ಪಾಕಿಸ್ತಾನದಲ್ಲಿ ವಿಕಿರಣ ಸೋರಿಕೆ ವದಂತಿ: ಸುರಕ್ಷತಾ ಕ್ರಮಗಳ ನಕಲಿ ಪತ್ರ ಸಾಮಾಜಿಕ ತಾಣದಲ್ಲಿ ವೈರಲ್
ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಳಿಕ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಭಾರತ ಸೇನೆ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ವಿಕಿರಣ ಘಟಕಕ್ಕೆ ಹಾನಿಯಾಗಿ, ವಿಕಿರಣ ಸೋರಿಕೆಯಾಗಿದೆ ಎಂಬ ವದಂತಿ ಹರಡಿದೆ. ಜತೆಗೆ ಸುರಕ್ಷತಾ ಕ್ರಮಗಳ ನಕಲಿ ಪತ್ರ ವೈರಲ್ ಆಗಿದೆ.

ನವದೆಹಲಿ: ಪಾಕಿಸ್ತಾನದ ಉಗ್ರರ ನೆಲೆಗಳ ಮೇಲಿನ ವಾಯುದಾಳಿಯ ಸಂದರ್ಭ, ಅಲ್ಲಿನ ವಿಕಿರಣ ಘಟಕಕ್ಕೆ ಹಾನಿಯಾಗಿ ವಿಕಿರಣ ಸೋರಿಕೆಯಾಗಿದೆ ಎಂಬ ಸುದ್ದಿ ಹಬ್ಬಿದ್ದು, ಅದು ಸಂಪೂರ್ಣ ಸುಳ್ಳು ಎಂದು ಸೇನೆ ಹೇಳಿದೆ. ಅಂತಹ ಯಾವುದೇ ಸ್ಥಳಗಳ ಬಗ್ಗೆ ನಮಗೆ ತಿಳಿದಿಲ್ಲ, ನಾವು ಯಾವುದನ್ನೂ ಹಾನಿ ಮಾಡಿಲ್ಲ, ಉಗ್ರರ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಿದ್ದೇವೆ ಎಂದು ಭಾರತೀಯ ಸೇನೆ ಹೇಳಿದೆ. ಆದರೆ ಪಾಕಿಸ್ತಾನದ ಅಣ್ವಸ್ತ್ರ ಘಟಕಕ್ಕೆ ಬಾಂಬ್ ದಾಳಿಯಿಂದ ಹಾನಿಯಾಗಿದೆ, ಅದರಿಂದ ವಿಕಿರಣ ಸೋರಿಕೆ ಉಂಟಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಡಿದೆ.
ಅಣ್ವಸ್ತ್ರ ಘಟಕಕ್ಕೆ ಹಾನಿಯಾಗಿರುವ ಬಗ್ಗೆ ಭಾರತೀಯ ಸೇನೆಯ ಮೂರೂ ಘಟಕಗಳ ಮುಖ್ಯಸ್ಥರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದು, ಅಂತಹ ಯಾವುದೇ ದಾಳಿಯನ್ನು ನಾವು ನಡೆಸಿಲ್ಲ. ಕೇವಲ ಉಗ್ರರ ನೆಲೆಗಳನ್ನಷ್ಟೇ ಹುಡುಕಿ ದಾಳಿ ಮಾಡಿ ನಾಶಪಡಿಸಲಾಗಿದೆ. ಅದರ ಹೊರತು ಇತರ ಯಾವುದೇ ಕಟ್ಟಡ, ಸರ್ಕಾರದ ಅಂಗಸಂಸ್ಥೆಗಳ ವಿರುದ್ಧ ದಾಳಿ ನಡೆಸಿಲ್ಲ ಎಂದು ಹೇಳಿದ್ದಾರೆ. ಆದರೆ ವಿಕಿರಣ ಸೋರಿಕೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ವೈರಲ್ ಆಗಿದೆ. ಪಾಕಿಸ್ತಾನ ಕೂಡ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ನಕಲಿ ಪತ್ರ ವೈರಲ್
ವಿಕಿರಣ ಘಟಕಕ್ಕೆ ಹಾನಿಯಾಗದ್ದು, ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸರ್ಕಾರ ಹೊರಡಿಸಿದೆ ಎನ್ನಲಾದ ನಕಲಿ ಪತ್ರವೊಂದು ವೈರಲ್ ಆಗಿದೆ. ರೇಡಿಯಾಲಜಿಕಲ್ ಸೇಫ್ಟಿ ಬುಲೆಟಿನ್ ಹೆಸರಿನಲ್ಲಿ ಈ ಪತ್ರ ಬಿಡುಗಡೆಯಾಗಿದೆ. ಆದರ ಪತ್ರದ ಅಸಲಿಯತ್ತು ಬಗ್ಗೆ ಪಾಕಿಸ್ತಾನ ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಜತೆಗೆ ವಿಕಿರಣ ಘಟಕಕ್ಕೆ ಹಾನಿಯಾಗಿಲ್ಲ. ನಮ್ಮ ಅಣ್ವಸ್ತ್ರಗಳು ಸುರಕ್ಷಿತವಾಗಿವೆ ಎಂದು ಹೇಳಿದೆ. ಹೀಗಾಗಿ ಪತ್ರ ನಕಲಿ ಎನ್ನುವುದು ಸಾಬೀತಾಗಿದೆ.