ಲೋಕಸಭಾ ಫಲಿತಾಂಶ; ಮಹಾರಾಷ್ಟ್ರದ 48 ಸ್ಥಾನಗಳಲ್ಲಿ ಎನ್ಡಿಎ vs ಇಂಡಿಯಾ, ಬದಲಾದ ರಾಜಕೀಯ ಸಮೀಕರಣದ ಫಲ, ಜನಾದೇಶ ಹೀಗಿದೆ ನೋಡಿ
ಲೋಕಸಭಾ ಚುನಾವಣೆ (Lok Sabha Election Results) ಪ್ರಕಟವಾಗುತ್ತಿದ್ದು, ಮಹಾರಾಷ್ಟ್ರದ 48 ಸ್ಥಾನಗಳು ದೇಶದ ಗಮನಸೆಳೆದಿವೆ. ಇಲ್ಲಿ ಶಿವಸೇನಾ ಮತ್ತು ಎನ್ಸಿಪಿ ಇಬ್ಭಾಗವಾಗಿ ರಾಜಕೀಯ ಸಮೀಕರಣ ಬದಲಾದ ಕಾರಣ ಎನ್ಡಿಎ vs ಇಂಡಿಯಾ ಪೈಪೋಟಿಗೆ ಜನಾದೇಶ ಕುತೂಹಲ ಕೆರಳಿಸಿದೆ. ಅದರ ವಿವರ ಇಲ್ಲಿದೆ.

ಮುಂಬಯಿ: ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆ ಈ ಸಲ ಬಹಳ ಪೈಪೋಟಿಯಿಂದ ಕೂಡಿತ್ತು. ಇಲ್ಲಿ 48 ಲೋಕಸಭಾ ಸ್ಥಾನಗಳಿದ್ದು, ಈ ಪೈಕಿ ರಾಜ್ಯದಲ್ಲಿ ಆಡಳಿತಾರೂಢ ಎನ್ಡಿಎ ಮೈತ್ರಿ (ಬಿಜೆಪಿ, ಶಿವಸೇನಾ, ಎನ್ಸಿಪಿ) 20 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ವಿಪಕ್ಷ ಸ್ಥಾನಕ್ಕೆ ಹೋಗಿರುವ ಐಎನ್ಡಿಐಎ ಒಕ್ಕೂಟ (ಕಾಂಗ್ರೆಸ್, ಶಿವಸೇನಾ ಉದ್ಧವ್ ಬಣ, ಎನ್ಸಿಪಿ ಶರದ್ ಪವಾರ್ ಬಣ) 27 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20 ರಂದು ಒಟ್ಟು 5 ಹಂತಗಳಲ್ಲಿ ಮತದಾನ ನಡೆಯಿತು.
ಮಹಾರಾಷ್ಟ್ರದಲ್ಲಿ ಎನ್ಸಿಪಿ ಮತ್ತು ಶಿವಸೇನೆಗಳಲ್ಲಿ ಆಗಿರುವ ಆಂತರಿಕ ಒಡಕು ಈ ಸಲದ ಚುನಾವಣೆಯಲ್ಲಿ ಮತದಾರರನ್ನು ಸ್ವಲ್ಪ ಗೊಂದಲಕ್ಕೆ ತಳ್ಳಿರುವುದು ವಾಸ್ತವ. ಇದು ಪಕ್ಷಗಳ ಮತಗಳಿಕೆಯ ಮೇಲು ಪರಿಣಾಮ ಬೀರಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಬಳಿಕ ಇಲ್ಲಿ ಸ್ಥಳೀಯ ರಾಜಕಾರಣದ ಚಿತ್ರಣವೂ ಬದಲಾಗಿದ್ದು, ಎನ್ಸಿಪಿ ಮತ್ತು ಶಿವಸೇನೆ ಎರಡೂ ಒಡೆದು ಹೋಗಿದ್ದು, ಪ್ರತ್ಯೇಕವಾದ ಬಣ ಎನ್ಡಿಎ ಮೈತ್ರಿಕೂಟ ಸೇರಿದೆ. ಮಹಾರಾಷ್ಟ್ರ ವಿಕಾಸ್ ಅಘಾಡಿ ಕೈಯಲ್ಲಿದ್ದ ಆಡಳಿತ ಚುಕ್ಕಾಣಿ ಬಿಜೆಪಿ ನೇತೃತ್ವದ ಎನ್ಡಿಎ ಕೈ ಸೇರಿತ್ತು.
ಬಿಜೆಪಿ 28, ಶಿವಸೇನಾ (ಶಿಂಧೆ) 15, ಎನ್ಸಿಪಿ (ಅಜಿತ್ ಪವಾರ್ ಬಣ) 4, ರಾಷ್ಟ್ರೀಯ ಸಮಾಜ ಪಕ್ಷ 1 ಸೇರಿ 48 ಸ್ಥಾನಗಳಲ್ಲಿ ಎನ್ಡಿಎ ಅಭ್ಯರ್ಥಿಗಳು ಕಣದಲ್ಲಿದ್ದರು. ಇಂಡಿಯಾ ಗುಂಪಿನಿಂದ ಶಿವ ಸೇನಾ (ಉದ್ಧವ್ ಬಣ) 21, ಕಾಂಗ್ರೆಸ್ 17, ಎನ್ಸಿಪಿ (ಶರದ್ ಪವಾರ್ ಬಣ) 10 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು.
2019ರ ಲೋಕಸಭಾ ಚುನಾವಣೆ ಮಹಾರಾಷ್ಟ್ರದಲ್ಲಿ 4 ಹಂತಗಳಲ್ಲಿ ನಡೆದಿತ್ತು. ಅಂದು ಬಿಜೆಪಿ 25 ಮತ್ತು ಶಿವಸೇನಾ 23 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಈ ಪೈಕಿ ಬಿಜೆಪಿ 23, ಶಿವಸೇನಾ 18 ಸ್ಥಾನಗಳಲ್ಲಿ ಗೆಲುವು ಕಂಡಿದ್ದವು. ಇನ್ನು ಯುಪಿಎ ಮೈತ್ರಿಯಲ್ಲಿ ಕಾಂಗ್ರೆಸ್ 25, ಎನ್ಸಿಪಿ 19, ಸ್ವಾಭಿಮಾನಿ ಪಕ್ಷ 2, ಬಹುಜನ ವಿಕಾಸ್ ಅಘಾಡಿ 1, ಪಕ್ಷೇತರ 1 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರು. ಈ ಪೈಕಿ ಕಾಂಗ್ರೆಸ್ 1, ಎನ್ಸಿಪಿ 4, ಎಐಎಂಐಎಂ 1, ಒಬ್ಬರು ಪಕ್ಷೇತರ ಅಭ್ಯರ್ಥಿ ವಿಜಯಿಯಾಗಿದ್ದರು.
ಬದಲಾದ ರಾಜಕೀಯ ಸಮೀಕರಣ; ಯಾರಿಗೆ ಲಾಭ
ಮಹಾರಾಷ್ಟ್ರದಲ್ಲಿ ಬದಲಾದ ರಾಜಕೀಯ ಸಮೀಕರಣದ ಲಾಭ ಯಾರಿಗೆ ಆಗಲಿದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ಇದನ್ನು ಬಿಂಬಿಸಿದೆ.
ಬಿಜೆಪಿ-ಶಿವಸೇನೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಅಜಿತ್ ಪವಾರ್) ಪ್ರಚಾರವು ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಶರದ್ ಪವಾರ್) ಮತ್ತು ಶಿವಸೇನಾ (ಯುಬಿಟಿ) ಬಣದ ಪ್ರಚಾರಕ್ಕಿಂತ ಪ್ರಬಲವಾಗಿರಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಹಾಗಾಗಲಿಲ್ಲ. ಬಿಜೆಪಿ-ಶಿವಸೇನೆ-ಎನ್ಸಿಪಿ (ಅಜಿತ್) ಪ್ರಮುಖ ನಾಯಕರು ಮತ್ತು ಸಂಪನ್ಮೂಲಗಳನ್ನು ಹೊಂದಿದ್ದರು. ಆದರೆ, ಬಿಜೆಪಿ-ಶಿವಸೇನೆ-ಎನ್ಸಿಪಿ (ಅಜಿತ್) ಮೊದಲ ಎರಡು ಹಂತದ ಮತದಾನ ಮುಗಿದ ನಂತರವೇ ಕೆಲವು ಸ್ಥಾನಗಳಲ್ಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿವೆ. ಇದರಿಂದ ಮೈತ್ರಿಕೂಟಕ್ಕೆ ಪ್ರಚಾರಕ್ಕೆ ಕಡಿಮೆ ಸಮಯ ಉಳಿದಿತ್ತು. ಸಾರ್ವತ್ರಿಕ ಚುನಾವಣೆಗೂ ಮುನ್ನ ಬಿಜೆಪಿಯ ಮಿತ್ರಪಕ್ಷಗಳಿಂದ ಅಸಹಕಾರದ ದೂರುಗಳು ಮತ್ತೆ ಮತ್ತೆ ಮುನ್ನೆಲೆಗೆ ಬಂದವು.
ಇನ್ನೊಂದಡೆ, ಎರಡು ಸ್ಥಾನಗಳನ್ನು ಹೊರತುಪಡಿಸಿ, ಪ್ರತಿಪಕ್ಷಗಳು ಆಡಳಿತಾರೂಢ ಮೈತ್ರಿಗಿಂತ ಚೆನ್ನಾಗಿ ಯೋಜಿತ ರೀತಿಯಲ್ಲಿ ಮೈತ್ರಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾದವು. ಪ್ರಚಾರವನ್ನೂ ನಡೆಸಿದವು. ಇದರ ಫಲ ಚುನಾವಣೆ ಫಲಿತಾಂಶದಲ್ಲಿ ಗೋಚರಿಸಿದೆ.
ಶಿವಸೇನಾ ವಿಭಜನೆ ಹಿನ್ನೆಲೆಯಲ್ಲಿ ಯಾವತ್ಮಾಲ್, ಸಂಭಾಜಿ ನಗರ, ವಾಯವ್ಯ ಮುಂಬೈ, ಹತ್ಕನಂಗಲೆ ಮತ್ತು ದಕ್ಷಿಣ ಮಧ್ಯ ಮುಂಬೈ ಈ ಐದು ಕ್ಷೇತ್ರಗಳು ಪ್ರಮುಖವಾಗುತ್ತವೆ. ಏಕನಾಥ್ ಶಿಂಧೆ ಅವರ ಶಿವ ಸೇನಾ ಮತ್ತು ಉದ್ಧವ್ ಠಾಕ್ರೆ ಶಿವಸೇನಾ ನಡುವಿನ ಪೈಪೋಟಿಯಲ್ಲಿ ಯಾರ ಪ್ರಾಬಲ್ಯ ಎಷ್ಟು ಎಂಬುದು ಮನವರಿಕೆಯಾಗಿದೆ. ಈ ಐದು ಸ್ಥಾನಗಳಲ್ಲಿ, ಶಿಂಧೆ ಶಿವ ಸೇನೆಯು ಯವತ್ಮಾಲ್, ಸಂಭಾಜಿ ನಗರ ಮತ್ತು ವಾಯವ್ಯ ಮುಂಬೈನಲ್ಲಿ ಪ್ರಭಾವಿಯಾಗಿದೆ.
ಇದನ್ನೂ ಓದಿ:
ಮಹಾರಾಷ್ಟ್ರದ ಹೈಪ್ರೊಫೈಲ್ ಕ್ಷೇತ್ರಗಳಿವು
ಕಲ್ಯಾಣ್ - ಡಾ. ಶ್ರೀಕಾಂತ್ ಶಿಂಧೆ (ಶಿವಸೇನೆ)
ಮುಂಬಯಿ ದಕ್ಷಿಣ - ಅರವಿಂದ್ ಸಾವಂತ್ ಶಿವಸೇನೆ (ಯುಬಿಟಿ)
ಥಾಣೆ - ರಾಜನ್ ಬಾಬುರಾವ್ ವಿಚಾರೆ ಶಿವಸೇನೆ (ಯುಬಿಟಿ)
ನಂದೂರ್ಬರ್ - ಗೋವಲ್ ಕೆ ಪದ್ವಿ (ಕಾಂಗ್ರೆಸ್)
ಬೀಡ್ - ಪಂಕಜಾ ಮುಂಡೆ (ಬಿಜೆಪಿ)
ಮುಂಬಯಿ ಉತ್ತರ - ಪಿಯೂಷ್ ಗೋಯಲ್ (ಬಿಜೆಪಿ)
ಮುಂಬಯಿ ಉತ್ತರ ಮಧ್ಯ - ವರ್ಷ ಗಾಯಕ್ವಾಡ್ (ಕಾಂಗ್ರೆಸ್)
ಭಿವಾಂಡಿ- ಕಪಿಲ್ ಪಾಟೀಲ್ (ಬಿಜೆಪಿ)
ಜಲ್ನಾ - ದಾನ್ವೆ ರಾವ್ಸಾಹೇಬ್ ದಾದಾರಾವ್ (ಬಿಜೆಪಿ)
ಇದನ್ನೂ ಓದಿ:
ಮಹಾರಾಷ್ಟ್ರದಲ್ಲಿ 2019ರ ಲೋಕಸಭಾ ಚುನಾವಣೆ ಫಲಿತಾಂಶ ಹೀಗಿತ್ತು
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳ ಪೈಕಿ 41 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ ಮತ್ತು ಶಿವಸೇನೆ (ಉದ್ಧವ್) ಒಟ್ಟಾಗಿ ಚುನಾವಣೆ ಎದುರಿಸಿದವು. ಬಿಜೆಪಿ ಶೇಕಡ 27.8 ರಷ್ಟು ಮತಗಳೊಂದಿಗೆ 23 ಸ್ಥಾನಗಳಲ್ಲಿ ಗೆಲುವು ದಾಖಲಿಸಿದರೆ, ಶಿವಸೇನೆ ಶೇಕಡ 23.5 ರಷ್ಟು ಮತಗಳೊಂದಿಗೆ 18 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಎನ್ಸಿಪಿ 4 ಸ್ಥಾನ ಪಡೆದಿತ್ತು. ಎಐಎಂಐಎಂ ಮತ್ತು ಕಾಂಗ್ರೆಸ್ ತಲಾ ಒಂದು ಸ್ಥಾನ ಗಳಿಸಿದ್ದವು.
ಆದರೆ, ಈ ಸಲದ ಲೋಕಸಭಾ ಚುನಾವಣೆಗೆ ಮೊದಲು ಶಿವಸೇನೆ ಎರಡು ಬಣಗಳಾಗಿ ಒಡೆದಿದೆ. ಉದ್ಧವ್ ಠಾಕ್ರೆ ಬಣವು ಇಂಡಿಯಾ ಬ್ಲಾಕ್ನ ಭಾಗವಾಗಿದೆ. ಏಕನಾಥ ಶಿಂಧೆ ಗುಂಪು ಎನ್ಡಿಎ ಪಾಳಯದಲ್ಲಿದೆ. 2019 ರಲ್ಲಿ, ಎಐಎಂಐಎಂ ಮತ್ತು ವಿಬಿಎ ಮೈತ್ರಿಕೂಟ ಚುನಾವಣೆಗೆ ಸ್ಪರ್ಧಿಸಿ ಒಂದು ಸ್ಥಾನ ಗೆದ್ದಿದ್ದವು. ಇನ್ನೊಂದು ಸ್ಥಾನ ಸ್ವತಂತ್ರ ಅಭ್ಯರ್ಥಿಯ ಪಾಲಾಗಿತ್ತು.
ಇದಕ್ಕೂ ಮೊದಲು, ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು 2014 ರಲ್ಲಿ 42 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಎರಡೂ ಅವಧಿಯಲ್ಲಿ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳ ಗೆಲುವು ಬಿಜೆಪಿ ಲೋಕಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಲು ಮತ್ತು ಬಹುಮತ ಗಳಿಸಲು ನೆರವಾದವು.
👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.