ಕಾಶ್ಮೀರ ಭಯೋತ್ಪಾದಕ ದಾಳಿ ನಂತರ ಭಾರತದ ಖಡಕ್‌ ನಿರ್ಧಾರ; ನದಿ ನೀರು ಒಪ್ಪಂದ ಅಮಾನತು, ವಾಘಾ ಗಡಿ ಬಂದ್‌, ಸಿಬ್ಬಂದಿಗೆ ಗೇಟ್‌ಪಾಸ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕಾಶ್ಮೀರ ಭಯೋತ್ಪಾದಕ ದಾಳಿ ನಂತರ ಭಾರತದ ಖಡಕ್‌ ನಿರ್ಧಾರ; ನದಿ ನೀರು ಒಪ್ಪಂದ ಅಮಾನತು, ವಾಘಾ ಗಡಿ ಬಂದ್‌, ಸಿಬ್ಬಂದಿಗೆ ಗೇಟ್‌ಪಾಸ್‌

ಕಾಶ್ಮೀರ ಭಯೋತ್ಪಾದಕ ದಾಳಿ ನಂತರ ಭಾರತದ ಖಡಕ್‌ ನಿರ್ಧಾರ; ನದಿ ನೀರು ಒಪ್ಪಂದ ಅಮಾನತು, ವಾಘಾ ಗಡಿ ಬಂದ್‌, ಸಿಬ್ಬಂದಿಗೆ ಗೇಟ್‌ಪಾಸ್‌

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಮರುದಿನವೇ ಭಾರತವೂ ಕಠಿಣ ನಿರ್ಧಾರಗಳೊಂದಿಗೆ ಪಾಕಿಸ್ತಾನಕ್ಕೆ ತಿರುಗೇಟನ್ನು ನೀಡಿದೆ.

ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಭದ್ರತೆ ಕುರಿತಾದ ಸಭೆ ನಡೆಯಿತು.
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಭದ್ರತೆ ಕುರಿತಾದ ಸಭೆ ನಡೆಯಿತು.

ದೆಹಲಿ: ಕಾಶ್ಮೀರ ಭಯೋತ್ಪಾದಕ ದಾಳಿಗೆ ತಕ್ಕ ಉತ್ತರ ನೀಡಿರುವ ಭಾರತವು ಇದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಒಪ್ಪಂದವನ್ನು ಭಾರತ ಅಮಾನತುಗೊಳಿಸಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಮರುದಿನವೇ ಭಾರತ ಕಠಿಣ ನಿರ್ಧಾರಗಳ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ ಅಲ್ಲದೇ ಅಟ್ಟಾರಿ-ವಾಘಾ ಗಡಿಯನ್ನು ಮುಚ್ಚುವುದು, ಪಾಕಿಸ್ತಾನಿ ಪ್ರಜೆಗಳು ಭಾರತ ಪ್ರವೇಶಿಸುವುದನ್ನು ನಿಷೇಧಿಸುವುದು. ಭಾರತದಲ್ಲಿರುವ ಪಾಕಿಸ್ತಾನದ ಮಿಲಿಟರಿ ಸಲಹೆಗಾರರ ​​ಉಚ್ಚಾಟನೆ, ಹೈಕಮಿಷನ್ ಸಿಬ್ಬಂದಿ ಬಲದ ಕಡಿತವೂ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಷ್ಟ್ರೀಯ ಭದ್ರತೆಯ ಕುರಿತು ದೇಶದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಭದ್ರತೆಯ ಕುರಿತಾದ ಕ್ಯಾಬಿನೆಟ್ ಸಮಿತಿ ಸಭೆಯಲ್ಲಿ ಐದು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಾಗರಿಕರ ಮೇಲೆ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನವನ್ನು ಗುರಿಯಾಗಿಟ್ಟುಕೊಂಡು ಭಾರತವು ಬಲವಾದ ರಾಜತಾಂತ್ರಿಕ ಮತ್ತು ಕಾರ್ಯತಂತ್ರದ ಪ್ರತಿಕ್ರಮಗಳ ಸರಣಿಯನ್ನು ಬುಧವಾರ ಘೋಷಿಸಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಕ್ಕೆ ಪ್ರತ್ಯುತ್ತರವಾಗಿ "ಗಡಿಯಾಚೆಗಿನ ಸಂಪರ್ಕ" ದ ಬಗ್ಗೆ ರಾಷ್ಟ್ರೀಯ ಭದ್ರತೆಯ ಕುರಿತು ದೇಶದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಭದ್ರತೆಯ ಕುರಿತಾದ ಕ್ಯಾಬಿನೆಟ್ ಸಮಿತಿ( CCS) ಪಾಕಿಸ್ತಾನದ ವಿರುದ್ಧ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಉಗ್ರಗಾಮಿಗಳ ಗುಂಡಿನ ದಾಳಿಯಲ್ಲಿ ಒಬ್ಬ ವಿದೇಶಿ ಪ್ರಜೆ ಸೇರಿದಂತೆ 26 ಜನರು ಸಾವನ್ನಪ್ಪಿದ್ದಾರೆ. ಕರ್ನಾಟಕದವೂ ಅಸುನೀಗಿದ್ದಾರೆ.

"ಗಡಿಯಾಚೆಗಿನ ಭಯೋತ್ಪಾದನೆಗೆ ನಿರ್ಣಾಯಕ ಪ್ರತಿಕ್ರಿಯೆ" ಎಂದು ಅಧಿಕಾರಿಗಳು ಕರೆದ ಭಾಗವಾಗಿ ವಿದೇಶಾಂಗ ಸಚಿವಾಲಯ (MEA) ಐದು ಪ್ರಮುಖ ನಿರ್ಧಾರಗಳನ್ನು ವಿವರಿಸಿದೆ. ಬುಧವಾರದ ಸಭೆಯ ಬಳಿಕ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರು ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

5 ಪ್ರಮುಖ ಘೋಷಣೆಗಳೇನು

  1. ಸಿಂಧೂ ಜಲ ಸಹಕಾರವನ್ನು ಸ್ಥಗಿತಗೊಳಿಸುವುದು: ಭಾರತವು ಸಿಂಧೂ ನದಿ ವ್ಯವಸ್ಥೆಯಿಂದ ವಾರ್ಷಿಕವಾಗಿ 39 ಶತಕೋಟಿ ಘನ ಮೀಟರ್ ನೀರು ಭಾರತದಿಂದ ಪಾಕಿಸ್ತಾನಕ್ಕೆ ಹರಿಯುವ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದೆ. ಎರಡೂ ದೇಶಗಳ ನಡುವಿನ ನದಿ ನೀರಿನ ಹಂಚಿಕೆಯನ್ನು ನಿಯಂತ್ರಿಸುವ ಒಪ್ಪಂದವನ್ನು ವರ್ಷಗಳ ಕಾಲದ ಸಂಘರ್ಷದ ನಡುವೆಯೂ ಸಹಕಾರದ ಸಂಕೇತವೆಂದು ದೀರ್ಘಕಾಲದಿಂದ ಪರಿಗಣಿಸಲಾಗಿತ್ತಾದರೂ ಕಾಶ್ಮೀರ ಘಟನೆ ನಂತರ ಈ ನಿರ್ಧಾರ ಹೊರ ಬಿದ್ದಿದೆ.
  2. ಅಟ್ಟಾರಿ-ವಾಘಾ ಗಡಿಯನ್ನು ಮುಚ್ಚುವುದು: ಭಾರತ ಮತ್ತು ಪಾಕಿಸ್ತಾನದ ನಡುವಿನ ವ್ಯಾಪಾರ ಮತ್ತು ಜನರಿಂದ ಜನರ ಸಂಪರ್ಕಕ್ಕೆ ನಿರ್ಣಾಯಕ ಹಂತವಾದ ಪ್ರಮುಖ ಅಟ್ಟಾರಿ-ವಾಘಾ ಭೂ ದಾಟುವಿಕೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ.
  3. ಪಾಕಿಸ್ತಾನಿ ಪ್ರಜೆಗಳು ಭಾರತ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ: ಪಾಕಿಸ್ತಾನಿ ನಾಗರಿಕರ ಭಾರತ ಪ್ರವೇಶವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ. ಇದರಲ್ಲಿ ವೀಸಾ ಸೇವೆಗಳು ಮತ್ತು ಗಡಿಯಾಚೆಗಿನ ಪ್ರಯಾಣ ಪರವಾನಗಿಗಳು ರದ್ದು ಇದರಲ್ಲಿ ಸೇರಿವೆ.
  4. ಸೇನಾ ಸಲಹೆಗಾರರ ​​ಉಚ್ಚಾಟನೆ: ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನಲ್ಲಿ ನಿಯೋಜಿಸಲಾದ ಎಲ್ಲಾ ಸೇನಾ ಸಲಹೆಗಾರರನ್ನು ಹೊರಹಾಕಲಾಗಿದೆ. ಈ ಮೂಲಕ ಸೇನಾ ರಾಜತಾಂತ್ರಿಕ ಸಂಬಂಧ ಕಡಿತಗೊಳಿಸುವ ಮುನ್ನೆಚ್ಚರಿಕೆಯೂ ಇದರಲ್ಲಿ ಸೇರಿದೆ.
  5. ಹೈಕಮಿಷನ್ ಸಿಬ್ಬಂದಿ ಬಲದ ಕಡಿತ: ದೆಹಲಿಯಲ್ಲಿ ತನ್ನ ರಾಜತಾಂತ್ರಿಕ ಸಿಬ್ಬಂದಿ ಬಲವನ್ನು 30ರ ಹಂತಕ್ಕೆ ಇಳಿಸಲು ಭಾರತ ಪಾಕಿಸ್ತಾನವನ್ನು ತಿಳಿಸಿದೆ. ಇದು ಮಿಷನ್‌ನ ಪ್ರಸ್ತುತ ಕಾರ್ಯಾಚರಣಾ ಸಾಮರ್ಥ್ಯವನ್ನು 55 ರಿಂದ 30ಕ್ಕೆ ಇಳಿಯಲಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.