ಪಹಲ್ಗಾಮ್ ಉಗ್ರರ ದಾಳಿ: ಇಂದು 4 ಗಂಟೆಗೆ ಪ್ರಧಾನಿ ಮೋದಿ ಮಹತ್ವದ ಸುದ್ದಿಗೋಷ್ಠಿ, ದೇಶದ ಜನರಲ್ಲಿ ಹೆಚ್ಚಿದ ಕಾತರ
ಪಹಲ್ಗಾಮ್ ಉಗ್ರರ ದಾಳಿಯ ನಂತರ ದೇಶದಲ್ಲಿ ಬಿಗುವಿನ ವಾತಾವರಣವಿದ್ದು, ಯುದ್ಧ ಘೋಷಣೆಯ ಗಾಳಿಸುದ್ದಿ ಕೂಡ ಕೇಳಿ ಬರುತ್ತಿದೆ. ಇಂದು (ಏಪ್ರಿಲ್ 30) ಸಂಜೆ 4 ಗಂಟೆಗೆ ಮೋದಿ ಮಹತ್ವ ಪತ್ರಿಕಾಗೋಷ್ಠಿ ನಡೆಸಲಿದ್ದು, ಪ್ರಧಾನಿ ಭಾಷಣದ ಕುರಿತು ದೇಶದ ಜನರಲ್ಲಿ ಕಾತರ ಹೆಚ್ಚಾಗಿದೆ.

ನವದೆಹಲಿ: ಜಮ್ಮು–ಕಾಶ್ಮೀರದ ಪಹಲ್ಗಾಮ್ನಲ್ಲಿ ಏಪ್ರಿಲ್ 22 ರಂದು ನಡೆದ ಉಗ್ರರ ದಾಳಿಯ ನಂತರ ದೇಶದ ವಾತಾವರಣ ಬದಲಾಗಿದೆ. ಉಗ್ರ ಸಂಘಟನೆಗಳಿಗೆ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಪಾಕಿಸ್ತಾನದ ವಿರುದ್ಧ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಕೇಂದ್ರ ಸರ್ಕಾರ. ಈ ನಡುವೆ ಭಾರತ–ಪಾಕಿಸ್ತಾನ ನಡುವೆ ಯುದ್ಧ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನುವ ಗಾಳಿ ಮಾತು ಕೂಡ ಕೇಳಿ ಬರುತ್ತಿದೆ. ಮುಂದಿನ 24 ರಿಂದ 36 ಗಂಟೆಗಳಲ್ಲಿ ಭಾರತದಿಂದ ದಾಳಿ ನಡೆಯಬಹುದು ಎಂದು ಪಾಕ್ ಸಚಿವ ಅತ್ತಾವುಲ್ಲ ತರಾರ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ಸಂಪುಟ ಸಮಿತಿಗಳ ಸಭೆ ನಡೆದಿದೆ. ಈ ಸಂಪುಟ ಸಮಿತಿ ಸಭೆಯಲ್ಲಿ ನಾಲ್ಕು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಇಂದು ಮೋದಿ ಹಲವು ಪ್ರಮುಖ ಸಭೆಗಳನ್ನು ನಡೆಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್ ಮತ್ತು ಎಲ್ಲಾ ಸಶಸ್ತ್ರ ಪಡೆಗಳ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆದಿದೆ.
ಇಂದಿನ ಕೇಂದ್ರ ಸಚಿವ ಸಂಪುಟದ ಅಧಿವೇಶನದ ಜೊತೆಗೆ ಭದ್ರತೆ ಕುರಿತ ಸಂಪುಟ ಸಮಿತಿ (CCS), ರಾಜಕೀಯ ವ್ಯವಹಾರಗಳ ಕುರಿತ ಸಂಪುಟ ಸಮಿತಿ (CCPA) ಮತ್ತು ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ (CCEA) ಸಭೆಗಳು ಕೂಡ ಸೇರಿವೆ.
ಪಹಲ್ಗಾಮ್ ದಾಳಿಯ ನಂತರ 2ನೇ ಬಾರಿಗೆ ಉನ್ನತ ಮಟ್ಟದ ಸಭೆ ನಡೆದಿದ್ದು, ಹಿಂದಿನ ಸಭೆಯಲ್ಲಿ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವುದು, ಅಟ್ಟಾರಿ ಗಡಿಯನ್ನು ಮುಚ್ಚುವುದು, ಪಾಕಿಸ್ತಾನಿ ನಾಗರಿಕರಿಗೆ ವೀಸಾಗಳನ್ನು ರದ್ದುಗೊಳಿಸುವುದು ಮತ್ತು ಭಾರತದಲ್ಲಿರುವವರು ತಕ್ಷಣ ಮರಳಬೇಕೆಂದು ಒತ್ತಾಯಿಸುವುದು ಈ 4 ಮಹತ್ವ ಘೋಷಣೆಗಳನ್ನು ಮಾಡಲಾಗಿತ್ತು.
ಇಂದಿನ ಸಚಿವ ಸಂಪುಟ ಸಭೆಯ ನಂತರ ಮೋದಿ 4 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದು, ಮೋದಿ ಯಾವ ನಿರ್ಧಾರ ಕೈಗೊಳ್ಳಬಹುದು, ಯುದ್ಧ ನಡೆಯುವುದು ನಿಜವೇ, ಪಾಕಿಸ್ತಾನದ ವಿರುದ್ಧ ಭಾರತ ಇನ್ನೂ ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬುದನ್ನೆಲ್ಲಾ ತಿಳಿಯಲು ಜನರು ಕಾತರರಾಗಿದ್ದಾರೆ. ಮಧ್ಯಾಹ್ನ 4 ಗಂಟೆಯ ಪ್ರಧಾನಿ ಮೋದಿ ಸುದ್ದಿಗೋಷ್ಠಿಯಲ್ಲಿ ಮೋದಿ ಯಾವ ವಿಚಾರ ಹೇಳಲಿದ್ದಾರೆ ಎಂಬುದನ್ನು ತಿಳಿಯಲು ಭಾರತೀಯರು ಕುತೂಹಲದಿಂದ ಕಾಯುತ್ತಿದ್ದಾರೆ.