ಪಾಕಿಸ್ತಾನದ ಎಂತಹ ಕ್ರಿಯೆಗೂ ಸೂಕ್ತ ರೀತಿಯ ಉತ್ತರ ನೀಡಲು ಸನ್ನದ್ದ: ಭಾರತದ ವಿದೇಶಾಂಗ ಕಾರ್ಯದರ್ಶಿ ಖಡಕ್‌ ಎಚ್ಚರಿಕೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪಾಕಿಸ್ತಾನದ ಎಂತಹ ಕ್ರಿಯೆಗೂ ಸೂಕ್ತ ರೀತಿಯ ಉತ್ತರ ನೀಡಲು ಸನ್ನದ್ದ: ಭಾರತದ ವಿದೇಶಾಂಗ ಕಾರ್ಯದರ್ಶಿ ಖಡಕ್‌ ಎಚ್ಚರಿಕೆ

ಪಾಕಿಸ್ತಾನದ ಎಂತಹ ಕ್ರಿಯೆಗೂ ಸೂಕ್ತ ರೀತಿಯ ಉತ್ತರ ನೀಡಲು ಸನ್ನದ್ದ: ಭಾರತದ ವಿದೇಶಾಂಗ ಕಾರ್ಯದರ್ಶಿ ಖಡಕ್‌ ಎಚ್ಚರಿಕೆ

ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ದದ ಕಾರ್ಮೋಡ ಹೆಚ್ಚುತ್ತಿರುವ ಮಧ್ಯೆಯೇ ಪಾಕಿಸ್ತಾನದ ಎಂತಹ ಕ್ರಿಯೆಗೂ ತಕ್ಕ ಉತ್ತರವನ್ನು ನೀಡಲು ಭಾರತ ಸಿದ್ದವಿದೆ ಎಂದು ನೇರ ಎಚ್ಚರಿಕೆಯನ್ನೇ ನೀಡಿದೆ.

ಭಾರತ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ  ಪತ್ರಿಕಾಗೋಷ್ಠಿಯಲ್ಲಿ ಫೋಟೋ ಪ್ರದರ್ಶಿಸಿದರು.
ಭಾರತ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಪತ್ರಿಕಾಗೋಷ್ಠಿಯಲ್ಲಿ ಫೋಟೋ ಪ್ರದರ್ಶಿಸಿದರು.

ದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಭಾರತದ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಅಮಾನವೀಯ ದಾಳಿ, 26 ಮಂದಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ ರೀತಿಗೆ ನಾವು ಉತ್ತರ ನೀಡುವುದಾಗಿ ಹೇಳಿದ್ದೆವು. ಇದಕ್ಕಾಗಿಯೇ ಭಾರತವು ಆಪರೇಷನ್‌ ಸಿಂದೂರವನ್ನು ರೂಪಿಸಿದ್ದು ಉಗ್ರರನ್ನು ಗುರಿಯಾಗಿಟ್ಟುಕೊಂಡೇ. ಆಪರೇಷನ್‌ ಸಿಂದೂರ್‌ ನಂತರ ಪಾಕಿಸ್ತಾನವು ಮತ್ತೆ ದಾಳಿ ಮಾಡುವ ಪ್ರಯತ್ನ ಮಾಡಿದೆ. ಭಾರತದ ಗಡಿ ನಗರಗಳನ್ನು ಗುರಿಯಾಗಿಟ್ಟುಕೊಂಡು ಅಲ್ಲಲ್ಲಿ ದಾಳಿ ಮಾಡಿದ್ದು ಇದಕ್ಕೆ ಭಾರತ ಉತ್ತರ ನೀಡಿದೆ. ಪಾಕಿಸ್ತಾನ ತನ್ನದೇ ಒಪ್ಪಂದಗಳನ್ನು ಮುರಿದು ನಡೆದುಕೊಳ್ಳುತ್ತಿರುವ ರೀತಿಯನ್ನು ಭಾರತ ಮಾತ್ರವಲ್ಲ. ವಿಶ್ವದ ಬಹುತೇಕ ದೇಶಗಳು ಒಪ್ಪುತ್ತಿಲ್ಲ. ಈಗಲೂ ಪಾಕಿಸ್ತಾನ ಯಾವ ರೀತಿಯಲ್ಲಿ ಕ್ರಿಯೆ ನೀಡಿದರೂ ಭಾರತ ಪ್ರತಿಕ್ರಿಯೆ ನೀಡಲು ಸನ್ನದ್ದವಾಗಿದೆ.

ಇದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಅವರ ಖಡಕ್‌ ಎಚ್ಚರಿಕೆ. ಗುರುವಾರ ಸಂಜೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಆಪರೇಷನ್‌ ಸಿಂದೂರ ವೇಳೆ ಹತರಾದ ಉಗ್ರರ ಅಂತ್ಯಕ್ರಿಯೆಯನ್ನು ಪಾಕಿಸ್ತಾನದ ಪೊಲೀಸ್‌ ಅಧಿಕಾರಿಗಳು,ಸಿಬ್ಬಂದಿ ಭಾಗಿಯಾಗಿರುವ ಫೋಟೋಗಳನ್ನು ಪ್ರದರ್ಶಿಸಿದರು. ಈ ಮೂಲಕ ಉಗ್ರರಿಗೆ ಪಾಕಿಸ್ತಾನದ ಸಂಪೂರ್ಣ ಬೆಂಬಲ ಇರುವುದಕ್ಕೆ ಸಾಕ್ಷಿ ಎನ್ನುವುದನ್ನು ಒತ್ತಿ ಹೇಳಿದರು.

ಭಾರತದ ಮೇಲೆ ಉಗ್ರರ ದಾಳಿ ಆಗುತ್ತಿರುವ ಬಗ್ಗೆ ನಿರಂತರವಾಗಿ ಹೇಳುತ್ತಾ ಬಂದರೂ ಹಲವಾರು ವೇದಿಕೆಗಳಲ್ಲಿ ಪಾಕಿಸ್ತಾನ ಸಾಕ್ಷಿ ಕೇಳುತ್ತಿತ್ತು. ಸಾಕ್ಷಿ ನೀಡಿದರೂ ಅದನ್ನು ಒಪ್ಪದ ಸ್ಥಿತಿಯಲ್ಲಿಯೇ ಇತ್ತು. ಪಹಲ್ಗಾಮ್‌ ದಾಳಿಯ ನಂತರ ಭಾರತ ಉಗ್ರರ ಕ್ರಿಯೆಗೆ ಉತ್ತರ ನೀಡಲು ನಿರ್ಧರಿಸಿತ್ತು. ಆಪರೇಷನ್‌ ಸಿಂದೂರ ಎನ್ನುವ ಹೆಸರಿನ ಕಾರ್ಯಾಚರಣೆಯಲ್ಲಿ ಉಗ್ರರು ಹತರಾಗಿದ್ದಾರೆ. ಅವರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಪೊಲೀಸರೇ ಭಾಗಿಯಾಗಿರುವುದು ಛಾಯಾಚಿತ್ರಗಳಲ್ಲಿ ಸೆರೆಯಾಗಿದೆ ಎಂದು ಫೋಟೋವನ್ನು ಹಿಡಿದು ಪ್ರದರ್ಶಿಸಿದರು ಮಿಸ್ರಿ.

ಆಪರೇಷನ್ ಸಿಂಧೂರ್‌ನಲ್ಲಿ ಕೊಲ್ಲಲ್ಪಟ್ಟ 100ಕ್ಕೂ ಹೆಚ್ಚು ಜನರಲ್ಲಿ ಮೂವರು ವ್ಯಕ್ತಿಗಳ ರಾಜ್ಯ ಗೌರವದ ಅಂತ್ಯಕ್ರಿಯೆ'ಗಳನ್ನು ನಡೆಸಲಾಗಿದೆ. ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಅಂತ್ಯಕ್ರಿಯೆ ವೇಳೆ ಬಳಸಿರುವುದನ್ನು ಚಿತ್ರದಲ್ಲಿ ನೋಡಬಹುದು. ಭಾರತೀಯ ಗುಪ್ತಚರ ಇಲಾಖೆಯು ಅವರನ್ನು ಭಯೋತ್ಪಾದಕರು ಎಂದು ಗುರುತಿಸಿದೆ. ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ನಿರಂತರವಾಗಿ ಬೆಂಬಲ ನೀಡುತ್ತಿರುವುದಕ್ಕೆ ಭಾರತ ಹೇಳುತ್ತಿರುವುದೂ ಇದನ್ನೇ ಎಂದು ತಿಳಿಸಿದರು.

ಪಹಲ್ಗಾಮ್ ದಾಳಿಯ ಹೊಣೆಯನ್ನು ಎರಡು ಬಾರಿ ಹೊತ್ತುಕೊಂಡ ಲಷ್ಕರೆ ಪ್ರತಿನಿಧಿ ದಿ ರೆಸಿಸ್ಟೆನ್ಸ್ ಫ್ರಂಟ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ಪಾಕಿಸ್ತಾನವನ್ನು ಟೀಕಿಸುವುದು ಸೇರಿದಂತೆ, 'ಜಾಗತಿಕ ಭಯೋತ್ಪಾದನೆಯ ಕೇಂದ್ರವಾಗಿ ಪಾಕಿಸ್ತಾನದ ಖ್ಯಾತಿ'ಯ ಬಗ್ಗೆ ಮಿಸ್ರಿ ಹಲವಾರು ಕಟುವಾದ ಟೀಕೆಗಳನ್ನು ಮಾಡಿದರು.

ಪಹಲ್ಗಾಮ್ ದಾಳಿಯಲ್ಲಿ ಟಿಆರ್‌ಎಫ್ ಪಾತ್ರವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಕ್ಕೆ ವಿರುದ್ಧವಾದ ಪುರಾವೆಗಳಿದ್ದರೂ, ಪಾಕಿಸ್ತಾನವು ಪ್ರಪಂಚದ ಮುಂದೆ "ಬಹಿರಂಗಗೊಂಡಿದೆ" ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದರು.

ಮಂಗಳವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 'ಮುಚ್ಚಿದ ಬಾಗಿಲಿನ ಸಮಾಲೋಚನೆ'ಯನ್ನು ಅವರು ಉಲ್ಲೇಖಿಸುತ್ತಿದ್ದರು. ಪಹಲ್ಗಾಮ್ ದಾಳಿಯಲ್ಲಿ ಲಷ್ಕರ್ ಪಾತ್ರದ ಬಗ್ಗೆ ಪಾಕಿಸ್ತಾನಕ್ಕೆ ಹಲವಾರು ಶೋಧಕ ಪ್ರಶ್ನೆಗಳನ್ನು ಕೇಳಲಾಯಿತು. ಇಸ್ಲಾಮಾಬಾದ್‌ನ ಇತ್ತೀಚಿನ ಕ್ಷಿಪಣಿ ಪರೀಕ್ಷೆಗಳ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು ಎನ್ನುವುದು ಮಿಸ್ರಿ ನೀಡಿದ ವಿವರಣೆ.

ಪಾಕಿಸ್ತಾನದಲ್ಲಿ ಅಡಗುದಾಣ ಮಾಡಿಕೊಂಡಿರುವ ಉಗ್ರರನ್ನು ಗುರಿಯಾಗಿಸಿ ಭಾರತದ ಸೇನಾ ಪಡೆಗಳು ದಾಳಿ ಮಾಡಿವೆ. ಹೀಗಿದ್ದರೂ ಪಾಕಿಸ್ತಾನ ಮತ್ತೆ ದಾಳಿ ಮಾಡಿದೆ. ಇದಕ್ಕೆ ತಕ್ಕ ಉತ್ತರವನ್ನು ನೀಡಲಾಗಿದೆ. ಪಾಕಿಸ್ತಾನದ ಇಂತಹ ಕ್ರಿಯೆಗೆ ಭಾರತವು ಸರಿಯಾದ ಉತ್ತರವನ್ನು ನೀಡಲಿದೆ. ಅನಗತ್ಯವಾಗಿ ಪಾಕಿಸ್ತಾನ ದಾಳಿ ಮಾಡುವುದನ್ನು ನಿಲ್ಲಿಸಬೇಕು. ತಾನೇ ರೂಪಿಸಿಕೊಂಡ ಒಪ್ಪಂದಗಳಿಗೆ ಬದ್ದವಾಗಿ ಇರಬೇಕು ಎಂದರು ಮಿಸ್ರಿ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.