೀಶ್ ಸಿಸೋಡಿಯಾ, ಮಾರ್ಚ್ 10ಕ್ಕೆ ಜಾಮೀನು ವಿಚಾರಣೆ
ದೆಹಲಿ ಅಬಕಾರಿ ನೀತಿಯ ಅಕ್ರಮ ಆರೋಪದಲ್ಲಿ ಸಿಸೋಡಿಯಾ ಅವರನ್ನು ಮಾರ್ಚ್ 20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಿಹಾರ್ ಜೈಲ್ ನಂಬರ್ 1ನಲ್ಲಿ ಮನೀಶ್ ಸಿಸೋಡಿಯಾರನ್ನು ಇರಿಸಲಾಗಿದೆ.
ನವದೆಹಲಿ: ದೆಹಲಿ ಅಬಕಾರಿ ನೀತಿಯ ಅಕ್ರಮ ಆರೋಪದಲ್ಲಿ ಸಿಸೋಡಿಯಾ ಅವರನ್ನು ಮಾರ್ಚ್ 20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಿಹಾರ್ ಜೈಲ್ ನಂಬರ್ 1ನಲ್ಲಿ ಮನೀಶ್ ಸಿಸೋಡಿಯಾರನ್ನು ಇರಿಸಲಾಗಿದೆ.
ಕಳೆದ ಒಂದು ವಾರದಿಂದ ಸಿಬಿಐ ಕಸ್ಟಡಿಯಲ್ಲಿದ್ದ ಇವರಿನ್ನು ತಿಹಾರ್ ಜೈಲಿನಲ್ಲಿಯೇ ಇರಬೇಕಾಗಿದೆ. ಹೀಗಾಗಿ, ಈ ಬಾರಿ ಹೋಳಿ ಹಬ್ಬವನ್ನು ಜೈಲಿನಲ್ಲಿಯೇ ಆಚರಿಸಬೇಕಿದೆ. ಸಿಸೋಡಿಯಾ ಅವರನ್ನು ಫೆಬ್ರವರಿ 26ರಂದು ಸಿಬಿಐ ಬಂಧಿಸಿತ್ತು. ಸಿಬಿಐ ವಿಚಾರಣೆ ಮುಗಿದಿದ್ದು, ಇದೀಗ ಮಾರ್ಚ್ 20ರವರೆಗೆ ನ್ಯಾಯಾಂಗ ಬಂಧನಕ್ಕೆ ವಿಶೇಷ ನ್ಯಾಯಾಲಯ ಒಪ್ಪಿಸಿದೆ.
ತಿಹಾರ್ ಜೈಲು ನಂಬರ್ 1ಗೆ ಸೇರುವ ಇವರಿಗೆ ಎರಡು ಕನ್ನಡ, ಒಂದು ಡೈರಿ, ಒಂದು ಪೆನ್ನು, ಭಗವದ್ಗೀತೆಯ ಪ್ರತಿಯನ್ನು ನೀಡಲಾಗಿದೆ. ಧ್ಯಾನಕ್ಕೆ ಒಂದು ಕೊಠಡಿ ನೀಡುವಂತೆ ಅವರು ಕೇಳಿಕೊಂಡಿದ್ದರು. ಆದರೆ, ಅವರ ಮನವಿಯನ್ನು ಕೋರ್ಟ್ ಮಾನ್ಯ ಮಾಡಿಲ್ಲ.
ವಿಚಾರಣೆಯ ಸಂದರ್ಭದಲ್ಲಿ ಸಿಸೋಡಿಯಾ ಅವರು ಸರಿಯಾಗಿ ಸಹಕರಿಸುತ್ತಿಲ್ಲ ಎಂದು ಸಿಬಿಐ ಕೋರ್ಟ್ ಮುಂದೆ ತಿಳಿಸಿದೆ. ಸದ್ಯಕ್ಕೆ ಇವರನ್ನು ಹೆಚ್ಚಿನ ದಿನ ಕಸ್ಟಡಿಗೆ ನೀಡುವಂತೆ ನಾವು ಕೇಳುತ್ತಿಲ್ಲ. ಆದರೆ, ಭವಿಷ್ಯದಲ್ಲಿ ಕೇಳುತ್ತೇವೆ. ಆರೋಪಿಯ ನಡವಳಿಕೆ ಸರಿಯಿಲ್ಲ, ಅವರು ಸಾಕ್ಷಿಗಳನ್ನು ಭಯಭೀತಗೊಳಿಸುತ್ತಾರೆ. ವಿಚಾರಣೆಗೆ ರಾಜಕೀಯ ಬಣ್ಣ ನೀಡುತ್ತಾರೆ" ಎಂದು ಸಿಬಿಐ ತಿಳಿಸಿತ್ತು.
ತಮ್ಮ ವಿರುದ್ಧದ ಆರೋಪಗಳನ್ನು "ಸುಳ್ಳು" ಎಂದು ಕರೆಯುವ ತಮ್ಮ ನಿಲುವಿಗೆ ಅಂಟಿಕೊಂಡಿರುವ ಆಪ್ ನಾಯಕ ಮನೀಶ್ ಸಿಸೋಡಿಯಾ, ತಮ್ಮ ರಾಜೀನಾಮೆ ಪತ್ರದಲ್ಲಿಯೂ ಇದನ್ನೇ ಹೇಳಿದ್ದರು. ಎಂಟು ವರ್ಷಗಳಿಂದ ನಿರಂತರವಾಗಿ ಪ್ರಾಮಾಣಿಕತೆ ಮತ್ತು ಸತ್ಯಸಂಧನಾಗಿ ಕೆಲಸ ಮಾಡಿದರೂ ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದರು.
ಆರ್ಥಿಕ ಬಿಕ್ಕಟ್ಟು, ಬಡತನ, ನಿರುದ್ಯೋಗ, ಹಣದುಬ್ಬರ ಮತ್ತು ಭ್ರಷ್ಟಾಚಾರದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶದ ಕೋಟ್ಯಂತರ ಜನರ ದೃಷ್ಟಿಯಲ್ಲಿ, ಇಂದು ಅರವಿಂದ್ ಕೇಜ್ರಿವಾಲ್ ಭರವಸೆಯ ಹೆಸರಾಗಿದ್ದಾರೆ. ಸಿಬಿಐ ಟಾರ್ಗೆಟ್ ನಾನಲ್ಲ. ಕೇಜ್ರಿವಾಲ್ ಎಂದು ಅವರು ಹೇಳಿದ್ದರು.
ಅಬಕಾರ ನೀತಿ ಹಗರಣದಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಫೆ.26 ರಂದು ಸತತ 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದ ಸಿಬಿಐ ಆ ಬಳಿಕ ಕಸ್ಟಡಿಗೆ ತೆಗೆದುಕೊಂಡಿತ್ತು. ಈ ಪ್ರಕರಣದ ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸಿಸೋಡಿಯಾ ಅವರನ್ನು ಬಂಧಿಸಲಾಗಿತ್ತು.
ದೆಹಲಿ ಸರ್ಕಾರ ಮದ್ಯ ನೀತಿಯನ್ನು ಹಿಂಪಡೆದಿದೆ. ಆದರೂ ಅದರ ವಿನ್ಯಾಸ ಮತ್ತು ಅನುಷ್ಠಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಿಬಿಐ ಮತ್ತು ಇಡಿ ತನಿಖೆ ನಡೆಸುತ್ತಿದೆ. ಮದ್ಯದ ಲಾಬಿಯಿಂದ ಸುಮಾರು 30 ಕೋಟಿ ರೂಪಾಯಿ ಕೈ ಬದಲಾಗಿದೆ ಎಂದು ಸಿಬಿಐ ಹೇಳುತ್ತಿದೆ.
ಸುಮಾರು ಒಂದು ವರ್ಷದಿಂದ ಕೇಂದ್ರ ಸರ್ಕಾರದ ತನಿಖಾಧಿಕಾರಿಗಳು ಸಿಸೋಡಿಯಾರವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದರೂ, ಆರೋಪವನ್ನು ಸಾಬೀತುಪಡಿಸುವಂತಹ ಯಾವುದೇ ಸಣ್ಣ ಸಾಕ್ಷಿ ಸಿಕ್ಕಿಲ್ಲ ಎಂದು ಆಮ್ ಆದ್ಮಿ ಹೇಳಿದೆ.