ಚೀನಾ ಅಮೆರಿಕಾ ಸುಂಕ ಸಮರ! ಭಾರತದ ಮೇಲಾಗುವ ಪರಿಣಾಮಗಳು, ಅನುಕೂಲಗಳೇನು? ರಂಗಸ್ವಾಮಿ ಮೂಕನಹಳ್ಳಿ ಬರಹ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಚೀನಾ ಅಮೆರಿಕಾ ಸುಂಕ ಸಮರ! ಭಾರತದ ಮೇಲಾಗುವ ಪರಿಣಾಮಗಳು, ಅನುಕೂಲಗಳೇನು? ರಂಗಸ್ವಾಮಿ ಮೂಕನಹಳ್ಳಿ ಬರಹ

ಚೀನಾ ಅಮೆರಿಕಾ ಸುಂಕ ಸಮರ! ಭಾರತದ ಮೇಲಾಗುವ ಪರಿಣಾಮಗಳು, ಅನುಕೂಲಗಳೇನು? ರಂಗಸ್ವಾಮಿ ಮೂಕನಹಳ್ಳಿ ಬರಹ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾ ಮತ್ತು ಅಮೆರಿಕಾ ನಡುವಿನ ಸುಂಕ ಸಮರ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದೆ. ಈ ಎರಡು ದೇಶಗಳ ಸುಂಕ ಸಮರದಿಂದ ಭಾರತದ ಮೇಲಾಗುವ ಪರಿಣಾಮಗಳೇನು. ಇದರಿಂದ ಭಾರತಕ್ಕೇನು ಅನುಕೂಲ? ಇಲ್ಲಿದೆ ರಂಗಸ್ವಾಮಿ ಮೂಕನಹಳ್ಳಿ ಅವರ ವಿಸ್ತ್ರತ ಬರಹ.

ಚೀನಾ ಅಮೆರಿಕಾ ಸುಂಕ ಸಮರ! ಭಾರತದ ಮೇಲಾಗುವ ಪರಿಣಾಮಗಳು, ಅನುಕೂಲಗಳೇನು?
ಚೀನಾ ಅಮೆರಿಕಾ ಸುಂಕ ಸಮರ! ಭಾರತದ ಮೇಲಾಗುವ ಪರಿಣಾಮಗಳು, ಅನುಕೂಲಗಳೇನು?

ಇಲ್ಲಿ ಎರಡು ಆಯಾಮ ಮಾತ್ರ ಬರೆದಿದ್ದೇನೆ. ಇನ್ನೊಂದು ಆಯಾಮ ಹೇಳುವಂತಿಲ್ಲ. ಬುದ್ದಿವಂತ ಓದುಗರು ಊಹಿಸಿಕೊಳ್ಳ ಬಹುದು. ಸುಂಕ ಸಮರವನ್ನು ಅಮೇರಿಕಾ ಶುರು ಮಾಡಿತು. ಆದರೆ ಅದು ಅಮೆರಿಕಕ್ಕೆ ತಿರುಗುಬಾಣವಾಗುತ್ತದೆ ಎನ್ನುವ ಅರಿವು ಟ್ರಂಪ್ ಗೆ ಇರಲಿಲ್ಲವೇ ? ಎನ್ನುವುದು ಬಹು ದೊಡ್ಡ ಪ್ರಶ್ನೆ. ನಾನು ವಿಶ್ವಕ್ಕೆ ಇನ್ನೂ ದೊಡ್ಡಣ್ಣ ಎನ್ನುವ ಗತ್ತಿನಿಂದ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಒಮ್ಮುಖ ನಿರ್ಧಾರ ತೆಗೆದುಕೊಂಡದ್ದು ಇದೀಗ ಅಮೇರಿಕಾ ಬಹು ದೊಡ್ಡ ಕುಸಿತದ ಹಂತಕ್ಕೆ ಬಂದು ನಿಂತಿದೆ. ಕೇವಲ ವಾರದ ಹಿಂದೆ ಚೀನಾದಿಂದ ಹೊರಟ ೮೦ ಶಿಪ್ಪಿಂಗ್ ಕಂಟೈನರ್ ತೆರೆದಾಗ ಅದು ಖಾಲಿ ಇದ್ದದ್ದು ಅಮೇರಿಕಾ ವ್ಯಾಪಾರಸ್ಥರ ಜಂಘಾಬಲವನ್ನು ಹುಡುಗಿಸಿದೆ. ಚೀನಾ ,ಸಾಕು ಇನ್ನು ಅಮೇರಿಕಾ ಜೊತೆಗೆ ವ್ಯಾಪಾರ ಬೇಡ ಎಂದು ಮನಸ್ಸು ಮಾಡಿದರೆ ಏನಾಗಬಹುದು ಎನ್ನುವುದನ್ನು ಸ್ವಲ್ಪ ಗಮನಿಸೋಣ.

ಚೀನಾ ತನ್ನ ವಸ್ತುಗಳನ್ನು ಅಮೆರಿಕಾಗೆ ಕಳಿಸುವುದಿಲ್ಲ ಎಂದು ಹಠ ಮಾಡಿಕೊಂಡು ಕುಳಿತರೆ ಅಮೆರಿಕಾದ ದೊಡ್ಡ ಸೂಪರ್ಮಾರ್ಕೆಟ್ ಚೈನ್ ವಾಲ್ ಮಾರ್ಟ್ ನ ಅರ್ಧಕ್ಕಿಂತ ಹೆಚ್ಚಿನ ಶೆಲ್ಫ್ ಗಳು ಖಾಲಿ ಹೊಡೆಯಲು ಶುರು ಮಾಡುತ್ತವೆ. ಈಗಾಗಲೇ ಏಷ್ಯನ್ ಮೂಲದ ಜನರಿಗೆ ಬೇಕಾಗುವ ಸಾಮಗ್ರಿಗಳ ಬೆಲೆ ದುಪ್ಪಟ್ಟಾಗಿದೆ. ಮೊದಲೆಲ್ಲಾ 300/400ಡಾಲರಿಗೆ ತಿಂಗಳ ದಿನಸಿ ಕೊಳ್ಳುತ್ತಿದ್ದ ಕುಟುಂಬ ಇಂದು ಸರಿಸುಮಾರು 800/1000 ಡಾಲರ್ ವ್ಯಯಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಲೊಕಲ್ ಅಮೆರಿಕನ್ ಕುಟುಂಬದ ಕಥೆ ಕೂಡ ಸೇಮ್. ಚೀನಾ ಪೂರ್ಣವಾಗಿ ಅಮೇರಿಕಾ ಜೊತೆಗೆ ವ್ಯಾಪಾರವೇ ಬೇಡ ಎಂದು ಕುಳಿತರೆ ಕೇವಲ ಒಂದು ವಾರದಲ್ಲಿ , ಹೌದು ಸರಿಯಾಗಿ ಓದಿದಿರಿ ಕೇವಲ 7 ದಿನದಲ್ಲಿ ಅಮೇರಿಕಾ ವ್ಯವಸ್ಥೆ ಪೂರ್ಣ ಕುಸಿತವನ್ನು ಕಾಣುತ್ತದೆ. ಚೀನಾ? ಚೀನಾ ಗತಿಯೇನು? ಈ ಪ್ರಶ್ನೆ ಕೂಡ ಸಹಜವಾಗಿ ಉತ್ಪನ್ನವಾಗುತ್ತದೆ. ಚೀನಾ ಕೂಡ 18/20 ದಿನದಲ್ಲಿ ತೀವ್ರ ಕುಸಿತವನ್ನು ಕಾಣುತ್ತದೆ. ಇದು ಚೀನಾಗೆ ಗೊತ್ತಿದೆ. ಈ ಕಾರಣದಿಂದ ಜಿ ಪಿಂಗ್ ಒಮ್ಮೆಲೇ ಅಮೆರಿಕಕ್ಕೆ ಕಳುಹಿಸುತ್ತಿದ್ದ ಪದಾರ್ಥಗಳನ್ನು ತಡೆ ಹಿಡಿದಿಲ್ಲ ಬದಲಿಗೆ ಆತ ಚಾಣಾಕ್ಷ ನಡೆಯನ್ನು ಇಡುತ್ತಿದ್ದಾರೆ.

ಗಮನಿಸಿ ತೆರಿಗೆ ಹೆಚ್ಚಾದ ಕಾರಣ ಅಮೇರಿಕಾ ವ್ಯಾಪಾರಸ್ಥರು ಪದಾರ್ಥಗಳನ್ನು ಚೀನಾದಿಂದ ಶಿಪ್ ಮಾಡಿಸಿಕೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ. ಅಲ್ಲಿನ ವ್ಯಾಪಾರಸ್ಥರು ಟ್ರಂಪ್ ಮೇಲೆ ಒತ್ತಡವನ್ನು ಹೇರುತ್ತಿದ್ದಾರೆ. ಚೀನಾ ಕುಳಿತು ಆಟವನ್ನು ನೋಡುತ್ತಿದೆ. ಏಕೆಂದರೆ ಪದಾರ್ಥ ಶಿಪ್ ಮಾಡಲು ಸಿದ್ದವಾದ 7 ದಿನಗಳಲ್ಲಿ ಪೂರ್ಣ ಹಣವನ್ನು ಪಾವತಿ ಮಾಡಿ ಪದಾರ್ಥವನ್ನು ತೆಗೆದುಕೊಂಡು ಹೋಗಬೇಕು. ಇಲ್ಲದಿದ್ದರೆ ಮುಂಗಡ ಹಣವನ್ನು ವಾಪಸ್ಸು ಕೊಡಲಾಗುವುದಿಲ್ಲ ಎನ್ನುವ ನಿಬಂಧನೆಯನ್ನು ಚೀನಾ ಬಹಳ ಹಿಂದಿನಿಂದ ಪಾಲಿಸಿಕೊಂಡು ಬಂದಿದೆ. ಹೀಗಾಗಿ ಟೈಮ್ ಬಾಂಬ್ ಅಮೆರಿಕಾದ ಮೇಲಿದೆ. ಇದನ್ನು ಬೇಗ ನಿವಾರಿಸಿಕೊಳ್ಳುವ ದರ್ದು ಅಮೆರಿಕಕ್ಕೆ ಹೆಚ್ಚಾಗಿದೆ. ಈ ಮಧ್ಯೆ ಚೀನಾ ಅದ್ಬುತ ದಾಳವನ್ನು ಉರುಳಿಸಿದೆ. 20 ಡಾಲರ್ ಬೆಲೆ ಬಾಳುವ ಪದಾರ್ಥವನ್ನು ನಿಮಗೆ 2000 ಡಾಲರಿಗೆ ಮಾರಿದ್ದಾರೆ ಎನ್ನುವ ಕಹಿಸತ್ಯವನ್ನು ಅಮೇರಿಕಾ ಮತ್ತು ಯೂರೋಪಿನ ಜನತೆಗೆ ತೆರೆದಿಟ್ಟಿದ್ದಾರೆ. ಚೀನಾದ ಬಳಿ ಅಮೆರಿಕಕ್ಕೆ ಎಂದು ತಯಾರಿಸಿದ ಪದಾರ್ಥಗಳ ಸ್ಟಾಕ್ ಬಹಳವಿದೆ. ಹೀಗಾಗಿ ಅವರು ನೇರವಾಗಿ ಸಣ್ಣಪುಟ್ಟ ವ್ಯಾಪರಸ್ಥರು ನಮ್ಮಿಂದ ಈ ಪದಾರ್ಥವನ್ನು ಕೊಳ್ಳಬಹುದು. ಡಾಕ್ಯುಮೆಂಟ್ಸ್ ಮತ್ತು ಪೇಮೆಂಟ್ ಸರಿಯಾದರೆ ಕೇವಲ 6/8 ಗಂಟೆಯಲ್ಲಿ ನಾವು ಪದಾರ್ಥವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇವೆ ಎನ್ನುವ ಮಾತನ್ನು ಕೂಡ ಆಡಿದೆ.

ಮುಂಗಡ ಹಣ 20 ರಿಂದ 50 ಪ್ರತಿಶತದ ವರೆಗೆ ತೆಗೆದುಕೊಂಡಿರುವ ಕಾರಣ ಚೀನಾ ಈಗ ತನ್ನ ಪದಾರ್ಥಗಳನ್ನು ಇನ್ನಷ್ಟು ಕಡಿಮೆ ಬೆಲೆಯಲ್ಲಿ ಮಾರಲು ಸಿದ್ಧವಾಗಿದೆ. ಯೂರೋಪಿನ ವ್ಯಾಪಾರಿಗಳು ನೇರವಾಗಿ ಇಂತಹ ಪದಾರ್ಥವನ್ನು ಚೀನಾದಿಂದ ಕೊಳ್ಳಲು ಶುರು ಮಾಡಿದ್ದಾರೆ. ಅಮೇರಿಕಾ ಯೂರೋಪಿಯನ್ ಯೂನಿಯನ್ ಮತ್ತು ಕೆನಡಾ ದೇಶವನ್ನು ಕೂಡ ಶತ್ರು ದೇಶದಂತೆ ನಡೆಸಿಕೊಂಡದ್ದು ಅವರಿಗೆ ಇಷ್ಟವಾಗಿಲ್ಲ. ಹೀಗಾಗಿ ಈ ದೇಶಗಳು ಚೀನಾದೊಂದಿಗೆ ಖುಷಿಯಿಂದ ವ್ಯಾಪಾರ ಮಾಡಲು ಸಿದ್ಧವಾಗಿವೆ. ನೀವು ಅಚ್ಚರಿ ಪಡುವ ಇನ್ನೊಂದು ವಿಷಯವಿದೆ. ಸ್ವತಃ ಅಮೆರಿಕನ್ ಬಿಸಿನೆಸ್ಮೆನ್ ಗಳು ಚೀನಾಕ್ಕೆ ಭೇಟಿ ಕೊಟ್ಟು ಬೇರೆ ಒಪ್ಪಂದಗಳನ್ನು ಮಾಡಿಕೊಳ್ಳೋಣ ಎಂದು ಚೀನಾದ ಸಂಸ್ಥೆಗಳ ಜೊತೆಗೆ ಚೌಕಾಸಿಗೆ ಇಳಿದಿವೆ. ತಾನು ಚೀನಾದ ಮುಂದೆ ಮಂಡಿಯೂರಿದರೆ ಅದು ಜಗತ್ತಿಗೆ ಬೇರೆ ಸಂದೇಶ ನೀಡುತ್ತದೆ ಎಂದು ಟ್ರಂಪ್ ಈ ರೀತಿ ವ್ಯಾಪಾರಸ್ಥರನ್ನು ಮುಂದೆ ಬಿಟ್ಟಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.

ಪರಿಸ್ಥಿತಿ ಈ ತಿರುವು ಪಡೆದುಕೊಳ್ಳುತ್ತಿರುವ ಸಮಯದಲ್ಲಿ ಚೀನಾದ ಅಧ್ಯಕ್ಷ ಜಿ ಪಿಂಗ್ ಜಗತ್ತಿನ ಅರ್ಧ ಜನಸಂಖ್ಯೆ ಏಷ್ಯಾದಲ್ಲಿದೆ. ಚೀನಾ , ಭಾರತ ಮತ್ತು ಬಾಂಗ್ಲಾ ದೇಶ ಒಂದಾದರೆ ಸಾಕು. ನಮ್ಮ ನಡುವೆ 3 ಬಿಲಿಯನ್ ಮೀರಿದ ಜನಸಂಖ್ಯೆಯಿದೆ. ಹೀಗಾಗಿ ನಾವು ಒಂದಾಗಿ ಅಮೆರಿಕಾವನ್ನು ಮಣಿಸಬೇಕಾಗಿದೆ. ಪಾಶ್ಚಾತ್ಯ ದೇಶಗಳ ಮೇಲಾಟ ಇನ್ನು ಮುಗಿದ ಕಥೆ , ಇನ್ನೇನಿದ್ದರೂ ಅದು ಏಷ್ಯಾ ಕ್ಕೆ ಸೇರಿದ್ದು ಎನ್ನುವ ಮಾತನ್ನು ಆಡಿದ್ದಾರೆ. ಜಿ ಪಿಂಗ್ ಎಲ್ಲಿಯೂ ಚೀನಾಕ್ಕೆ ಸೇರಿದ್ದು ಎನ್ನುವ ಮಾತನ್ನು ಆಡಿಲ್ಲ ಎನ್ನುವುದನ್ನು ಗಮನಿಸಬೇಕು. ಎಲ್ಲೆಡೆ ಅವರು ಏಷ್ಯಾ ಎನ್ನುವ ಪದವನ್ನು ಹೆಚ್ಚು ಬಳಸುತ್ತಿದ್ದಾರೆ.

ನಿಮಗೆಲ್ಲಾ ಗೊತ್ತೇ ಇರುತ್ತದೆ. ಈ ಜಾಗತಿಕ ರಾಜಕೀಯದಲ್ಲಿ ಪ್ರತಿಯೊಂದು ಮಾತು ಮತ್ತು ನಡೆಗಳು ಲಾಭ ಮತ್ತು ನಷ್ಟದ ಮೇಲೆ ನಿಂತಿರುತ್ತದೆ. ಒಂದು ಸಣ್ಣ ನಡವಳಿಕೆಯಲ್ಲಿನ ಬದಲಾವಣೆ ಸಾವಿರಾರು ಕೋಟಿ ರೂಪಾಯಿ ಹಣವನ್ನು ಗಳಿಸಿ ಕೊಡುತ್ತದೆ, ಇಲ್ಲವೇ ಕಳೆಯುತ್ತದೆ. ಸದ್ಯದ ಮಟ್ಟಿಗೆ ಟ್ರಂಪ್ ಅವರ ಉದ್ಧಟತನದ ಮಾತುಗಳು ಅಮೆರಿಕಕ್ಕೆ ನಿತ್ಯವೂ ಸಾವಿರಾರು ಕೋಟಿ ಡಾಲರ್ ನಷ್ಟವನ್ನು ಮಾಡುತ್ತಿದೆ. ಇದನ್ನು ಅವರು ನಿಲ್ಲಿಸದೆ ಹೋದರೆ ತಿಂಗಳಲ್ಲಿ ಅಮೇರಿಕಾ ಹಣಕಾಸು ಕುಸಿತಕ್ಕೆ ಒಳಗಾಗುತ್ತದೆ. ಈಗಾಗಲೇ ಅದು ಬಹಳವಾಗಿ ಆರ್ಥಿಕ ಸಂಕಷ್ಟದಲ್ಲಿದೆ.

ಭಾರತ ಇಂದಿಗೆ ಚೀನಾ ಮತ್ತು ಅಮೇರಿಕಾ ಎರಡಕ್ಕೂ ಬೇಕಾಗಿದೆ. ಭಾರತ ಯಾರತ್ತ ಹೆಚ್ಚಿನ ಒಲವು ತೋರುತ್ತದೆ ಎನ್ನುವುದು ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೆ ಚೀನಾ ಮತ್ತು ಅಮೇರಿಕಾ ಎರಡೂ ದೇಶಕ್ಕೂ ಭಾರತ ಯಾರೊಂದಿಗೆ ಹೋದರೂ ಸುಮ್ಮನೆ ಅವರ ಬಾಲವಾಗಿ ಕೂರುವ ದೇಶವಲ್ಲ. ಅದಕ್ಕೆ ಬಹಳ ದೊಡ್ಡ ಪೊಟೆನ್ಸಿಯಲ್ ಇದೆ. ಹೀಗಾಗಿ ಅದು ಇಂದಲ್ಲ ನಾಳೆ ಮತ್ತೆ ನಮಗೆ ಪ್ರತಿಸ್ಪರ್ಧಿಯಾಗಿ ನಿಂತೇ ನಿಲ್ಲುತ್ತದೆ ಎನ್ನುವುದು ಗೊತ್ತಿದೆ. ಇದಕ್ಕೆ ಸಣ್ಣ ಉದಾಹರಣೆ ನೋಡಿ ಗ್ಲೋಬಲ್ ಇನ್ವೆಸ್ಟರ್ಸ್ ಅಥವಾ ಫಾರಿನ್ ಇನ್ಸಿಟ್ಯೂಷನಲ್ ಇನ್ವೆಸ್ಟರ್ಸ್ ಮರಳಿ ಭಾರತದ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಲು ಶುರು ಮಾಡಿದ್ದಾರೆ. ಅಮೇರಿಕಾ ಮತ್ತು ಚೀನಾದ ನೇರ ಜಟಾಪಟಿ ಸಮಯದಲ್ಲಿ ಭಾರತದಲ್ಲಿ ಹೂಡಿಕೆ ಮಾಡುವುದು ಬೆಸ್ಟ್ ಎನ್ನುವ ನಿರ್ಧಾರಕ್ಕೆ ಅವರು ಬಂದಿದ್ದಾರೆ.

ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಅಮೇರಿಕಾ ಮತ್ತು ಚೀನಾ ಎರಡೂ ಭಾರತವನ್ನು ಛಿದ್ರ ಮಾಡಲು ಹವಣಿಸುವುದು ಅಥವಾ ಭಾರತದಲ್ಲಿ ಅರಾಜಕತೆ ಸೃಷ್ಟಿಸುವುದು ಮಾಡುತ್ತವೆ ಎನ್ನುವುದು ಸ್ಪಷ್ಟ. ಏಕೆಂದರೆ ಬಲಿಷ್ಠ ಭಾರತ ಅಮೇರಿಕಾ ಮತ್ತು ಚೀನಾ ಎರಡಕ್ಕೂ ಮುಳ್ಳಾಗುವ ಸಾಧ್ಯತೆಯಿದೆ. ಹೀಗಾಗಿ ಭಾರತದ ನೆಲದಲ್ಲಿ ಅಸ್ಥಿರತೆ ಸೃಷ್ಟಿಸುವುದು , ಭಯ ಉತ್ಪನ್ನ ಮಾಡುವುದು , ಭಾರತ ಮಾತ್ರವಲ್ಲ ಜಗತ್ತಿನೆಲ್ಲೆಡೆ ಎಲ್ಲಿಯೂ ಭದ್ರತೆ ಇಲ್ಲ ಎನ್ನುವ ಪರಿಸ್ಥಿತಿ ಸೃಷ್ಟಿಸುವುದು ಇವರುಗಳ ಹುನ್ನಾರ. ಹಣವಿಲ್ಲದ , ಯಾವುದೇ ವಿಶೇಷ ಗುಣಲಕ್ಷಣಗಳನ್ನು ಬೆಳೆಸಿಕೊಳ್ಳದ ಫೇಲ್ಡ್ ನೇಶನ್ ಪಾಕಿಸ್ತಾನ ಇಂತಹ ಸನ್ನಿವೇಶಕ್ಕೆ ಕಾಯುತ್ತ ಕುಳಿತಿರುತ್ತದೆ. ಏಕೆಂದರೆ ಚೀನಾ ಅಥವಾ ಅಮೇರಿಕಾ ಹಾಕುವ ಭಿಕ್ಷೆ ಹಣದಲ್ಲಿ ಬದುಕುವುದು ಅದು ದಶಕಗಳಿಂದ ಮಾಡಿಕೊಂಡು ಬಂದಿರುವ ಅಭ್ಯಾಸ.

ನೆನ್ನೆಯ ಕಾಶ್ಮೀರದ ಘಟನೆಯನ್ನು ಈಗ ನೆನೆಪಿಸಿಕೊಳ್ಳಿ. ಇದು ಭಾರತವನ್ನು ಅಂತಂತ್ರಗೊಳಿಸುವ , ಅಸ್ಥಿರತೆ ಸೃಷ್ಟಿಸುವ ಹುನ್ನಾರದ ಭಾಗ. ಇದನ್ನು ಎರಡು ರೀತಿಯಲ್ಲಿ ನೋಡಬೇಕು. ಒಂದು ಕೇಂದ್ರ ಸರಕಾರಕ್ಕೆ ಇದು ರಾಜಕೀಯದಾಟ ಇದಕ್ಕೆ ತಕ್ಷಣ ತೀವ್ರವಾಗಿ ಸ್ಪಂದಿಸಬಾರದು ಎನ್ನುವುದು ಗೊತ್ತಿದೆ. ಸ್ಪಂದಿಸಿದೆ ಕುಳಿತರೆ ಅದು ಜನಾಕ್ರೋಶಕ್ಕೆ ಕಾರಣವಾಗುತ್ತದೆ. ಕೇಂದ್ರದಲ್ಲಿ ಬಲಿಷ್ಠ ಮತ್ತು ಪಾಪ್ಯುಲರ್ ಸರಕಾರವಿರುವುದು ಚೀನಾ ಮತ್ತು ಅಮೇರಿಕಾ ಎರಡಕ್ಕೂ ಇರಿಸು ಮುರಿಸು. ಗಟ್ಟಿ ನಿಲುವು , ಸಮರ್ಥ ನಾಯಕನೊಂದಿಗೆ ನೆಗೋಷಿಯೇಟ್ ಮಾಡುವುದು ಕಷ್ಟ ಎನ್ನುವುದು ಉಭಯ ರಾಷ್ಟ್ರಗಳಿಗೂ ಗೊತ್ತಿದೆ. ಹಾಗೊಮ್ಮೆ ಇದು ದೊಡ್ಡದಾಗಿ ದೇಶದಾದ್ಯಂತ ದಂಗೆಗೆ ಕಾರಣವಾದರೆ ಅವರ ಪ್ರಮುಖ ಉದ್ದೇಶ ಅರಾಜಕತೆ ಹರಡುವುದರಲ್ಲಿ ಅವರು ಸಫಲರಾಗುತ್ತಾರೆ.

ಕೊನೆಮಾತು : ನಾಗರಿಕರಾಗಿ ನಾವು ಈ ರಾಜಕೀಯದಾಟವನ್ನು ಪೂರ್ಣವಾಗಿ ಗ್ರಹಿಸುವ ಅವಶ್ಯಕತೆಯಿದೆ. ಸುಮ್ಮನೆ ಅನ್ನಿಸಿದ್ದನ್ನೆಲ್ಲಾ ಬರೆಯುತ್ತಾ ದ್ವೇಷ , ದಳ್ಳುರಿ ಹೆಚ್ಚಿಸುವ ಬದಲು ತಾಳ್ಮೆಯಿಂದ ಕೇಂದ್ರ ಸರಕಾರ ತೆಗೆದುಕೊಳ್ಳುವ ನಿಲುವನ್ನು ಸಮರ್ಥಿಸುವುದು ನಾವು ಮಾಡಬೇಕಾದ ಕೆಲಸ ಅಷ್ಟೇ. ಬೇರೆಲ್ಲವೂ ಈ ಕೆಲಸಕ್ಕೆ ಅಡ್ಡಿ . ಹೀಗಾಗಿ ಸಂಯಮದಿಂದ ಕೇಂದ್ರದ ನಿರ್ಧಾರಕ್ಕೆ ಬದ್ಧರಾಗಿರೋಣ. ನೆನಪಿರಲಿ , ಸಣ್ಣ ನಿರ್ಧಾರಗಳು ಸಾವಿರಾರು ಕೋಟಿ ರೂಪಾಯಿ ನಷ್ಟವನ್ನು ಮಾಡಬಲ್ಲವು. ಸ್ವಾಭಿಮಾನದ ಮುಂದೆ ದುಡ್ಡು ಮುಖ್ಯವಲ್ಲ ಎನ್ನುವುದು ಸೋಶಿಯಲ್ ಮೀಡಿಯಾದಲ್ಲಿ ಸುಲಭ. ನಿಜ ಜೀವನ ಬೇರೆಯಿದೆ.

ಚಿತ್ರದಲ್ಲಿ ಇಲ್ಲಿಯವರೆಗೆ ಎಲ್ಲೆಲ್ಲಿ ಟೆರರಿಸಂ ನಡೆದಿದೆ ಅಥವಾ ನಡೆಯುತ್ತಿದೆ ಎನ್ನುವುದನ್ನು ಅರೇಂಜ್ ಡಾಟ್ ಗಳಲ್ಲಿ ಸೂಚಿಸಲಾಗಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.