ಐಎಂಎಫ್‌ ಭಾರತದ ಇಡಿ ಕೃಷ್ಣಮೂರ್ತಿ ಸುಬ್ರಮಣಿಯನ್ ಅವಧಿ ಆರು ತಿಂಗಳ ಮೊದಲೇ ಹಠಾತ್‌ ಅಂತ್ಯ; ಕೇಂದ್ರದ ನಿರ್ಧಾರಕ್ಕೆ ಕಾರಣ ಏನು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಐಎಂಎಫ್‌ ಭಾರತದ ಇಡಿ ಕೃಷ್ಣಮೂರ್ತಿ ಸುಬ್ರಮಣಿಯನ್ ಅವಧಿ ಆರು ತಿಂಗಳ ಮೊದಲೇ ಹಠಾತ್‌ ಅಂತ್ಯ; ಕೇಂದ್ರದ ನಿರ್ಧಾರಕ್ಕೆ ಕಾರಣ ಏನು

ಐಎಂಎಫ್‌ ಭಾರತದ ಇಡಿ ಕೃಷ್ಣಮೂರ್ತಿ ಸುಬ್ರಮಣಿಯನ್ ಅವಧಿ ಆರು ತಿಂಗಳ ಮೊದಲೇ ಹಠಾತ್‌ ಅಂತ್ಯ; ಕೇಂದ್ರದ ನಿರ್ಧಾರಕ್ಕೆ ಕಾರಣ ಏನು

ಐಎಂಎಫ್‌ನಲ್ಲಿ ಭಾರತದ ಪ್ರತಿನಿಧಿಯಾಗಿದ್ದ ಆರ್ಥಿಕ ತಜ್ಞ ಕೃಷ್ಣಮೂರ್ತಿ ವಿ. ಸುಬ್ರಮಣಿಯನ್ ಅವರನ್ನು ಅವಧಿ ಮುಗಿಯುವ ಮುನ್ನವೇ ವಾಪಸ್‌ ಕರೆಯಿಸಿಕೊಳ್ಳುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

ಐಎಂಎಫ್‌ ಭಾರತದ ಪ್ರತಿನಿಧಿಯಾಗಿದ್ದ ಆರ್ಥಿಕ ತಜ್ಞ ಕೃಷ್ಣಮೂರ್ತಿ ವಿ. ಸುಬ್ರಮಣಿಯನ್ ಅವರನ್ನು ವಾಪಸ್‌ ಕರೆಯಿಸಿಕೊಳ್ಳಲಾಗಿದೆ.
ಐಎಂಎಫ್‌ ಭಾರತದ ಪ್ರತಿನಿಧಿಯಾಗಿದ್ದ ಆರ್ಥಿಕ ತಜ್ಞ ಕೃಷ್ಣಮೂರ್ತಿ ವಿ. ಸುಬ್ರಮಣಿಯನ್ ಅವರನ್ನು ವಾಪಸ್‌ ಕರೆಯಿಸಿಕೊಳ್ಳಲಾಗಿದೆ.

ದೆಹಲಿ: ಭಾರತ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಹಾಗೂ ಅನುಭವಿ ಅರ್ಥಶಾಸ್ತ್ರಜ್ಞ ಕೃಷ್ಣಮೂರ್ತಿ ವಿ. ಸುಬ್ರಮಣಿಯನ್ ಅವರನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (IMF) ಭಾರತದ ಕಾರ್ಯನಿರ್ವಾಹಕ ನಿರ್ದೇಶಕ (ED) ಹುದ್ದೆಯಿಂದ ಹಠಾತ್ತನೆ ವಾಪಸ್ ಕರೆಸಿಕೊಳ್ಳಲಾಗಿದೆ. ಅವರ ಮೂರು ವರ್ಷಗಳ ಅವಧಿ ಪೂರ್ಣಗೊಳ್ಳುವ ಆರು ತಿಂಗಳ ಮೊದಲು ಈ ಹುದ್ದೆಯಿಂದ ಹಠಾತ್ತನೆ ವಾಪಸ್ ಕರೆಯಿಸಿಕೊಳ್ಳುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಈ ಕುರಿತು ಸಂಪುಟದ ನೇಮಕಾತಿ ಸಮಿತಿ ಅನುಮೋದಿಸಿದ ಕ್ರಮವನ್ನು 2025 ಏಪ್ರಿಲ್ 30 ರಂದು ಅಧಿಕೃತ ಆದೇಶದ ಮೂಲಕ ಪ್ರಕಟಿಸಲಾಗಿದ್ದು ಅಂದಿನಿಂದಲೇ ಆದೇಶವೂ ಜಾರಿಗೆ ಬಂದಿದೆ.

ಹೈದರಾಬಾದ್ನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ (ಐಎಸ್ಬಿ) ನ ಸಹಾಯಕ ಪ್ರಾಧ್ಯಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ (ಸೆಂಟರ್ ಫಾರ್ ಅನಾಲಿಟಿಕಲ್ ಫೈನಾನ್ಸ್) ಕೃಷ್ಣಮೂರ್ತಿ ಸುಬ್ರಮಣಿಯನ್ ಅವರನ್ನು ಮೂರು ವರ್ಷಗಳ ಅವಧಿಗೆ 2022 ರ ಆಗಸ್ಟ್ ರಲ್ಲಿ ಐಎಂಎಫ್‌ಗೆ ಹುದ್ದೆಗೆ ನೇಮಿಸಲಾಗಿತ್ತು. ಅದೇ ವರ್ಷ ನವೆಂಬರ್ 1 ರಂದು ಅಧಿಕಾರ ವಹಿಸಿಕೊಂಡಿದ್ದರು. ಐಎಂಎಫ್‌ನ ಕಾರ್ಯನಿರ್ವಾಹಕ ಮಂಡಳಿಯಲ್ಲಿ ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಭೂತಾನ್ ದೇಶಗಳ ಪ್ರತಿನಿಧಿಯಾಗಿದ್ದರು ಇದಕ್ಕೂ ಮೊದಲು, ಅವರು 2018 ರಿಂದ 2021 ರವರೆಗೆ ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಮರಳಲು ಈ ಹುದ್ದೆಯನ್ನು ತೊರೆದಿದ್ದರು. ಇದಾದ ಬಳಿಕ ಅವರನ್ನು ಐಎಂಎಫ್‌ನಲ್ಲಿ ಭಾರತದ ಪ್ರತಿನಿಧಿಯಾಗಿ ನೇಮಿಸಲಾಗಿತ್ತು.

ಈ ಹಿಂದೆ ಐಎಂಎಫ್‌ನಲ್ಲಿ ಇಡಿಯಾಗಿ ಕಾರ್ಯನಿರ್ವಹಿಸಿದ ಬಹುತೇಕರು ತಮ್ಮ ಅವಧಿ ಪೂರೈಸಿದ್ದಾರೆ.ಅರ್ಥಶಾಸ್ತ್ರಜ್ಞ ಸುರ್ಜಿತ್ ಭಲ್ಲಾ ಅವರು ಎರಡನೇ ಅವಧಿಗೂ ನಿಯೋಜನೆಗೊಂಡಿದ್ದರು. ಆದರೆ ಕೃಷ್ಣಮೂರ್ತಿ ಅವರನ್ನು ಅವಧಿಗೂ ಮುನ್ನವೇ ಏಕೆ ವಾಪಸ್‌ ಕರೆಯಿಸಿಕೊಳ್ಳಲಾಯಿತು ಎನ್ನುವ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ.

ಸುಬ್ರಮಣಿಯನ್ ಅವರ ಹಠಾತ್‌ ನಿರ್ಗಮನಕ್ಕೆ ಸರ್ಕಾರ ಅಧಿಕೃತವಾಗಿ ಯಾವುದೇ ಕಾರಣವನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ದಿ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದ ಮೂಲಗಳು ಈ ನಿರ್ಧಾರದ ಹಿಂದೆ ಎರಡು ಸಂಭಾವ್ಯ ಅಂಶಗಳನ್ನು ಉಲ್ಲೇಖಿಸಿವೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಮಾಹಿತಿ ಹಾಗೂ ಅಂಕಿ ಅಂಶಗಳ ಡೆಟಾದ ವಿಶ್ವಾಸಾರ್ಹತೆಯ ಕುರಿತು ಕೃಷ್ಣಮೂರ್ತಿ ವಿ. ಸುಬ್ರಮಣಿಯನ್ ಅವರು ಕೆಲ ದಿನಗಳ ಹಿಂದೆ ಕಳವಳ ವ್ಯಕ್ತಪಡಿಸಿದ್ದರು. ಈ ಆಕ್ಷೇಪಣೆಗಳು ವಾಷಿಂಗ್ಟನ್ ಮೂಲದ ಬಹುಪಕ್ಷೀಯ ಸಂಸ್ಥೆಯ ಅಧಿಕಾರಿಗಳಿಗೆ ಇಷ್ಟವಾಗಲಿಲ್ಲ ಎನ್ನಲಾಗುತ್ತಿದೆ.

ಇದರೊಟ್ಟಿಗೆ ಸುಬ್ರಮಣಿಯನ್ ಅವರ ಇತ್ತೀಚಿನ ಪುಸ್ತಕ ಇಂಡಿಯಾ @ 100 ಎನ್ನುವ ಪುಸ್ತಕವೂ ಸಾಕಷ್ಟು ವಿವಾದಗಳನ್ನು ಹುಟ್ಟು ಹಾಕಿದ್ದವು. ಈ ಕುರಿತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಅಸಮಾಧಾನವಿದ್ದುದರಿಂದ ಅವರನ್ನು ಏಕಾಏಕಿ ವಾಪಸ್‌ ಕರೆಯಿಸಿಕೊಳ್ಳುವ ನಿರ್ಧಾರ ಆಗಿದೆ ಎನ್ನುತ್ತವೆ ಉನ್ನತ ಮೂಲಗಳು.

ಇದರ ನಡುವೆ ಮೇ 9 ರಂದು ನಡೆಯಲಿರುವ ನಿರ್ಣಾಯಕ ಐಎಂಎಫ್ ಮಂಡಳಿ ಸಭೆಗೆ ಕೆಲವೇ ದಿನಗಳ ಮೊದಲು ಈ ಆದೇಶ ಹೊರ ಬಿದ್ದಿದೆ, ಮಂಡಳ ಸಭೆಯಲ್ಲಿ ಭಾರತವು ಪಾಕಿಸ್ತಾನಕ್ಕೆ ಹೊಸ ಹಣಕಾಸು ನೆರವು ಒದಗಿಸುವುದನ್ನು ವಿರೋಧಿಸುವ ನಿರೀಕ್ಷೆಯಿದೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯ ನಂತರ ಭಯೋತ್ಪಾದನಾ-ಹಣಕಾಸು ವಹಿವಾಟಿನ ದುರುಪಯೋಗದ ಆತಂಕಗಳನ್ನು ಆಧರಿಸಿ ಭಾರತದ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಭಾರತದ ಪ್ರತಿನಿಧಿಯನ್ನು ವಾಪಸ್‌ ಕರೆಯಿಸಿಕೊಳ್ಳುವ ತೀರ್ಮಾನವಾಗಿರುವುದು ಕೂಡ ಇಂತಹ ಚರ್ಚೆಗಳಿಗೆ ಇಂಬು ನೀಡಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.