Hyderabad News: ಬೀದಿನಾಯಿಗಳಿಗೆ ಬಲಿಯಾದ ಮಗು; ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು
Hyderabad News: ಹೈದರಾಬಾದ್ನಲ್ಲಿ ವಾಸಿಸುತ್ತಿದ್ದ ಛತ್ತೀಸ್ಗಢ ಮೂಲದ ಎರಡೂವರೆ ವರ್ಷದ ಬಾಲಕಿಯನ್ನು ಬೀದಿನಾಯಿಗಳು ಬಲಿ ಪಡೆದಿವೆ. ಮನೆ ಹೊರಗೆ ಆಟವಾಡುತಿದ್ದ ಮಗುವನ್ನು ನಾಯಿಗಳು ಕಚ್ಚಿದ್ದರಿಂದ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ತೆಲಂಗಾಣ: ಬೀದಿನಾಯಿಗಳ ಹಾವಳಿ ಕೆಲವೆಡೆ ಬಹಳ ಹೆಚ್ಚಾಗುತ್ತಿದೆ. ತಮ್ಮಷ್ಟಕ್ಕೆ ತಾವು ಓಡಾಡುವ ಸಾರ್ವಜನಿಕರಿಗೆ ತೊಂದರೆ ನೀಡುವ ನಾಯಿಗಳು ಮಕ್ಕಳನ್ನು ಕೂಡಾ ಬಲಿ ಪಡೆದಿವೆ. ರಸ್ತೆ ಬದಿ ನಾಯಿಗಳು ಚಿಕ್ಕ ಮಕ್ಕಳಿಗೆ ಕಚ್ಚಿರುವ ಎಷ್ಟೋ ಘಟನೆಗಳನ್ನು ವರದಿಯಾಗಿದೆ. ಇದೀಗ ಇಂಥದ್ದೇ ಮತ್ತೊಂದು ಘಟನೆ ಹೈದರಾಬಾದ್ನಲ್ಲಿ ವರದಿ ಆಗಿದೆ.
ಹೈದರಾಬಾದ್ನಲ್ಲಿ ಸಾವನ್ನಪ್ಪಿದ ದೀಪಾಲಿ
ಬೀದಿ ನಾಯಿಗಳ ಹಾವಳಿಗೆ ಎರಡೂವರೆ ವರ್ಷದ ಮಗು ಸಾವನ್ನಪ್ಪಿದೆ. ನಾಯಿಗಳ ಹಾವಳಿಗೆ ದೀಪಾಲಿ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ. ಶುಕ್ರವಾರ ಈ ಘಟನೆ ನಡೆದಿದ್ದು ಸಾರ್ವಜನರಿಗೆ ಭಯಭೀತರಾಗಿದ್ದಾರೆ. ಶುಕ್ರವಾರ ಹೈದರಾಬಾದ್ನ ಗಾಯತ್ರಿ ನಗರದಲ್ಲಿ ಮನೆ ಹೊರಗೆ ಆಟವಾಡುತ್ತಿದ್ದ ದೀಪಾಲಿ ಎಂಬ ಎರಡೂವರೆ ವರ್ಷದ ಬಾಲಕಿಗೆ ನಾಯಿಗಳು ಕಚ್ಚಿವೆ. ಗಾಯಗೊಂಡಿದ್ದ ಬಾಲಕಿಯನ್ನು ಕೂಡಲೇ ಅಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿ ಆಗದೆ ಮಗು ರಾತ್ರಿ ಸಾವನ್ನಪ್ಪಿದೆ. ದೀಪಾಲಿ ಅಕ್ಕನಿಗೆ ಕೂಡಾ ನಾಯಿಗಳು ಕಚ್ಚಿ ಎಳೆದಾಡಿವೆ. ಆದರೆ ಕೂಡಲೇ ಸ್ಥಳೀಯರು ನಾಯಿಗಳನ್ನು ಓಡಿಸಿದ್ದರಿಂದ ಆ ಮಗು ಅಪಾಯದಿಂದ ಪಾರಾಗಿದೆ.
ಛತ್ತೀಸ್ಗಢ ಮೂಲದ ಮಗು
ಸಾವನ್ನಪ್ಪಿದ ಬಾಲಕಿ ದೀಪಾಲಿ ಪೋಷಕರು ಮೂಲತ: ಛತ್ತೀಸ್ಗಢಕ್ಕೆ ಸೇರಿದವರಾಗಿದ್ದು ಕಳೆದ 5 ತಿಂಗಳ ಹಿಂದೆ ಹೈದರಾಬಾದ್ಗೆ ವಲಸೆ ಬಂದಿದ್ದರು. ಇಬ್ಬರೂ ಗಾಯತ್ರಿ ನಗರದಲ್ಲಿ ಪುಟ್ಟ ಮನೆಯೊಂದನ್ನು ಬಾಡಿಗೆ ಪಡೆದು ಮಕ್ಕಳೊಂದಿಗೆ ವಾಸವಿದ್ದರು. ಇಬ್ಬರೂ ದಿನಕೂಲಿ ಮಾಡುತ್ತಿದ್ದರು. ಈ ಪ್ರದೇಶದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ಎಷ್ಟೇ ದೂರು ನೀಡಿದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ. ಸದ್ಯಕ್ಕೆ ಘಟನೆ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಹಾಡ ಹಗಲೆ ಜೋಡಿ ಕೊಲೆ, ಕಾರಣ ನಿಗೂಢ
ಸಾರ್ವಜನಿಕರ ಆಕ್ರೋಶ
ಇದಕ್ಕೂ ಮುನ್ನ ಇಂಥದ್ದೇ ಅನೇಕ ಪ್ರಕರಣಗಳು ವರದಿ ಆಗಿವೆ. 2023 ಜನವರಿಯಲ್ಲಿ ಧಾರವಾಡದಲ್ಲಿ ಭಿಕ್ಷುಕಿಯೋರ್ವಳನ್ನು ಬೀದಿನಾಯಿಗಳು ಕಚ್ಚಿ ಸಾಯಿಸಿದ್ದವು. ಜಿಲ್ಲೆಯ ಉಪ್ಪಿನಬೆಟಗೇರಿ ಗ್ರಾಮದ ಬಳಿ ರಾತ್ರಿ ಭಿಕ್ಷುಕಿ ಮಲಗಿದ್ದಾಗ ನಾಯಿಗಳ ಗುಂಪು ಆಕೆಯ ಮೇಲೆ ಹಾವಳಿ ಮಾಡಿದ್ದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಳು.
ಫೆಬ್ರವರಿಯಲ್ಲಿ ಹುಬ್ಬಳಿಯಲ್ಲಿ ಬೀದಿನಾಯಿಗಳು ಕಚ್ಚಿದ್ದರಿಂದ ಇಬ್ಬರು ಬಾಲಕರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದ್ದರಿಂದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದರು.
ವಿಭಾಗ