India heat waves: ಭಾರತಕ್ಕೆ ಈ ಬಾರಿ ಬಿಸಿಗಾಳಿ ಭಯ, ಮಾರ್ಚ್ನಿಂದ ಮೇವರೆಗೆ ಸೆಖೆಗೆ ಕಂಗಲಾಗಲಿದ್ದಾರೆ ಜನ, ಕೃಷಿಗೂ ಭಾರೀ ಹೊಡೆತ
ಬಿಸಿಗಾಳಿ, ತಾಪಮಾನ ಹೆಚ್ಚಳದಿಂದ ಮುಂದಿನ ಮೂರು ತಿಂಗಳು ದೇಶದ ವಿವಿಧ ಕಡೆಗಳಲ್ಲಿ ಜನರ ಬದುಕು ದುಸ್ತರವಾಗಲಿದೆ. ಕೃಷಿಗೂ ಹೊಡೆತ ನೀಡಲಿದ್ದು, ದೇಶದ ಆರ್ಥಿಕತೆ ಮೇಲೂ ಪರಿಣಾಮ ಬೀರಲಿದೆ.
ಮುಂಬೈ/ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಈ ಬಾರಿ ಬಿಸಿಗಾಳಿಯಿಂದ ಜನರು ಕಂಗಲಾಗಲಿದ್ದಾರೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ವಿಶೇಷವಾಗಿ ಗೋಧಿ ಉತ್ಪಾದಿಸುವ ಪ್ರಮುಖ ಕೇಂದ್ರ ಮತ್ತು ಉತ್ತರ ರಾಜ್ಯಗಳಲ್ಲಿ ಮಾರ್ಚ್ ಮತ್ತು ಮೇ ನಡುವೆ ಬಿಸಿ ಗಾಳಿ ಹೆಚ್ಚಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.
ಫೆಬ್ರವರಿ ತಿಂಗಳಲ್ಲಿ ಭಾರತದ ವಿವಿಧೆಡೆ ಗರಿಷ್ಠ ತಾಪಮಾನ ದಾಖಲಾಗಿದ್ದು, ಮಾರ್ಚ್ ನಂತರವೂ ಇದು ಮುಂದುವರೆಯುವ ಸಾಧ್ಯತೆಯಿದೆ. ಸತತವಾಗಿ ಎರಡನೇ ವರ್ಷ ಈ ಬಿಸಿಗಾಳಿಯ ತೊಂದರೆ ಇರುವುದರಿಂದ ಗೋಧಿ, ಸಾಸಿವೆ, ಕಡಲೆಯಂತಹ ಕೃಷಿ ಬೆಳೆಗಳ ಉತ್ಪಾದನೆ ಕುಂಠಿತವಾಗಬಹುದು. ಇದರಿಂದ ಆಹಾರ ಹಣದುಬ್ಬರ ತಗ್ಗಿಸುವ ಸರಕಾರದ ಪ್ರಯತ್ನಗಳು ಸಂಕೀರ್ಣಗೊಳ್ಳಬಹುದು.
ಇದೇ ಸಮಯದಲ್ಲಿ ತಾಪಮಾನ ಹೆಚ್ಚಳದಿಂದ ವಿದ್ಯುತ್ ಬಳಕೆ ಹೆಚ್ಚಾಗಬಹುದು. ಕೃಷಿ ಮಾತ್ರವಲ್ಲದೆ ಮನೆಯೊಳಗೆ ಫ್ಯಾನ್, ಏಸಿ, ಕೂಲಿಂಗ್ ಇತ್ಯಾದಿಗಳಿಗೆ ಹೆಚ್ಚಿನ ವಿದ್ಯುತ್ ಬಳಕೆಯಾಗಲಿದೆ.
"ಮಾರ್ಚ್ನಿಂದ ಮೇ ಋತುವಿನಲ್ಲಿ ಬಿಸಿಗಾಳಿಯು ಮಧ್ಯ ಮತ್ತು ವಾಯುವ್ಯ ಭಾರತದ ಹಲವು ಪ್ರದೇಶಗಳಲ್ಲಿ ಹೆಚ್ಚಿರಲಿದೆ" ಎಂದು ಭಾರತೀಯ ಹವಾಮಾನ ಇಲಾಖೆ (IMD)ಪ್ರಕಟಣೆಯಲ್ಲಿ ತಿಳಿಸಿದೆ.
ಚಳಿಗಾಲದಲ್ಲಿ ಬಿತ್ತಿದ ಬೆಳೆಗಳು ಮಾರ್ಚ್ನಲ್ಲಿ ಸಮೃದ್ಧವಾಗಿ ಬೆಳೆಯುತ್ತವೆ. ಹೀಗಾಗಿ, ಕೃಷಿಕರಿಗೆ ಮಾರ್ಚ್ ನಿರ್ಣಾಯಕ ತಿಂಗಳಾಗಿದೆ. ಗರಿಷ್ಠ ತಾಪಮಾನವು ಭಾರತ ಮಾತ್ರವಲ್ಲದೆ ಜಗತ್ತಿನ ವಿವಿಧೆಡೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
"ಹೆಚ್ಚಿನ ತಾಪಮಾನದಿಂದಾಗಿ ಗೋಧಿ ಬೆಳೆಗೆ ಈಗಾಗಲೇ ತೊಂದರೆಯಾಗಿದೆ. ಮಾರ್ಚ್ ತಿಂಗಳಲ್ಲಿ ತಾಪಮಾನ ಹೆಚ್ಚಾಗಿ ಇಳುವರಿ ನಷ್ಟವಾಗಬಹುದು" ಎಂದು ಮುಂಬೈ ಮೂಲದ ಡೀಲರ್ವೊಬ್ಬರು ಜಾಗತಿಕ ವ್ಯಾಪಾರ ಸಂಸ್ಥೆಗೆ ತಿಳಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಭಾರತದಲ್ಲಿ ಕೇವಲ ವರ್ಷಕ್ಕೆ ಒಂದು ಬಾರಿ ಮಾತ್ರ ಗೋಧಿ ಬೆಳೆಯಲಾಗುತ್ತದೆ. ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಗೋಧಿ ಕೃಷಿ ಆರಂಭಿಸಲಾಗುತ್ತದೆ. ಮಾರ್ಚ್ ತಿಂಗಳಲ್ಲಿ ಕಟಾವು ಮಾಡಲಾಗುತ್ತದೆ.
ಬಿಸಿಗಾಳಿಯ ಅಲೆಗಳಿಂದಾಗಿ 2022 ರಲ್ಲಿ ಭಾರತದ ಗೋಧಿ ಉತ್ಪಾದನೆಯನ್ನು ಮೊಟಕುಗೊಳಿಸಿತು. ಇದರಿಂದ ಜಗತ್ತಿನ ಎರಡನೇ ಅಗ್ರ ಗೋಧಿ ರಫ್ತುದಾರ ದೇಶವಾದ ಭಾರತವು ರಫ್ತು ಮಾಡುವುದನ್ನೇ ನಿಲ್ಲಿಸುವಂತಹ ಒತ್ತಡಕ್ಕೆ ಸಿಲುಕಿತು.
ಭಾರತದಲ್ಲಿ ಫೆಬ್ರವರಿಯಲ್ಲಿ ಸರಾಸರಿ ಗರಿಷ್ಠ ತಾಪಮಾನವು 29.54 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇದು ಐಎಂಡಿ ದಾಖಲೆಗಳ ಪ್ರಕಾರ 1901 ರ ಬಳಿಕದಿಂದಲೇ ಅತ್ಯಧಿಕ ತಾಪಮಾನವಾಗಿದೆ.
ಫೆಬ್ರವರಿ ತಿಂಗಳಲ್ಲಿ ಭಾರತಕ್ಕೆ ಶೇಕಡ 68ರಷ್ಟು ಮಳೆ ಕೊರತೆ ಉಂಟಾಗಿತ್ತು.
ದಕ್ಷಿಣ ಏಷ್ಯಾದ ದೇಶದಲ್ಲಿ ಇನ್ನಷ್ಟು ಬಿಸಿಗಾಳಿ ತೊಂದರೆ ಉಂಟಾಗಲಿದೆ ಎಂದು ಸರಕಾರದ ಅಧಿಕಾರಿಗಳು ಕಳೆದ ವರ್ಷವೇ ಎಚ್ಚರಿಸಿದ್ದರು. ಮಳೆಗಾಲದ ಅವಧಿಯಲ್ಲಿ ಸರಾಸರಿ ತಾಪಮಾನವು ಕಳೆದ ಎರಡು ದೇಶಗಳಲ್ಲಿಯೇ ಅತ್ಯಧಿಕವಾಗಿ ಏರಿಕೆ ಕಾಣುತ್ತಿದೆ ಎಂದು ಅವರು ಎಚ್ಚರಿಸಿದ್ದರು.
"ಭಾರತದ ವಿವಿಧ ಕಡೆಗಳಲ್ಲಿ ಈಗಾಗಲೇ ಉಷ್ಣತೆ ಅತ್ಯಧಿಕವಾಗಿದೆ" ಎಂದು ಆರೋಗ್ಯ ಸಚಿವಾಲಯವು ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದೆ. ಇದೇ ಸಮಯದಲ್ಲಿ ಬಿಸಿಗಾಳಿ, ಹವಾಮಾನ ಹೆಚ್ಚಳ ಸಂಬಂಧಿತ ಆರೋಗ್ಯ ಸಮಸ್ಯೆಗಳು ಎದುರಾಗಬಹುದಾಗಿದ್ದು, ಇದನ್ನು ಎದುರಿಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸುತ್ತಿದೆ.