Parliament New Building: ನೂತನ ಸಂಸತ್ ಭವನ ಲೋಕಾರ್ಪಣೆ; ಲೋಕಸಭೆಯ ಸ್ಪೀಕರ್ ಆಸನ ಪಕ್ಕದಲ್ಲಿ ಸೆಂಗೋಲ್ ಅಳವಡಿಸಿದ ಪ್ರಧಾನಿ ಮೋದಿ
ಬಹು ನಿರೀಕ್ಷಿತ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಇಂದು ಬೆಳಿಗ್ಗೆ ಲೋಕಾರ್ಪಣೆ ಮಾಡಿದ್ದಾರೆ. ಇದಕ್ಕೂ ಮುನ್ನ ಲೋಕಸಭೆಯ ಸ್ಪೀಕರ್ ಆಸನದ ಪಕ್ಕದಲ್ಲಿ ಸೆಂಗೋಲ್ ಅಳವಡಿಸಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ನೂತನ ಸಂಸತ್ ಭವನವನ್ನು (Parliament New Building) ಇಂದು (ಮೇ 28, ಭಾನುವಾರ) ಲೋಕಾರ್ಪಣೆ ಮಾಡಿದ್ದಾರೆ. ಆ ಮೂಲಕ ದೇಶದಲ್ಲಿ ಇತಿಹಾಸದಲ್ಲಿ ಈ ದಿನ ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಯಿತು.
ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ಮೋದಿ ಅವರು ಬೆಳಗ್ಗೆಯೇ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಸಂಸತ್ತಿನ ಗಾಂಧಿ ಪ್ರತಿಮೆಗೆ ಹಾಕಲಾಗಿದ್ದ ಛತ್ರದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು. ವಿದ್ವಾಂಸರ ವೇದ ಮಂತ್ರಗಳ ನಡುವೆ ಆಧ್ಯಾತ್ಮಿಕ ವೈಭವದಿಂದ ನೆರವೇರಿಲಾಯಿತು.
ವಿಶೇಷ ಪೂಜೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಸೆಂಗೋಲ್ ರಾಜದಂಡಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಬಳಿಕ ಅಧೀನಂ ಮಠದ ಪೀಠಾಧಿಪತಿಗಳ ಆಶೀರ್ವಾದ ಪಡೆದು ರಾಜದಂಡವನ್ನು ಪಡೆದರು. ವೇದ ಮಂತ್ರಗಳ ನಡುವೆ ಲೋಕಸಭೆ ಪ್ರವೇಶಿದ ನಮೋಗೆ ಸ್ಪೀಕರ್ ಓಂ ಬಿರ್ಲಾ ಸಾಥ್ ನೀಡಿದರು.
ಬಳಿಕ ನೂತನ ಸಂಸತ್ ಭವನಕ್ಕೆ ರಾಜದಂಡ ಸೆಂಗೋಲ್ನೊಂದಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪೀಕರ್ ಆಸನದ ಬಳಿಕ ತೆರಳಿ ಪಕ್ಕದಲ್ಲೇ ನಿರ್ಮಿಸಿದ್ದ ಜಾಗದಲ್ಲಿ ಸೆಂಗೋಲ್ ಚಿನ್ನದ ರಾಜದಂಡವನ್ನು ಅವಳಡಿಸಿದರು.
ಇದೇ ವೇಳೆ ನೂತನ ಸಂಸತ್ ಭವನವನ್ನು ತ್ವರಿತವಾಗಿ ಪೂರ್ಣಗೊಳಿಸಲು ಶ್ರಮಿಸಿದ ಕಾರ್ಮಿಕರನ್ನು ಪ್ರಧಾನಿ ಮೋದಿ ಸನ್ಮಾನಿಸಿದರು.
ನೂತನ ಸಂಸತ್ ಭವನ ಲೋಕಾರ್ಪಣೆಯನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದರೆ, ಎನ್ಡಿಎ ವಿರೋಧ ಪಕ್ಷಗಳು ಟೀಕಿಸಿವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನೂತನ ಸಂಸತ್ ಭವನದ ಉದ್ಘಾಟನೆ ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ.
ನವ ಭಾರತದ ಭರವಸೆಗಳು, ನಿರೀಕ್ಷೆಗಳು ಹಾಗೂ ಆಕಾಂಕ್ಷೆಗಳ ಈಡೇರಿಕೆಯ ಸಂಕೇತ, ವೈಭವಯುತ ಹಾಗೂ ಸ್ಪೂರ್ತಿದಾಯಕ ಹೊಸ ಸಂಸತ್ತಿನ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ದೇಶದ ಎಲ್ಲಾ ಜನರಿಗೆ ಅಭಿನಂದನೆಗಳು ಎಂದಿದ್ದಾರೆ.
ಇದೇ ವಿಚಾರವಾಗಿ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟವಾದ ಪದಗಳಿಂದ ವಾಗ್ದಾಳಿ ನಡೆಸಿದೆ. ಸಂಸದೀಯ ಕಾರ್ಯವಿಧಾನಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ ಸ್ವಯಂ ವೈಭವೀಕರಿಸುವ ಸರ್ವಾಧಿಕಾರಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ ಕಟ್ಟಡವನ್ನು ಉದ್ಘಾಟಿಸಿದ್ದಾರೆ ಎಂದು ಹೇಳಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಮೇ 28 ರ ಈ ದಿನ ಸಂಸದೀಯ ಪ್ರಜಾಪ್ರಭುತ್ವವನ್ನು ಬೆಳೆಸಲು ಹೆಚ್ಚು ಶ್ರಮಿಸಿದ ವ್ಯಕ್ತಿ ನೆಹರು ಅವರನ್ನು ದಹನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಚಿನ್ನದ ರಾಜದಂಡ ಸೆಂಗೋಲ್
ಚಿನ್ನದ ರಾಜದಂಡ ಸೆಂಗೋಲ್ ಅನ್ನು ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರಿಗೆ ಬ್ರಿಟಿಷರು ಅಧಿಕಾರ ಹಸ್ತಾಂತರದ ಸಂಕೇತವಾಗಿ ನೀಡಿದ್ದರು. ಸೆಂಗೋಲ್ ಎಂಬ ಪದವು ಸೆಮ್ಮೈ ಎಂಬ ತಮಿಳು ಪದದಿಂದ ಬಂದಿದೆ ಎಂದು ಹೇಳಲಾಗಿದೆ.
ಆಗಿನ ಬ್ರಿಟಿಷ್ ಭಾರತದ ವೈಸ್ ರಾಯ್ ಆಗಿದ್ದ ಲಾರ್ಡ್ ಮೌಂಟ್ ಬ್ಯಾಟನ್ ಅವರು ಜವಾಹರಲಾಲ್ ನೆರಹರು ಅವರನ್ನು ಸಾಂಕೇತಿಕ ಅಧಿಕಾರ ವರ್ಗಾವಣೆಯ ಬಗ್ಗೆ ಕೇಳಿದಾಗ ಸೆಂಗೋಲ್ ರಾಜದಂಡವನ್ನು ನೀಡಲಾಗಿದೆ ಎಂದು ಹೇಳಿದ್ದರಂತೆ. ಆ ನಂತರ ಈ ಸೆಂಗೋಲ್ ರಾಜದಂಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಬಂದಿದೆ.
ಬ್ರಿಟಿಷರಿಂದ ಅಧಿಕಾರಕ್ಕೆ ಪಡೆಯುವ ಬಗ್ಗೆ ನೆಹರು ಅವರು ಭಾರತದ ಕೊನೆಯ ಗವರ್ನರ್ ಜನರ್ ಸಿ ರಾಜಗೋಪಾಲಚಾರಿ ಅವರ ಸಲಹೆಯನ್ನು ಕೇಳಿದ್ದರಂತೆ. ರಾಜಗೋಪಾಲಾಚಾರಿಯವರು ಸೆಂಗೋಲ್ ಅನ್ನು ಬಳಸಲು ಸಲಹೆ ನೀಡಿದ್ದಾರೆ.
1947ರ ಆಗಸ್ಟ್ 14 ರಂದು ತಂಜಾವೂರಿನ ಧಾರ್ಮಿಕ ಸಂಸ್ಥೆಯ ಮೂವರು ಪುರೋಹಿತರು ಸೆಂಗೋಲ್ ಅನ್ನು ಹೊತ್ತುಕೊಂಡು ಬಹಳ ಗೌರವದಿಂದ ಬ್ರಿಟಿಷರಿಗೆ ಕೊಟ್ಟು ಅದನ್ನು ನೆಹರೂ ಅವರಿಗೆ ಹಸ್ತಾಂತರಿಸಿದ ಮೂಲಕ ಅಧಿಕಾರವನ್ನು ವರ್ಗಾವಣೆ ಮಾಡಿದ್ದಾರೆ.