ಆಲಿಕಲ್ಲು ಮಳೆಗೆ ಒಡೆಯಿತು ಇಂಡಿಗೋ ವಿಮಾನದ ಮೂತಿ; ನಡುಕಕ್ಕೆ ಕಂಗಾಲಾದ್ರು ಪ್ರಯಾಣಿಕರು, ಶ್ರೀನಗರದಲ್ಲಿ ತುರ್ತು ಭೂಸ್ಪರ್ಶ ಮಾಡಿತು ವಿಮಾನ
ಆಲಿಕಲ್ಲು ಮಳೆಗೆ ಇಂಡಿಗೋ ವಿಮಾನದ ಮೂತಿ ಒಡೆದು ಹೋಗಿದ್ದು, ವಿಮಾನದ ನಡುಕಕ್ಕೆ ಪ್ರಯಾಣಿಕರು ಕಂಗಲಾಗಿ ಹೋಗಿದ್ದರು. ಹಾರಾಟ ನಡುವೆ ಈ ಘಟನೆ ಸಂಭವಿಸಿದ್ದು, ವಿಮಾನವು ಶ್ರೀನಗರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಡಿಯೋ ಮತ್ತು ಇತರೆ ವಿವರ ಇಲ್ಲಿದೆ.

ಶ್ರೀನಗರ/ನವದೆಹಲಿ: ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರಕ್ಕೆ ದೆಹಲಿಯಿಂದ ಹೊರಟಿದ್ದ ಇಂಡಿಗೋ ವಿಮಾನದ ಮೂತಿ ಆಲಿಕಲ್ಲು ಮಳೆಗೆ ಒಡೆದುಹೋಗಿದೆ. ಹಾರಾಟದ ನಡುವೆ ಈ ಹಾನಿ ಸಂಭವಿಸಿದ ಕಾರಣ, ವಿಮಾನ ತೀವ್ರ ನಡುಕಕ್ಕೆ ಒಳಗಾಗಿದ್ದು, ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಇಲ್ಲದೇ ಎಲ್ಲರೂ ಸುರಕ್ಷಿತವಾಗಿ ವಿಮಾನ ನಿಲ್ದಾಣದಲ್ಲಿ ಇಳಿದರು. ಹಾನಿಗೀಡಾದ ವಿಮಾನವು ಶ್ರೀನಗರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಎಲ್ಲರೂ ಸುರಕ್ಷಿವಾಗಿ ಇದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಆಲಿಕಲ್ಲು ಮಳೆಗೆ ಒಡೆಯಿತು ಇಂಡಿಗೋ ವಿಮಾನದ ಮೂತಿ; ನಡುಕಕ್ಕೆ ಕಂಗಾಲಾದ್ರು ಪ್ರಯಾಣಿಕರು
ರಾಷ್ಟ್ರ ರಾಜಧಾನಿ ದೆಹಲಿಯಿಂದ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ ವಿಮಾನ (6E 2142) ಹಾರಾಟದಲ್ಲಿದ್ದಾಗ ದಿಢೀರ್ ಆಲಿಕಲ್ಲು ಮಳೆ ಎದುರಿಸಿದೆ. ಇದರಿಂದಾಗಿ ವಿಮಾನದ ಮೂತಿ ಒಡೆದು ಹಾನಿಗೀಡಾಯಿತು. ನಂತರ ವಿಮಾನದಲ್ಲಿ ಉಂಟಾದ ನಡುಕದ ಅನುಭವ ಪ್ರಯಾಣಿಕರಲ್ಲಿ ಭಾರಿ ಆತಂಕ, ಕಳವಳ ಮೂಡಿಸಿತ್ತು.
ಹಾನಿಗೀಡಾದ ಈ ವಿಮಾನವು ಇಂದು (ಮೇ 21) ಸಂಜೆ 6.30ಕ್ಕೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ. ವಿಮಾನ ಸಿಬ್ಬಂದಿ ಪ್ರೊಟೋಕಾಲ್ ಅನ್ನು ಸರಿಯಾಗಿ ಪಾಲಿಸಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿದರು ಎಂದು ಅಧಿಕಾರಿಗಳು ತಿಳಿಸಿದರು.
"ವಿಮಾನ ನಿಲ್ದಾಣದ ತಂಡವು ವಿಮಾನದ ಆಗಮನದ ನಂತರ ಗ್ರಾಹಕರನ್ನು ಉಪಚರಿಸಿದ್ದು, ಅವರ ಯೋಗಕ್ಷೇಮ ಮತ್ತು ಸೌಕರ್ಯಗಳಿಗೆ ಆದ್ಯತೆ ನೀಡಿತು. ವಿಮಾನವನ್ನು ಅಗತ್ಯ ತಪಾಸಣೆ ಮತ್ತು ನಿರ್ವಹಣೆಯ ನಂತರ ಬಿಡುಗಡೆ ಮಾಡಲಾಗುತ್ತದೆ" ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆತಂಕಕಾರಿ ಅನುಭವ ಹಂಚಿಕೊಂಡ ಪ್ರಯಾಣಿಕರು; ವಿಡಿಯೋ ವೈರಲ್
ಹಾನಿಗೀಡಾದ ವಿಮಾನದ ನಡುಕಕ್ಕೆ ಎಲ್ಲರೂ ಪ್ರಾಣ ಕೈಯಲ್ಲಿ ಹಿಡಿದು ಕುಳಿತುಕೊಳ್ಳುವಂತಾಗಿತ್ತು ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅಲ್ಲದೇ ವಿಮಾನದೊಳಗಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
"ನಾನು ಕೂಡ ವಿಮಾನದಲ್ಲಿದ್ದೆ ಮತ್ತು ಶ್ರೀನಗರದಿಂದ ಈಗ ಮನೆಗೆ ಹಿಂದಿರುಗುತ್ತಿದ್ದೇನೆ. ಸಾವನ್ನು ಅತ್ಯಂತ ಸಮೀಪದಿಂದ ಕಂಡ ಅನುಭವವಾಗಿತ್ತು. ವಿಮಾನದ ಮೂಗು ಒಡೆದು ಹೋಗಿ ಹಾನಿಯಾಗಿದೆ ... ವಿಮಾನದೊಳಗೆ ಭೀತಿ ಇತ್ತು. ಜನರು ಕಿರುಚುತ್ತಿದ್ದರು. ಎಲ್ಲರೂ ಭಯಭೀತರಾಗಿದ್ದರು" ಎಂದು ಓವೈಸ್ ಮಕ್ಬೂಲ್ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ.