ಬಂದೇ ಬಿಡ್ತು ನೋಡಿ ಖುಷಿ ಸುದ್ದಿ, ಈ ಮಾರ್ಗದಲ್ಲಿ ಸಂಚರಿಸಲಿದೆ ಮೊದಲ ವಂದೇ ಭಾರತ್ ಸ್ಲೀಪರ್ ರೈಲು; ವಿವರ ಇಲ್ಲಿದೆ ನೋಡಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬಂದೇ ಬಿಡ್ತು ನೋಡಿ ಖುಷಿ ಸುದ್ದಿ, ಈ ಮಾರ್ಗದಲ್ಲಿ ಸಂಚರಿಸಲಿದೆ ಮೊದಲ ವಂದೇ ಭಾರತ್ ಸ್ಲೀಪರ್ ರೈಲು; ವಿವರ ಇಲ್ಲಿದೆ ನೋಡಿ

ಬಂದೇ ಬಿಡ್ತು ನೋಡಿ ಖುಷಿ ಸುದ್ದಿ, ಈ ಮಾರ್ಗದಲ್ಲಿ ಸಂಚರಿಸಲಿದೆ ಮೊದಲ ವಂದೇ ಭಾರತ್ ಸ್ಲೀಪರ್ ರೈಲು; ವಿವರ ಇಲ್ಲಿದೆ ನೋಡಿ

ರೈಲು ಪ್ರಯಾಣಿಕರು ನಿರೀಕ್ಷಿಸುತ್ತಿದ್ದ ಖುಷಿ ಸುದ್ದಿ ಬಂದೇ ಬಿಡ್ತು ನೋಡಿ! ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಕೇರಳ-ಕರ್ನಾಟಕದ ನಡುವೆ ಸಂಚರಿಸಲಿದೆ. ವಿವರ ಹೀಗಿದೆ.

ಬಂದೇ ಬಿಡ್ತು ನೋಡಿ ಖುಷಿ ಸುದ್ದಿ, ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಯಾವ ಮಾರ್ಗದಲ್ಲಿ ಸಂಚರಿಸಲಿದೆ ಎಂಬ ವಿವರ ಬಹಿರಂಗವಾಗಿದೆ. (ಸಾಂಕೇತಿಕ ಚಿತ್ರ)
ಬಂದೇ ಬಿಡ್ತು ನೋಡಿ ಖುಷಿ ಸುದ್ದಿ, ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಯಾವ ಮಾರ್ಗದಲ್ಲಿ ಸಂಚರಿಸಲಿದೆ ಎಂಬ ವಿವರ ಬಹಿರಂಗವಾಗಿದೆ. (ಸಾಂಕೇತಿಕ ಚಿತ್ರ)

ನವದೆಹಲಿ: ಭಾರತದ ಉದ್ದಗಲಕ್ಕೂ ರೈಲ್ವೆ ಪ್ರಯಾಣಿಕರು ಬಹಳ ಕಾತರದಿಂದ ಕಾಯುತ್ತಿದ್ದ ಖುಷಿ ಸುದ್ದಿ ಬಂದೇ ಬಿಡ್ತು ನೋಡಿ. ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಕೇರಳ - ಕರ್ನಾಟಕ ನಡುವೆ ಸಂಚರಿಸಲಿದೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಕೇರಳದ ತಿರುವನಂತಪುರದಿಂದ ಕರ್ನಾಟಕದ ಮಂಗಳೂರು ನಡುವೆ ಈ ರೈಲು ಸಂಚರಿಸಲಿದೆ. ಸದ್ಯ ಕುಳಿತು ಸಂಚರಿಸುವ ವ್ಯವಸ್ಥೆ ಹೊಂದಿರುವ ವಂದೇ ಭಾರತ್ ರೈಲು ದೇಶ ವ್ಯಾಪಿ ವಿವಿಧ ರೈಲ್ವೆ ನಿಲ್ದಾಣಗಳ ನಡುವೆ ಓಡಾಡುತ್ತಿದೆ. ಶೀಘ್ರವೇ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಶುರುವಾಗುವ ಶುಭ ಸುದ್ದಿ ರೈಲ್ವೆ ಪ್ರಯಾಣಿಕರ ಖುಷಿಗೆ ಕಾರಣವಾಗಿದೆ.

ತಿರುವನಂತಪುರಂ-ಮಂಗಳೂರು; ಮೊದಲ ವಂದೇ ಭಾರತ್ ಸ್ಲೀಪರ್

ತಿರುವನಂತಪುರಂ-ಮಂಗಳೂರು ಮಾರ್ಗ ಮತ್ತು ಇತರ ಅನೇಕ ಮಾರ್ಗಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲನ್ನು ಓಡಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ತಿರುವನಂತಪುರಂ-ಬೆಂಗಳೂರು ಮತ್ತು ಕನ್ಯಾಕುಮಾರಿ-ಶ್ರೀನಗರದಂತಹ ಹೊಸ ಮಾರ್ಗಗಳಲ್ಲಿ ಇದನ್ನು ಓಡಿಸಲು ಸರ್ಕಾರ ಯೋಜಿಸುತ್ತಿದೆ. ಅಂದರೆ, ಶೀಘ್ರದಲ್ಲೇ ದಕ್ಷಿಣ ಭಾರತದಲ್ಲಿ ಅನೇಕ ಸ್ಲೀಪರ್ ವಂದೇ ಭಾರತ್ ರೈಲುಗಳು ಸಂಚರಿಸಬಹುದು. ಲಕ್ಷಾಂತರ ಪ್ರಯಾಣಿಕರಿಗೆ ಇದರ ಪ್ರಯೋಜನ ಸಿಗಲಿದೆ.

ಈ ರೈಲುಗಳನ್ನು ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ವಿನ್ಯಾಸಗೊಳಿಸಿದ್ದರೆ, ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಇದರ ನಿರ್ಮಾಣದ ನೇತೃತ್ವ ವಹಿಸಿದೆ. ಇದು 16 ಬೋಗಿಗಳ ಎಸಿ ರೈಲು ಆಗಿದ್ದು, ಇದರಲ್ಲಿ ಏಕಕಾಲದಲ್ಲಿ 1128 ಪ್ರಯಾಣಿಕರು ಪ್ರಯಾಣಿಸಲು ಸಾಧ್ಯವಾಗುತ್ತದೆ. ಈ ರೈಲು ದೀರ್ಘ ದೂರ ಪ್ರಯಾಣದ ಮಾರ್ಗಗಳಲ್ಲಿ ಸಂಚರಿಸಬಹುದು. ಕನಿಷ್ಠ ಏಳರಿಂದ ಎಂಟು ಗಂಟೆ ಪ್ರಯಾಣ ಅಥವಾ ಇಡೀ ರಾತ್ರಿ ಪ್ರಯಾಣಕ್ಕೆ ಈ ಬೋಗಿಗಳನ್ನು ಅಳವಡಿಸುವ ಸಾಧ್ಯತೆ ಇದೆ. ಇದರಿಂದಾಗಿ ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸಲು ಮತ್ತು ಬೆಳಿಗ್ಗೆ ಗಮ್ಯಸ್ಥಾನವನ್ನು ತಲುಪಲು ಸಾಧ್ಯವಾಗಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಜಮ್ಮು - ಕತ್ರಾ ನಡುವಿನ ವಂದೇ ಭಾರತ್ ಮುಂದೂಡಿಕೆ

ಏತನ್ಮಧ್ಯೆ, ಜಮ್ಮು ಮತ್ತು ಶ್ರೀನಗರದ ಕತ್ರಾ ನಡುವಿನ ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ಏಪ್ರಿಲ್ 19ಕ್ಕೆ ಶುರುವಾಗಬೇಕಾಗಿತ್ತು. ಆದರೆ ಪ್ರತಿಕೂಲ ಹವಾಮಾನದ ಕಾರಣ, ಪ್ರಧಾನಿಯವರ ಭೇಟಿ ಮುಂದೂಡಲ್ಪಟ್ಟಿದೆ. ಹೀಗಾಗಿ ಜಮ್ಮು- ಕಟ್ರಾ ವಂದೇ ಭಾರತ್ ಸಂಚಾರ ಕೂಡ ಮುಂದೂಡಲ್ಪಟ್ಟಿದೆ. ಈಗ ಹೊಸ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಭಾರತೀಯ ರೈಲ್ವೆ ತಿಳಿಸಿದೆ. ಇದಲ್ಲದೆ, ಜಮ್ಮು ಮತ್ತು ಕಾಶ್ಮೀರದ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಯೋಜನೆ ಉದ್ಘಾಟನೆಯೂ ಮುಂದೂಡಲ್ಪಟ್ಟಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತಿ ಎತ್ತರದ ಚೆನಾಬ್ ರೈಲು ಸೇತುವೆ ಮತ್ತು ಅಂಜಿ ಖಾಡ್ ರೈಲು ಸೇತುವೆಯನ್ನು ಉದ್ಘಾಟಿಸಬೇಕಿತ್ತು ಮತ್ತು ಶ್ರೀ ಮಾತಾ ವೈಷ್ಣೋ ದೇವಿ ಕತ್ರಾದಿಂದ ಶ್ರೀನಗರಕ್ಕೆ ಹೋಗುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವಿಶೇಷ ಕಾಶ್ಮೀರ ಸಂಚಾರಕ್ಕೆ ಏಪ್ರಿಲ್ 19 ರಂದು ಹಸಿರು ನಿಶಾನೆ ತೋರಬೇಕಿತ್ತು. ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚೆನಾಬ್ ರೈಲ್ವೆ ಸೇತುವೆಗೆ ಭೇಟಿ ನೀಡಬೇಕಿತ್ತು ಮತ್ತು ನಂತರ ಅಂಜಿ ಖಾಡ್ ಸೇತುವೆ ಮತ್ತು ಇದಕ್ಕಾಗಿ ಎರಡು ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿತ್ತು. ಈಗ ಉದ್ಘಾಟನಾ ಕಾರ್ಯಕ್ರಮದ ಹೊಸ ದಿನಾಂಕವನ್ನು ಏಪ್ರಿಲ್ ಕೊನೆಯ ವಾರ ಅಥವಾ ಮೇ ಆರಂಭದಲ್ಲಿ ನಿರ್ಧರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.