ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವೆ ಭಾರಿ ಪೈಪೋಟಿ; ಆರಂಭಿಕ ಟ್ರೆಂಡ್ ಮುರಿದು ಪುಟಿದೆದ್ದ ತೃಣಮೂಲ ಕಾಂಗ್ರೆಸ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವೆ ಭಾರಿ ಪೈಪೋಟಿ; ಆರಂಭಿಕ ಟ್ರೆಂಡ್ ಮುರಿದು ಪುಟಿದೆದ್ದ ತೃಣಮೂಲ ಕಾಂಗ್ರೆಸ್

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವೆ ಭಾರಿ ಪೈಪೋಟಿ; ಆರಂಭಿಕ ಟ್ರೆಂಡ್ ಮುರಿದು ಪುಟಿದೆದ್ದ ತೃಣಮೂಲ ಕಾಂಗ್ರೆಸ್

ಪಶ್ಚಿಮ ಬಂಗಾಳದಲ್ಲಿ 2019ರ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದು ದಾಖಲೆ ನಿರ್ಮಿಸಿತ್ತು. ಈ ಬಾರಿ ಇರುವ ಸ್ಥಾನಗಳನ್ನು ಕಳೆದುಕೊಳ್ಳುವ ಸುಳಿವು ಸಿಕ್ಕಿದೆ. ರಾಜ್ಯ ಪ್ರಮುಖ ಪಕ್ಷ ಟಿಎಂಸಿ ಆರಂಭಿಕ ಮುನ್ನಡೆ ಸಾಧಿಸಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವೆ ಭಾರಿ ಪೈಪೋಟಿ (Representative file photo)
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವೆ ಭಾರಿ ಪೈಪೋಟಿ (Representative file photo)

ಪಶ್ಚಿಮ ಬಂಗಾಳದ ರಾಜಕೀಯ ಚಿತ್ರಣ ಬದಲಾಗುವ ಸೂಚನೆ ಸಿಗುತ್ತಿದೆ. ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಪ್ರಮುಖ ಪ್ರತಿಪಕ್ಷ ಬಿಜೆಪಿ ನಡುವೆ ನಿಕಟ ಪೈಪೋಟಿ ನಡೆಯುತ್ತಿದೆ. ಆರಂಭಿಕ ಟ್ರೆಂಡ್‌ ಪ್ರಕಾರ ರಾಜ್ಯದಲ್ಲಿ ಪ್ರಬಲ ಟಿಎಂಸಿ ಪಕ್ಷ ವಿರುದ್ಧ ಬಿಜೆಪಿ ಭಾರಿ ಮುನ್ನಡೆ ಸಾಧಿಸಿತ್ತು. ಆದರೆ ಸಮಯ ಕಳೆದಂತೆ ತನ್ನ ಹಳೆಯ ವೇಗವನ್ನು ಟಿಎಂಸಿ ಪಡೆದುಕೊಂಡಿದೆ.

42 ಸದಸ್ಯಬಲ ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಆರಂಭಿಕ ಹಂತದ ಮತ ಎಣಿಕೆಯಲ್ಲಿ ಟಿಎಂಸಿ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 18 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ, ಬೆಳಗ್ಗೆ 10:30ರ ಸಮಯಕ್ಕೆ ಬಿಜೆಪಿಯ ಮುನ್ನಡೆ 11ಕ್ಕೆ ಇಳಿದರೆ, ಟಿಎಂಸಿ 27 ಸ್ಥಾನಗಳಲ್ಲಿ ಮುನ್ನಡೆ ಮುಂದುವರೆಸಿದೆ. ಕಳೆದ ಬಾರಿ, ಅಂದರೆ 2019ರ ಚುನಾವಣೆಯಲ್ಲಿ ಬಂಗಾಳದಲ್ಲಿ‌ ಬಿಜೆಪಿ 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಅದಕ್ಕೂ ಹಿಂದೆ, ಅಂದರೆ 2014ರ ಫಲಿತಾಂಶಗಳಿಗೆ ಹೋಲಿಸಿದರೆ ತನ್ನ ಗೆಲುವಿನ ಸಂಖ್ಯೆಯನ್ನು 16ರಷ್ಟು ಹೆಚ್ಚಿಸಿತ್ತು. ಈ ಬಾರಿ ಮತ್ತೆ ಕುಸಿಯುವ ಸಾಧ್ಯತೆ ಇದೆ.

ಬಂಗಾಳದಲ್ಲಿ ಈ ವರ್ಷ ಎಡಪಕ್ಷಗಳ ಮಿತ್ರಪಕ್ಷವಾಗಿ ಕಾಂಗ್ರೆಸ್ ಪಕ್ಷವು ಕಣಕ್ಕಿಳಿಯಿತು. ಆದರೆ, ಟಿಎಂಸಿ ಹಾಗೂ ಬಿಜೆಪಿ ಸ್ವತಂತ್ರವಾಗಿ ಕಣಕ್ಕಿಳಿಯಿತು. ಇಂಡಿಯಾ ಮೈತ್ರಿಗೆ ತಾವು ಬಾಹ್ಯ ಬೆಂಬಲ ಮಾತ್ರ ನೀಡುವುದಾಗಿ ಟಿಎಂಸಿಯ ಮಮತಾ ಬ್ಯಾನರ್ಜಿ ಘೋಷಿಸಿದ್ದರು. 2019ರಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಇನ್ನೂ ಯಾವ ಕ್ಷೇತ್ರಗಳಲ್ಲೂ ಮುನ್ನಡೆ ಕಂಡಿಲ್ಲ.

ಮತ ಎಣಿಕೆಯಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ ಪ್ರಮುಖ ಅಭ್ಯರ್ಥಿಗಳು

ಟಿಎಂಸಿ ಸಂಸದರಾದ ಅಭಿಷೇಕ್ ಬ್ಯಾನರ್ಜಿ, ಮಹುವಾ ಮೊಯಿತ್ರಾ, ಸುದೀಪ್ ಬ್ಯಾನರ್ಜಿ, ಕಲ್ಯಾಣ್ ಬ್ಯಾನರ್ಜಿ, ಸತಾಬ್ದಿ ರಾಯ್ ಮುನ್ನಡೆಯಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಗಳಾದ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ, ಸೌಮಿತ್ರಾ ಖಾನ್, ಪಕ್ಷದ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಮುನ್ನಡೆಯಲ್ಲಿದ್ದಾರೆ. ಬರ್ಹಾಂಪೋರ್‌ನಲ್ಲಿ ಕಾಂಗ್ರೆಸ್ ಸಂಸದ ಮುನ್ನಡೆ ಸಾಧಿಸಿದ್ದರೆ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂಡಿ ಸಲೀಂ ಮುರ್ಷಿದಾಬಾದ್‌ನಲ್ಲಿ ಮುನ್ನಡೆ ಸಾಧಿಸಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.