Delhi Cabinet: ದೆಹಲಿ ಸಚಿವ ಸಂಪುಟಕ್ಕೆ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ರಾಜೀನಾಮೆ, ಗೆಹ್ಲೋಟ್, ಆನಂದ್ಗೆ ಇವರ ಖಾತೆಗಳ ಹಂಚಿಕೆ
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಂಬಿಕಸ್ಥ ಮಂತ್ರಿಗಳಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರು ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಸೇರಿದ್ದು, ಮಂಗಳವಾರ ತಮ್ಮ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಂಬಿಕಸ್ಥ ಮಂತ್ರಿಗಳಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರು ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಸೇರಿದ್ದು, ಮಂಗಳವಾರ ತಮ್ಮ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉತ್ತಮ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ಒದಗಿಸಿದ ಇಬ್ಬರು ಪ್ರಮುಖ ನಾಯಕರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ ವರ್ಷ ಮೇ ತಿಂಗಳಲ್ಲಿ ಜಾರಿ ನಿರ್ದೇಶನಾಲಯ ಜೈನ್ ಅವರನ್ನು ಬಂಧಿಸಿದ ಬಳಿಕ ಪ್ರತಿಪಕ್ಷ ಬಿಜೆಪಿ ಜೈನ್ ರಾಜೀನಾಮೆಗೆ ಒತ್ತಾಯಿಸಿತ್ತು.
ಆಗಸ್ಟ್ 2022ರಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಸಿಸೋಡಿಯಾ ಹೆಸರು ಬಂದ ಬಳಿಕ ಇವರ ರಾಜೀನಾಮೆಗೂ ಬಿಜೆಪಿ ಒತ್ತಾಯಿಸಿತ್ತು. ಇದೇ ಭಾನುವಾರ ಸಿಬಿಐಯು ಸಿಸೋಡಿಯಾ ಅವರನ್ನು ಬಂಧಿಸಿತ್ತು.
ಸಿಸೋಡಿಯಾ ಅವರ ಖಾತೆಗಳನ್ನು ಕಂದಾಯ ಸಚಿವ ಕೈಲಾಶ್ ಗಹ್ಲೋಟ್ ಮತ್ತು ಸಮಾಜ ಕಲ್ಯಾಣ ಸಚಿವ ರಾಜ್ ಕುಮಾರ್ ಆನಂದ್ ಅವರಿಗೆ ಹಂಚಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಉಪಮುಖ್ಯಮಂತ್ರಿಯಾಗಿದ್ದ ಸಿಸೋಡಿಯಾ ಅವರು ದೆಹಲಿ ಸರ್ಕಾರದ ಆರೋಗ್ಯ, ಹಣಕಾಸು, ಶಿಕ್ಷಣ ಮತ್ತು ಗೃಹ ಸೇರಿದಂತೆ 33 ಇಲಾಖೆಗಳ ಪೈಕಿ 18 ಖಾತೆಗಳನ್ನು ನಿರ್ವಹಿಸುತ್ತಿದ್ದರು.
ಬಂಧನದ ಬಳಿಕವೂ ಜೈನ್ ಅವರು ಸರಕಾರದಲ್ಲಿ ಯಾವುದೇ ಖಾತೆಯಿಲ್ಲದೆ ಸಚಿವರಾಗಿ ಮುಂದುವರೆದಿದ್ದರು. ಆರೋಗ್ಯ, ಗೃಹ ಮತ್ತು ನಗರಾಭಿವೃದ್ಧಿ ಸೇರಿದಂತೆ ಅವರ ವಿವಿಧ ಖಾತೆಗಳನ್ನು ಸಿಸೋಡಿಯಾ ಅವರಿಗೆ ನೀಡಲಾಗಿತ್ತು.
ಜೈನ್ ಬಂಧನದ ಬಳಿಕ ಸಿಸೋಡಿಯಾ ಅವರ ಕೆಲಸದ ಹೊರೆ ಡಬಲ್ ಆಗಿತ್ತು. ಅವರು ದೆಹಲಿ ಸರ್ಕಾರದ ಬಹುಪಾಲು ನಿರ್ಣಾಯಕ ಇಲಾಖೆಗಳನ್ನು ನಿರ್ವಹಿಸುತ್ತಿದ್ದರು.
ಇವರಿಬ್ಬರು ದೆಹಲಿಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ "ಯಶಸ್ವಿ ಪರಿವರ್ತನೆ"ಗೆ ಕಾರಣವಾಗಿದ್ದಾರೆ ಎಂದು ಆಮ್ ಆದ್ಮಿ ತಿಳಿಸಿದೆ. ಪಕ್ಷದ ಜನಪ್ರಿಯತೆ ಮತ್ತು ನಿರಂತರ ಚುನಾವಣಾ ಯಶಸ್ಸಿಗೆ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಿಸೋಡಿಯಾ ಅವರ ಬಂಧನದ ನಂತರ ಬಿಜೆಪಿಯು ಎಎಪಿ ಮೇಲೆ ತನ್ನ ದಾಳಿಯನ್ನು ಹೆಚ್ಚಿಸಿದೆ. ಜೈನ್ ಅವರನ್ನು ದೆಹಲಿ ಕ್ಯಾಬಿನೆಟ್ನಿಂದ ವಜಾಗೊಳಿಸುವಂತೆ ಒತ್ತಾಯಿಸುತ್ತಿದೆ.
ದೆಹಲಿ ಉಪಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರು ಸಿಬಿಐ ತಮ್ಮನ್ನು ಬಂಧಿಸಿರುವುದುನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಅವರ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಗೊಳಿಸಿದೆ.
ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಸಿಬಿಐ ಕಳೆದ ಭಾನುವಾರ ಬಂಧಿಸಿತ್ತು. ದೆಹಲಿಯ ವಿಶೇಷ ನ್ಯಾಯಾಲಯ ಅವರನ್ನು 5 ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿತ್ತು. ಈ ಬಂಧನವನ್ನು ಪ್ರಶ್ನಿಸಿ ಸಿಸೋಡಿಯಾ ಸುಪ್ರೀಂ ಕೋರ್ಟ್ನ ಮೊರೆ ಹೋಗಿದ್ದರು.
ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಫೆ.26 ರಂದು ಸತತ 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದ ಸಿಬಿಐ ಆ ಬಳಿಕ ಕಸ್ಟಡಿಗೆ ತೆಗೆದುಕೊಂಡಿತ್ತು. ಈ ಪ್ರಕರಣದ ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸಿಸೋಡಿಯಾ ಅವರನ್ನು ಬಂಧಿಸಲಾಗಿತ್ತು.