ಪಾಕ್ ಮೇಲೆ ʻಆಪರೇಷನ್ ಸಿಂಧೂರʼ ದಾಳಿ ಹಿನ್ನೆಲೆ, ಭಾರತದಲ್ಲಿ ವಿಮಾನ ಸೇವೆಗಳು ರದ್ದು; ಹೀಗಿದೆ ವಿಮಾನಯಾನ ಸಂಸ್ಥೆಗಳ ಮಾಹಿತಿ
ಭಾರತ ಮತ್ತು ಪಾಕ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಭಾರತೀಯ ವಿಮಾನಯಾನ ಕಂಪನಿಗಳು ದೇಶದ ಎಲ್ಲ ಪ್ರವಾಸಿಗರಿಗೆ, ವಿಶೇಷವಾಗಿ ಉತ್ತರ ಭಾರತದ ಕಡೆಗೆ ಪ್ರಯಾಣಿಸುವವರಿಗೆ ಪ್ರಯಾಣ ಸಲಹೆಯನ್ನು ನೀಡಿವೆ. ಜತೆಗೆ ಇಂದು (ಮೇ 7) ಮಧ್ಯಾಹ್ನ 12 ಗಂಟೆ ವರೆಗೆ ಕೇಂದ್ರದ ಸೂಚನೆ ಬರುವವರೆಗೆ ವಿಮಾನಯಾನ ಸೇವೆಗಳನ್ನು ರದ್ದುಪಡಿಸಿದೆ.

ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ಸೇನೆ, ʻಆಪರೇಷನ್ ಸಿಂಧೂರʼ ಹೆಸರಿನಲ್ಲಿ ಬುಧವಾರ ಬೆಳಗಿನಜಾವ ಪಾಕಿಸ್ತಾನದ ಗಡಿ ಭಾಗದಲ್ಲಿ ದಾಳಿ ನಡೆಸಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳು ಮತ್ತು ಲಾಂಚ್ಪ್ಯಾಡ್ಗಳು ಸೇರಿ ಒಟ್ಟು ಒಂಬತ್ತು ಉಗ್ರ ತಾಣಗಳ ಮೇಲೆ ಭಾರತ ಸೇನೆ ಸರಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಹಲವು ಉಗ್ರರು ಸತ್ತಿರುವ ಶಂಕೆ ವ್ಯಕ್ತವಾಗಿದೆ. ಗಡಿಯಲ್ಲಿ ಭಾರತ ಮತ್ತು ಪಾಕ್ ನಡುವಿನ ಉದ್ವಿಘ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ವಿಮಾನಯಾನ ಸಂಸ್ಥೆಗಳೂ ಪ್ರಯಾಣಿಕರಿಗೆ ಒಂದಷ್ಟು ಸಲಹೆಗಳನ್ನು ನೀಡಿವೆ.
ಹೌದು ಎರಡು ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಭಾರತೀಯ ವಿಮಾನಯಾನ ಕಂಪನಿಗಳು ಎಲ್ಲ ಪ್ರವಾಸಿಗರಿಗೆ, ವಿಶೇಷವಾಗಿ ಉತ್ತರ ಭಾರತದ ಕಡೆಗೆ ಪ್ರಯಾಣಿಸುವವರಿಗೆ ಪ್ರಯಾಣ ಸಲಹೆಯನ್ನು ನೀಡಿವೆ. ಜತೆಗೆ ಇಂದು (ಮೇ 7) ಮಧ್ಯಾಹ್ನ 12 ಗಂಟೆ ವರೆಗೆ ಕೇಂದ್ರದ ಸೂಚನೆ ಬರುವವರೆಗೆ ವಿಮಾನಯಾನ ಸೇವೆಗಳನ್ನು ರದ್ದುಪಡಿಸಿದೆ. ಅದರಂತೆ, ಧರ್ಮಶಾಲಾ, ಲೇಹ್, ಜಮ್ಮು, ಶ್ರೀನಗರ, ಅಮೃತಸರ, ಚಂಡೀಗಢ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.
ಏಪ್ರಿಲ್ 22ರಂದು ಪಹಲ್ಗಾಮ್ ಧಾಮದಲ್ಲಿ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಿದೆ. ಪ್ರವಾಸಿಗರ ಸುರಕ್ಷತೆಯನ್ನು ಪರಿಗಣಿಸಿದ ವಿಮಾನಯಾನ ಸಂಸ್ಥೆಗಳು, ಶ್ರೀನಗರ, ಜಮ್ಮು, ಅಮೃತಸರ, ಲೇಹ್, ಚಂಡೀಗಢ ಮತ್ತು ಧರ್ಮಶಾಲಾ ಕಡೆಗೆ ಪ್ರಯಾಣಿಸುವವರಿಗೆ ಸಲಹೆ ನೀಡಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಟ್ವಿಟ್ ಮಾಡಿರುವ ವಿಮಾನಯಾನ ಸಂಸ್ಥೆಗಳು, ಈ ರೀತಿಯ ಮಾಹಿತಿ ಹಂಚಿಕೊಂಡಿವೆ.
ಏರ್ ಇಂಡಿಯಾ ಹೇಳಿದ್ದೇನು?
"ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮೇ 7 ರಂದು ಮಧ್ಯಾಹ್ನ 12 ಗಂಟೆಯವರೆಗೆ ಈ ಕೆಳಗಿನ ನಿಲ್ದಾಣಗಳಾದ ಜಮ್ಮು, ಶ್ರೀನಗರ, ಲೇಹ್, ಜೋಧ್ಪುರ, ಅಮೃತಸರ, ಭುಜ್, ಜಾಮ್ನಗರ, ಚಂಡೀಗಢ ಮತ್ತು ರಾಜ್ಕೋಟ್ಗಳಿಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ. ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ. ಅಮೃತಸರಕ್ಕೆ ಹೋಗುವ ಎರಡು ಅಂತಾರಾಷ್ಟ್ರೀಯ ವಿಮಾನಗಳನ್ನು ದೆಹಲಿಗೆ ತಿರುಗಿಸಲಾಗುತ್ತಿದೆ. ಈ ಅನಿರೀಕ್ಷಿತ ಅಡಚಣೆಯಿಂದಾಗಿ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ" ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇಂಡಿಗೋ ಹೇಳಿದ್ದೇನು?
"ಈ ಪ್ರದೇಶದಲ್ಲಿ ಬದಲಾಗುತ್ತಿರುವ ವಾಯುಪ್ರದೇಶದ ಪರಿಸ್ಥಿತಿಗಳಿಂದಾಗಿ, ಶ್ರೀನಗರ, ಜಮ್ಮು, ಅಮೃತಸರ, ಲೇಹ್, ಚಂಡೀಗಢ ಮತ್ತು ಧರ್ಮಶಾಲಾಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ನಮ್ಮ ವಿಮಾನಗಳ ಸಮಯ ಬದಲಾವಣೆಯಾಗಿವೆ. ವಿಮಾನ ನಿಲ್ದಾಣವನ್ನು ತಲುಪುವ ಮೊದಲು bit.ly/31paVKQ ನಲ್ಲಿ ನಿಮ್ಮ ವಿಮಾನ ಪ್ರಯಾಣದ ಸ್ಥಿತಿಯನ್ನು ಪರಿಶೀಲಿಸಲು ನಾವು ವಿನಂತಿಸುತ್ತೇವೆ" ಎಂದು ಇಂಡಿಗೋ ಸಲಹಾ ಸಂಸ್ಥೆ ತಿಳಿಸಿದೆ.
ಬಂದ್ ಆದ ವಿಮಾನ ನಿಲ್ದಾಣಗಳು
ಧರ್ಮಶಾಲಾ (DHM)
ಲೇಹ್ (IXL)
ಜಮ್ಮು (IXJ)
ಶ್ರೀನಗರ (SXR)
ಅಮೃತಸರ (ATQ)
ಚಂಡೀಗಢ
ಈ ನಿಲ್ದಾಣಗಳ ಮೇಲೂ ಪರಿಣಾಮ
ರಾಜ್ಕೋಟ್
ಭುಜ್
ಜಾಮ್ನಗರ
ಬಿಕಾನೇರ್