Jamaat meeting with RSS: ಆರ್ಎಸ್ಎಸ್ ಜತೆ ಜಮಾತೆ ಇಸ್ಲಾಮಿ ಸಭೆ, ಇದು ಆಷಾಢಭೂತಿತನ ಎಂದ ಕೇರಳ ಸಿಎಂ ಪಿಣರಾಯಿ
Kerala CM slams Jamaat-e-Islami: ಕಳೆದ ತಿಂಗಳು ದೆಹಲಿಯಲ್ಲಿ ಜಮಾತೆ ಇಸ್ಲಾಮಿ ಮತ್ತು ಆರ್ಎಸ್ಎಸ್ ನಡುವೆ ನಡೆದ ಸಂವಾದದ ಕುರಿತು ಕೇರಳ ಮುಖ್ಯಮಂತ್ರಿ ಟೀಕಿಸಿದ್ದಾರೆ.
ತಿರುವನಂತಪುರಂ: ಜಮಾತೆ ಇಸ್ಲಾಮಿಯು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಜತೆ ಸಂವಾದ ನಡೆಸುತ್ತಿರುವುದಕ್ಕೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಟುವಾಗಿ ಟೀಕಿಸಿದ್ದಾರೆ. ಸಂಘ ಪರಿವಾರದ ಜತೆ ಭಿನ್ನಾಭಿಪ್ರಾಯಗಳನ್ನು ಮೀರಿ ಮಾತುಕತೆಯ ಅಗತ್ಯವಿದೆ ಎನ್ನುವ ಜಮಾತೆ ಇಸ್ಲಾಮಿ ವಾದವು ಮುಸ್ಲಿಂ ಸಂಘಟನೆಯ ಆಷಾಢಭೂತಿತನವನ್ನು ತೋರ್ಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಕಳೆದ ತಿಂಗಳು ದೆಹಲಿಯಲ್ಲಿ ಜಮಾತೆ ಇಸ್ಲಾಮಿ ಮತ್ತು ಆರ್ಎಸ್ಎಸ್ ನಡುವೆ ನಡೆದ ಸಂವಾದದ ಕುರಿತು ಕೇರಳ ಮುಖ್ಯಮಂತ್ರಿ ಇದೀಗ ಟೀಕಿಸಿದ್ದು, " ಆ ಸಭೆಯಲ್ಲಿ ಆರ್ಎಸ್ಎಸ್ ಜತೆ ಜಮಾತೆ ಎ ಇಸ್ಲಾಮಿಯು ಏನು ಚರ್ಚಿಸಿದೆ? ಆ ಸಭೆಯ ವಿಷಯ ಏನು ಎನ್ನುವುದು ಜಮಾತೆ ಇಸ್ಲಾಮಿಯ ನಾಯಕರು ಸ್ಪಷ್ಟಪಡಿಸಬೇಕು" ಎಂದರು.
ಚಿರತೆಯ ಪಟ್ಟೆ ನೀರಲ್ಲಿ ಕರಗುವುದೇ?
"ಆರ್ಎಸ್ಎಸ್ ಸಂವಾದದ ಮೂಲಕ ಸುಧಾರಿಸಬಹುದಾದ ಮತ್ತು ಪರಿವರ್ತನೆಗೊಳ್ಳಬಹುದಾದ ಸಂಘಟನೆಯಾಗಿದೆ ಎನ್ನುವ ಜಮಾತೆ ಇಸ್ಲಾಮಿಯ ತರ್ಕವು ಚಿರತೆಯ ಮೇಲಿರುವ ಪಟ್ಟೆ ಚಿತ್ರಗಳನ್ನು ಸ್ನಾನ ಮಾಡಿಸುವ ಮೂಲಕ ತೊಳೆಯಬಹುದು ಎಂದು ಭಾವಿಸುವಂತಿದೆʼʼ ಎಂದು ಪಿಣರಾಯಿ ಅಭಿಪ್ರಾಯಪಟ್ಟಿದ್ದಾರೆ.
"ದೇಶದ ಆಡಳಿತವನ್ನು ನಿಯಂತ್ರಿಸುವ ಆರ್ಎಸ್ಎಸ್ ಮುಂದೆ ಭಾರತೀಯ ಅಲ್ಪ ಸಂಖ್ಯಾತರ ಸಾಮಾನ್ಯ ಸಮಸ್ಯೆಗಳನ್ನು ಪ್ರಸ್ತುತಪಡಿಸಲಾಯಿತು ಎಂದು ಜಮಾತೆಯವರು ಮಾಡುವ ವಾದವು ವಿಚಿತ್ರವಾಗಿದೆʼʼ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
‘‘ಜಮಾತೆ ಇಸ್ಲಾಂಗೆ ಅಲ್ಪಸಂಖ್ಯಾತರ ಸಂಪೂರ್ಣ ಹಕ್ಕನ್ನು ಕೊಟ್ಟವರು ಯಾರು?, ಚರ್ಚೆಯ ವಿಷಯ ಏನೇ ಇರಲಿ, ದೇಶದ ಅಲ್ಪಸಂಖ್ಯಾತರಿಗೆ ಸಹಾಯ ಮಾಡುವ ಉದ್ದೇಶವೇ? ಅಲ್ಪಸಂಖ್ಯಾತರ ರಕ್ಷಣೆ ಎಂದರೆ ಜಾತ್ಯಾತೀತತೆಯ ರಕ್ಷಣೆ. ಜಾತ್ಯಾತೀತತೆಗೆ ಯಾರು ಅಡ್ಡಿಪಡಿಸುತ್ತಿದ್ದಾರೆಂದು ತಿಳಿಯದ ಈ ಸಂಘಟಕರ ಜತೆ ಸಂವಾದವೇ? ಅಂತಹ ಜನರೊಂದಿಗೆ ನಾವು ಮಾತುಕತೆ ನಡೆಸಿದರೆ ಜಾತ್ಯಾತೀತತೆ ಮತ್ತು ಅಲ್ಪಸಂಖ್ಯಾತರ ರಕ್ಷಣೆ ಹೇಗೆ ಸಾಧ್ಯ?" ಮುಖ್ಯಮಂತ್ರಿ ಪಿಣರಾಯಿ ಪ್ರಶ್ನಿಸಿದ್ದಾರೆ.
ಆರ್ಎಸ್ಎಸ್ನ ತೀವ್ರ ಹಿಂದುತ್ವ ರಾಜಕಾರಣದ ವಿರುದ್ಧ ದೇಶದಲ್ಲಿ ಜಾತ್ಯಾತೀತ ಸಮುದಾಯ ತೀವ್ರ ಹೋರಾಟ ನಡೆಸುತ್ತಿದೆ ಎಂದು ವಿಜಯನ್ ಹೇಳಿದ್ದಾರೆ.
"ಇಂತಹ ಹೋರಾಟ ನಡೆಯುತ್ತಿರುವ ಸಮಯದಲ್ಲಿ ಜಮಾತೆ ಇಸ್ಲಾಮಿಯ ಇಂತಹ ನಡೆಯು ಆರ್ಎಸ್ಎಸ್ನ ಅಜೆಂಡಾದ ಪರವಾಗಿರುತ್ತದೆ. ಜಾತ್ಯಾತೀತತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ವಿರುದ್ಧ ಹೋರಾಟಲು ಕೋಮುವಾದ ಸಂಘಟನೆಗಳು ಪರಸ್ಪರ ಸಹಾಯ ಮಾಡುತ್ತಿವೆ ಎನ್ನುವುದಕ್ಕೆ ಹೆಚ್ಚಿನ ಪುರಾವೆ ಅಗತ್ಯವಿಲ್ಲʼʼ ಎಂದು ಅವರು ಜಮಾತೆ ಇಸ್ಲಾಮಿಗೆ ಕುಟುಕಿದ್ದಾರೆ.