ಕಲುಷಿತ ಮಣ್ಣಿನ ಫಲವತ್ತತೆಗೆ ಬ್ಯಾಕ್ಟೀರಿಯಾ ಕಾಕ್ಟೈಲ್ ಮದ್ದು, ಮಣ್ಣು ಮಾಲಿನ್ಯನಾಶಕ ಅಭಿವೃದ್ಧಿಪಡಿಸಿದ ಐಐಟಿ ಬಾಂಬೆ; 6 ಮುಖ್ಯ ಅಂಶಗಳು
ಕಲುಷಿತ ಮಣ್ಣು ಕೃಷಿಕರಿಗೆ ಬಹುದೊಡ್ಡ ಸವಾಲು. ಇದು ಕೃಷಿ ಇಳುವರಿಗೆ ದೊಡ್ಡ ಹೊಡೆತ ನೀಡುವಂಥದ್ದು. ಇದನ್ನು ಗಮನದಲ್ಲಿಟ್ಟುಕೊಂಡು ಐಐಟಿ ಬಾಂಬೆಯ ಸಂಶೋಧಕರು ಮಣ್ಣು ಮಾಲಿನ್ಯನಾಶಕ ಬ್ಯಾಕ್ಟೀರಿಯಾ ಕಾಕ್ಟೈಲ್ ಅನ್ನು ಅಭಿವೃದ್ಧಿಪಡಿಸಿದ್ದು, ಕೃಷಿಕರ ಗಮನಸೆಳೆದಿದೆ. ಕಲುಷಿತ ಮಣ್ಣಿನ ಫಲವತ್ತತೆಗೆ ಬ್ಯಾಕ್ಟೀರಿಯಾ ಕಾಕ್ಟೈಲ್ ಮದ್ದು ಹೇಗೆ- ಇಲ್ಲಿದೆ ವಿವರ
ಕೃಷಿಕರು ಎದುರಿಸುವ ದೊಡ್ಡ ಸವಾಲುಗಳ ಪೈಕಿ ಮಲಿನ ಅಥವಾ ಕಲುಷಿತ ಮಣ್ಣು. ಬೆಳೆ ಹಾನಿ, ಫಸಲು ಅಥವಾ ಇಳುವರಿ ಕಡಿಮೆಯಾಗುವುದಕ್ಕೆ ಇದೂ ಒಂದು ಮುಖ್ಯಕಾರಣ. ಹೀಗಾಗಿ ಮಣ್ಣು ಮಾಲಿನ್ಯ ನಾಶ ಮಾಡಲು ಕೃಷಿಕರು ಹಲವು ರೀತಿಯ ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಮಣ್ಣು ಮಾಲಿನ್ಯದ ಮೂಲ ಅರಿಯಬೇಕಾದರೆ ಮಣ್ಣು ಪರೀಕ್ಷೆ ಮಾಡಿಸಬೇಕು. ನಂತರ ಸಾಂಪ್ರದಾಯಿಕ ವಿಧಾನ ಅನುಸರಿಸಬೇಕು. ಆದರೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಯ ಸಂಶೋಧಕರ ಪ್ರಯೋಗ ಈಗ ಕೃಷಿಕರ ಗಮನಸೆಳೆದಿದೆ. ಇದು ಮಣ್ಣಿನಲ್ಲಿರುವ ವಿಷಕಾರಿ, ಮಾಲಿನ್ಯಕಾರಕಗಳನ್ನು ತೊಡೆದುಹಾಕಲು ಮತ್ತು ಉಪಯುಕ್ತ ಪೋಷಕಾಂಶಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಪ್ರತಿಪಾದಿಸಿದ್ಧಾರೆ.
ಕಲುಷಿತ ಮಣ್ಣಿಗೆ ಬ್ಯಾಕ್ಟೀರಿಯಾ ಕಾಕ್ಟೈಲ್ ಮದ್ದು
ಎನ್ವಿರಾನ್ಮೆಂಟಲ್ ಟೆಕ್ನಾಲಜಿ ಮತ್ತು ಇನ್ನೋವೇಶನ್ ಜರ್ನಲ್ನಲ್ಲಿ ಇತ್ತೀಚೆಗೆ ಪ್ರಕಟವಾದ ಅಧ್ಯಯನ ಪ್ರಕಾರ, ಮಣ್ಣು ಮಾಲಿನ್ಯನಾಶಕ ಬ್ಯಾಕ್ಟೀರಿಯಾ ಕಾಕ್ಟೈಲ್ ಅನ್ನು ಐಐಟಿ ಬಾಂಬೆಯ ಸಂಶೋಧಕರು ಅಭಿವೃದ್ಧಿಪಡಿಸಿದ್ದು ಅದರ ಪ್ರಯೋಗ ಮತ್ತು ಫಲಿತಾಂಶದ ವಿವರವನ್ನು ಜಗತ್ತಿಗೆ ಬಹಿರಂಗ ಪಡಿಸಿದ್ದಾರೆ. ಇದರಲ್ಲಿ ಗಮನಸೆಳೆದ ಅಂಶಗಳಿವು.
1) ಪ್ರಸ್ತುತ ಕೃಷಿ ಉದ್ಯಮದ ಪ್ರಮುಖ ಸಮಸ್ಯೆಗಳಲ್ಲಿ ಕಲುಷಿತ ಮಣ್ಣು ಒಂದು. ಮಣ್ಣಿನ ಫಲತ್ತತೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕೆಡಿಸುವಂತಹ ಸಮಸ್ಯೆ ಇದು. ಆರೊಮ್ಯಾಟಿಕ್ ಸಂಯುಕ್ತಗಳು (ಬೆಂಜೀನ್ (ಪೆಟ್ರೋಲಿಯಂನ ನೈಸರ್ಗಿಕ ಘಟಕವಾಗಿದ್ದು ರಸಾಯನ ಶಾಸ್ತ್ರದಲ್ಲಿ C6H6 ಸಂಕೇತ ಹೊಂದಿದೆ) ನಂತಹ ಉಂಗುರ ರಚನೆಗಳನ್ನು ಹೊಂದಿರುವ ಸಾವಯವ ಸಂಯುಕ್ತಗಳು) ಮಣ್ಣಿನ ಪೋಷಕಾಂಶಗಳ ಸವಕಳಿಗೆ ಕಾರಣವಾಗುತ್ತವೆ.
2) ಸಂಶೋಧಕರು ತಮ್ಮ ಸಂಶೋಧನೆಯಲ್ಲಿ, ಮಣ್ಣಿನಿಂದ ಸಾವಯವ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ಸಂಶೋಧಕರು ವಿಶೇಷ ಬ್ಯಾಕ್ಟೀರಿಯಾದ ಜಾತಿಗಳನ್ನು (ಸ್ಯೂಡೋಮೊನಾಸ್ ಮತ್ತು ಅಸಿನೆಟೊಬ್ಯಾಕ್ಟರ್) ಬಳಸಿದ್ದಾರೆ.
3) ಸ್ಯೂಡೋಮೊನಾಸ್ ಮತ್ತು ಅಸಿನೆಟೊಬ್ಯಾಕ್ಟರ್ ಜಾತಿಯ ಬ್ಯಾಕ್ಟೀರಿಯಾಗಳು ರಂಜಕ ಮತ್ತು ಪೊಟಾಷಿಯಮ್ನಂತಹ ಪೋಷಕಾಂಶಗಳನ್ನು ಕರಗುವ ರೂಪಗಳಾಗಿ ಪರಿವರ್ತಿಸುತ್ತವೆ, ಅವು ಸಸ್ಯಗಳಿಗೆ ಸುಲಭವಾಗಿ ಲಭ್ಯವಿರುತ್ತವೆ.
4) ಈ ಬ್ಯಾಕ್ಟೀರಿಯಾಗಳು ಸಸ್ಯಗಳ ಬೆಳವಣಿಗೆಯ ಹಾರ್ಮೋನುಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಹಾನಿಕಾರಕ ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಸಸ್ಯಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ.
5) ಈ ಬ್ಯಾಕ್ಟೀರಿಯಾಗಳು ಇಂಡೋಲ್ ಅಸಿಟಿಕ್ ಆಮ್ಲವನ್ನು ಉತ್ಪಾದಿಸುತ್ತವೆ, ಇದು ಸಸ್ಯದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಮಣ್ಣನ್ನು ಶುಚಿಗೊಳಿಸುವುದರ ಹೊರತಾಗಿ, ಈ ಬ್ಯಾಕ್ಟೀರಿಯಾಗಳು ಫಲವತ್ತತೆಯನ್ನು ಹೆಚ್ಚಿಸುತ್ತವೆ ಮತ್ತು ಸಸ್ಯಗಳನ್ನು ಆರೋಗ್ಯಕರ ಮತ್ತು ಬಲಶಾಲಿಯಾಗಿ ಮಾಡುತ್ತವೆ.
6) ಈ ಮಿಶ್ರಣವು ಬೆಳೆಗಳ ಬೆಳವಣಿಗೆ ಮತ್ತು ಇಳುವರಿಯನ್ನು ಹೆಚ್ಚಿಸುತ್ತದೆ. ಸ್ಯೂಡೋಮೊನಾಸ್ ಮತ್ತು ಅಸಿನೆಟೊಬ್ಯಾಕ್ಟರ್ ಮಿಶ್ರಣವನ್ನು ಗೋಧಿ, ಬೆಂಡೆಕಾಯಿ, ಪಾಲಕ್, ಮೆಂತ್ಯ ಮುಂತಾದ ಬೆಳೆಗಳಿಗೆ ಬಳಸಿದಾಗ, ಉತ್ತಮ ಫಲಿತಾಂಶಗಳು ಬಂದಿವೆ. ಮಣ್ಣಿನ ಆರೋಗ್ಯ ಸುಧಾರಿಸಿ, ಫಲವತ್ತತೆಯೂ ಹೆಚ್ಚಾಗಿರುವುದು ಇದರಿಂದ ಮನಗಾಣಬಹುದು.
ಮಣ್ಣು ಮಾಲಿನ್ಯನಾಶಕ ಬ್ಯಾಕ್ಟೀರಿಯಾವೇ ಇದರ ಕೇಂದ್ರಬಿಂದು
"ಈ ಬ್ಯಾಕ್ಟೀರಿಯಾಗಳನ್ನು ಕಲುಷಿತ ಮಣ್ಣಿಗೆ ಸೇರಿಸಿದರೆ ಸಾಕು. ಅವು ಮಾಲಿನ್ಯಕಾರಕಗಳನ್ನು ತಿನ್ನುತ್ತವೆ. ಅವುಗಳನ್ನು ಸರಳವಾದ, ನಿರುಪದ್ರವ, ವಿಷಕಾರಿಯಲ್ಲದ ಸಂಯುಕ್ತಗಳಾಗಿ ವಿಭಜಿಸುತ್ತವೆ. ಈ ರೀತಿಯಾಗಿ, ಅವು ಕಲುಷಿತ ಪರಿಸರದ ನೈಸರ್ಗಿಕ ಸ್ವಚ್ಛತಾಕರ್ಮಿಗಳಾಗಿ ಕಾರ್ಯನಿರ್ವಹಿಸುತ್ತವೆ. ಆ ಮೂಲಕವಾಗಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದಲ್ಲದೆ, ಮಣ್ಣಿನ ಆರೋಗ್ಯವನ್ನು ಕಾಪಾಡುತ್ತವೆ," ಎಂದು ಐಐಟಿ ಬಾಂಬೆಯ ಜೈವಿಕ ವಿಜ್ಞಾನ ಮತ್ತು ಜೈವಿಕ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರಶಾಂತ್ ಫಾಲೆ ವಿವರಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಪಿಎಚ್ಡಿಗಾಗಿ ಸಂಶೋಧನೆ ನಡೆಸಿದ ಸಂದೇಶ್ ಪಾಪಡೆ ತಮ್ಮ ಪ್ರಬಂಧದಲ್ಲಿ ಈ ಎಲ್ಲ ವಿವರ ನೀಡಿದ್ದಾರೆ.
ಇದಕ್ಕೆ ಸಂಬಂಧಿಸಿದ ಲೇಖನವನ್ನು ಮಂಜೀರ ಗೌರವರಂ ಬರೆದಿದ್ದು ಅದು ಐಐಟಿ ಬಾಂಬೆಯ ವೆಬ್ಸೈಟ್ನಲ್ಲಿದೆ. ಹೆಚ್ಚಿನ ವಿವರಕ್ಕೆ “ಬ್ಯಾಕ್ಟೀರಿಯಲ್ ಕಾಕ್ಟೈಲ್ ಫಾರ್ ಫಾರ್ಮ್ ಸಾಯಿಲ್ ಟು ಕ್ಲೀನ್ ಅಪ್ ಪೊಲ್ಯುಟಂಟ್ಸ್ ಆಂಡ್ ಪೆಸ್ಟಿಸೈಡ್ಸ್ ಆಂಡ್ ಎನ್ಹ್ಯಾನ್ಸ್ ಕ್ರಾಪ್ ಈಲ್ಡ್” ಎಂಬ ಲೇಖನವನ್ನು ಗಮನಿಸಬಹುದು. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.