ಭಾರತದ ಐಸಿ 814 ವಿಮಾನ ಅಪಹರಣ ಪ್ರಕರಣದ ರೂವಾರಿ ಉಗ್ರ ಅಬ್ದುಲ್ ರವೂಫ್ ಅಝರ್ ಆಪರೇಷನ್ ಸಿಂದೂರದಲ್ಲಿ ಹತ್ಯೆ
ಎರಡೂವರೆ ದಶಕದ ಹಿಂದೆ ಭಾರತೀಯ ವಿಮಾನ ಅಪಹರಣ ಪ್ರಕರಣದ ಮಾಸ್ಟರ್ಮೈಂಡ್, ಉಗ್ರಗಾಮಿ ಚಟುವಟಿಕೆ ಮುಂಚೂಣಿಯಲ್ಲಿದ್ದ ಉಗ್ರ ಅಬ್ದುಲ್ ರವೂಫ್ ಅಝರ್ ಆಪರೇಷನ್ ಸಿಂದೂರದಲ್ಲಿ ಹತ್ಯೆ ಮಾಡಲಾಗಿದೆ.

ದೆಹಲಿ:ಎರಡೂ ದಶಕದ ಹಿಂದೆ ಭಾರತೀಯ ಏರ್ಲೈನ್ಸ್ನ ಐಸಿ-814 ಅಪಹರಣದ ಮಾಸ್ಟರ್ಮೈಂಡ್ ಆಗಿದ್ದ ಭಾರತ ಸೇರಿದಂತೆ ಹಲವು ದೇಶಗಳಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರಗಾಮಿ ಜೈಶ್-ಎ-ಮೊಹಮ್ಮದ್ನ ಕಾರ್ಯಾಚರಣೆ ಮುಖ್ಯಸ್ಥ ಅಬ್ದುಲ್ ರೌಫ್ ಅಜರ್ನನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಆಪರೇಷನ್ ಸಿಂದೂರ್ನಲ್ಲಿ ಭಾರತ ಸೇನಾಪಡೆಯಿಂದ ಹತ್ಯೆಗೈಯಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.ಪಂಜಾಬ್ ಪ್ರಾಂತ್ಯದಲ್ಲಿ, ಭಾರತೀಯ ಸಶಸ್ತ್ರ ಪಡೆಗಳು ಬಹಾವಲ್ಪುರ್ ಮತ್ತು ಮುರಿಯ್ಕೆಗಳಲ್ಲಿ ದಾಳಿ ನಡೆಸಿ, ಜೈಶ್ ಮತ್ತು ಲಷ್ಕರ್ನ ಪ್ರಧಾನ ಕಚೇರಿಗಳನ್ನು ನಾಶಪಡಿಸಿವೆ. ದಾಳಿ ವೇಳೆ ಹತ್ಯೆಗೊಳಗಾದವರಲ್ಲಿ ಜೈಶ್-ಮೊಹಮ್ಮದ್ನ ಕಾರ್ಯಾಚರಣೆ ಮುಖ್ಯಸ್ಥ, ಐಸಿ-814 ಅಪಹರಣದ ಮಾಸ್ಟರ್ಮೈಂಡ್ ಮತ್ತು ಅಂತರರಾಷ್ಟ್ರೀಯ ಜಿಹಾದಿ ಜಾಲಗಳ ಕೇಂದ್ರ ವ್ಯಕ್ತಿ ಅಬ್ದುಲ್ ರೌಫ್ ಅಜರ್ ಕೂಡ ಸೇರಿದ್ದಾನೆ" ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಅಬ್ದುಲ್ ರೌಫ್ ಅಜರ್ ವಿಶ್ವಸಂಸ್ಥೆ ಘೋಷಿಸಿರುವ ಜಗತ್ತಿನ ಪ್ರಮುಖ ಭಯೋತ್ಪಾದಕ ಮಸೂದ್ ಅಜರ್ನ ಸಹೋದರ. ಬಹಾವಲ್ಪುರ್ ದಾಳಿಯಲ್ಲಿ ಮಸೂದ್ ಅಜರ್ನ 10 ಕುಟುಂಬ ಸದಸ್ಯರನ್ನು ಭಾರತೀಯ ಸೇನಾ ದಾಳಿಯ ವೇಳೆ ಕೊಲ್ಲಲಾಗಿದೆ ಎನ್ನುವ ಮಾಹಿತಿ ಲಭಿಸಿತ್ತು.ಆತನ ಸಹೋದರಿ ಮತ್ತು ಸೋದರ ಮಾವ ಸೇರಿದಂತೆ ಹಲವರು ಮೃತಪಟ್ಟಿದ್ದರು. ಜೈಶ್ ಭಯೋತ್ಪಾದಕ ನಿರ್ಮೂಲನೆಯನ್ನು ಗುರಿಯಾಗಿಟ್ಟುಕೊಂಡು ನಡೆಸಲಾದ ದಾಳಿ ಇದಾಗಿತ್ತು ಎಂದು ದೃಢಪಡಿಸುವ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.
1999ರಲ್ಲಿ ಐಸಿ-814 ವಿಮಾನ ಅಪಹರಣವನ್ನು ಸಂಘಟಿಸುವಲ್ಲಿ ರೌಫ್ ಅಜರ್ ಪಾತ್ರವು, ವಾಲ್ ಸ್ಟ್ರೀಟ್ ಜರ್ನಲ್ನ ಅಮೇರಿಕನ್-ಯಹೂದಿ ಪತ್ರಕರ್ತ ಡೇನಿಯಲ್ ಪರ್ಲ್ ಅವರನ್ನು ಅಪಹರಿಸಿ ಕೊಲೆ ಮಾಡಿದ ಪ್ರಮುಖ ಅಲ್-ಖೈದಾ ಕಾರ್ಯಕರ್ತ ಒಮರ್ ಸಯೀದ್ ಶೇಖ್ ಬಿಡುಗಡೆಗೆ ನೇರವಾಗಿ ಅನುಕೂಲ ಮಾಡಿಕೊಟ್ಟಿತ್ತು. 2002 ರಲ್ಲಿ ಪರ್ಲ್ನ ಕ್ರೂರ ಹತ್ಯೆಯು ಜಗತ್ತಿನ ಹಲವು ರಾಷ್ಟ್ರಗಳನ್ನು ಬೆಚ್ಚಿಬೀಳಿಸಿತು ಮತ್ತು ರಾಜ್ಯ-ರಕ್ಷಿತ ಭಯೋತ್ಪಾದಕ ಜಾಲಗಳಿಂದ ಉಂಟಾಗುವ ಜಾಗತಿಕ ಬೆದರಿಕೆಗೆ ಇದು ಉದಾಹರಣೆಯಾಗಿ ಉಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 1999 ರಲ್ಲಿ ಕಠ್ಮಂಡುವಿನಿಂದ ದೆಹಲಿಗೆ ಹೋಗುತ್ತಿದ್ದಾಗ ಇಂಡಿಯನ್ ಏರ್ಲೈನ್ಸ್ ವಿಮಾನ IC-814 ಅನ್ನು ಅಪಹರಿಸಿದವರಲ್ಲಿ ಅಬ್ದುಲ್ ರೌಫ್ ಅಜರ್ ಕೂಡ ಒಬ್ಬರಾಗಿನಾಗಿದ್ದ. ಹರ್ಕತ್-ಉಲ್-ಮುಜಾಹಿದ್ದೀನ್ನ ಐದು ಭಯೋತ್ಪಾದಕರು ವಿಮಾನವನ್ನು ಅಪಹರಿಸಿ ತಾಲಿಬಾನ್ ನಿಯಂತ್ರಿತ ಅಫ್ಘಾನಿಸ್ತಾನಕ್ಕೆ ಕರೆದುಕೊಂಡು ಹೋಗಿದ್ದರು. ವಿಮಾನದಲ್ಲಿದ್ದ ಪ್ರಯಾಣಿಕರ ವಿನಿಮಯದ ಭಾಗವಾಗಿ ಮಸೂದ್ ಅಜರ್ನನ್ನು ಬಿಡುಗಡೆ ಮಾಡಬೇಕಾಯಿತು. ಬಿಡುಗಡೆಯಾದ ನಂತರ, ಮಸೂದ್ ಅಜರ್ ಜೆಇಎಂ ಅನ್ನು ಸ್ಥಾಪಿಸಿದ್ದ, ನಂತರ ಅದು 2001 ರ ಸಂಸತ್ತಿನ ದಾಳಿ ಮತ್ತು 2016 ರ ಸಂಸತ್ತಿನ ದಾಳಿ ಸೇರಿದಂತೆ ಭಾರತೀಯ ನೆಲದಲ್ಲಿ ಹಲವಾರು ದಾಳಿಗಳನ್ನು ನಡೆಸಿತು. 2001 ರ ದಾಳಿಯ ನಂತರ ಪಾಕಿಸ್ತಾನದಲ್ಲಿ ನಿಷೇಧ ಹೇರಲಾಗಿದ್ದರೂ, ಜೈಶ್ ಈಗಲೂ ಉಗ್ರ ಚಟುವಟಿಕೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ.
ಪಾಕಿಸ್ತಾನದ ಒಂಬತ್ತು ಉಗ್ರಗಾಮಿಗಳ ನೆಲೆ ಮೇಲೆ ಬುಧವಾರ ಬೆಳಿಗ್ಗೆ ಭಾರತ ಆಪರೇಷನ್ ಸಿಂದೂರ್ ಹೆಸರಿನಲ್ಲಿ ದಾಳಿ ಮಾಡಿತ್ತು. ಕಾಶ್ಮೀರದಲ್ಲಿ ಎರಡು ವಾರದ ಹಿಂದೆ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರ ಸಂಘಟನೆ ದಾಳಿ ಮಾಡಿತ್ತು ವಿಶ್ವಾದ್ಯಂತ ಖಂಡನೆ ಮಾಡಲಾಗಿತ್ತು. ಭಾರತವು ಪಾಕಿಸ್ತಾನದ ಉಗ್ರರ ಚಟುವಟಿಕೆಗೆ ತಕ್ಕ ಉತ್ತರ ನೀಡುವ ಎಚ್ಚರಿಕೆ ನೀಡಿತ್ತು. ಅದರಂತೆ ಭಾರೀ ದಾಳಿಯನ್ನೇ ಮಾಡಿದ್ದು ಈ ವೇಳೆ ನೂರಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಇದರಲ್ಲಿ ರೌಫ್ ಅಜರ್ ಕೂಡ ಸೇರಿದ್ದಾನೆ. ಈತನ ಜತೆಯಲ್ಲಿ ಇನ್ನೂ ಹಲವು ಉಗ್ರರು ಕೂಡ ಪ್ರಾಣ ಬಿಟ್ಟಿದ್ದು, ಅವರ ವಿವರ ಇನ್ನಷ್ಟೇ ಹೊರ ಬರಬೇಕಿದೆ.