ರೈಲಿಗೂ ಬಂತು ಎಟಿಎಂ; ಪಂಚವಟಿ ಎಕ್ಸ್ಪ್ರೆಸ್ನಲ್ಲಿ ಭಾರತದ ಮೊದಲ ಟ್ರೇನ್ ಎಟಿಎಂ ಸ್ಥಾಪನೆ, ವಿಡಿಯೋ ವೈರಲ್
ರೈಲಿಗೂ ಬಂತು ಎಟಿಎಂ: ಮಹಾರಾಷ್ಟ್ರದ ಮನ್ಮಾಡ್ - ಸಿಎಸ್ಟಿ ಪಂಚವಟಿ ಎಕ್ಸ್ಪ್ರೆಸ್ನಲ್ಲಿ ಭಾರತದ ಮೊದಲ ಟ್ರೇನ್ ಎಟಿಎಂ ಸ್ಥಾಪಿಸಲಾಗಿದೆ. ಇದರಿಂದಾಗಿ ರೈಲು ಪ್ರಯಾಣದ ವೇಳೆ ಪ್ರಯಾಣಿಕರಿಗೆ ನಗದು ಹಣ ಪಡೆಯುವುದು ಸುಲಭವಾಗಲಿದೆ.

ರೈಲಿಗೂ ಬಂತು ಎಟಿಎಂ: ಭಾರತದ ಮೊದಲ ಟ್ರೇನ್ ಎಟಿಎಂ ಅನ್ನು ಮಹಾರಾಷ್ಟ್ರದ ಮನ್ಮಾಡ್ - ಸಿಎಸ್ಟಿ ಪಂಚವಟಿ ಎಕ್ಸ್ಪ್ರೆಸ್ನಲ್ಲಿ ಅಳವಡಿಸಲಾಗಿದೆ. ಏಪ್ರಿಲ್ 10 ರಂದು ಇದರ ಪ್ರಾಯೋಗಿಕ ಅಳವಡಿಕೆ ನಡೆದಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾಗಳಲ್ಲೂ ಇದರ ವಿಡಿಯೋ ವೈರಲ್ ಆಗಿದ್ದು, ಪ್ರಯಾಣಿಕರು ನಗದು ಹಣಕ್ಕಾಗಿ ಇನ್ನು ರೈಲಿನಿಂದ ಕೆಳಗೆ ಇಳಿಯಬೇಕಾಗಿಲ್ಲ ಎಂಬ ಮಾತು ಕೇಳಿಬಂದಿದೆ.
ಪಂಚವಟಿ ಎಕ್ಸ್ಪ್ರೆಸ್ನಲ್ಲಿ ಭಾರತದ ಮೊದಲ ಟ್ರೇನ್ ಎಟಿಎಂ ಸ್ಥಾಪನೆ
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇದರ ವಿಡಿಯೋ ಶೇರ್ ಮಾಡಿದ್ದು, ರೈಲಿನಲ್ಲಿ ಮೊದಲ ಬಾರಿಗೆ ಎಟಿಎಂ ಸ್ಥಾಪನೆ ವಿಚಾರ ಬಹಿರಂಗಪಡಿಸಿದ್ದಾರೆ. ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ಈ ವಿಚಾರ ಹಂಚಿಕೊಂಡಿರುವ ಅವರು, ಪ್ರಯಾಣಿಕರ ಅನುಕೂಲಕ್ಕಾಗಿ ನವೋನ್ವೇಷಣೆ, ಹೊಸ ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿರುವ ವಿಚಾರ ಹೇಳುತ್ತಿರುತ್ತಾರೆ.
ಎಟಿಎಂ ಅನ್ನು ರೈಲಿನಲ್ಲಿ ಅಳವಡಿಸುವಾಗ ಅದು ರೈಲಿನ ಚಲನೆಯ ಕಂಪನಕ್ಕೆ ಅಲುಗಾಡದಂತೆ ಪ್ರತ್ಯೇಕ ಬೋಲ್ಟ್ಗಳನ್ನು ಹಾಕಿ ಜೋಡಿಸಲಾಗಿದೆ. ನಿಗದಿಪಡಿಸಿದ ಜಾಗದಲ್ಲಿ ಎರಡು ಅಗ್ನಿಶಾಮಕ ಸಿಲಿಂಡರ್ಗಳನ್ನೂ ಒದಗಿಸಲಾಗಿದೆ ಎಂದು ಭಾರತೀಯ ರೈಲ್ವೆ ಹೇಳಿದೆ.
ಟಿಕೆಟ್ ಆದಾಯ ಹೊರತಾಗಿ ಬೇರೆ ಆದಾಯ ಮೂಲ ಕಂಡುಕೊಳ್ಳಲು ಎಟಿಎಂ ಆನ್ ವ್ಹೀಲ್ಸ್ ಎಂಬ ಹೆಸರಿನಲ್ಲಿ ಈ ಉಪಕ್ರಮವನ್ನು ಜಾರಿಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ಹೇಳಿದೆ. ರೈಲ್ವೆ ಬೋಗಿಯ ಸಣ್ಣ ಪ್ಯಾಂಟ್ರಿಯ ಒಂದು ಭಾಗದಲ್ಲಿ ಎಟಿಎಂ ಅಳವಡಿಸುವುದಕ್ಕೆ ಜಾಗ ಮಾಡಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಎಟಿಎಂ-ಆನ್-ಟ್ರೈನ್ ಪರಿಕಲ್ಪನೆಯ ಹಿನ್ನೆಲೆ
ಎಟಿಎಂ-ಆನ್-ಟ್ರೈನ್ ಪರಿಕಲ್ಪನೆಯು ಪ್ರಯಾಣಿಕರಿಗೆ ಬ್ಯಾಂಕಿಂಗ್ ಸೌಲಭ್ಯಗಳು ರೈಲಿನಲ್ಲೇ ಸಿಗುವಂತೆ ಮಾಡುತ್ತದೆ. ವಿಶೇಷವಾಗಿ ಹಣಕಾಸು ಮೂಲಸೌಕರ್ಯಕ್ಕೆ ನಿರ್ಬಂಧಿತ ಪ್ರವೇಶವನ್ನು ಹೊಂದಿರುವ ವಲಯಗಳಲ್ಲಿ ಈ ಸವಲತ್ತು ಒದಗಿಸಲಾಗುತ್ತಿದೆ. ಈ ಪ್ರಯೋಗವು ಯಶಸ್ವಿಯಾದರೆ, ಭವಿಷ್ಯದಲ್ಲಿ, ವಿಶೇಷವಾಗಿ ದೀರ್ಘ-ದಟ್ಟ ಮಾರ್ಗಗಳಲ್ಲಿ ರೈಲುಗಳಲ್ಲಿ ಅಂತಹ ಹೆಚ್ಚಿನ ಎಟಿಎಂಗಳನ್ನು ಅಳವಡಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಮಾರ್ಚ್ 25 ರಂದು ಸಂಭಾವ್ಯ ವೆಂಡರ್ಗಳ ಜತೆಗೆ ಮಾತುಕತೆ ನಡೆಸಿದ ವೇಳೆ, ಎಟಿಎಂ-ಆನ್-ಟ್ರೈನ್ ಪರಿಕಲ್ಪನೆ ಮೂಡಿಬಂತು. ಅದನ್ನು ಜಾರಿಗೊಳಿಸಲಾಗುತ್ತಿದೆ. ಇದು ವಿಕಸಿತ ಭಾರತ್ 2047ರ ದೃಷ್ಟಿಕೋನದ ಉಪಕ್ರಮದ ಪ್ರಕಾರ ಭಾರತೀಯ ರೈಲ್ವೆಯ ಆಧುನೀಕರಣದ ಭಾಗವಾಗಿ ಮೂಡಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಇತ್ತೀಚಿನ ವರ್ಷಗಳಲ್ಲಿ ವಂದೇ ಭಾರತ್ನಂತಹ ನವೀಕರಿಸಿದ ರೈಲುಗಳ ಮೂಲಕ ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ವಿಶ್ವ ದರ್ಜೆಯ ಪ್ರಯಾಣದ ಅನುಭವಗಳು ಸಾಕಾರಗೊಳ್ಳುವಂತೆ ಮಾಡಿದೆ. ಸುಧಾರಿತ ಕೇಂದ್ರಗಳು, ಹೈಟೆಕ್ ರೈಲುಗಳು ಮತ್ತು ಸುರಕ್ಷತಾ ವ್ಯವಸ್ಥೆಗಳು ರೈಲು ಪ್ರಯಾಣದ ಅನುಭವವನ್ನು ಉತ್ತಮಗೊಳಿಸಿವೆ.