ಪಹಲ್ಗಾಮ್ ಉಗ್ರ ದಾಳಿಯ ಹೊಣೆ ಹೊತ್ತ ಲಷ್ಕರ್-ಎ-ತೊಯ್ಬಾ ಅಂಗಸಂಸ್ಥೆ: ಯಾವುದಿದು ದಿ ರೆಸಿಸ್ಟೆನ್ಸ್ ಫ್ರಂಟ್ -ನೀವು ತಿಳಿಯಬೇಕಾದ ಅಂಶಗಳಿವು
ಪಹಲ್ಗಾಮ್ನಲ್ಲಿ ಆಗಿರುವ ಭಯೋತ್ಪಾದಕ ದಾಳಿಯಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಉಗ್ರ ಸಂಘಟನೆಯಾದ ಲಷ್ಕರ್-ಎ-ತೈಬಾದ ಒಂದು ಶಾಖೆಯಾದ ಟಿಆರ್ಎಫ್, ಉಗ್ರ ದಾಳಿಯ ಹೊಣೆ ಹೊತ್ತಿದೆ. ಈ ಉಗ್ರ ಸಂಘಟನೆ ಯಾವುದು? ಇದು ನಿಷೇಧವಾಗಿದೆಯಾ? ಇಲ್ಲಿದೆ ವಿವರ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ 26ಕ್ಕೂ ಹೆಚ್ಚು ಅಮಾಯಕ ನಾಗರಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಬಂದೂಕುಧಾರಿಗಳು ಅಮಾಯಕರ ಮೇಲೆ ಕನಿಕರವೇ ಇಲ್ಲದಂತೆ ಗುಂಡಿನ ಮಳೆಗೈದಿದ್ದು, ಅಮಾಯಕ ಪ್ರವಾಸಿಗರು, ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಉಗ್ರ ಸಂಘಟನೆಯಾದ ಲಷ್ಕರ್-ಎ-ತೈಬಾದ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (TRF), ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆ ಹೊತ್ತುಕೊಂಡಿದೆ. ಅತ್ತ, ದಾಳಿಗೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕೇಂದ್ರದ ಬಿಜೆಪಿ ನಾಯಕರು ಹೇಳಿದ್ದಾರೆ.
“85,000ಕ್ಕೂ ಹೆಚ್ಚು ನಿವಾಸ ಪರವಾನಗಿಗಳನ್ನು ಸ್ಥಳೀಯರಲ್ಲದ ಜನರಿಗೆ ನೀಡಲಾಗಿದೆ. ಇದು ಭಾರತ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತದೆ. ಸ್ಥಳೀಯರಲ್ಲದವರು ಪ್ರವಾಸಿಗರ ಸೋಗಿನಲ್ಲಿ ಕಾಶ್ಮೀರಕ್ಕೆ ಆಗಮಿಸುತ್ತಾರೆ. ಇಲ್ಲಿ ನಿವಾಸಗಳನ್ನು ಪಡೆದು, ತಮ್ಮದೇ ಭೂಮಿ ಎಂಬಂತೆ ವರ್ತಿಸಲು ಪ್ರಾರಂಭಿಸುತ್ತಾರೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಟಿಆರ್ಎಫ್ ಹೇಳಿಕೆ ಎನ್ನಲಾದ ಪೋಸ್ಟರ್ ಹರಿದಾಡುತ್ತಿದೆ. ಈ ಪೋಸ್ಟ್ನ ವಿಶ್ವಾಸಾರ್ಹತೆಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇದರ ಸತ್ಯಾಸತ್ಯತೆ ಇನ್ನೂ ಸ್ಪಷ್ಟವಾಗಿಲ್ಲ. "ಅಕ್ರಮವಾಗಿ ನೆಲೆಸಲು ಪ್ರಯತ್ನಿಸುವವರ ಕಡೆಗೆ ಹಿಂಸಾಚಾರ ಮಾಡಲಾಗುತ್ತದೆ" ಎಂದು ಅದು ಹೇಳಿದೆ.
ಏನಿದು ಟಿಆರ್ಎಫ್? ಇದರ ಮುಖ್ಯಸ್ಥ ಯಾರು?
ಆಗಸ್ಟ್ 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಹೊರಹೊಮ್ಮಿದ ಹೊಸ ಭಯೋತ್ಪಾದಕ ಸಂಘಟನೆಯೇ ದಿ ರೆಸಿಸ್ಟೆನ್ಸ್ ಫ್ರಂಟ್ (TRF). ಇದನ್ನೇ ಸಂಕ್ಷಿಪ್ತವಾಗಿ ಟಿಆರ್ಎಫ್ ಎಂದು ಹೇಳಲಾಗುತ್ತದೆ. ಲಷ್ಕರ್-ಎ-ತೈಬಾ (ಎಲ್ಇಟಿ)ದ ಒಂದು ಶಾಖೆ ಎಂದು ನಂಬಲಾದ ಟಿಆರ್ಎಫ್ ಅನ್ನು ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ಸ್ಥಳೀಯ ಸ್ಪರ್ಷ ನೀಡಲು ರಚಿಸಲಾಗಿದೆ ಎಂಬ ಆತಂಕಕಾರಿ ಮಾಹಿತಿಯನ್ನು ವರದಿಗಳು ತಿಳಿಸಿವೆ.
ಅಕ್ಟೋಬರ್ 2019ರಲ್ಲಿ ಸ್ಥಾಪನೆಯಾದ ಈ ಗುಂಪನ್ನು ಶೇಖ್ ಸಜ್ಜದ್ ಗುಲ್ ಎಂಬಾತ ಸುಪ್ರೀಂ ಕಮಾಂಡರ್ ಆಗಿ ಮುನ್ನಡೆಸಿದ. ಇದೇ ವೇಳೆ ಬಾಸಿತ್ ಅಹ್ಮದ್ ದಾರ್ ಎಂಬಾತ ಇದರ ಮುಖ್ಯ ಕಾರ್ಯಾಚರಣಾ ಕಮಾಂಡರ್ ಆಗಿ ನಿರ್ವಹಿಸಿದ್ದಾನೆ. ವರದಿಗಳ ಪ್ರಕಾರ, ಟಿಆರ್ಎಫ್ ಅನ್ನು ಆರಂಭದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಎಲ್ಇಟಿಯ ಕಾರ್ಯಕರ್ತರೊಂದಿಗೆ ರಚಿಸಲಾಯ್ತು. ಕೇಂದ್ರ ಸರ್ಕಾರವು ಟಿಆರ್ಎಫ್ ಅನ್ನು ಎಲ್ಇಟಿಯ ಒಂದು ಶಾಖೆ ಎಂದು ಕರೆಯುತ್ತಿದೆ.
ನಿಷೇಧಿಸಿರುವ ಕೇಂದ್ರ ಸರ್ಕಾರ
ಕೇಂದ್ರ ಗೃಹ ಸಚಿವಾಲಯವು 2023ರ ಜನವರಿಯಲ್ಲಿಯೇ TRF ಮತ್ತು ಅದರ ಎಲ್ಲಾ ಸಹ ಸಂಘಟನೆಗಳನ್ನು ನಿಷೇಧಿಸಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ 1967ರ ಅಡಿಯಲ್ಲಿ ಸಚಿವಾಲಯವು ಅವುಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಿದೆ.
ಪಹಾಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿ ನಡೆದ ಸ್ಥಳದ ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗುತ್ತಿದ್ದು, ಮನಕಲಕುವಂತಿದೆ. ಪ್ರವಾಸಕ್ಕೆಂದು ಬಂದು ತನ್ನವರನ್ನು ಕಳೆದುಕೊಂಡ ಪ್ರವಾಸಿಗರು, ಅತ್ತು ಗೋಗರೆದಿದ್ದಾರೆ. ತಮ್ಮವರನ್ನು ಬದುಕಿಸುವಂತೆ ಗೋಗರೆದಿದ್ದಾರೆ. ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಭದ್ರತಾ ಪಡೆಗಳು ಪ್ರದೇಶಕ್ಕೆ ಧಾವಿಸಿದ್ದು, ಕಾರ್ಯಾಚರಣೆ ಮುಂದುವರೆದಿದೆ. ಬದುಕುಳಿದವರನ್ನು ಸುರಕ್ಷತಾ ಸ್ಥಳಕ್ಕೆ ಕರೆದೊಯ್ಯುವ ಜೊತೆಗೆ, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ.