Explainer:ಛತ್ತೀಸಗಢದಲ್ಲಿ ಅಧಿಕಾರದ ಗದ್ದುಗೆ ಯಾರಿಗೆ ಸಿಗಬಹುದು: ಇಲ್ಲಿದೆ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Explainer:ಛತ್ತೀಸಗಢದಲ್ಲಿ ಅಧಿಕಾರದ ಗದ್ದುಗೆ ಯಾರಿಗೆ ಸಿಗಬಹುದು: ಇಲ್ಲಿದೆ ವಿವರ

Explainer:ಛತ್ತೀಸಗಢದಲ್ಲಿ ಅಧಿಕಾರದ ಗದ್ದುಗೆ ಯಾರಿಗೆ ಸಿಗಬಹುದು: ಇಲ್ಲಿದೆ ವಿವರ

Chhattisgarh assembly Elections ದಟ್ಟಾರಣ್ಯದಿಂದ ಕೂಡಿರುವ ಗ್ರಾಮೀಣ ಪ್ರದೇಶವನ್ನೇ ಹೆಚ್ಚು ಹೊಂದಿರುವ ಛತ್ತೀಸಗಢ(Chhattisgarh) ವಿಧಾನಸಭೆ ಚುನಾವಣೆಯ ಹಿನ್ನೆಲೆ. ರಾಜಕೀಯ ಚಟುವಟಿಕೆ ಮತ್ತಿತರರ ವಿವರ ಇಲ್ಲಿದೆ.

ಕೋಟೆಗಳ ನಾಡು ಛತ್ತೀಸಗಢದಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ಗುದ್ದಾಟ ಜೋರಾಗಿಯೇ ಇದೆ.
ಕೋಟೆಗಳ ನಾಡು ಛತ್ತೀಸಗಢದಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ಗುದ್ದಾಟ ಜೋರಾಗಿಯೇ ಇದೆ.

36 ಕೋಟೆಗಳ ನಾಡು ಛತ್ತೀಸಗಢ ಆಗಿ ಪರಿವರ್ತನೆಗೊಂಡ ಎರಡು ದಶಕದ ಹಿಂದೆ ಸ್ಥಾಪನೆಗೊಂಡ ರಾಜ್ಯವಿದು. ಅತಿ ಹೆಚ್ಚು ಗ್ರಾಮೀಣ ಪ್ರದೇಶ, ಅರಣ್ಯ ಪ್ರದೇಶ ಹೊಂದಿರುವ ರಾಜ್ಯವೂ ಹೌದು. ನಕ್ಸಲ್‌ ಚಟುವಟಿಕೆಗಳಿಂದಾಗಿಯೂ ಗಮನ ಸೆಳೆದಿದೆ.

ಇದು ರಾಜ್ಯದಲ್ಲಿ ನಡೆದಿರುವ ಐದನೇ ವಿಧಾನಸಭೆ ಚುನಾವಣೆ. ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಅಧಿಕಾರಕ್ಕೆ ಹಣಾಹಣಿ ಇಲ್ಲಿ ಜೋರಾಗಿದೆ.

ಈಗಾಗಲೇ ಮೂರು ಬಾರಿ ಅಧಿಕಾರ ಸ್ಥಾಪಿಸಿದ್ದ ಬಿಜೆಪಿಗೆ ಮತ್ತೆ ಅಧಿಕಾರ ಪಡೆವ ಆಶಯ. ಮೊದಲ ಬಾರಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೆ ಉಳಿಸಿಕೊಳ್ಳುವ ಭರವಸೆ. ಹೀಗಿದೆ ಛತ್ತೀಸಗಢ ರಾಜ್ಯದ ರಾಜಕೀಯ ಸ್ಥಿತಿಗತಿ

ಛತ್ತೀಸಗಢ ರಾಜ್ಯದಲ್ಲಿನ ವಿಧಾನಸಭೇ ಕ್ಷೇತ್ರಗಳೆಷ್ಟು?

ಒಟ್ಟು 90 ಕ್ಷೇತ್ರಗಳು

ಚುನಾವಣಾ ವೇಳಾಪಟ್ಟಿ ಹೀಗಿತ್ತು

ಮತದಾನ ನವೆಂಬರ್ 7 ಹಾಗು ನವೆಂಬರ್‌ ನವೆಂಬರ್ 17

ಮತ ಎಣಿಕೆ ಡಿಸೆಂಬರ್‌ 3

ಪ್ರಮುಖ ಪಕ್ಷಗಳು ಕೊಟ್ಟಿರುವ ಮುಖ್ಯ ಭರವಸೆಗಳೇನು

ಆಡಳಿತಾರೂಢ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಭರವಸೆ ನೀಡಿದೆ. ಭತ್ತಕ್ಕೆ ಕ್ವಿಂಟಲ್‌ಗೆ 3,200 ರೂ. ಮತ್ತು ಮಹಿಳೆಯರಿಗೆ ಸಬ್ಸಿಡಿ ದರದ ಅಡುಗೆ ಅನಿಲ ಸಿಲಿಂಡರ್, ಸರ್ಕಾರಿ ಕಾಲೇಜುಗಳಲ್ಲಿ ಶಿಶುವಿಹಾರದಿಂದ ಸ್ನಾತಕೋತ್ತರ ಪದವಿಯವರೆಗೆ ಉಚಿತ ಶಿಕ್ಷಣ, 200 ಯೂನಿಟ್ ವಿದ್ಯುತ್ ಉಚಿತ; ಗ್ರಾಮೀಣ ಬಡವರಿಗೆ 17.5 ಲಕ್ಷ ಮನೆಗಳು, 2023-28 ರಲ್ಲಿ ಜಾತಿ ಗಣತಿ ನಡೆಸುವುದಾಗಿ ತಿಳಿಸಿದೆ.

ಬಿಜೆಪಿ ವಿವಾಹಿತ ಮಹಿಳೆಯರು ಮತ್ತು ಭೂರಹಿತ ಕೃಷಿ ಕಾರ್ಮಿಕರಿಗೆ ವಾರ್ಷಿಕ 12,000 ರೂ. ಆರ್ಥಿಕ ನೆರವು, ಕ್ವಿಂಟಲ್‌ಗೆ 3,100 ರೂ.ಗೆ ಭತ್ತ ಖರೀದಿ ಮತ್ತು ಬಡ ಕುಟುಂಬಗಳಿಗೆ 500 ರೂ.ಗೆ ಅಡುಗೆ ಅನಿಲ ಸಿಲಿಂಡರ್ ನೀಡುವುದಾಗಿ ತಿಳಿಸಿದೆ. ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳಿಗೆ ಮಾಸಿಕ ಪ್ರಯಾಣ ಭತ್ಯೆ, ಘರ್ ಘರ್ ನಿರ್ಮಲ್ ಜಲ ಅಭಿಯಾನದಡಿ ಎರಡು ವರ್ಷಗಳಲ್ಲಿ ಪ್ರತಿ ಮನೆಗೆ ನಲ್ಲಿ ನೀರಿನ ಸಂಪರ್ಕ , ಭೂರಹಿತ ಕೃಷಿ ಕಾರ್ಮಿಕರಿಗೆ ವರ್ಷಕ್ಕೆ 10,000 ನೆರವು ನೀಡುವ ಘೋಷಣೆ ಮಾಡಿದೆ.

ಯಾವ ಪಕ್ಷಗಳ ನಡುವೆ ಹಣಾಹಣಿ

ಇಲ್ಲಿಯೂ ಆಡಳಿತಾರೂಢ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿದೆ. ಛತ್ತೀಸ್‌ಗಢದ ಜನತಾ ಕಾಂಗ್ರೆಸ್‌ ಪಕ್ಷ ಕೂಡ ಕೆಲವು ಕಡೆ ಸ್ಪರ್ಧೆಯೊಡ್ಡಿದೆ.

ಮುಖ್ಯ ಉಮೇದುವಾರರು ಯಾರಿದ್ದಾರೆ

ಕಾಂಗ್ರೆಸ್‌ನಲ್ಲಿ ಸಿಎಂ ಭುಪೇಶ್‌ ಬಾಘೇಲ್, ಉಪಮುಖ್ಯಮಂತ್ರಿ ಟಿಎಸ್ ಸಿಂಗ್ ದೇವ್‌, ಛತ್ತೀಸ್‌ಗಢ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಬೈಜ್.

ಬಿಜೆಪಿಯಲ್ಲಿ ಮಾಜಿ ಸಿಎಂ ಡಾ.ರಮಣಸಿಂಗ್‌, ಕೇಂದ್ರ ಸಚಿವೆ ರೇಣುಕಾ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ಅರುಣ್‌ ಸಾವೋ, ಸಂಸದ ವಿಜಯ್ ಬಾಘೇಲ್.

ಜನತಾ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ಅವರ ಪುತ್ರ ಅಮಿತ್‌ ಜೋಗಿ.

ಗೆಲುವು-ಸೋಲಿನ ಸಂದೇಶ ಏನಾಗಿರಬಹುದು?

ಸತತ ಮೂರು ಬಾರಿ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಸೋಲಿಸಿ ಇಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನೀಡಲಾಗಿತ್ತು. ಈ ಬಾರಿ ಇಲ್ಲಿ ಕಾಂಗ್ರೆಸ್‌ ಗೆದ್ದರೆ ಹಳೆಯ ಸಂಪ್ರದಾಯವನ್ನು ಜನ ಮುಂದುವರಿಸಿದಂತೆ. ಇಲ್ಲವೇ ಬದಲಾವಣೆ ಮಾಡಿದರೂ ಹೊಸದಕ್ಕೆ ನಾಂದಿ ಹಾಡಿದಂತೆಯೇ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಏನಾಗಬಹುದು

ವಿಧಾನಸಭೆ ಚುನಾವಣೆ ಫಲಿತಾಂಶದ ಪರಿಣಾಮ ಲೋಕಸಭೆ ಮೇಲೆ ಆಗುತ್ತದೆ ಎಂದು ಹೇಳಲಾಗದು. ಹಿಂದಿನ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೂ ಛತ್ತೀಸಗಡದಲ್ಲಿ ಬಿಜೆಪಿಯೇ ಹೆಚ್ಚು ಸ್ಥಾನ

ಗೆದ್ದಿತ್ತು. ಆದರೆ ಒಂದು ಸ್ಥಾನವನ್ನು ಕಾಂಗ್ರೆಸ್‌ ಹೆಚ್ಚಿಸಿಕೊಂಡಿದ್ದು ವಿಶೇಷ. ಒಟ್ಟು 11 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ 9, ಕಾಂಗ್ರೆಸ್‌ 2 ಸ್ಥಾನ ಗೆದ್ದಿವೆ.

ಕರ್ನಾಟಕ ಫಲಿತಾಂಶದ ಪ್ರಭಾವ ಆಗಬಹುದೇ

ಕರ್ನಾಟಕದಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳಲ್ಲಿ ಉಚಿತ ವಿದ್ಯುತ್‌ ಯೋಜನೆಯನ್ನು ಕಾಂಗ್ರೆಸ್‌ ಈ ಬಾರಿ ಛತ್ತೀಸಗಢದಲ್ಲಿ ಘೋಷಿಸಿದೆ. ಬಿಜೆಪಿ ಶಕ್ತಿ ಯೋಜನೆ ಮಾದರಿಯಲ್ಲಿಯೇ ಉಚಿತ ಬಸ್‌ ಸೇವೆ ಬದಲು ವಿದ್ಯಾರ್ಥಿಗಳಿಗೆ ವರ್ಷದ ಪ್ರಯಾಣ ಹಣ ನೀಡುವುದಾಗಿ ಹೇಳಿದೆ.

ಈ ಬಾರಿ ಗಮನ ಸೆಳೆದ ಅಂಶಗಳು

ನಕ್ಸಲ್‌ ಪೀಡಿತ ರಾಜ್ಯವಾದ ಛತ್ತೀಸಗಢದಲ್ಲಿ ಈ ಬಾರಿಯೂ ಅಡಚಣೆಗಳಾಗಬಹುದು ಎಂದು ಭಾರೀ ಭದ್ರತೆಗೆ ಗಮನ ನೀಡಲಾಗಿತ್ತು. ಒಂದೆರಡು ಕಡೆ ಬಿಟ್ಟರೆ ಅಂತಹ ತೊಂದರೆಯೇನೂ ನಕ್ಸಲರಿಂದ ಆಗಲಿಲ್ಲ. ಈ ಬಾರಿ ಚುನಾವಣೆಯಲ್ಲಿ ಇಲ್ಲಿ ಅಭಿವೃದ್ದಿ ಕುರಿತಾಗಿಯೂ ಹೆಚ್ಚಿನ ಚರ್ಚೆಗಳು ನಡೆದಿವೆ.

ಕಳೆದ ಚುನಾವಣೆ ಫಲಿತಾಂಶ ಏನಾಗಿತ್ತು

ಛತ್ತೀಸ್‌ಗಢ ವಿಧಾನಸಭಾ ಚುನಾವಣೆ 2018 ನವೆಂಬರ್ 12 ಮತ್ತು 20 ರಂದು ಎರಡು ಹಂತಗಳಲ್ಲಿ ನಡೆದು ಒಟ್ಟು 90 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 68 ಹಾಗೂ ಬಿಜೆಪಿ 15, ಬಿಎಸ್ಪಿ 7 ಸ್ಥಾನ ಪಡೆದಿತ್ತು. ಅದಕ್ಕೂ ಮೊದಲು ಮೂರು ಬಾರಿ ಬಿಜೆಪಿ ಹಿಡಿತದಲ್ಲಿದ್ದ ಆಡಳಿತವನ್ನು ಕಾಂಗ್ರೆಸ್‌ ಕಸಿದಿತ್ತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.