ಪಾಕ್‌ಗೆ ಬುದ್ಧಿಕಲಿಸಬೇಕೆಂಬ ಆಸೆ ಏನೇ ಇದ್ದರೂ, ಯುದ್ಧೋನ್ಮಾದದ ಮಧ್ಯೆ ವಾಸ್ತವ ಮರೆಯದಿರೋಣ; ಪತ್ರಕರ್ತ ರಾಜೀವ ಹೆಗಡೆ ಬರಹ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪಾಕ್‌ಗೆ ಬುದ್ಧಿಕಲಿಸಬೇಕೆಂಬ ಆಸೆ ಏನೇ ಇದ್ದರೂ, ಯುದ್ಧೋನ್ಮಾದದ ಮಧ್ಯೆ ವಾಸ್ತವ ಮರೆಯದಿರೋಣ; ಪತ್ರಕರ್ತ ರಾಜೀವ ಹೆಗಡೆ ಬರಹ

ಪಾಕ್‌ಗೆ ಬುದ್ಧಿಕಲಿಸಬೇಕೆಂಬ ಆಸೆ ಏನೇ ಇದ್ದರೂ, ಯುದ್ಧೋನ್ಮಾದದ ಮಧ್ಯೆ ವಾಸ್ತವ ಮರೆಯದಿರೋಣ; ಪತ್ರಕರ್ತ ರಾಜೀವ ಹೆಗಡೆ ಬರಹ

ಪಹಲ್ಗಾಮ್ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಸದ್ಯ ಬಿಕ್ಕಿಟ್ಟಿನ ಪರಿಸ್ಥಿತಿ ಉಲ್ಬಣವಾಗುತ್ತಿದೆ. ಅನೇಕ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಅವಾಸ್ತವಿಕ ನರೇಟಿವ್ಸ್ ಹರಡಲಾಗುತ್ತಿದೆ. ಇಂತಹ ಯುದ್ಧೋನ್ಮಾದದ ಮಧ್ಯೆ ವಾಸ್ತವವನ್ನು ಮರೆಯದಿರೋಣ ಎಂದು ಸಾಮಾಜಿಕ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ ಪತ್ರಕರ್ತ ರಾಜೀವ ಹೆಗಡೆ.

ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿಯ ಬಳಿಕ ಶ್ರೀನಗರದಲ್ಲಿ ಭದ್ರತಾ ಪಡೆಗಳ ಬಿಗಿಪಹರೆಯ ಚಿತ್ರವನ್ನು ಇಲ್ಲಿ ಸಾಂಕೇತಿಕವಾಗಿ ಬಳಸಲಾಗಿದೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿಯ ಬಳಿಕ ಶ್ರೀನಗರದಲ್ಲಿ ಭದ್ರತಾ ಪಡೆಗಳ ಬಿಗಿಪಹರೆಯ ಚಿತ್ರವನ್ನು ಇಲ್ಲಿ ಸಾಂಕೇತಿಕವಾಗಿ ಬಳಸಲಾಗಿದೆ. (Photo by Tauseef MUSTAFA / AFP)

ಜಮ್ಮು- ಕಾಶ್ಮೀರದ ಪಹಲ್ಗಾಮ್‌ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಬಿಕ್ಕಟ್ಟು ಹೆಚ್ಚಾಗಿದೆ. ಈ ನಡುವೆ, ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು ಎಂಬ ಒತ್ತಡ ಭಾರತ ಸರ್ಕಾರದ ಮೇಲೆ ಹೆಚ್ಚಾಗಿದೆ. ಬಹುತೇಕ ಎಲ್ಲ ಭಾರತೀಯರೂ ಅದನ್ನೇ ಬಯಸುತ್ತಿದ್ದು, ಸೋಷಿಯಲ್ ಮೀಡಿಯಾಗಳಲ್ಲೂ ಈ ಬಗ್ಗೆಯೇ ಕಾಮೆಂಟ್ ಮಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಪತ್ರಕರ್ತ ರಾಜೀವ ಹೆಗಡೆ ಅವರು, ಪಾಕಿಸ್ತಾನಕ್ಕೆ ಈ ಬಾರಿ ಬುದ್ಧಿ ಕಲಿಸಲೇಬೇಕೆಂದು ನನ್ನನ್ನು ಸೇರಿಸಿ, ಬಹುತೇಕ ಭಾರತೀಯರು ಬಯಸುತ್ತಿದ್ದಾರೆ. ಯುದ್ಧೋನ್ಮಾದದ ಮಧ್ಯೆ ವಾಸ್ತವವನ್ನು ಮರೆಯದಿರೋಣ! ಎಂದು ಎಚ್ಚರಿಸಿದ್ದಾರೆ. ಅವರ ಬರಹದ ಪೂರ್ಣಪಾಠ ಇಲ್ಲಿದೆ.

ಯುದ್ಧೋನ್ಮಾದದ ಮಧ್ಯೆ ವಾಸ್ತವವನ್ನು ಮರೆಯದಿರೋಣ!

ಕಳೆದ ನಾಲ್ಕೈದು ದಿನದಿಂದ ಭಾರತದೆಲ್ಲೆಡೆ ದೇಶಾಭಿಮಾನ, ಆಕ್ರೋಶದ ಜತೆಗೆ ಯುದ್ಧೋನ್ಮಾದವು ತಾರಕಕ್ಕೇರಿದೆ. ಪಾಕಿಸ್ತಾನಕ್ಕೆ ಈ ಬಾರಿ ಬುದ್ಧಿ ಕಲಿಸಲೇಬೇಕೆಂದು ನನ್ನನ್ನು ಸೇರಿಸಿ, ಬಹುತೇಕ ಭಾರತೀಯರು ಬಯಸುತ್ತಿದ್ದಾರೆ. ನಮ್ಮ ಮಾಧ್ಯಮಗಳಂತು ಈಗಾಗಲೇ ಕರಾಚಿ ಆಸುಪಾಸಿನಲ್ಲಿ ಎಷ್ಟು ಬಾಂಬ್‌ ಬೀಳಲಿದೆ ಎನ್ನುವ ಲೆಕ್ಕಾಚಾರ ಆರಂಭಿಸಿವೆ.

ಆದರೆ ಇವೆಲ್ಲ ಅವಾಸ್ತವಿಕ ಲೆಕ್ಕಗಳ ಮಧ್ಯೆ ಒಂದಿಷ್ಟು ವಿಷಯವನ್ನು ನಾವು ಮರೆಯಕೂಡದು. ಹಾಗೆಯೇ ಭವಿಷ್ಯದಲ್ಲಿ ಮಾತನಾಡುವಾಗ ಇಂದು ನಾವು ಮಾಡುತ್ತಿರುವ ಯುದ್ಧೋನ್ಮಾದದ ಮಾತುಗಳಿಗೆ ಬದ್ಧವಾಗಿರಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಬರಬಹುದಾದ ಕಷ್ಟಗಳಿಗೆ ಸರ್ಕಾರವನ್ನು ಮಾತ್ರ ಹೊಣೆಯನ್ನಾಗಿಸಿ ಕೈತೊಳೆದುಕೊಳ್ಳಲು ಸಾಧ್ಯವಿಲ್ಲ.

ಪಾಕಿಸ್ತಾನಕ್ಕೆ ಈ ಬಾರಿ ಬುದ್ಧಿ ಕಲಿಸಲೇಬೇಕು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಇಂದು ಭಾರತದ ಬಹುತೇಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಗಳು ತುಂಬಾ ಕ್ಲೀಷೆ ಎನಿಸುತ್ತಿವೆ. ನಾವು ಸಣ್ಣವರಿದ್ದಾಗ ಕಾರ್ಗಿಲ್‌ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಆಲೋಚಿಸುತ್ತಿದ್ದಂತೆಯೇ, ಬಾಲಿಶವಾದ ಮಾತುಗಳು ಕೇಳಿಸುತ್ತಿವೆ. ಪಬ್‌-ಜಿ ವಿಡಿಯೋ ಗೇಮ್‌ ರೀತಿಯಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ, ಕರಾಚಿ, ಲಾಹೋರ್‌, ಇಸ್ಲಾಮಾಬಾದ್‌ಗೆ ಬಾಂಬ್‌ ಹಾಕಿ, ಪಾಕಿಸ್ತಾನವನ್ನು ನಾಶ ಮಾಡಬಹುದು ಎನ್ನುವ ರೀತಿಯ ಅವಾಸ್ತವಿಕ ನರೇಟಿವ್‌ಗಳನ್ನು ಮಾಧ್ಯಮಗಳು ಹುಟ್ಟು ಹಾಕುತ್ತಿವೆ.

ಅವಾಸ್ತವಿಕ ನರೇಟಿವ್‌ಗಳನ್ನು ಹುಟ್ಟು ಹಾಕುತ್ತಿವೆ ಮಾಧ್ಯಮಗಳು

ಯುದ್ಧ ಅಥವಾ ಸೇನಾ ಕಾರ್ಯಾಚರಣೆ ಎನ್ನುವುದು ಪ್ರೈಮ್‌ ಟೈಮ್‌ನ ಚರ್ಚೆಗಳಷ್ಟು ಸುಲಭವಾಗಿದ್ದರೆ, ನರೇಂದ್ರ ಮೋದಿಯಂಥ ಪ್ರಧಾನಿಯು ಜಗತ್ತಿನ ಭೂಪಟದಲ್ಲಿ ಪಾಕಿಸ್ತಾನ ಎನ್ನುವ ದೇಶವಿಲ್ಲದಂತೆ ಮಾಡುತ್ತಿದ್ದರು. ನಾವು ಅತ್ಯಂತ ಗೌರವಿಸುವ ಹಿರಿಯ ಪತ್ರಕರ್ತರು ಕೂಡ ಇಷ್ಟೊಂದು ಅತಾರ್ಕಿಕವಾಗಿ ಮಾತನಾಡುವುದನ್ನು ನೋಡಿದಾಗ ಬೇಸರ ಎನಿಸುತ್ತದೆ. ಸಾಮಾನ್ಯ ಜನರು ಆ ರೀತಿ ಮಾತನಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಮಾಧ್ಯಮ ಪ್ರತಿನಿಧಿಗಳು ಕೂಡ ಜನ ಸಾಮಾನ್ಯರ ಹಂತಕ್ಕಿಳಿದು ತೀರಾ ಭಾವನಾತ್ಮಕವಾಗಿ ಮಾತನಾಡಲು ಆರಂಭಿಸಿದರೆ, ಇದರ ಪರಿಣಾಮ ಕೆಟ್ಟದಾಗಿರುತ್ತದೆ.

ಈ ದಾಟಿಯಲ್ಲಿ ಮಾತನಾಡುವುದು ಕೂಡ ದೇಶದ್ರೋಹ ಎನ್ನುವ ಮಟ್ಟಿಗೆ ಕೆಲವರು ಮಾತನಾಡುತ್ತಿದ್ದಾರೆ. ಆದರೆ ಇಂದಿನ ಕಾಲದಲ್ಲಿ ರಣರಂಗಕ್ಕೆ ಇಳಿಯುವುದು ಸುಲಭವಲ್ಲ ಎನ್ನುವುದನ್ನು ನಾವು ಅರ್ಥೈಸಿಕೊಳ್ಳಲೇಬೇಕು. ಇದಕ್ಕೆ ಪೂರಕವಾಗಿ ಒಂದಿಷ್ಟು ವಿಷಯವನ್ನು ನಿಮ್ಮ ಮುಂದೆ ಚರ್ಚೆ ಮಾಡಲು ಬಯಸುತ್ತೇನೆ.

ರಷ್ಯಾ - ಉಕ್ರೇನ್ ಬಿಕ್ಕಟ್ಟಿನ ಕಡೆಗೊಮ್ಮೆ ಗಮನಿಸಿ

ಮೂರು ವರ್ಷಗಳ ಹಿಂದೆ ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿತು. ರಷ್ಯಾದ ಸೇನೆಯ ಮುಂದೆ ಉಕ್ರೇನ್‌ ತೃಣ ಮಾತ್ರಕ್ಕೆ ಸಮಾನ. ಉಕ್ರೇನ್‌ ಬಳಿ ಪರಮಾಣು ಬಾಂಬ್‌ ಇಲ್ಲ, ಸ್ವಂತ ಬಾಲಿಸ್ಟಿಕ್‌ ಕ್ಷಿಪಣಿಯಿಲ್ಲ. ಅಮೆರಿಕ, ಯುರೋಪ್‌ ಕೈ ಎತ್ತಿದರೆ ತನ್ನ ನೆಲವನ್ನು ರಕ್ಷಿಸಿಕೊಳ್ಳುವ ತಾಕತ್ತನ್ನು ಕೂಡ ಉಕ್ರೇನ್‌ ಹೊಂದಿಲ್ಲ. ಇಷ್ಟಾಗಿಯೂ ಸಾವಿರ ದಿನ ಕಳೆದರೂ ರಷ್ಯಾ-ಉಕ್ರೇನ್‌ ಸಂಘರ್ಷದಲ್ಲಿ ಹಾವೂ ಸಾಯುತ್ತಿಲ್ಲ, ಕೋಲೂ ಮುರಿಯುತ್ತಿಲ್ಲ. ಈ ಸಾವಿನ ಮನೆಯಲ್ಲಿ ವಿಶ್ವದ ಅದೆಷ್ಟೋ ದೊಡ್ಡ ದೇಶಗಳು ಬೆಂಕಿ ಕಾಯಿಸುತ್ತಿವೆ. ಇಸ್ರೇಲ್‌ ಹಾಗೂ ಮಧ್ಯ ಪ್ರಾಚ್ಯ ದೇಶಗಳಲ್ಲಿನ ಸಂಘರ್ಷದ ಕಥೆಯೂ ಭಿನ್ನವಾಗಿಲ್ಲ. ಆ ಕಡೆ ಯುದ್ಧವೂ ಮುಗಿಯುವುದಿಲ್ಲ, ಇತ್ತ ಜನರ ಗೋಳಿಗೂ ಕೊನೆ ಇರುವುದಿಲ್ಲ.

ಹೀಗಿರುವಾಗ ನಮ್ಮ ಯುದ್ಧೋನ್ಮಾದದಂತೆ ಸರ್ಕಾರ ಅಥವಾ ನರೇಂದ್ರ ಮೋದಿ ಆಲೋಚಿಸಿದರೆ ಅಪಾಯವು ನಮ್ಮ ಮನೆ ಬಾಗಿಲಿಗೆ ಬರುತ್ತದೆ. ಏಕೆಂದರೆ ಪಾಕಿಸ್ತಾನದಲ್ಲಿ ಅಧಿಕಾರದ ಕುರ್ಚಿಯಲ್ಲಿ ಕೂತವರು ಯುದ್ಧೋನ್ಮಾದ ತಾರಕದಲ್ಲಿದ್ದಾರೆ. ಅವರಿಗೆ ಯುದ್ಧವೇ ಉಸಿರು ಹಾಗೂ ಆಹಾರ. ನಮ್ಮ ದೇಶದ ಚುಕ್ಕಾಣಿ ಹಿಡಿದವರಿಗೆ ದೇಶದ ಜನರ ಹಸಿವನ್ನು ತಣಿಸುವ ಜವಾಬ್ದಾರಿಯಿದೆ. ಆದರೆ ಪಾಕ್‌ನಲ್ಲಿನ ಆಡಳಿತಶಾಹಿಗೆ ಅಂತಹ ಯಾವುದೇ ಹರ್ಕತ್ತಿಲ್ಲ. ಭಾರತದೊಂದಿಗೆ ಯುದ್ಧ ಮಾಡಿ, ಸೋತು ಸುಣ್ಣವಾಗಿ ಯಾವುದಾದರೊಂದು ದೇಶಕ್ಕೆ ಓಡಿ ಹೋಗುತ್ತಾರೆ. ಈ ಹಿಂದೆ ಯುದ್ಧ ಮಾಡಿ ಸೋತ ನಾಯಕರೆಲ್ಲ ಇದೇ ಕೆಲಸ ಮಾಡಿದ್ದಾರೆ. ಯುದ್ಧಕ್ಕೆ ಬೇಕಾದ ಸಾಮಗ್ರಿಗಳ ಖರೀದಿಯಲ್ಲಿ ದುಡ್ಡು ಮಾಡಿಕೊಂಡು ವಿದೇಶದಲ್ಲಿ ಮನೆ ಮಾಡಿಕೊಂಡು ಓಡಿ ಹೋಗುತ್ತಾರೆ. ಭಾರತದಲ್ಲಿ ಇಲ್ಲಿಯವರೆಗೆ ಯಾವೊಬ್ಬ ಜನನಾಯಕ ಅಥವಾ ಮಿಲಿಟರಿ ಮುಖ್ಯಸ್ಥರು ಇಂತಹ ದೇಶದ್ರೋಹದ ಕೆಲಸ ಮಾಡಿಲ್ಲ. ಅದುವೇ ಭಾರತ ಹಾಗೂ ಪಾಕಿಸ್ತಾನಕ್ಕಿರುವ ಜವಾಬ್ದಾರಿಯುತ ವ್ಯತ್ಯಾಸವಾಗಿದೆ.

ಏಕೆಂದರೆ ಪಾಕಿಸ್ತಾನವು ಒಂದು ಹಂತದಲ್ಲಿ ಉಕ್ರೇನ್‌ಗಿಂತ ಬಲಿಷ್ಠವಾಗಿದೆ. ಪಾಕಿಸ್ತಾನದ ಸರ್ಕಾರವೆಂದರೆ ಮಿಲಿಟರಿ. ಆ ದೇಶಕ್ಕೆ ಅನಿವಾರ್ಯವಾದರೆ ಇಡೀ ದೇಶವನ್ನು ಮಿಲಿಟರಿ ಸಾಮಗ್ರಿಗಳ ಖರೀದಿಗೆ ಹರಾಜಿಟ್ಟು, ಜನರನ್ನು ಹಸಿವಲ್ಲಿ ಸಾಯಿಸಲು ಹಿಂದೆ ಮುಂದೆ ನೋಡದ ನೀಚ ದೇಶವದು. ಇನ್ನೊಂದೆಡೆ ಪಾಕಿಸ್ತಾನವು ಪರಮಾಣು ಬಾಂಬ್‌ನ್ನು ಹೊಂದಿರುವ ದೇಶವಾಗಿದೆ. ಬಿಕಾರಿಯಾಗಿರುವ ಹಾಗೂ ದೇಶದ ನೆಲ ನಾಶವಾದರೂ ಸಮಸ್ಯೆಯಿಲ್ಲ ಎನ್ನುವ ಬಿಕ್ನಾಸಿ ದೇಶಕ್ಕೆ ಇನ್ನೊಂದು ರಾಷ್ಟ್ರವನ್ನು ಹಾಳು ಮಾಡುವುದರ ಬಗ್ಗೆ ಹಿಂದೆ ಮುಂದೆ ನೋಡುವುದಿಲ್ಲ. ತನ್ನ ದೇಶದ ಜನರನ್ನೇ ಲೆಕ್ಕಿಸದ ದೇಶವು, ಬೇರೆ ರಾಷ್ಟ್ರದ ಬಗ್ಗೆ ಕಿಂಚಿತ್‌ ಕೂಡ ಆಲೋಚಿಸುವುದಿಲ್ಲ.

ಹೀಗಾಗಿ ಇಂದು ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿರುವಂತೆ ಖಂಡಿತವಾಗಿಯೂ ಮೋದಿ ಕಾರ್ಯಾಚರಣೆ ಇರುವುದಿಲ್ಲ. ಇಂದು ರಣರಂಗದಲ್ಲಿನ ಯುದ್ಧಕ್ಕಿಂತ ರಾಜತಾಂತ್ರಿಕ ಸಂಘರ್ಷವೇ ದೊಡ್ಡದಾಗಿರುತ್ತದೆ. ಮೋದಿಯ ಮೊದಲ ಆದ್ಯತೆ ಇದುವೇ ಆಗಿರಬಹುದು. ನಿಜವಾದ ಸೈನ್ಯಗಳ ನಡುವಿನ ಯುದ್ಧವು ಖಂಡಿತವಾಗಿಯೂ ಕೊನೆಯ ಆಯ್ಕೆ ಆಗಿರುತ್ತದೆ. ಸರ್ಕಾರದಲ್ಲಿರುವರಿಗೆ ಜವಾಬ್ದಾರಿ ಹಾಗೂ ದೇಶದ ಬಗ್ಗೆ ಒಂದಿಷ್ಟು ಕಾಳಜಿಯಿದೆ ಎನ್ನುವ ನಂಬಿಕೆಯಿದೆ. ಅಲ್ಲಿಯವರೆಗೆ ನಾವೊಂದಿಷ್ಟು ತಾಳ್ಮೆ ಹಾಗೂ ಜವಾಬ್ದಾರಿಯಿಂದ ವರ್ತಿಸೋಣ. ಮೇಲೆ ಕೂತವರು ಜವಾಬ್ದಾರಿಯುತ ನಿರ್ಣಯ ಮಾಡಲಿ. ಅದರ ಬದಲಿಗೆ ಮಾಧ್ಯಮಗಳ ನರೇಟಿವ್‌ ನೋಡಿ, ಅದುವೇ ಸತ್ಯವೆಂದು ಕೊಂಡು, ನಾಳೆ ಸರ್ಕಾರದ ಕ್ರಮ ನೋಡಿ ಮೂಗು ಮುರಿಯುವ ಪರಿಸ್ಥಿತಿ ನಿರ್ಮಾಣವಾಗಬಹುದು.

ಡಿಜಿಟಲ್‌ ಸಂಯಮ ಅತಿಮುಖ್ಯ!

ವಿಶೇಷವಾಗಿ ವರ್ಷಕ್ಕೆ ನಾಲ್ಕೈದು ಚುನಾವಣೆ ನಡೆಯುವ ಹಾಗೂ ಜನರ ಅಭಿಪ್ರಾಯದ ಮೇಲೆ ಉಳಿಯುವ ಭಾರತದಂಥ ದೇಶಗಳಲ್ಲಿ ಜನಾಭಿಪ್ರಾಯವು ಪರಮಾಣು ಬಾಂಬ್‌ಗಿಂತ ದೊಡ್ಡ ಅಸ್ತ್ರವಾಗಿದೆ. ಯಾವುದ ಪ್ರಜಾಪ್ರಭುತ್ವದಲ್ಲಿ ಜನರ ಆಶಯಕ್ಕೆ ವಿರುದ್ಧವಾಗಿ ಹೋಗುವುದು ಕಷ್ಟಸಾಧ್ಯ. ಅದರಲ್ಲೂ ವಿಶೇಷವಾಗಿ ಯುದ್ಧಕ್ಕೆ ಸನ್ನದ್ಧವಾಗುತ್ತಿರುವಂಥ ಸನ್ನಿವೇಶ ನಿರ್ಮಾಣವಾಗುತ್ತಿರುವಾಗ ಜನಾಭಿಪ್ರಾಯಕ್ಕೆ ಮನ್ನಣೆ ಇರುತ್ತದೆ.

ಇಂದಿನ ಸಾಮಾಜಿಕ ಜಾಲತಾಣಗಳ ಡೇಟಾಗಳ ಮೂಲಕ ಸುಲಭವಾಗಿ ಪ್ರಾದೇಶಿಕ, ವಯೋಮಾನ, ಲಿಂಗ, ಧರ್ಮ ಸೇರಿ ಪ್ರತಿಯೊಬ್ಬರ ಭಾವನೆಗಳನ್ನು ಸುಲಭವಾಗಿ ಅಂದಾಜು ಮಾಡಬಹುದಾಗಿದೆ. ಇಂದು ಆ ಡೇಟಾಗಳು ಭಾರತಕ್ಕೆ ಮಾತ್ರವಲ್ಲ, ಶತ್ರು ರಾಷ್ಟ್ರಗಳಿಗೂ ಲಭ್ಯವಾಗುತ್ತವೆ ಎನ್ನುವುದನ್ನು ಮರೆಯಬೇಡಿ. ಫೇಕ್‌ ನ್ಯೂಸ್‌ ಫ್ಯಾಕ್ಟರಿಗಳ ಮೂಲಕ ನಮ್ಮಂಥ ಭಾವನಾತ್ಮಕ ಫೂಲ್‌ಗ ದೇಶದಲ್ಲಿ ಸುಲಭವಾಗಿ ನರೇಟಿವ್‌ ಬದಲಾಯಿಸಬಹುದು. ಇದು ಗಡಿಯಲ್ಲಿ ನಡೆಯುವ ಸಂಘರ್ಷಕ್ಕಿಂತ ತೀರಾ ವೇಗವಾಗಿ ಆವರಿಸುತ್ತದೆ. ಪರಿಣಾಮ ಕೂಡ ಗಂಭೀರವಾಗಿರುತ್ತದೆ. ಏಕೆಂದರೆ ಇಂಡಸ್‌ ನದಿ ಒಪ್ಪಂದ ರದ್ದಾಗುತ್ತಿದ್ದಂತೆ ಪಾಕಿಸ್ತಾನಕ್ಕೆ ಒಂದು ಹನಿ ನೀರು ಹೋಗುತ್ತಿಲ್ಲ ಎನ್ನುವುದನ್ನು ನಂಬಿದಂತೆ, ಭಾರತ ಸೇನೆಯ ವಿರುದ್ಧ ನಕಲಿ ಸೈನಿಕ ಅಶೋಕ್‌ ಕುಮಾರ್‌ ಹೇಳಿಕೆಯನ್ನು ಸತ್ಯ ಎನ್ನುವರ ಸಂಖ್ಯೆಯೂ ಈ ದೇಶದಲ್ಲಿ ದೊಡ್ಡದಿದೆ.

ಹೀಗಾಗಿ ನೇರ ಯುದ್ಧದ ಯಾವುದೇ ಲಕ್ಷಣಗಳು ಕಾಣಿಸುವ ಮುನ್ನವೇ ಫೇಕ್‌ ಸುದ್ದಿಗಳ ಮಾರುಕಟ್ಟೆ ಭಾರಿ ಸದ್ದು ಮಾಡುತ್ತದೆ. ಭಾರತದ ನಡೆ ಬೆಂಬಲಿಸುವವರು ಹಾಗೂ ವಿರೋಧಿಸುವವರು ಈ ಫೇಕ್‌ ನ್ಯೂಸ್‌ ಪ್ಯಾಕ್ಟರಿಯನ್ನು ನಂಬಿ ತಮಗೆ ಬೇಕಾದ ನರೇಟಿವ್‌ಗಳನ್ನು ಬಿಲ್ಡ್‌ ಮಾಡುತ್ತಾರೆ.

ಕೊನೆಯದಾಗಿ: ಭಾರತವಿಂದು ತೆಗೆದುಕೊಳ್ಳುವ ಹಾಗೂ ನಾವು ಆಶಿಸುತ್ತಿರುವ ಪ್ರತಿ ನಿರ್ಣಯವು ನಮ್ಮ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ ಎನ್ನುವುದನ್ನು ಮರೆಯಬಾರದು. ಭಾರತದ ಆರ್ಥಿಕತೆ, ಉದ್ಯೋಗ, ಷೇರು ಮಾರುಕಟ್ಟೆ, ಮೂಲ ಸೌಕರ್ಯ ನಿರ್ಮಾಣದಲ್ಲಿ ಕುಂಠಿತವಾಗಲಿದೆ. ಆ ಸಂದರ್ಭದಲ್ಲಿಯೂ ದೇಶವನ್ನು ಮುನ್ನಡೆಸುತ್ತಿರುವವರ ಜತೆಗಿರುವುದನ್ನು ಮರೆಯಕೂಡದು. ಏಕೆಂದರೆ ಯುದ್ಧ ಎನ್ನುವ ರಣಭೂಮಿ ನಾವೆಂದುಕೊಂಡಷ್ಟು ಸುಲಭವಾಗಿರುವುದಿಲ್ಲ. ನಮ್ಮ ಜತೆಗಿದ್ದಾರೆ ಎನ್ನುವವರು ಪಾಕಿಸ್ತಾನಕ್ಕೆ ಯಾವುದೋ ರೂಪದಲ್ಲಿ ಸಹಾಯ ಮಾಡುತ್ತಿರುತ್ತಾರೆ. ಜಾಗತಿಕ ರಾಜಕೀಯದ ಪ್ರಕಾರ ಪಾಕಿಸ್ತಾನವು ರಷ್ಯಾದ ಜತೆಗಿರಬೇಕಿತ್ತು. ಆದರೆ ಪಾಕಿಸ್ತಾನವು ಉಕ್ರೇನ್‌ಗೆ 364 ಮಿಲಿಯನ್‌ ಡಾಲರ್‌ ಮೊತ್ತದ ಶಸ್ತ್ರಾಸ್ತ್ರ ಮಾರಿತ್ತಂತೆ. ಇದೇ ರೀತಿಯಲ್ಲಿ ಆರ್ಥಿಕ ಹಾಗೂ ರಾಜಕೀಯ ಕಾರಣಕ್ಕೆ ಪಾಕಿಸ್ತಾನಕ್ಕೆ ನೆರವಾಗುವ ಅದೆಷ್ಟೋ ರಾಷ್ಟ್ರಗಳು ಈ ಜಗತ್ತಿನಲ್ಲಿವೆ. ಹಾಗೆಯೇ ಭಾರತ ಬಲಿಷ್ಠವಾಗಬಾರದು ಎಂದು ಬಯಸುವ ನಮ್ಮ ಹಿತಶತ್ರುಗಳು ಸಾಕಷ್ಟಿದ್ದಾರೆ. ಹೀಗಾಗಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು ಎನ್ನುವುದು ನಿಜ, ಆದರೆ ಅದು ಹೇಗಾಗಬೇಕು ಎನ್ನುವುದನ್ನು ನಿರ್ಧರಿಸುವ ಒತ್ತಡವನ್ನು ಮೋದಿಗೆ ಹಾಕದಿರೋಣ. ಯುದ್ಧ ಎನ್ನುವುದು ಬೂಟಾಟಿಕೆ, ಪಬ್‌-ಜಿ ವಿಡಿಯೋ ಗೇಮ್‌ ಎನ್ನುವ ಆಲೋಚನೆಯಿಂದ ಹೊರಗೆ ಬರೋಣ.

ವಿಶೇಷ ಧನ್ಯವಾದ: ಕಳೆದ ಎರಡು ವಾರಗಳಿಂದ ಫೇಸ್‌ಬುಕ್‌ ಬರಹದಿಂದ ದೂರವಿದ್ದೆ. ಮನೆಯಲ್ಲಿನ ಮದುವೆ ಕಾರ್ಯಕ್ರಮ, ಪ್ರಯಾಣ ಹಾಗೂ ಅನಾರೋಗ್ಯದಿಂದ ಬರೆಯಲು ಸಾಧ್ಯವಾಗಿರಲಿಲ್ಲ. ಬರೆಯುವಂತೆ ಮನಸ್ಸನ್ನು ತಟ್ಟಿದ ಅದೆಷ್ಟೋ ವಿಷಯಗಳಿದ್ದರೂ ಬರೆಯಲು ಸಾಧ್ಯವಾಗಿರಲಿಲ್ಲ. ಅದೆಷ್ಟೋ ಸ್ನೇಹಿತರು ಹಾಗೂ ಹಿತೈಷಿಗಳು ನನಗೆ ಮೆಸೇಜ್‌ ಮಾಡಿ ಪ್ರಶ್ನಿಸಿದ್ದರು. ನನ್ನ ಆಪ್ತರಿಗೆ ಸಂದೇಶ ಕಳುಹಿಸಿಯೂ ಕೇಳಿದ್ದರು. ನಿಮ್ಮ ಪ್ರೀತಿ ಹಾಗೂ ಕಾಳಜಿಯು ಜವಾಬ್ದಾರಿಯನ್ನು ಹೆಚ್ಚಿಸಿದೆ. ಇಂದಿನಿಂದ ಮತ್ತೆ ಬರಹದ ಮೂಲಕ ನಿರಂತರವಾಗಿ ಸಿಗುತ್ತೇನೆ. ಇಷ್ಟು ದಿನ ಬರೆಯಬೇಕು ಎಂದು ಇರಿಸಿಕೊಂಡಿರುವ ಹಲವು ವಿಷಯಗಳಿವೆ. ಎಲ್ಲರಿಗೂ ಪ್ರೀತಿಯ ಧನ್ಯವಾದಗಳು....

ಲೇಖಕ- ರಾಜೀವ ಹೆಗಡೆ, ಪತ್ರಕರ್ತ, ಬೆಂಗಳೂರು

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.