ಪಹಲ್ಗಾಮ್ ಉಗ್ರ ದಾಳಿ ಬೆಂಬಲಿಸಿದ ಪಾಕ್‌ ವಿರುದ್ಧ ಭಾರತ ಯಾವ ರೀತಿಯ ಸೇನಾ ಕಾರ್ಯಾಚರಣೆ ಕೈಗೊಳ್ಳಬಹುದು, 6 ಸಾಧ್ಯತೆಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪಹಲ್ಗಾಮ್ ಉಗ್ರ ದಾಳಿ ಬೆಂಬಲಿಸಿದ ಪಾಕ್‌ ವಿರುದ್ಧ ಭಾರತ ಯಾವ ರೀತಿಯ ಸೇನಾ ಕಾರ್ಯಾಚರಣೆ ಕೈಗೊಳ್ಳಬಹುದು, 6 ಸಾಧ್ಯತೆಗಳು

ಪಹಲ್ಗಾಮ್ ಉಗ್ರ ದಾಳಿ ಬೆಂಬಲಿಸಿದ ಪಾಕ್‌ ವಿರುದ್ಧ ಭಾರತ ಯಾವ ರೀತಿಯ ಸೇನಾ ಕಾರ್ಯಾಚರಣೆ ಕೈಗೊಳ್ಳಬಹುದು, 6 ಸಾಧ್ಯತೆಗಳು

ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಮುಂದಿನ ಕೆಲವು ದಿನಗಳಲ್ಲಿ ಭಾರತ ತಮ್ಮ ದೇಶದ ವಿರುದ್ಧ ಮಿಲಿಟರಿ ದಾಳಿ ನಡೆಸಬಹುದು ಎಂಬ "ವಿಶ್ವಾಸಾರ್ಹ ಗುಪ್ತಚರ" ಮಾಹಿತಿ ಲಭಿಸಿದೆ ಎಂದು ಕಳೆದ ಬುಧವಾರ ಪಾಕಿಸ್ತಾನ ಹೇಳಿತ್ತು. ಪಾಕ್‌ ವಿರುದ್ಧ ಭಾರತ ಕೈಗೊಳ್ಳುವ ಸಾಧ್ಯತೆ ಇರುವ 6 ಸೇನಾ ಕಾರ್ಯಾಚರಣೆ ಸಾಧ್ಯತೆಗಳಿವು. (ಬರಹ- ಪರಿಣಿತಾ, ಬೆಂಗಳೂರು)

ಪಹಲ್ಗಾಮ್ ಉಗ್ರ ದಾಳಿ ಬೆಂಬಲಿಸಿದ ಪಾಕ್‌ ವಿರುದ್ಧ ಭಾರತ ಯಾವ ರೀತಿಯ ಸೇನಾ ಕಾರ್ಯಾಚರಣೆಯ 6 ಸಾಧ್ಯತೆಗಳ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ಪಹಲ್ಗಾಮ್ ಉಗ್ರ ದಾಳಿ ಬೆಂಬಲಿಸಿದ ಪಾಕ್‌ ವಿರುದ್ಧ ಭಾರತ ಯಾವ ರೀತಿಯ ಸೇನಾ ಕಾರ್ಯಾಚರಣೆಯ 6 ಸಾಧ್ಯತೆಗಳ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ) (AP)

ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಮುಂದಿನ ಕೆಲವು ದಿನಗಳಲ್ಲಿ ಭಾರತ ತಮ್ಮ ದೇಶದ ವಿರುದ್ಧ ಮಿಲಿಟರಿ ದಾಳಿ ನಡೆಸಬಹುದು ಎಂಬ "ವಿಶ್ವಾಸಾರ್ಹ ಗುಪ್ತಚರ" ಮಾಹಿತಿ ಲಭಿಸಿದೆ ಎಂದು ಕಳೆದ ಬುಧವಾರ ಪಾಕಿಸ್ತಾನ ಹೇಳಿತ್ತು. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಹತ್ಯೆಯಾದ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಸರಣಿ ಭದ್ರತಾ ಸಭೆಗಳನ್ನು ನಡೆಸಿದ್ದು, ಇದು ಪಾಕ್ ವಿರುದ್ಧ ಭಾರತ ಮಿಲಿಟರಿ ಕಾರ್ಯಾಚರಣೆ ನಡೆಸಬಹುದೆಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿತ್ತು.

ಪಹಲ್ಗಾಮ್ ದಾಳಿ ನಂತರ ಪಾಕ್ ಜತೆಗಿನ ಭಾರತದ ಸಂಬಂಧ ಹದಗೆಟ್ಟಿದೆ. ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡಲೇಬೇಕು ಎಂದು ಭಾರತೀಯರು ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಭಾರತ ಪಾಕಿಸ್ತಾನದ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಿದರೆ ಅದು ಹೇಗಿರಲಿದೆ? ಇತಿಹಾಸ ಏನು ಹೇಳುತ್ತದೆ? ನೋಡೋಣ ಬನ್ನಿ

ಇಲ್ಲಿವರೆಗೆ ಏನೇನಾಯ್ತು?

ಬುಧವಾರ ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್, ಭಾರತ "ಮುಂದಿನ 24 ರಿಂದ 36 ಗಂಟೆಗಳಲ್ಲಿ" ಪಾಕಿಸ್ತಾನದ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳಲು ಯೋಜಿಸುತ್ತಿದೆ ಎಂಬ "ವಿಶ್ವಾಸಾರ್ಹ ಗುಪ್ತಚರ" ಮಾಹಿತಿ ನಮಗೆ ಸಿಕ್ಕಿದೆ. ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ ನಾವು ಹೊಣೆ ಎಂದು ಆಧಾರರಹಿತ ಆರೋಪ ಮಾಡಿರುವ ಮಾಡಿರುವ ಭಾರತದ ಈ ರೀತಿ ಪ್ರತೀಕಾರ ಮಾಡಲಿದೆ ಎಂದು ಹೇಳಲಾಗುತ್ತಿದೆ ಎಂದಿದ್ದರು.

ಪಹಲ್ಗಾಮ್ ದಾಳಿಯಲ್ಲಿ ಪಾಕ್ ಕೈವಾಡವಿದೆ ಎಂದು ಭಾರತ ಆರೋಪಿಸಿದ್ದು, ಇದನ್ನು ಪಾಕಿಸ್ತಾನ ನಿರಾಕರಿಸಿದೆ. ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯಿಸಲು ಮೋದಿ ಭಾರತೀಯ ಸೇನೆಗೆ "ಸಂಪೂರ್ಣ ಕಾರ್ಯಾಚರಣೆ ಸ್ವಾತಂತ್ರ್ಯ" ನೀಡಿದ ಒಂದು ದಿನದ ನಂತರ ತರಾರ್ ಅವರ ಹೇಳಿಕೆ ಬಂದಿದೆ ಎಂದು ಹೆಸರುಹೇಳಲು ಬಯಸದ ಹಿರಿಯ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಹಲವಾರು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಏತನ್ಮಧ್ಯೆ, ಭಾರತ ಮತ್ತು ಪಾಕಿಸ್ತಾನ ಆಡಳಿತದ ಕಾಶ್ಮೀರವನ್ನು ವಿಭಜಿಸುವ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ನೆರೆಹೊರೆಯವರು ಗುಂಡಿನ ಚಕಮಕಿಯನ್ನು ಮುಂದುವರಿಸುತ್ತಿದ್ದಂತೆ, ವಿಶ್ವದ ಇತರ ನಾಯಕರು ಉದ್ವಿಗ್ನತೆಯನ್ನು ಶಾಂತಗೊಳಿಸಲು ಕರೆ ನೀಡಿದ್ದಾರೆ.

"ನಾವು ಎರಡೂ ದೇಶಗಳನ್ನು ಸಂಪರ್ಕಿಸುತ್ತಿದ್ದು ಪರಿಸ್ಥಿತಿ ಉಲ್ಬಣಗೊಳಿಸಬೇಡಿ ಎಂದು ಅವರಿಗೆ ಹೇಳುತ್ತಿದ್ದೇವೆ" ಎಂದು ಯುನೈಟೆಡ್ ಸ್ಟೇಟ್ಸ್ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ. ಮಂಗಳವಾರ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ವಕ್ತಾರರು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಭಾರತೀಯ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮಾತನಾಡಿ ಪರಿಸ್ಥಿತಿ ಉಲ್ಬಣವಾಗುವುದನ್ನು ತಡೆಯಲು ಸಹಾಯ ಮಾಡುವ ಭರವಸೆ ನೀಡಿದ್ದಾರೆ.

ಭಾರತ ಯಾವ ಮಿಲಿಟರಿ ಕ್ರಮ ಕೈಗೊಳ್ಳಬಹುದು?

ಪಾಕಿಸ್ತಾನದ ವಿರುದ್ಧ ಭಾರತ ಯಾವ ಕ್ರಮ ಕೈಗೊಳ್ಳಬಹುದು ಎಂಬುದು ಹೇಳಲು ಸಾಧ್ಯವಿಲ್ಲ. ಆದರೆ ಈ ಹಿಂದೆ ಭಾರತ ಹಲವಾರು ಮಿಲಿಟರಿ ತಂತ್ರಗಳನ್ನು ಬಳಸಿದೆ. ಅವುಗಳು ಈ ರೀತಿ ಇದ್ದವು.

1) ರಹಸ್ಯ ಮಿಲಿಟರಿ ಕಾರ್ಯಾಚರಣೆಗಳು

ರಹಸ್ಯ ಮಿಲಿಟರಿ ದಾಳಿ ನಡೆಸಿರುವ ಬಗ್ಗೆ ಎಲ್ಲೂ ಹೇಳಿಲ್ಲ, ದೃಢೀಕರಿಸಲೂ ಇಲ್ಲ. ಆದರೆ ದಶಕಗಳಲ್ಲಿ, ಭಾರತ ಮತ್ತು ಪಾಕಿಸ್ತಾನಗಳು ಪರಸ್ಪರ ನಿಯಂತ್ರಿಸಲ್ಪಡುವ ಪ್ರದೇಶದ ಮೇಲೆ ಹಲವಾರು ರಹಸ್ಯ ದಾಳಿಗಳನ್ನು ನಡೆಸಿವೆ. ಈ ದಾಳಿ ವೇಳೆ ಮಿಲಿಟರಿ ಪೋಸ್ಟ್‌ಗಳನ್ನು ಗುರಿಯಾಗಿಸಿ, ಸೈನಿಕರ ಹತ್ಯೆ ಮಾಡಲಾಗಿದೆ. ಕೆಲವೊಮ್ಮೆ ಶತ್ರುಗಳ ಪಡೆಗಳ ಶಿರಚ್ಛೇದವೂ ನಡೆದಿದೆ.

ಈ ದಾಳಿಗಳನ್ನು ಹೆಚ್ಚಾಗಿ ಈ ಹಿಂದೆ ದಾಳಿಗೊಳಗಾದ ಮಿಲಿಟರಿ ಘಟಕವು ಪ್ರತೀಕಾರವಾಗಿ ನಡೆಸುತ್ತದೆ. ಆದರೆ ಅಂತಹ ದಾಳಿಗಳನ್ನು ಎಂದಿಗೂ ದೃಢೀಕರಿಸಲಾಗುವುದಿಲ್ಲ. ಈ ದಾಳಿ ಮೂಲಕ ನಮ್ಮ ದೇಶದ ತಂಟೆಗೆ ಬರಬೇಡಿ ಎಂಬ ಖಡಕ್ ಸಂದೇಶ ನೀಡಲಾಗುತ್ತದೆ.

2) ಪ್ರಚಾರದಿಂದ ಕೂಡಿದ 'ಸರ್ಜಿಕಲ್ ಸ್ಟ್ರೈಕ್‌ಗಳು'

ಕೆಲವೊಮ್ಮೆ, ಇದರ ಉದ್ದೇಶ ಸೂಕ್ಷ್ಮ ಸಂದೇಶಗಳನ್ನು ಕಳುಹಿಸುವುದಲ್ಲ. ಆದರೆ ದಾಳಿ ಬಗ್ಗೆ ದೇಶದ ನಾಗರಿಕರಿಗೆ ತಿಳಿಸುವ ಮೂಲಕ ಇನ್ನೊಂದು ದೇಶವನ್ನು ಮುಜುಗರಕ್ಕೀಡು ಮಾಡುವುದು. ಇದು ರಾಜಕೀಯವಾಗಿ ಹಾನಿ ಮಾಡುವುದಿಲ್ಲ. ಭಾರತವು ಹಿಂದೆ 2016 ರಲ್ಲಿ ಎಲ್‌ಒಸಿಯಾದ್ಯಂತ ನಿರ್ದಿಷ್ಟ, ಆಯ್ಕೆಮಾಡಿದ ಗುರಿಗಳ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಗಳನ್ನು ನಡೆಸಿದೆ.

ಭಾರತದ ಆಡಳಿತದಲ್ಲಿರುವ ಕಾಶ್ಮೀರದ ಉರಿಯಲ್ಲಿ 17 ಭಾರತೀಯ ಯೋಧರ ಹತ್ಯೆಗೆ ಪ್ರತೀಕಾರವಾಗಿ, ಭಾರತೀಯ ಸೇನೆಯ ವಿಶೇಷ ಪಡೆಗಳು ವಾಸ್ತವಿಕ ಗಡಿಯನ್ನು ದಾಟಿ "ಲಾಂಚ್ ಪ್ಯಾಡ್‌ಗಳ" ಮೇಲೆ ದಾಳಿ ಮಾಡಿತ್ತು, ಈ ಲಾಂಚ್ ಪ್ಯಾಡ್‌ಗಳಿಂದ ಉಗ್ರರು ಮತ್ತೆ ಮೇಲೆ ದಾಳಿ ಮಾಡಲು ಯೋಜಿಸುತ್ತಿದ್ದಾರೆ ಭಾರತ ಆರೋಪಿಸಿತ್ತು.

ಉಗ್ರರ ಒಳನುಸುಳುವಿಕೆ ಮತ್ತು ದಾಳಿಯ ಅಪಾಯವನ್ನು ತಡೆಯುವುದು ಕಾರ್ಯಾಚರಣೆಗಳ ಮುಖ್ಯ ಗುರಿಯಾಗಿತ್ತು ಎಂದು ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಸರ್ಜಿಕಲ್ ಸ್ಟ್ರೈಕ್‌ ಬಗ್ಗೆ ಹೇಳಿಕೆ ನೀಡಿದ್ದರು.

ಸರ್ಜಿಕಲ್ ಸ್ಟ್ರೈಕ್‌ ವೇಳೆ ಡಜನ್‌ಗಟ್ಟಲೆ ಉಗ್ರರನ್ನು ಹತ್ಯೆ ಮಾಡಿದೆ ಎಂದು ಭಾರತ ಹೇಳಿಕೊಂಡರೂ, ಸ್ವತಂತ್ರ ವಿಶ್ಲೇಷಕರು ಸಾವಿನ ಸಂಖ್ಯೆ ತುಂಬಾ ಕಡಿಮೆ ಎಂದು ಹೇಳಿದ್ದಾರೆ.

3) ವೈಮಾನಿಕ ದಾಳಿಗಳು

ಫೆಬ್ರವರಿ 2019 ರಲ್ಲಿ ಕಾಶ್ಮೀರದ ಪುಲ್ವಾಮಾದಲ್ಲಿ, ರಾಷ್ಟ್ರೀಯ ಚುನಾವಣೆಗಳಿಗೆ ವಾರಗಳ ಮೊದಲು ಆತ್ಮಾಹುತಿ ಬಾಂಬರ್ ನಡೆಸಿದ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹತರಾಗಿದ್ದರು. ಪಾಕಿಸ್ತಾನದ ಜೈಶ್-ಎ-ಮುಹಮ್ಮದ್ ಸಂಘಟನೆ ಈ ದಾಳಿ ನಡೆಸಿತ್ತು.

ಇದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಪಾಕಿಸ್ತಾನ ಆಡಳಿತದಲ್ಲಿರುವ ಕಾಶ್ಮೀರದ ಮೇಲೆ ವೈಮಾನಿಕ ದಾಳಿ ನಡೆಸಿತು. ಭಾರತ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿ ಹಲವಾರು ಉಗ್ರರನ್ನು ಸದೆಬಡಿದಿದೆ ಎಂದು ಹೇಳಿದೆ.

ಏತನ್ಮಧ್ಯೆ, ಭಾರತೀಯ ಜೆಟ್‌ಗಳು ಅರಣ್ಯ ಪ್ರದೇಶದ ಮೇಲೆ ದಾಳಿ ಮಾಡಿದ್ದು, ಅಲ್ಲಿ ಯಾರನ್ನೂ ಹತ್ಯೆ ಮಾಡಿಲ್ಲ. ನಾವು ಭಾರತದ ಜೆಟ್‌ಗಳನ್ನು ಬೆನ್ನಟ್ಟಿ ಓಡಿಸಿದ್ದೇವೆ ಎಂದು ಪಾಕಿಸ್ತಾನ ಪ್ರತಿಕ್ರಯಿಸಿತ್ತು.

ಆದರೆ ಒಂದು ದಿನದ ನಂತರ, ಭಾರತ ಮತ್ತು ಪಾಕಿಸ್ತಾನದ ಫೈಟರ್ ಜೆಟ್‌ಗಳು ಮತ್ತೆ ಯುದ್ಧದಲ್ಲಿ ತೊಡಗಿದವು. ಪಾಕಿಸ್ತಾನವು ನಿಯಂತ್ರಿಸುವ ಪ್ರದೇಶದೊಳಗೆ ಭಾರತೀಯ ವಿಮಾನವನ್ನು ಹೊಡೆದುರುಳಿಸಿದ ಪಾಕ್ ಸೇನೆ ಭಾರತೀಯ ಫೈಟರ್ ಪೈಲಟ್ ಅನ್ನು ಸೆರೆಹಿಡಿದು ಕೆಲವು ದಿನಗಳ ನಂತರ ಆತನನ್ನು ಬಂಧಮುಕ್ತ ಮಾಡಿತ್ತು.

4) ಪಾಕ್‌ ಆಕ್ರಮಿತ ಭೂಮಿ ವಶಪಡಿಸಿಕೊಳ್ಳುವ ಪ್ರಯತ್ನ

ಕಳೆದ ಕೆಲವು ವರ್ಷಗಳಿಂದ ಭಾರತ, ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಬೇಕು ಎಂಬ ಒತ್ತಾಯ ಕೇಳಿ ಬರುತ್ತಲೇ ಇದೆ. ಪಹಲ್ಗಾಮ್ ದಾಳಿಯ ನಂತರ ಇತ್ತೀಚಿನ ದಿನಗಳಲ್ಲಿ ಈ ಒತ್ತಾಯ ಮತ್ತಷ್ಟು ಹೆಚ್ಚಿದೆ. ವಿರೋಧ ಪಕ್ಷ ಕಾಂಗ್ರೆಸ್ ನಾಯಕರು ಸಹ ಮೋದಿ ಸರ್ಕಾರವು ಆ ಪ್ರದೇಶವನ್ನು ಮರಳಿ ಪಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವುದು ಭಾರತೀಯ ಸರ್ಕಾರದ ನೀತಿ ಉದ್ದೇಶವಾಗಿ ಉಳಿದಿದ್ದರೂ, ಎರಡೂ ಕಡೆಯ ಮಿಲಿಟರಿ ಸಾಮರ್ಥ್ಯಗಳು ಅಂತಹ ಪ್ರಯತ್ನವನ್ನು ಅಸಂಭವವಾಗಿಸುತ್ತದೆ.

ಆದರೂ, ಪಾಕಿಸ್ತಾನದಿಂದ ವಿವಾದಿತ ಪ್ರದೇಶವನ್ನು ಯಶಸ್ವಿಯಾಗಿ ವಶಪಡಿಸಿಕೊಂಡ ದಾಖಲೆ ಭಾರತಕ್ಕಿದೆ.

1984 ರಲ್ಲಿ, ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆ ಆಪರೇಷನ್ ಮೇಘದೂತ್ ಮೂಲಕ ಹಿಮಾಲಯದಲ್ಲಿರುವ ಸಿಯಾಚಿನ್ ಹಿಮನದಿಯನ್ನು ವಶಪಡಿಸಿಕೊಂಡಿದ್ದು, ಪಾಕಿಸ್ತಾನ ಸೇನೆ ಪ್ರವೇಶಿಸುವುದನ್ನು ತಡೆಯಿತು.

5) ನೌಕಾ ಕಾರ್ಯಾಚರಣೆಗಳು

ಪಹಲ್ಗಾಮ್ ದಾಳಿಯ ನಂತರ, ಭಾರತೀಯ ನೌಕಾಪಡೆಯು ಪರೀಕ್ಷಾ ಕ್ಷಿಪಣಿ ದಾಳಿಗಳನ್ನು ನಡೆಸಿರುವುದಾಗಿ ಹೇಳಿದೆ. "ಭಾರತೀಯ ನೌಕಾಪಡೆಯ ಹಡಗುಗಳು ದೀರ್ಘ ವ್ಯಾಪ್ತಿಯ ನಿಖರ ಆಕ್ರಮಣಕಾರಿ ದಾಳಿಗೆ ವೇದಿಕೆಗಳು, ವ್ಯವಸ್ಥೆಗಳು ಮತ್ತು ಸಿಬ್ಬಂದಿಗಳ ಸನ್ನದ್ಧತೆಯನ್ನು ಮರುಮೌಲ್ಯಮಾಪನ ಮಾಡಲು ಮತ್ತು ಪ್ರದರ್ಶಿಸಲು ಹಲವಾರು ದಾಳಿಗಳನ್ನು ಯಶಸ್ವಿಯಾಗಿ ನಡೆಸಿವೆ ಎಂದು ನೌಕಾಪಡೆ ಏಪ್ರಿಲ್ 27 ರಂದು ಹೇಳಿಕೆಯಲ್ಲಿ ತಿಳಿಸಿದೆ.

ಅನೇಕ ವಿಶ್ಲೇಷಕರು ಈ ಪ್ರಯೋಗಗಳು ಬಲ ಪ್ರದರ್ಶನವಾಗಿದ್ದು, ಪಾಕಿಸ್ತಾನದ ಪ್ರದೇಶದ ಮೇಲೆ ಭಾರತೀಯ ನೌಕಾಪಡೆ ದಾಳಿ ಮಾಡಬಲ್ಲದು ಎಂಬ ಸಾಮರ್ಥ್ಯವನ್ನು ತೋರಿಸಿದೆ ಎಂದಿದ್ದಾರೆ.

6) ಪೂರ್ಣ ಪ್ರಮಾಣದ ಮಿಲಿಟರಿ ಸಂಘರ್ಷ

ಭಾರತ ಮತ್ತು ಪಾಕಿಸ್ತಾನ ತಮ್ಮ ಸ್ವತಂತ್ರ ಅಸ್ತಿತ್ವದ 78 ವರ್ಷಗಳಲ್ಲಿ ನಾಲ್ಕು ಬಾರಿ ಯುದ್ಧ ಮಾಡಿವೆ. ಕಾಶ್ಮೀರಕ್ಕಾಗಿಯೇ ಮೂರು ಯುದ್ಧಗಳು ನಡೆದಿವೆ.

ಭಾರತ ಮತ್ತು ಪಾಕಿಸ್ತಾನ ಎಂದು ವಿಭಜನೆಯಾಗಿ ಬ್ರಿಟಿಷ್ ಸರ್ಕಾರವು 1947 ಆಗಸ್ಟ್ ತಿಂಗಳಲ್ಲಿ ದೇಶದಿಂದ ಹೊರ ಹೋದ ನಂತರ ಕಾಶ್ಮೀರಕ್ಕಾಗಿ ಮೊದಲ ಯುದ್ಧ ನಡೆದಿತ್ತು. ಆಗ ಇದ್ದದ್ದು ರಾಜರ ಆಡಳಿತ. ಪಾಕ್ ಸೇನಾಪಡೆಗಳು ಕಾಶ್ಮೀರವನ್ನು ಆಕ್ರಮಿಸಿ ನಿಯಂತ್ರಣ ಪಡೆಯಲು ಪ್ರಯತ್ನಿಸಿದವು. ರಾಜ ಹರಿ ಸಿಂಗ್ ಭಾರತ ಸರ್ಕಾರದ ಸಹಾಯ ಕೋರಿದರು. ಆಗ ಸರ್ಕಾರ, ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಒಪ್ಪಂದ ಪತ್ರಕ್ಕೆ ಸಹಿ ಹಾಕಬೇಕೆಂಬ ಷರತ್ತು ಮುಂದಿಟ್ಟಿತ್ತು. ರಾಜ ಹರಿಸಿಂಗ್ ಈ ಷರತ್ತು ಒಪ್ಪಿಕೊಂಡರು.

ಜನವರಿ 1, 1949 ರಂದು ಯುದ್ಧವಿರಾಮ ಒಪ್ಪಂದದೊಂದಿಗೆ ಯುದ್ಧ ಕೊನೆಗೊಂಡಿತು. ಅಂದಿನಿಂದ ಭಾರತ ಮತ್ತು ಪಾಕಿಸ್ತಾನ ಎರಡೂ ಕಾಶ್ಮೀರದ ಕೆಲವು ಭಾಗಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿವೆ.

1965 ರಲ್ಲಿ ಗಡಿ ಪಡೆಗಳ ನಡುವಿನ ಘರ್ಷಣೆ ಪೂರ್ಣ ಪ್ರಮಾಣದ ಯುದ್ಧವಾಗಿ ಉಲ್ಬಣಗೊಂಡಿತು. ಪಾಕಿಸ್ತಾನಿ ಪಡೆಗಳು ಕದನ ವಿರಾಮ ರೇಖೆಯನ್ನು ದಾಟಿ ಭಾರತದ ಆಡಳಿತದ ಕಾಶ್ಮೀರಕ್ಕೆ ಪ್ರವೇಶಿಸಿದರೆ, ಭಾರತೀಯ ಪಡೆಗಳು ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಪಾಕಿಸ್ತಾನದ ಲಾಹೋರ್‌ಗೆ ಹೋಗಿ ದಾಳಿ ನಡೆಸಿದವು. ಎರಡೂ ಕಡೆಗಳಲ್ಲಿ ಸಾವಿರಾರು ಸಾವುನೋವುಗಳ ನಂತರ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವು ಯುದ್ಧವನ್ನು ಕೊನೆಗೊಳಿಸಲು ಸಹಾಯ ಮಾಡಿತು.

1971 ರಲ್ಲಿ ಪಾಕಿಸ್ತಾನ ಮತ್ತು ಭಾರತ ಪೂರ್ವ ಪಾಕಿಸ್ತಾನಕ್ಕಾಗಿ ಯುದ್ಥದ ನಡೆಸಿದವು. ಅಲ್ಲಿ ಭಾರತೀಯ ಪಡೆಗಳು ಆ ಪ್ರದೇಶವನ್ನು ಸ್ವತಂತ್ರಗೊಳಿಸಲು ಸಹಾಯ ಮಾಡಿದ್ದು ಇದು ಬಾಂಗ್ಲಾದೇಶದ ಸ್ಥಾಪನೆಗೆ ಕಾರಣವಾಯಿತು. 1972 ರಲ್ಲಿ, ಎರಡೂ ದೇಶಗಳು ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದವು, ಇದು ಎಲ್‌ಒಸಿಯನ್ನು ಸ್ಥಾಪಿಸಿತು.

1999 ರಲ್ಲಿ, ಪಾಕಿಸ್ತಾನ ಸೇನೆ ಎಲ್‌ಒಸಿಯನ್ನು ದಾಟಿ ಬಂದಿದ್ದು ಕಾರ್ಗಿಲ್ ಯುದ್ಧಕ್ಕೆ ಕಾರಣವಾಯಿತು. ಲಡಾಖ್ ನಲ್ಲಿ ನಡೆದ ಈ ಯುದ್ಧದಲ್ಲಿ ಭಾರತೀಯ ಸೇನಾಪಡೆ ಪಾಕ್ ಯೋಧರನ್ನು ಹಿಮ್ಮೆಟ್ಟಿಸಿತ್ತು.

(ಬರಹ- ಪರಿಣಿತಾ, ಬೆಂಗಳೂರು)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.