Maha Kumbh Mela 2025: ವಿವಿಐಪಿ ಪಾಸ್ ರದ್ದು, ಏಕಮುಖ ವಾಹನ ಸಂಚಾರ; ಮಹಾಕುಂಭಮೇಳ ನಿರ್ವಹಣೆಯಲ್ಲಿ 5 ಮಹತ್ವದ ಬದಲಾವಣೆ
Maha Kumbh Mela 2025: ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಮಹಾ ಕುಂಭಮೇಳದಲ್ಲಿ ಕಾಲ್ತುಳಿತದಂತಹ ಘಟನೆ ನಡೆದ ನಂತರ ಅಲ್ಲಿನ ಆಡಳಿತ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಅದರ ವಿವರ ಇಲ್ಲಿದೆ.

Maha Kumbh Mela 2025: ಉತ್ತರ ಪ್ರದೇಶದ ತ್ರಿವೇಣಿ ಸಂಗಮ ನಗರ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿ 30ಭಕ್ತರು ಮೃತಪಟ್ಟು 60 ಮಂದಿ ತೀವ್ರವಾಗಿ ಗಾಯಗೊಂಡ ಪ್ರಕರಣದ ಬೆನ್ನಲ್ಲೇ ಕುಂಭಮೇಳದ ನಿರ್ವಹಣೆಯಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗಿದೆ. ಮುಖ್ಯವಾಗಿ ಐದು ಬದಲಾವಣೆಗಳನ್ನು ಮಹಾಕುಂಭಮೇಳ ಸಮಿತಿಯು ಮಾಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗು ಹಿರಿಯ ಸಚಿವರು, ಅಧಿಕಾರಿಗಳ ಸೂಚನೆಯ ಹಿನ್ನೆಲೆಯಲ್ಲಿ ಇನ್ನೂ ಒಂದು ತಿಂಗಳ ಕಾಲ ನಡೆಯಲಿರುವ ಮಹಾಕುಂಭಮೇಳದಲ್ಲಿ ಬದಲಾವಣೆ ಮಾಡಲಾಗಿದೆ. ಇದರಿಂದ ಮುಂದೆ ಇಂತಹ ಅನಾಹುತ ಆಗದಂತೆ ಮುನ್ನೆಚ್ಚರಿಕೆಯನ್ನು ಕೈಗೊಳ್ಳಲಾಗಿದೆ. ಗುರುವಾರದಿಂದಲೇ ಹೊಸ ನಿಯಮಗಳು ಜಾರಿಗೆ ಬಂದಿವೆ. ಇಡೀ ಕುಂಭಮೇಳ ಪ್ರದೇಶವನ್ನು ವಾಹನ ರಹಿತ ವಲಯ ಎಂದು ಘೋಷಿಸುವುದು ಸೇರಿದಂತೆ ಐದು ಪ್ರಮುಖ ಬದಲಾವಣೆಗಳನ್ನು ಆಡಳಿತವು ಜಾರಿಗೊಳಿಸಿದೆ.
ಮಹಾ ಕುಂಭಮೇಳದ ಜನಸಂಣಿ ನಿರ್ವಹಣೆ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸಲು, ಐಎಎಸ್ ಅಧಿಕಾರಿಗಳಾದ ಆಶಿಶ್ ಗೋಯಲ್ ಮತ್ತು ಭಾನು ಗೋಸ್ವಾಮಿ ಅವರಿಗೆ ತಕ್ಷಣವೇ ಪ್ರಯಾಗ್ರಾಜ್ ತಲುಪಲು ಸೂಚಿಸಲಾಗಿದೆ. ವಿಜಯ್ ಕಿರಣ್ ಅವರೊಂದಿಗೆ 2019 ರ ಅರ್ಧ ಕುಂಭವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಇಬ್ಬರೂ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಆ ಸಂದರ್ಭದಲ್ಲಿ, ಭಾನು ಗೋಸ್ವಾಮಿ ಅವರು ಜಿಲ್ಲಾಧಿಕಾರಿ ಮತ್ತು ಕುಂಭಮೇಳ ಪ್ರಾಧಿಕಾರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರೆ, ಆಶಿಶ್ ಗೋಯಲ್ ಅವರು ಅಲಹಾಬಾದ್ನ ಕಮಿಷನರ್ ಆಗಿದ್ದರು, ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದರು.
ಪ್ರಯಾಗರಾಜ್ನಾದ್ಯಂತ ಹೆಚ್ಚಿನ ಸಂಖ್ಯೆಯ ಭಕ್ತರು ರೈಲು ನಿಲ್ದಾಣಗಳಲ್ಲಿ ಉಪಸ್ಥಿತರಿದ್ದು, ಮನೆಗೆ ಮರಳಲು ತಯಾರಿ ನಡೆಸುತ್ತಿದ್ದಾರೆ, ಸಿಎಂ ಆದಿತ್ಯನಾಥ್ ಅವರು ರೈಲು ಅಧಿಕಾರಿಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಬಸ್ಗಳನ್ನು ನಿಯೋಜಿಸುವಂತೆ ಸಾರಿಗೆ ಸಂಸ್ಥೆಗೆ ಸೂಚಿಸಲಾಗಿದೆ.
ಮೇಳದ ಪ್ರದೇಶದಲ್ಲಿ ಜನಸಂದಣಿಯ ಒತ್ತಡವನ್ನು ನಿರ್ವಹಿಸಲು ಗಡಿ ಬಿಂದುಗಳಲ್ಲಿ ಹೋಲ್ಡಿಂಗ್ ಪ್ರದೇಶಗಳನ್ನು ಸ್ಥಾಪಿಸಲಾಗಿದೆ. ಪರಿಸ್ಥಿತಿ ಸುಗಮವಾದಾಗ ಮಾತ್ರ ಭಕ್ತರಿಗೆ ತೆರಳಲು ಅವಕಾಶ ನೀಡಲಾಗುವುದು. ಈ ಪ್ರದೇಶಗಳಲ್ಲಿ ಆಹಾರ, ಕುಡಿಯುವ ನೀರು ಮತ್ತು ನಿರಂತರ ವಿದ್ಯುತ್ ಪೂರೈಕೆಗೆ ಸಾಕಷ್ಟು ವ್ಯವಸ್ಥೆ ಇರುತ್ತದೆ ಎಂದು ರಾಜ್ಯ ಸರ್ಕಾರ ಭರವಸೆ ನೀಡಿದೆ.
ಅಯೋಧ್ಯೆ, ಕಾನ್ಪುರ, ಫತೇಪುರ್, ಲಕ್ನೋ, ಪ್ರತಾಪ್ಗಢ್ ಮತ್ತು ವಾರಣಾಸಿ ಸೇರಿದಂತೆ ಪ್ರಯಾಗ್ರಾಜ್ಗೆ ಹೋಗುವ ಪ್ರಮುಖ ಮಾರ್ಗಗಳಲ್ಲಿ ಹೆಚ್ಚಿದ ಗಸ್ತು ಮತ್ತು ಸುವ್ಯವಸ್ಥಿತ ಟ್ರಾಫಿಕ್ ನಿರ್ವಹಿಸುವಂತೆ ಕಡ್ಡಾಯಗೊಳಿಸಲಾಗಿದೆ.
ಕಾಲ್ತುಳಿತಕ್ಕೆ ಕಾರಣಗಳ ಕುರಿತು ತನಿಖೆ ನಡೆಸಲು ಮೂವರು ಸದಸ್ಯರ ನ್ಯಾಯಾಂಗ ಆಯೋಗವನ್ನು ನೇಮಿಸಲಾಗಿದೆ. ಸಮಿತಿಯಲ್ಲಿ ನ್ಯಾಯಮೂರ್ತಿ ಹರ್ಷ್ ಕುಮಾರ್, ಮಾಜಿ ಮಹಾನಿರ್ದೇಶಕ ವಿಕೆ ಗುಪ್ತಾ ಮತ್ತು ನಿವೃತ್ತ ಐಎಎಸ್ ಅಧಿಕಾರಿ ವಿಕೆ ಸಿಂಗ್ ಇದ್ದಾರೆ.
5 ಪ್ರಮುಖ ಬದಲಾವಣೆಗಳು ಏನು
ಸಂಪೂರ್ಣ ವಾಹನ ರಹಿತ ವಲಯ: ಮಹಾ ಕುಂಭಮೇಳ ಪ್ರದೇಶದಲ್ಲಿ ಎಲ್ಲಾ ರೀತಿಯ ವಾಹನಗಳ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ವಿವಿಐಪಿ ಪಾಸ್ಗಳನ್ನು ರದ್ದುಗೊಳಿಸಲಾಗಿದೆ: ಯಾವುದೇ ವಿಶೇಷ ಪಾಸ್ಗಳು ವಾಹನ ಪ್ರವೇಶವನ್ನು ಅನುಮತಿಸುವುದಿಲ್ಲ, ಎಲ್ಲಾ ವಿನಾಯಿತಿಗಳನ್ನು ತೆಗೆದುಹಾಕಲಾಗಿದೆ.
ಏಕಮುಖ ಮಾರ್ಗ ಜಾರಿ: ಭಕ್ತಾದಿಗಳ ಸಂಚಾರ ಸುಗಮಗೊಳಿಸಲು ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ವಾಹನ ಪ್ರವೇಶ ನಿರ್ಬಂಧಿಸಲಾಗಿದೆ: ಜನದಟ್ಟಣೆ ಕಡಿಮೆ ಮಾಡಲು ನೆರೆಯ ಜಿಲ್ಲೆಗಳಾದ ಪ್ರಯಾಗ್ರಾಜ್ನಿಂದ ಆಗಮಿಸುವ ವಾಹನಗಳನ್ನು ಜಿಲ್ಲೆಯ ಗಡಿಯಲ್ಲಿ ನಿಲ್ಲಿಸಲಾಗುತ್ತಿದೆ.
ಫೆಬ್ರುವರಿ 4ರವರೆಗೆ ಕಟ್ಟುನಿಟ್ಟಿನ ನಿರ್ಬಂಧ: ಬಿಗಿ ಕ್ರಮವನ್ನು ಕಾಯ್ದುಕೊಳ್ಳಲು ಫೆಬ್ರುವರಿ 4 ದಿನಾಂಕದವರೆಗೆ ನಾಲ್ಕು ಚಕ್ರದ ವಾಹನಗಳ ನಗರದ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
