L K Advani Health: ಬಿಜೆಪಿಯ ಹಿರಿಯ ನಾಯಕ ಎಲ್ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿತಿ ಸ್ಥಿರ
BJP leader L K Advani Health Updates: ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಗುರುವಾರ ಮುಂಜಾನೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್ ದೆಹಲಿ) ತಿಳಿಸಿದೆ. ಎಲ್ಕೆ ಅಡ್ವಾಣಿ ಅವರಿಗೆ ಯುರೊಲಜಿ ವಿಭಾಗದ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಬೆಂಗಳೂರು: ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ನಿನ್ನೆ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್ ದೆಹಲಿ) ತಿಳಿಸಿದೆ. 96 ವರ್ಷ ವಯಸ್ಸಿನ ಎಲ್ಕೆ ಅಡ್ವಾಣಿಯವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ವೈದ್ಯಕೀಯ ನಿಗಾದಲ್ಲಿರಿಸಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ. ಮಾಜಿ ಉಪಪ್ರಧಾನಿ ಅವರನ್ನು ಏಮ್ಸ್ನ ಹಳೆಯ ಖಾಸಗಿ ವಾರ್ಡ್ನಲ್ಲಿ ದಾಖಲಿಸಲಾಗಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಎಲ್ಕೆ ಅಡ್ವಾಣಿ ಅವರಿಗೆ ಯುರೊಲಜಿ ವಿಭಾಗದ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಎಲ್ಕೆ ಅಡ್ವಾಣಿಯವರ ಆರೋಗ್ಯ ಸ್ಥಿತಿ ಹೇಗಿದೆ?
"ಎಲ್ಕೆ ಅಡ್ವಾಣಿಯವರು ಏಮ್ಸ್ ದೆಹಲಿಗೆ ದಾಖಲಾಗಿದ್ದಾರೆ. ಇವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ವೈದ್ಯಕೀಯ ನಿಗಾದಲ್ಲಿದ್ದಾರೆ" ಎಂದು ಏಮ್ಸ್ ತಿಳಿಸಿದೆ. ಇವರ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ವಿವರವನ್ನು ಆಸ್ಪತ್ರೆ ನೀಡಿಲ್ಲ. ಮೂಲಗಳ ಪ್ರಕಾರ ಬುಧವಾರ ರಾತ್ರಿಯೇ ಎಲ್ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲಾಗಿದ್ದು, ವಯೋ ಸಹಜ ಆರೋಗ್ಯ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೆರಿಯಾಟ್ರಿಕ್ ವಿಭಾಗದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಲ್ಕೆ ಅಡ್ವಾಣಿ 1927ರ ನವೆಂಬರ್ 8ರಂದು ಕರಾಚಿ (ಈಗಿನ ಪಾಕಿಸ್ತಾನ)ಯಲ್ಲಿ ಜನಿಸಿದರು. 1942ರಲ್ಲಿ ಆರ್ಆರ್ಎಸ್ಗೆ ಸ್ವಯಂ ಸೇವಕರಾಗಿ ಸೇರಿದರು. ಭಾರತೀಯ ರಾಜಕಾರಣದಲ್ಲಿ ಎಲ್ಕೆ ಅಡ್ವಾಣಿ ಮಹತ್ವದ ರಾಜಕಾರಣಿಯಾಗಿ ಹೆಸರು ಮಾಡಿದ್ದಾರೆ. 2009ರ ಕೇಂದ್ರ ಲೋಕ ಸಭಾ ಚುನಾವಣೆಯಲ್ಲಿ ಎಲ್ಕೆ ಅಡ್ವಾಣಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಿದ್ದರು. ಆದರೆ, 2009ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಅದರ ಮೈತ್ರಿಕೂಟವು ಗೆಲುವು ಪಡೆಯಿತು. ಇದರಿಂದಾಗಿ ಎಲ್ಕೆ ಅಡ್ವಾಣಿ ಅವರು ಸುಷ್ಮಾ ಸ್ವರಾಜ್ಗೆ ವಿರೋಧ ಪಕ್ಷದ ನಾಯಕತ್ವವನ್ನು ಬಿಟ್ಟುಕೊಡಬೇಕಾಯಿತು.
ಎಲ್ಕೆ ಅಡ್ವಾಣಿ ಅವರು ಜೂನ್ 2002ರಿಂದ ಮೇ 2004ರವೆಎಗೆ ಭಾರತದ ಉಪ ಪ್ರಧಾನ ಮಂತ್ರಿಯಾಗಿದ್ದರು. 1999ರ ಅಕ್ಟೋಬರ್ ತಿಂಗಳಿನಿಂದ 2004ರ ಮೇ ತಿಂಗಳವರೆಗೆ ಕೇಂದ್ರ ಗೃಹ ಸಚಿವರಾಗಿದ್ದರು. ಹಲವು ಬಾರಿ ಬಿಜೆಪಿ ರಾಷ್ಟ್ರಧ್ಯಕ್ಷರಾಗಿದ್ದರು. 1986ರಿಂದ 1990ರವರೆಗೆ, 1993ರಿಂದ 1998ರವರೆಗೆ ಮತ್ತು 2004ರಿಂದ 2005ರವರೆಗೆ ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಮಾಜಿ ಡೆಪ್ಯುಟಿ ಪ್ರಧಾನ ಮಂತ್ರಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ದೊರಕಿ ಕೇವಲ ಮೂರು ತಿಂಗಳಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯ ನಿವಾಸಕ್ಕೆ ಆಗಮಿಸಿ ಭಾರತ ರತ್ನ ಪ್ರದಾನ ಮಾಡಿದ್ದರು.

ವಿಭಾಗ