Kerala News: ನಗ್ನತೆಯನ್ನು ಲೈಂಗಿಕತೆ ಎಂದು ಕರೆಯಲಾಗದು; ಸಾಮಾಜಿಕ ಹೋರಾಟಗಾರ್ತಿ ವಿರುದ್ದ ಮೊಕದ್ದಮೆ ವಜಾಗೊಳಿಸಿದ ಕೇರಳ ಹೈಕೋರ್ಟ್
ಯಾವುದೇ ವ್ಯಕ್ತಿ ತನ್ನ ದೇಹ ಹಾಗೂ ಬದುಕಿನ ಕುರಿತು ನಿರ್ಧಾರ ತೆಗೆದುಕೊಳ್ಳಲು ಸರ್ವ ಸ್ವತಂತ್ರರು. ಇದನ್ನು ಹಿಂಸೆಗೆ ಒಳಪಡಿಸುವ ಇಲ್ಲವೇ ತಾರತಮ್ಯಕ್ಕೆ ಅವಕಾಶ ಮಾಡುವ ಅಥವಾ ಪ್ರತ್ಯೇಕವಾಗಿಸಿ ಕಿರುಕುಳ ನೀಡಿ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುವುದು ಸಲ್ಲ ಎಂದು ನ್ಯಾಯಾಲಯ ಅಭಿಪ್ರಾಯಿಸಿದೆ.
ತಿರುವನಂತಪುರಂ: ನಗ್ನತೆಯನ್ನು ಎಲ್ಲಾ ಸಂದರ್ಭಗಳಲ್ಲೂ ಲೈಂಗಿಕತೆಯೊಂದಿಗೆ ಜೋಡಿಸಲಾಗದು ಎಂದು ಅಭಿಪ್ರಾಯಪಟ್ಟಿರುವ ಕೇರಳದ ಉಚ್ಛ ನ್ಯಾಯಾಲಯ, ಸಾಮಾಜಿಕ ಹೋರಾಟಗಾರ್ತಿ ವಿರುದ್ದ ದಾಖಲಾಗಿದ್ದ ಮೊಕದ್ದಮೆಯನ್ನೂ ವಜಾಗೊಳಿಸಿದೆ.
ಯಾವುದೇ ವ್ಯಕ್ತಿ ತನ್ನ ದೇಹ ಹಾಗೂ ಬದುಕಿನ ಕುರಿತು ನಿರ್ಧಾರ ತೆಗೆದುಕೊಳ್ಳಲು ಸರ್ವ ಸ್ವತಂತ್ರರು. ಇದನ್ನು ಹಿಂಸೆಗೆ ಒಳಪಡಿಸುವ ಇಲ್ಲವೇ ತಾರತಮ್ಯಕ್ಕೆ ಅವಕಾಶ ಮಾಡುವ ಅಥವಾ ಪ್ರತ್ಯೇಕವಾಗಿಸಿ ಕಿರುಕುಳ ನೀಡಿ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುವುದು ಸಲ್ಲ ಎಂದು ನ್ಯಾಯಾಲಯ ಅಭಿಪ್ರಾಯಿಸಿದೆ.
ಕೇರಳದ ಸಾಮಾಜಿಕ ಹೋರಾಟಗಾರ್ತಿ ರೆಹೆನಾ ಫಾತಿಮಾ ಅವರು ತನ್ನ ದೇಹದ ಮೇಲ್ಭಾಗದಲ್ಲಿ ಚಿತ್ರ ಬಿಡಿಸುವುದಕ್ಕೆ ತನ್ನದೇ ಮಕ್ಕಳಿಗೆ ಅನುಮತಿ ನೀಡಿದ್ದರ ವಿರುದ್ದ ಪೋಕ್ಸೋ, ಬಾಲ ನ್ಯಾಯ, ಮಾಹಿತಿ ತಂತ್ರಜ್ಞಾನದ ಅಡಿ ಕೇರಳ ಒಬಿಸಿ ಮೋರ್ಚಾ ಮೊಕದ್ದಮೆ ದಾಖಲಿಸಿತ್ತು. ಅರೆನಗ್ನವಾಗಿ ಚಿತ್ರಗಳನ್ನು ಬಿಡಿಸಲು ಅನುಮತಿ ನೀಡಿದ್ದೂ ಅಲ್ಲದೇ ಅದರ ಚಿತ್ರ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರ ಕುರಿತು ಫಾತೀಮಾ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು.
ತನ್ನ ದೇಹದ ಮೇಲ್ಭಾಗದಲ್ಲಿ ಚಿತ್ರ ಬಿಡಿಸಲು ನನ್ನ ಅಪ್ರಾಪ್ತ ಮಕ್ಕಳಿಗೆ ಅನುಮತಿ ನೀಡಿದ್ದೆ. ಅರೆನಗ್ನತೆಯನ್ನು ಲೈಂಗಿಕತೆ ಎಂದು ಕರೆಯಲಾಗದು. ಪುರುಷ ದೇಹದ ಮೇಲ್ಭಾಗ ನಗ್ನವಾಗಿದ್ದರೆ ಅದನ್ನು ಲೈಂಗಿಕ ದೃಷ್ಟಿಕೋನದಲ್ಲಿ ನೋಡದವರು ಮಹಿಳೆಯರ ನಿಟ್ಟಿನಲ್ಲಿ ಇಂತಹ ಯೋಚನೆ ಎನ್ನುವುದು ಅರ್ಥವಾಗುತ್ತಿಲ್ಲ. ನನ್ನ ವಿರುದ್ದ ದಾಖಲಾಗಿರುವ ಮೊಕದ್ದಮೆ ವಜಾಗೊಳಿಸಬೇಕು ಎಂದು ಫಾತೀಮಾ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಡಪ್ಪಗತ್ ಅವರು, ತಾಯಿಯು ಕಲಾ ಯೋಜನೆಯೊಂದರಡಿ ತನ್ನ ಮಕ್ಕಳು ಚಿತ್ರ ಬಿಡಿಸಲೆಂದು ದೇಹದ ಮೇಲ್ಭಾಗ ನೀಡಿದ್ದು ಲೈಂಗಿಕತೆಯ ಭಾಗ ಎಂದು ಕರೆಯಲಾಗದು. ಲೈಂಗಿಕ ದುರುದ್ದೇಶ ಅಥವಾ ತೃಪ್ತಿಗೋಸ್ಕರಕ್ಕೆ ಇದನ್ನು ಮಾಡಿದ್ದರೆ ಒಪ್ಪಲಾಗುತ್ತಿರಲಿಲ್ಲ. ಮಕ್ಕಳೊಂದಿಗಿನ ಮುಗ್ಧ ಕಲಾತ್ಮಕ ಭಾವನೆಯನ್ನು ಕಠೋರ ಎಂದೂ ಉಲ್ಲೇಖಿಸಲಾಗದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆ ತನ್ನ ದೇಹದ ಕುರಿತು ಸ್ವತಂತ್ರ ನಿರ್ಧಾರ ಕೈಗೊಳ್ಳಲು ಸಶಕ್ತಳು. ಅದು ಆಕೆಯ ಸಮಾನತೆ ಹಾಗೂ ಖಾಸಗಿತನದ ಮೂಲಭೂತ ಹಕ್ಕೂ ಹೌದು. ಇದು ಸಂವಿಧಾನದ 21ನೇ ಪರಿಚ್ಛೇದದಲ್ಲಿ ನೀಡಲಾಗಿರುವ ವೈಯಕ್ತಿಕ ಸ್ವತಂತ್ರದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ್ದಾರೆ.
ಕೇರಳದಲ್ಲಿ ಹಿಂದೆಲ್ಲಾ ಕೆಳ ಜಾತಿಯ ಮಹಿಳೆಯರು ತನ್ನ ಎದೆಯನ್ನು ಮುಚ್ಚಿಕೊಳ್ಳಲು ಹೋರಾಟಗಳನ್ನೂ ನಡೆಸಿದ್ದಾರೆ. ಅಲ್ಲದೇ ದೇಗುಲಗಳು, ಪ್ರತಿಮೆಗಳು ಹಾಗೂ ಭಿತ್ತಿ ಚಿತ್ರಗಳಲ್ಲಿ ನಗ್ನತೆಯನ್ನು ಈಗಲೂ ಕಾಣುತ್ತೇವೆ. ಇದನ್ನು ನಾವು ಪವಿತ್ರ ಎಂದು ನಂಬುತ್ತೇವೆ. ಪುರುಷರು ತಮ್ಮ ದೇಹದ ಮೇಲ್ಭಾಗವನ್ನು ಪ್ರದರ್ಶಿಸುವುದು ನಗ್ನತೆಯಾಗಿ ಕಾಣುವುದಿಲ್ಲ. ಅದೇ ಮಹಿಳೆಯ ವಿಚಾರದಲ್ಲಿ ಇದು ತದ್ವಿರುದ್ದ. ಪ್ರತಿಯೊಬ್ಬರೂ ತನ್ನ ದೇಹದ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಂವಿಧಾನದಲ್ಲಿಯೇ ಅವಕಾಶ ಇರುವುದರಿಂದ ದ್ವಿಮುಖ ನೀತಿ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಕೇರಳದ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಎ.ವಿ.ಅರುಣ್ ಪ್ರಕಾಶ್ ದೂರು ನೀಡಿದ್ದರಿಂದ ಪತ್ತನಮಿತ್ತ ಪೊಲೀಸರು ಮೊಕದ್ದಮೆ ದಾಖಲಿಸಿದ್ದರು. ಕೇರಳ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೂ ಈ ಕುರಿತು ವಿವರಣೆ ಕೇಳಿತ್ತು. ಇದಲ್ಲದೇ ಫಅತಿಮಾ ಅವರು ಶಬರಿಮಲೈ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಪ್ರವೇಶಿಸಲು ಯತ್ನಿಸಿ ವಿವಾದಕ್ಕೆ ಗುರಿಯಾಗಿದ್ದರು.
ವಿಭಾಗ