ಭಾರತದ ವಿಷಯವಾಗಿ ಸುಳ್ಳು, ಪ್ರಚೋದನಕಾರಿ ಸುದ್ದಿ ಪ್ರಸಾರ; ಪಾಕಿಸ್ತಾನದ 16 ಚಾನೆಲ್ಗಳಿಗೆ ನಿರ್ಬಂಧ, ಬಿಬಿಸಿಗೆ ಎಚ್ಚರಿಕೆ
ಪಾಕ್ನ 16 ಚಾನೆಲ್ಗಳಿಗೆ ನಿರ್ಬಂಧ: ಜಮ್ಮು - ಕಾಶ್ಮೀರದ ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್ಗಳ ಭಾರತದ ಬಗ್ಗೆ ‘ಸುಳ್ಳು, ಪ್ರಚೋದನಕಾರಿ ಮತ್ತು ಕೋಮು ಭಾವನೆ ಕೆರಳಿಸುವ’ ಸುದ್ದಿಗಳನ್ನು ಪ್ರಸಾರ ಮಾಡಿವೆ. ಈ ಆರೋಪದ ಕಾರಣ ಅವುಗಳ ಪ್ರಸಾರವನ್ನು ಸೋಮವಾರದಿಂದ ನಿರ್ಬಂಧಿಸಿದೆ.

ಪಾಕ್ನ 16 ಚಾನೆಲ್ಗಳಿಗೆ ನಿರ್ಬಂಧ: ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತದ ಬಗ್ಗೆ ‘ಸುಳ್ಳು, ಪ್ರಚೋದನಕಾರಿ ಮತ್ತು ಕೋಮು ಭಾವನೆ ಕೆರಳಿಸುವ’ ಸುದ್ದಿಗಳನ್ನು ಪ್ರಸಾರ ಮಾಡಿರುವ ಆರೋಪದ ಕಾರಣ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್ಗಳನ್ನು ಭಾರತ ಸರ್ಕಾರ ಸೋಮವಾರ ನಿರ್ಬಂಧಿಸಿದೆ. ಗೃಹ ಸಚಿವಾಲಯದ ಶಿಫಾರಸಿನ ಪ್ರಕಾರ, ಯೂಟ್ಯೂಬ್ ಈ ಬಗ್ಗೆ ಕ್ರಮ ಕೈಗೊಂಡಿದೆ. ಇದರಲ್ಲಿ ಪಾಕಿಸ್ತಾನದ ಡಾನ್ ನ್ಯೂಸ್, ಜಿಯೋ ನ್ಯೂಸ್ಗಳೂ ಸೇರಿದ್ದು, ಈ ಎಲ್ಲ ಚಾನೆಲ್ಗಳ ಚಂದಾದಾರರ ಸಂಖ್ಯೆ 6.3 ಕೋಟಿ ಚಂದಾದಾರರು.
ಪಾಕ್ನ 16 ಚಾನೆಲ್ಗಳಿಗೆ ನಿರ್ಬಂಧ
ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಈ ಚಾನೆಲ್ಗಳು ಭಾರತದ ಕುರಿತು ಸುಳ್ಳು ಸುದ್ದಿ ಪ್ರಸಾರ ಮಾಡಿವೆ. ವಿಶೇಷವಾಗಿ ಭಾರತದ ಬಗ್ಗೆ, ಭಾರತೀಯ ಸೇನೆ ಮತ್ತುಭದ್ರತಾ ಏಜೆನ್ಸಿಗಳ ಕುರಿತು ಸುಳ್ಳು ಹಾಗೂ ಕಪೋಲಕಲ್ಪಿತ ಮಾಹಿತಿ ಪ್ರಸಾರ ಮಾಡಿರುವುದಕ್ಕೆ ಪಾಕಿಸ್ತಾನದ ಕೆಲವು ಯೂಟ್ಯೂಬ್ ಚಾನೆಲ್ಗಳನ್ನು ನಿಷೇಧಿಸುವಂತೆ ಗೃಹ ಸಚಿವಾಲಯ ಶಿಫಾರಸು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಸರ್ಕಾರದಿಂದ ನಿರ್ಬಂಧಕ್ಕೆ ಒಳಗಾದ ಪಾಕ್ ಚಾನೆಲ್ಗಳು
ಭಾರತ ಸರ್ಕಾರದಿಂದ ನಿರ್ಬಂಧಕ್ಕೆ ಒಳಗಾದ ಪಾಕ್ ಚಾನೆಲ್ಗಳ ಪಟ್ಟಿಯಲ್ಲಿರುವ ಚಾನೆಲ್ಗಳ ವಿವರ ಹೀಗಿದೆ- ಡಾನ್ ನ್ಯೂಸ್, ಇರ್ಶಾದ್ ಭಟ್ಟಿ, ಸಮಾ ಟಿ.ವಿ., ಎಆರ್ವೈ ನ್ಯೂಸ್, ಬೋಲ್ ನ್ಯೂಸ್, ರಫ್ತಾರ್, ದಿ ಪಾಕಿಸ್ತಾನ್ ರೆಫರೆನ್ಸ್, ಜಿಯೊ ನ್ಯೂಸ್, ಸಮಾ ಸ್ಪೋರ್ಟ್ಸ್, ಜಿಎನ್ಎನ್, ಉಜೈರ್ ಕ್ರಿಕೆಟ್, ಉಮರ್ ಚೀಮಾ ಎಕ್ಸ್ಕ್ಲೂಸಿವ್, ಅಸ್ಮಾ ಶಿರಾಝಿ, ಮುನೀಬ್ ಫರೂಕಿ, ಸುನೊ ನ್ಯೂಸ್ ಮತ್ತು ರಾಝಿ ನಾಮ.
ಭಾರತಕ್ಕೆ ಸಂಬಂಧಿಸಿದ ಬಿಬಿಸಿ ವರದಿಗಾರಿಕೆಗೆ ಆಕ್ಷೇಪ, ಎಚ್ಚರಿಕೆ
ಭಯೋತ್ಪಾದಕ ದಾಳಿಗೆ ಸಂಬಂಧಿಸಿ ಬಿಬಿಸಿಯ ವರದಿಗಾರಿಕೆ ಬಗ್ಗೆ ಭಾರತ ತೀವ್ರ ಆಕ್ಷೇಪ ಸಲ್ಲಿಸಿದೆ. ಬಿಬಿಸಿ ಇಂಡಿಯಾ ಮುಖ್ಯಸ್ಥ ಜಾಕಿ ಮಾರ್ಟಿನ್ ಅವರಿಗೆ ಪತ್ರ ಬರೆದು ತನ್ನ ಅಸಮಾಧಾನ ಹೊರಹಾಕಿದೆ.
ದಾಳಿ ನಡೆಸಿದವರನ್ನು ಭಯೋತ್ಪಾದಕರು ಎನ್ನುವ ಬದಲು ಬಂಡುಕೋರರು ಎಂದು ವ್ಯಾಖ್ಯಾನಿಸಿರುವ ಬಿಬಿಸಿ ವರದಿಗಾರಿಕೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಭಾರತ ಸರ್ಕಾರ, ಆ ಮಾಧ್ಯಮ ಸಂಸ್ಥೆಗೆ ಪತ್ರ ಬರೆದು, ಭಯೋತ್ಪಾದಕರನ್ನು ಭಯೋತ್ಪಾದರಂತೆ ಕಾಣುವಂತೆ ಸೂಚಿಸಿದೆ ಅಲ್ಲದೆ, ಬಿಬಿಸಿ ವರದಿಕಾರಿಕೆಯ ದೃಷ್ಟಿಕೋನದ ಬಗ್ಗೆ ತನ್ನ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಚಾರ ವಿಭಾಗವು ಬಿಬಿಸಿ ವರದಿಗಾರಿಕೆಯ ಮೇಲೆ ಕಣ್ಣಿಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದಲ್ಲಿದ್ದ ನಾಲ್ವರು ಪಾಕ್ ಪ್ರಜೆಗಳ ಗಡಿಪಾರು
ಇನ್ನೊಂದೆಡೆ, ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ನಾಲ್ವರು ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ. ಗೃಹ ಸಚಿವಾಲಯದ ಸೂಚನೆಯಂತೆ ಅನಧಿಕೃತವಾಗಿ ವಾಸವಾಗಿರುವ ಪಾಕಿಸ್ತಾನದ ಪ್ರಜೆಗಳ ಪತ್ತೆ ಕಾರ್ಯವನ್ನು ಗುಪ್ತಚರ ವಿಭಾಗದ ಅಧಿಕಾರಿಗಳು ನಡೆಸಿದ್ದರು. ಕಾರ್ಯಾಚರಣೆ ವೇಳೆ ಬ್ಯುಸಿನೆಸ್ ವೀಸಾ, ಎಜುಕೇಷನ್ ವೀಸಾದ ಮೇಲೆ ಬಂದಿದ್ದ ನಾಲ್ವರು ಪಾಕಿಸ್ತಾನೀಯರು, ವೀಸಾದ ಅವಧಿ ಮುಕ್ತಾಯವಾದ ಮೇಲೂ ಅನಧಿಕೃತವಾಗಿ ರಾಜ್ಯದಲ್ಲೇ ನೆಲಸಿರುವುದು ಪತ್ತೆಯಾಗಿತ್ತು. ಅವರನ್ನು ಗಡಿಪಾರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಅದಕ್ಕೆ ಬೆಂಬಲ ನೀಡಿದ ಪಾಕಿಸ್ತಾನದ ವಿರುದ್ಧ ಹಲವು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ. ಈ ಪೈಕಿ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನೀಯರನ್ನು ಗಡಿಪಾರು ಮಾಡುವ ಕ್ರಮವೂ ಕೂಡ ಸೇರಿಕೊಂಡಿದೆ. ಹೀಗಾಗಿ ಎಲ್ಲ ರಾಜ್ಯಗಳಲ್ಲೂ ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲೆ ಉಳಿದುಕೊಂಡಿರುವ ಪಾಕಿಸ್ತಾನೀಯರನ್ನು ಹುಡುಕಿ ಗಡಿಪಾರು ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.