ಕೊಯಮತ್ತೂರು ಕ್ಷೇತ್ರದಲ್ಲಿ ಜನ್ಮದಿನವೇ ಅಣ್ಣಾಮಲೈಗೆ ಸೋಲು; ಮತಗಟ್ಟೆಯೊಂದರಲ್ಲಿ ಒಂದೇ ಮತ ಪಡೆದ ಮಾಜಿ ಐಪಿಎಸ್ ಅಧಿಕಾರಿ
K Annamalai : ತಮಿಳುನಾಡಿದ ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು 17 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಇಂದು ಅವರ 40ನೇ ವರ್ಷದ ಜನ್ಮದಿನ.
ಲೋಕಸಭಾ ಚುನಾವಣೆಯಲ್ಲಿ ಸಂಚಲನ ಸೃಷ್ಟಿಸಿದ್ದ ಕ್ಷೇತ್ರಗಳಲ್ಲಿ ತಮಿಳುನಾಡಿನ ಕೊಯಮತ್ತೂರು ಲೋಕಸಭಾ ಕ್ಷೇತ್ರವೂ ಒಂದು. ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಅವರು ಕೊಯಮತ್ತೂರು ಕ್ಷೇತ್ರದಲ್ಲಿ 17 ಸಾವಿರಕ್ಕೂ ಅಧಿಕ ವೋಟುಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ. ಇಲ್ಲಿ ಅಣ್ಣಾಮಲೈ ಅವರು ಬಿಜೆಪಿ ಅಭ್ಯರ್ಥಿಯಾಗಿ ಗೆದ್ದೇ ಗೆಲ್ಲುತ್ತಾರೆ ಎಂದು ಹೇಳಿದ್ದ ಸಮೀಕ್ಷೆಗಳು ಸುಳ್ಳಾಗಿವೆ. ಇದರೊಂದಿಗೆ ಅರಳುವ ಮುನ್ನವೇ ಕಮಲ ಮುದುಡಿದೆ.
ದ್ರಾವಿಡ್ ಮುನ್ನೇತರ ಕಜಗಂ (ಡಿಎಂಕೆ) ಪಕ್ಷದಿಂದ ಸ್ಪರ್ಧಿಸಿದ್ದ ಗಣಪತಿ ರಾಜ್ಕುಮಾರ್ ಅವರ ವಿರುದ್ಧ ಅಣ್ಣಾಮಲೈ ಸೋತಿದ್ದಾರೆ. ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಎಐಡಿಎಂಕೆ ಪಕ್ಷದಿಂದ ಸಿಂಗೈ ಜಿ ರಾಮಚಂದ್ರನ್ ಅವರು ಸಹ ಸ್ಪರ್ಧೆ ಮಾಡಿದ್ದರು. ಆದರೆ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು.
ಕೊಯಮತ್ತೂರು ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳಾದ ಪಲ್ಲಡಂ, ಸೂಲೂರು, ಕವುಂಡಂಪಳಯಂ, ಕೊಯಮತ್ತೂರು (ಉತ್ತರ), ಕೊಯಮತ್ತೂರು (ದಕ್ಷಿಣ), ಸಿಂಗಾನಲ್ಲೂರಿನಲ್ಲಿ ಮೋದಿ ಅಬ್ಬರದ ಪ್ರಚಾರ ನಡೆಸಿದ್ದರು. ಅಲ್ಲದೆ, ದೊಡ್ಡಮಟ್ಟದಲ್ಲೂ ಬಿಜೆಪಿಗೆ ಬೆಂಬಲ ನೀಡಿದ್ದರು. ಆದರೆ, ಪ್ರಚಾರದ ವೇಳೆ ಸಿಕ್ಕಿದ್ದ ಬೆಂಬಲವು ಪತವಾಗಿ ಪರಿವರ್ತನೆಗೊಂಡಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿದೆ. ಅಚ್ಚರಿ ಏನೆಂದರೆ ವಿಧಾನಸಭೆಯಲ್ಲೂ ಅಣ್ಣಾಮಲೈ ಸೋತಿದ್ದರು.
ಜನ್ಮದಿನವೇ ಅಣ್ಣಾಮಲೈಗೆ ಸೋಲು
ತಮಿಳುನಾಡಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಒಂದೇ ಒಂದು ಸ್ಥಾನ ಸಿಕ್ಕಿದೆ. 37 ಸ್ಥಾನಗಳು ಇಂಡಿಯಾ ಒಕ್ಕೂಟಕ್ಕೆ ಸಿಕ್ಕಿವೆ. ಇತರೆ ಒಂದು ಸ್ಥಾನ ಪಡೆದಿದೆ. ಜೂನ್ 4ರಂದು ಅಣ್ಣಾಮಲೈ ಅವರು 40ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದರೆ, ಅವರ ಜನ್ಮದಿನವೇ ಸೋಲು ಕಂಡಿದ್ದು ನಿರಾಶಾದಾಯಕ ಹುಟ್ಟುಹಬ್ಬವಾಗಿ ಪರಿಣಮಿಸಿದೆ.
ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ-ಬಿಜೆಪಿ ನಾಯಕ ಬೆಳಿಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿ ಮನೆಗೆ ಮರಳಿದರು. ಆದರೆ ಫಲಿತಾಂಶಗಳು ಸೋಲಿನ ಕಡೆ ಮರಳುತ್ತಿದ್ದಂತೆ ಮತ ಎಣಿಕೆ ಕೇಂದ್ರ ಅಥವಾ ಪಕ್ಷದ ಕಚೇರಿಗೆ ಭೇಟಿ ನೀಡಲಿಲ್ಲ.
ಗಣಪತಿ ರಾಜ್ ಕುಮಾರ್ ಅವರು ಒಟ್ಟು 76,291 ಮತಗಳನ್ನು ಪಡೆದರೆ, ಅಣ್ಣಾಮಲೈ 58,805 ಮತಗಳನ್ನು ಪಡೆದರು. ಆದರೆ, ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಅಣ್ಣಾಮಲೈ ಒಂದೇ ಒಂದು ಮತ ಕಳೆದುಕೊಂಡಿದ್ದಾರೆ. ಸ್ಪರ್ಧೆಯಲ್ಲಿ 2ನೇ ಸ್ಥಾನದಲ್ಲಿರುವ ಅಣ್ಣಾಮಲೈ ಅವರು ಮತಗಟ್ಟೆಯೊಂದರಲ್ಲಿ ಕೇವಲ ಒಂದು ಮತ ಪಡೆದಿರುವುದು ಗಮನಾರ್ಹ.
Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಅಂಕಿ- ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್ಡೇಟ್ ಮಾಡಲಾಗುವುದು.