ಪಹಲ್ಗಾಮ್ ದಾಳಿ ನಂತರ ಗಡಿಯಲ್ಲಿ ಹೆಚ್ಚಾಯಿತು ಭಾರತದ ರಫೇಲ್ ಹಾರಾಟ, ಪಾಕ್ನಲ್ಲಿ ಶುರುವಾಗಿದೆ ಪರದಾಟ; ಆಕ್ರಮಣದ 3 ಟಾರ್ಗೆಟ್ಗಳಿವು
ಭಾರತ- ಪಾಕ್ ಬಿಕ್ಕಟ್ಟು: ಕಾಶ್ಮೀರದ ಪಹಲ್ಗಾಮ್ ದಾಳಿ ಬಳಿಕ ಉಗ್ರ ನಿಗ್ರಹ ಕಾರ್ಯಾಚರಣೆ ತೀವ್ರಗೊಂಡಿದೆ. ರಾಜತಾಂತ್ರಿಕವಾಗಿ ಮಾತ್ರವಲ್ಲದೇ, ಸೇನಾ ಕಾರ್ಯಾಚರಣೆಗೂ ಭಾರತ ಸಜ್ಜಾಗುತ್ತಿದ್ದು, ಗಡಿಯಲ್ಲಿ ರಫೇಲ್ ಹಾರಾಟ ಹೆಚ್ಚಾಗಿದೆ. ಭಾರತ ಆಕ್ರಮಣ ಮಾಡಬಹುದಾದ ಸಾಧ್ಯತೆಗಳಿರುವ 3 ಟಾರ್ಗೆಟ್ಗಳ ವಿಚಾರ ಚರ್ಚೆಗೆ ಒಳಗಾಗಿದೆ.

ಭಾರತ- ಪಾಕ್ ಬಿಕ್ಕಟ್ಟು: ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರದಲ್ಲಿ ಉಗ್ರ ನಿಗ್ರಹದ ಕಡೆಗೆ ಭಾರತ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಗಮನಹರಿಸಿದೆ. ಈಗಾಗಲೇ ಜಮ್ಮು- ಕಾಶ್ಮೀರದಲ್ಲಿ ಕೂಂಬಿಂಗ್ ಆಪರೇಷನ್ ಬಿಗಿಗೊಳಿಸಿದೆ. ಉಗ್ರರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಅವರ ಮನೆಗಳ ಶೋಧ, ತಪಾಸಣೆ ನಡೆದಿದೆ. ಈ ನಡುವೆ, ಗಡಿಭಾಗದಲ್ಲಿ ಕೂಡ ಉಗ್ರರು ಒಳನುಸುಳದಂತೆ ತಡೆಯಲು ಭಾರತೀಯ ಸೇನೆ ಹೆಚ್ಚು ನಿಗಾವಹಿಸಿದ್ದು, ಬುಧವಾರ ಇಬ್ಬರು ಉಗ್ರರನ್ನು ಹೊಡೆದುರುಳಿಸಿತ್ತು. ಇದಲ್ಲದೆ, ಸದ್ಯ ಗಡಿ ಭಾಗದಲ್ಲಿ ಭಾರತೀಯ ವಾಯುಪಡೆ ತನ್ನ ರಫೇಲ್ ವಿಮಾನಗಳನ್ನು ಗಸ್ತಿಗೆ ನಿಯೋಜಿಸಿದೆ. ಇದು ಪಾಕಿಸ್ತಾನವನ್ನು ತಲ್ಲಣಗೊಳಿಸಿದೆ.
ಬಂಕರ್ಗಳಲ್ಲೇ ಜಾಗೃತರಾಗಿರಿ; ಸೈನಿಕರಿಗೆ ಪಾಕ್ ಸೇನೆ ಸೂಚನೆ
ಭಾರತ- ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ತಲೆದೋರಿದೆ. ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆ ಸಮೀಪ ತನ್ನ ಸೈನಿಕರ ಸಂಖ್ಯೆ ಹೆಚ್ಚಿಸಿದೆ. ಆದರೆ, ಬಂಕರ್ ಒಳಗೆ ಜಾಗೃತರಾಗಿ ಇರುವಂತೆ ಯೋಧರಿಗೆ ಆದೇಶಿಸಿದೆ. ಅಂತಾರಾಷ್ಟ್ರೀಯ ಗಡಿ ಭಾಗದಲ್ಲೂ ಪಾಕಿಸ್ತಾನ ತಳಮಳಕ್ಕೀಡಾಗಿದೆ. ಪಾಕ್ ಸೇನೆಯ 10ನೇ ದಳದ ಪ್ರಧಾನ ಕಚೇರಿ ರಾವಲ್ಪಿಂಡಿಯಲ್ಲಿದ್ದು, ಪಾಕ್ ಸೇನಾ ಮುಖ್ಯಸ್ಥರು ಹೈ ಅಲರ್ಟ್ ಘೋಷಿಸಿದ್ದಾರೆ. ಗುಜ್ರಾನ್ವಾಲಾದ ಪ್ರದಾನ ಕಚೇರಿ, ಸಿಯಾಲ್ ಕೋಟ್ ಕಚೇರಿಗೂ ಜಾಗೃತಾಗಿರಲು ಆದೇಶ ನೀಡಿದ್ದಾರೆ. ಪಾಕಿಸ್ತಾನದ ಆತಂಕ್ಕೆ ಏನು ಕಾರಣ - ನೋಡೋಣ.
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶುಕ್ರವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. 15 ಕಾರ್ಪ್ಸ್ನಲ್ಲಿ ಭದ್ರತಾ ಸಭೆ ನಡೆಸಿರುವ ಅವರು, ಭಯೋತ್ಪಾದಕರು ಭೇಟಿ ನೀಡಿದ ಸ್ಥಳ ಪರಿಶೀಲನೆ ನಡೆಸುತ್ತಾರೆ. ಈ ವಿದ್ಯಮಾನವು ಪಾಕ್ನಲ್ಲಿ ತಲ್ಲಣ ಸೃಷ್ಟಿಸಿದೆ. ಭಾರತದ ಆಯ್ಕೆ ಮಾಡಬಹುದಾದ ಆಕ್ರಮಣಕಾರಿ ಕ್ರಮ ಯಾವುದು ಎಂಬುದು ಗೊತ್ತಾಗದಿರುವುದೇ ಪಾಕ್ ತಲ್ಲಣಕ್ಕೆ ಕಾರಣ.
ಉಗ್ರ ನಿಗ್ರಹಕ್ಕೆ ಭಾರತದ ಮುಂದಿರುವ 3 ಆಕ್ರಮಣ ಟಾರ್ಗೆಟ್ಗಳು
ಭಾರತದ ಉದ್ದಗಲಕ್ಕೂ ಉಗ್ರರನ್ನು ಮಟ್ಟ ಹಾಕಬೇಕು ಎಂಬ ಕೂಗು ಮಾರ್ದನಿಸುತ್ತಿದೆ. ಇದಕ್ಕೆ ಪೂರಕವಾಗಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ಮಧುಬನಿಯಿಂದ ಜಗತ್ತಿಗೆ ಒಂದು ಸಂದೇಶ ರವಾನಿಸಿದರು. ಉಗ್ರಗಾಮಿಗಳು ಹಾಗೂ ಅವರ ಸಮರ್ಥಕರನ್ನು ಶಿಕ್ಷಿಸದೇ ಬಿಡುವುದಿಲ್ಲ. ಅವರ ಕಲ್ಪನೆಗೂ ಮೀರಿದ ರೀತಿಯಲ್ಲಿ ಅವರಿಗೆ ಶಿಕ್ಷೆ ಸಿಗಲಿದೆ ಎಂದು ಪ್ರಧಾನಿ ಮೋದಿ ಎಚ್ಚರಿಸಿದ್ದಾರೆ. ಹೀಗಾಗಿ, ಭಾರತದ ಎದುರು ಸದ್ಯ ಇರುವಂತಹ 3 ಆಕ್ರಮಣ ಸಾಧ್ಯತೆಗಳ ಕಡೆಗೊಮ್ಮೆ ಗಮನಹರಿಸೋಣ.
ಟಾರ್ಗೆಟ್ 1: ಭಯೋತ್ಪಾದಕ ಅಡಗುತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸುವಂಥದ್ದು. ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿ ಇದೆ. ಅದರ ಮೇಲೆ ಕ್ಷಿಪಣಿ ದಾಳಿ ಮಾಡಬಹುದು.
ಟಾರ್ಗೆಟ್ 2: ಪಾಕಿಸ್ತಾನ ಮುರೀಡ್ಕೆ. ಅಲ್ಲಿ ಭಾರತಕ್ಕೆ ಬೇಕಾದ ಉಗ್ರ ಹಫೀಜ್ ಸಯೀದ್ನ ಭಯೋತ್ಪಾದಕ ಸಂಘಟನೆ ಲಷ್ಕರ್ ಏ ತೊಯ್ಬಾದ ಪ್ರಧಾನ ಕಚೇರಿ ಇದೆ. ಭಾರತದಲ್ಲಿ ವಿಶೇಷವಾಗಿ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗೆ ಒತ್ತಾಸೆಯಾಗಿ ನಿಂತಿರುವ ಸಂಘಟನೆ ಇದಾಗಿದ್ದು, ಇದರ ಮೇಲೆ ದಾಳಿ ನಡೆಸಬಹುದು.
ಟಾರ್ಗೆಟ್ 3: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ಯಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಶಿಬಿರಗಳು ಉಡಾವಣಾ ಪ್ಯಾಡ್ಗಳನ್ನು ನಾಶ ಮಾಡಬಹುದು. ವಾಯುದಾಳಿಗೆ ರಫೇಲ್ ಯುದ್ಧ ವಿಮಾನವನ್ನೂ ಬ್ರಹ್ಮೋಸ್, ಪೃಥ್ವಿ ಮುಂತಾದ ಕ್ಷಿಪಣಿಗಳನ್ನೂ ದಾಳಿಗೆ ಬಳಸಬಹುದು.
ಕೇಂದ್ರ ವಲಯದಲ್ಲಿ ವಾಯುಪಡೆಯು ಯುದ್ಧ ತಾಲೀಮು
ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಭಾರತೀಯ ವಾಯುಪಡೆಯು ಕೇಂದ್ರ ವಲಯದಲ್ಲಿ ‘ಯುದ್ಧ ತಾಲೀಮು’ ಪ್ರಾರಂಭಿಸಿದೆ. ಇದು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಇದರಲ್ಲಿ ಭಾರತೀಯ ವಾಯುಪಡೆಯ ಪ್ರಮುಖ ಫೈಟರ್ ಜೆಟ್ ಫ್ಲೀಟ್ - ವಿಶೇಷವಾಗಿ ರಫೇಲ್ ಮತ್ತು ಸುಖೋಯ್ -30 ಎಂಕೆಐ ಸೇರಿವೆ. ಭಾರತೀಯ ವಾಯುಪಡೆಯು 2 ರಫೇಲ್ ಸ್ಕ್ವಾಡ್ರನ್ಗಳನ್ನು ಹೊಂದಿದ್ದು, ಅವುಗಳನ್ನು ಅಂಬಾಲಾ (ಪಂಜಾಬ್) ಮತ್ತು ಹಶಿಮಾರಾ (ಪಶ್ಚಿಮ ಬಂಗಾಳ) ದಲ್ಲಿ ನಿಯೋಜಿಸಲಾಗಿದೆ. ಈ ಅತ್ಯಾಧುನಿಕ ಜೆಟ್ಗಳ ಸಹಾಯದಿಂದ, ಪೈಲಟ್ಗಳು ನೆಲದ ಮೇಲೆ ದಾಳಿ ಮತ್ತು ಎಲೆಕ್ಟ್ರಾನಿಕ್ ಯುದ್ಧದಂತಹ ಸಂಕೀರ್ಣ ಕಾರ್ಯಾಚರಣೆ ಅಭ್ಯಾಸ ನಡೆಯುತ್ತಿದೆ.