Breaking News: ಜಾರ್ಖಂಡ್ನಲ್ಲಿ ಯಶವಂತಪುರ ರೈಲು ಡಿಕ್ಕಿ, ಇಬ್ಬರು ಸಾವು, ಹಲವರಿಗೆ ಗಾಯ
ಜಾರ್ಖಂಡ್ ರಾಜ್ಯದಲ್ಲಿ ರೈಲು ಅವಘಡ ಸಂಭವಿಸಿ ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿರುವ ಮಾಹಿತಿ ಲಭಿಸಿದೆ.
ರಾಂಚಿ: ಜಾರ್ಖಂಡ್ನಲ್ಲಿ ಚಲಿಸುತ್ತಿದ್ದ ರೈಲು ಡಿಕ್ಕಿ ಹೊಡೆದು ಕನಿಷ್ಠಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಜಾರ್ಖಂಡ್ನ ಜಮತರ ಎಂಬಲ್ಲಿ ಬುಧವಾರ ಸಂಜೆ ದುರ್ಘಟನೆ ಸಂಭವಿಸಿದೆ. ಆದರೆ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈಗಾಗಲೇ ರೈಲ್ವೆ ಅಧಿಕಾರಿಗಳು, ವೈದ್ಯಕೀಯ ತಂಡಗಳು ಸ್ಥಳಕ್ಕೆ ಧಾವಿಸಿವೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಜಾರ್ಖಂಡ್ನ ಜಮತರಾ ಕರ್ಮಟಂಡ್ನ ನಡುವಿನ ಕಾಲ ಝರಿಯಾ ಎಂಬಲ್ಲಿ ಘಟನೆ ನಡೆದಿದೆ.
ಭಾಗಲಪುರ್ನಿಂದ ಯಶವಂತಪುರಕ್ಕೆ ಹೊರಟಿದ್ದ ಆಂಗಾ ಎಕ್ಸ್ಪ್ರೆಸ್ ತಾಂತ್ರಿಕ ಕಾರಣದಿಂದ ನಿಂತಿತ್ತು. ಮತ್ತೊಂದು ಪಾಸೆಂಜರ್ ರೈಲು ಇನ್ನೇನು ರೈಲು ನಿಲ್ದಾಣದತ್ತ ಬರುತ್ತಿತ್ತು. ಈ ವೇಳೆ ರೈಲಿನಲ್ಲಿ ಬೆಂಕಿ ಬಿದ್ದಿದೆ ಎನ್ನುವ ಸುದ್ದಿ ಹರಡಿ ಪ್ರಯಾಣಿರು ರೈಲಿನಿಂದಲೇ ಹಾರಿದ್ದಾರೆ. ಅಲ್ಲದೇ ನಿಲ್ದಾಣದಲ್ಲಿ ನಿಂತಿದ್ದವರೂ ಟ್ರಾಕ್ನಿಂದ ಮತ್ತೊಂದು ಕಡೆ ಹೋಗಲು ಹಾರಿದ್ದಾರೆ. ಈ ವೇಳೆ ರೈಲು ಡಿಕ್ಕಿ ಹೊಡೆದು ಪ್ರಯಾಣಿಕರು ಮೃತಪಟ್ಟರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಕಾಲ ಝರಿಯಾ ಎನ್ನುವ ನಿಲ್ದಾಣದಲ್ಲಿ ರೈಲು ಹರಿದು ಪ್ರಯಾಣಿಕರು ಮೃತಪಟ್ಟಿದ್ದಾರೆ.ಸಾವಿನ ಸಂಖ್ಯೆ ಮೊದಲು ಎರಡು ಎನ್ನುವ ಮಾಹಿತಿ ಇತ್ತು. ಆನಂತರ ಈ ಸಂಖ್ಯೆ ಏರಿಕೆಯಾಗಿದೆ. ಈಗಾಗಲೇ ವೈದ್ಯಕೀಯ ತಂಡ, ಆಂಬುಲೆನ್ಸ್ಗಳನ್ನು ಕಳುಹಿಸಲಾಗಿದ್ದು. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಕಾರಣ ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ ಎಂದು ಜಮತರಾ ಜಿಲ್ಲಾಧಿಕಾರಿ ಶಶಿಭೂಷಣ್ ಮೆಹ್ರಾ ಎಎನ್ಐಗೆ ಮಾಹಿತಿ ನೀಡಿದ್ದಾರೆ.
ದುರ್ಘಟನೆಯಲ್ಲಿ ಮೃತಪಟ್ಟ ಇಬ್ಬರ ಮಾಹಿತಿ ಲಭ್ಯವಾಗಿದೆ. ಒಬ್ಬಾತ ಮನೀಶ್ ಕುಮಾರ್. ಆತನ ಆಧಾರ್ ಕಾರ್ಡ್ ಸಮೀಪದಲ್ಲಿಯೇ ದೊರೆತಿದೆ. ಮತ್ತೊಬ್ಬ ಪ್ರಯಾಣಿಕ ಸಿಖಂದರ್ ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ.
ಪೊಲೀಸ್, ರೈಲ್ವೆ ಹಾಗೂ ಸ್ಥಳೀಯಾಡಳಿತದ ಅಧಿಕಾರಿಗಳು, ಸಿಬ್ಬಂದಿ ರಕ್ಷಣಾ ಕಾರ್ಯವನ್ನು ಮುಂದುವರೆಸಿದ್ದರು.
ಘಟನೆ ಕುರಿತು ತನಿಖೆಗೆ ಭಾರತೀಯ ರೈಲ್ವೆ ಮೂವರು ಸದಸ್ಯರ ಸಮಿತಿ ರಚಿಸಲಾಗಿದೆ.