Lok Sabha election 2024: ಮುಂದಿನ ಲೋಕಸಭೆ ಚುನಾವಣೆ ಒಂಟಿ ಕುದುರೆ ರೇಸ್;ಕಾಂಗ್ರೆಸ್ ವೀಕ್ ಆಗಿದೆ, ಪ್ರಾದೇಶಿಕ ಪಕ್ಷಗಳ ಪಾತ್ರವೇ ಮುಖ್ಯ!
Lok Sabha election 2024: ಬಿಜೆಪಿಯ ಸ್ಥಾನವನ್ನು ತುಂಬಬಲ್ಲ ಪಕ್ಷ ಇನ್ನೊಂದಿಲ್ಲ ಎಂಬ ನಿರ್ಧಾರಕ್ಕೆ ಬರುವುದು ತಪ್ಪಾಗಬಹುದು ಎಂದು ನಾನು ಭಾವಿಸುತ್ತೇನೆ. ಉಳಿದ ಪಕ್ಷಗಳನ್ನು ಮೀರಿ ಬಿಜೆಪಿ ತನಗೊಂದು ದೃಷ್ಟಿಕೋನವಿದೆ ಎಂಬುದನ್ನು ಸ್ಪಷ್ಟವಾಗಿ ಸಾರಿ ಹೇಳಿದೆ ಎಂದು ಪ್ರಸಿದ್ಧ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಹೇಳಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆ ಎಂಬುದು ಒಂಟಿ ಕುದುರೆ ರೇಸ್. ಅಲ್ಲಿ ಬಿಜೆಪಿ ಮಾತ್ರವೇ ಫೇವರಿಟ್. ಅದುವೇ ಗೆಲ್ಲುವ ಕುದುರೆ. ಕಾಂಗ್ರೆಸ್ ಪಕ್ಷ ಬಹಳ ವೀಕ್ ಆಗಿದೆ. ಆದ್ದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಪಾತ್ರವೇ ಬಹಳ ಮುಖ್ಯ.
ಇದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಅವರ ಸ್ಪಷ್ಟ ನುಡಿ. ಪಿಟಿಐ ಸುದ್ದಿ ಸಂಸ್ಥೆಗೆ ವಿಶೇಷ ಸಂದರ್ಶನ ನೀಡಿದ ಅವರು, ಪ್ರಾದೇಶಿಕ ಪಕ್ಷಗಳ ಪಾತ್ರ ಮುಖ್ಯ ಎಂದರೆ ಎಲ್ಲರೂ ಒಟ್ಟಾಗಿ ಬಿಜೆಪಿಯನ್ನು ಎದುರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಇಲ್ಲಿ ಸಂಖ್ಯೆ ಬಹಳ ಮುಖ್ಯ.
ಪ್ರಾದೇಶಿಕ ಪಕ್ಷಗಳ ಸಂಖ್ಯೆ ಎಂದಾಗ, ಡಿಎಂಕೆ ಖಚಿತವಾಗಿ ಪ್ರಾದೇಶಿಕವಾಗಿ ಬಹಳ ಗಟ್ಟಿಯಾಗಿರುವ ಪಕ್ಷ. ಅದೇ ರೀತಿ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಮುಖ್ಯ ಪಕ್ಷ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಕೂಡ ಮುಖ್ಯವೇ ಎಂಬುದನ್ನು ಗುರುತಿಸಿದ್ದೇನೆ. ಆದರೆ, ಇವುಗಳು ಲೋಕಸಭೆ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಮುಖ್ಯ ಪಾತ್ರ ನಿರ್ವಹಿಸುತ್ತವೆ ಎಂಬ ವಿಚಾರದಲ್ಲಿ ಸ್ಪಷ್ಟತೆ ಸಾಲದು ಎಂದು ಹೇಳಿದರು.
ಬಿಜೆಪಿಯ ಸ್ಥಾನವನ್ನು ತುಂಬಬಲ್ಲ ಪಕ್ಷ ಇನ್ನೊಂದಿಲ್ಲ ಎಂಬ ನಿರ್ಧಾರಕ್ಕೆ ಬರುವುದು ತಪ್ಪಾಗಬಹುದು ಎಂದು ನಾನು ಭಾವಿಸುತ್ತೇನೆ. ಉಳಿದ ಪಕ್ಷಗಳನ್ನು ಮೀರಿ ಬಿಜೆಪಿ ತನಗೊಂದು ದೃಷ್ಟಿಕೋನವಿದೆ ಎಂಬುದನ್ನು ಸ್ಪಷ್ಟವಾಗಿ ಸಾರಿ ಹೇಳಿದೆ. ದೇಶದ ಉಳಿದವರ ಭಾವಕ್ಕೆ ಮೀರಿ ಹಿಂದುಗಳ ಪರವಾದ ನಿಲುವನ್ನು ಹೊಂದಿ ದೇಶವನ್ನು ಅದು ಮುನ್ನಡೆಸುತ್ತಿದೆ ಎಂದು ಅವರು ಹೇಳಿದರು.
ಇಂಡಿಯಾದ ದೃಷ್ಟಿಕೋನವನ್ನು ಗಣನೀಯವಾಗಿ ಕಡಿಮೆ ಮಾಡಿರುವ ಬಿಜೆಪಿ, ಭಾರತ ಎಂದರೆ ಹಿಂದು ಭಾರತ, ಹಿಂದಿ ಮಾತನಾಡುವವರ ಭಾರತ ಎಂಬ ಸಂಕುಚಿತ ಭಾವದ ದೃಷ್ಟಿಕೋನವನ್ನು ಬಲವಾಗಿ ಅಳವಡಿಸಿಕೊಂಡಿದೆ. ಇಂತಹ ಸನ್ನಿವೇಶದಲ್ಲಿ ಭಾರತಕ್ಕೆ ಬಿಜೆಪಿ ಬಿಟ್ಟರೆ ಬೇರೆ ಪರ್ಯಾಯ ಇಲ್ಲ ಎಂದಾದರೆ ಅದು ಬಹಳ ಖೇದಕರ ವಿಚಾರವಾಗುತ್ತದೆ ಎಂದು ಅಮರ್ತ್ಯ ಸೇನ್ ಹೇಳಿದರು.
ಒಂದೊಮ್ಮೆ ಬಿಜೆಪಿ ಪ್ರಬಲ ಮತ್ತು ಶಕ್ತಿಯುತವಾಗಿ ಗೋಚರಿಸಿದರೆ ಅದಕ್ಕೆ ಅದೇ ಪ್ರಮಾಣದ ದೌರ್ಬಲ್ಯ ಕೂಡ ಹೊಂದಿದೆ ಎಂದೇ ಅರ್ಥ. ಇತರೆ ರಾಜಕೀಯ ಪಕ್ಷಗಳು ಈ ವಿಚಾರವಾಗಿ ಗಮನಹರಿಸುವುದಾದರೆ, ನಿಜವಾಗಿಯೂ ಪ್ರಯತ್ನಿಸುವುದಾದರೆ ಅದನ್ನು ಅರಿಯವುದು ಸಾಧ್ಯವಿದೆ ಎಂದು ನಾನು ಭಾವಿಸುತ್ತೇನೆ. ಬಿಜೆಪಿ ವಿರೋಧಿ ಪಕ್ಷಗಳು ಎಷ್ಟರ ಮಟ್ಟಿಗೆ ಒಂದಾಗಬಹುದು ಎಂಬ ಅರಿವು ನನಗೆ ಇಲ್ಲ ಎಂದು ಹೇಳಿದರು.
ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ವಿರುದ್ಧ ಎಲ್ಲ ಪ್ರಾದೇಶಿಕ ಪಕ್ಷಗಳು ಒಟ್ಟಾಗಬೇಕು ಎಂದು ಅನೇಕ ಪ್ರಾದೇಶಿಕ ನಾಯಕರು ಹೇಳಿದ್ದರು. ಇದರಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ), ಜೆಡಿಯು ನಾಯಕರು ಕೂಡ ಸೇರಿಕೊಂಡಿದ್ದಾರೆ. ಬಿಜೆಪಿಯನ್ನು ಸೋಲಿಸಬೇಕಾದರೆ ಎರಡು ಪಕ್ಷಗಳ ನಡುವಿನ ಹೋರಾಟ ಪರಿಸ್ಥಿತಿ ನಿರ್ಮಾಣ ಮಾಡಬೇಕು ಎಂಬ ಅಭಿಪ್ರಾಯವನ್ನೂ ಈ ನಾಯಕರು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವು 2024 ಚುನಾವಣೆಯಲ್ಲಿ ಗೆಲ್ಲುವುದು ಕಷ್ಟದ ಮಾತು. ಅದು ಬಹಳಷ್ಟು ನಿತ್ರಾಣಗೊಂಡಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಮೇಲೆ ಎಷ್ಟು ಜನ ನಂಬಿಕೆ ಉಳಿಸಿಕೊಂಡಿದ್ದಾರೆ ಎಂದು ಹೇಳಲಾಗದು. ಇನ್ನೊಂದೆಡೆ, ಕಾಂಗ್ರೆಸ್ ಪಕ್ಷಕ್ಕೆ ಅಖಿಲ ಭಾರತ ಮಟ್ಟದ ವಿಷನ್ ಇದೆ. ಆದರೆ ಅದನ್ನು ಮುಂದಕ್ಕೆ ಕೊಂಡೊಯ್ಯುವ ನಾಯಕತ್ವ ಇಲ್ಲ. ಪಕ್ಷದೊಳಗೆ ಅನೇಕ ಬಣಗಳಿವೆ. ಹೀಗಾಗಿ ಅದು ಬಹಳ ಸೋತು ಸುಣ್ಣವಾಗಿದೆ ಎಂದು ಅವರು ವಿಶ್ಲೇಷಿಸಿದರು.
ಇತರೆ ಗಮನಸೆಳೆಯುವ ಸುದ್ದಿ
Gene fingerprinting: ರಾಜಕೀಯ ಭಿನ್ನಮತೀಯರನ್ನು ಟಾರ್ಗೆಟ್ ಮಾಡಲು ಜೀನ್ ಫಿಂಗರ್ ಪ್ರಿಂಟಿಂಗ್ ಬಳಸಬಹುದು!; ಹೇಗೆ ಟಾರ್ಗೆಟ್ ಮಾಡ್ತಾರೆ?
ರಾಜಕೀಯ ಭಿನ್ನಮತೀಯರನ್ನು ಗುರುತಿಸಲು ಮತ್ತು ಟಾರ್ಗೆಟ್ ಮಾಡಲು ಹೊಸ ಜೆನಿಟಿಕ್ ಸೀಕ್ವೆನ್ಸಿಂಗ್ ಐಡೆಂಟಿಫಿಕೇಶನ್ ಟೆಕ್ನಿಕ್ ಬಳಕೆಯಾಗಬಹುದು ಎಂಬುದು ಈಗ ಹೊಸ ಆತಂಕ. ಜೆನಿಟಿಕ್ ಸ್ವೀಕ್ವೆನ್ಸಿಂಗ್ ಮೂಲಕ ಅಪರಾಧ ಸನ್ನಿವೇಶದಲ್ಲಿದ್ದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಇದರಿಂದ ಸಾಧ್ಯವಾಗಬಹುದು ಎಂಬ ವಿಚಾರದ ಕಡೆಗೆ ಪುಲಿಟ್ಜೆರ್ ವಿಜೇತ ಡಾ.ಸಿದ್ಧಾರ್ಥ ಮುಖರ್ಜಿ ಗಮನಸೆಳೆದರು. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ