Migrant workers row: ವಲಸೆ ಕಾರ್ಮಿಕರ ಕುರಿತು ಸುಳ್ಸುದ್ದಿ, ಸರೇಂಡರ್ ಆದ ಯೂಟ್ಯೂಬರ್ ಮನೀಶ್ ಕಶ್ಯಪ್
ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿಯಾಗುತ್ತಿದೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಿರುವ ಆರೋಪದಡಿ ಪೊಲೀಸರು ಹುಡುಕುತ್ತಿದ್ದ ಯೂಟ್ಯೂಬರ್ ಮನೀಶ್ ಕಶ್ಯಪ್ ಇದೀಗ ಬಿಹಾರ ಪೊಲೀಸರ ಮುಂದೆ ಸರೆಂಡರ್ ಆಗಿದ್ದಾನೆ.
ಬಿಹಾರ: ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿಯಾಗುತ್ತಿದೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಿರುವ ಆರೋಪದಡಿ ಪೊಲೀಸರು ಹುಡುಕುತ್ತಿದ್ದ ಯೂಟ್ಯೂಬರ್ ಮನೀಶ್ ಕಶ್ಯಪ್ ಇದೀಗ ಬಿಹಾರ ಪೊಲೀಸರ ಮುಂದೆ ಸರೆಂಡರ್ ಆಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಜೌಲಿಯಾದಲ್ಲಿ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ನೇತೃತ್ವದಲ್ಲಿ ಶನಿವಾರ ಬೆಳಗ್ಗೆ ಯೂಟ್ಯೂಬರ್ಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕುವ ಪ್ರಕ್ರಿಯೆಗೆ ಮುಂದಾದಗ ಯೂಟ್ಯೂಬರ್ ಜಗದೀಶ್ಪುರ ಪೊಲೀಸ್ ಠಾಣೆಯಲ್ಲಿ ಶರಣಾದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಶ್ಯಪ್ ಅವರನ್ನು ಬಿಹಾರ ಮತ್ತು ತಮಿಳುನಾಡು ಪೊಲೀಸರು ವಿಚಾರಣೆ ನಡೆಸಲಿದ್ದಾರೆ ಎಂದು ಆರ್ಥಿಕ ಅಪರಾಧ ಘಟಕದ (ಇಒಯು) ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಎನ್ಎಚ್ ಖಾನ್ ಹೇಳಿದ್ದಾರೆ. "ಬಿಹಾರ ಪೊಲೀಸರು ಅವರ ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸಿದ್ದರೆ, ತಮಿಳುನಾಡು ಪೊಲೀಸರು ಒಂಬತ್ತು ಪ್ರಕರಣಗಳನ್ನು ದಾಖಲಿಸಿದ್ದಾರೆ" ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಹಿಂದೆ, ಹಿರಿಯ ಅಧಿಕಾರಿಗಳನ್ನೊಳಗೊಂಡ ಬಿಹಾರ ಸರ್ಕಾರದ ಸತ್ಯಶೋಧನಾ ತಂಡವು ತಮಿಳುನಾಡಿನ ವಲಸೆ ಕಾರ್ಮಿಕರ ಮೇಲಿನ ದಾಳಿಯ ಆರೋಪಗಳನ್ನು ನಿರಾಕರಿಸಿತ್ತು.
ಕಶ್ಯಪ್ ಮತ್ತು ಮತ್ತೊಬ್ಬ ಆರೋಪಿ ಯುವರಾಜ್ ಸಿಂಗ್ ರಜಪೂತ್ ವಿರುದ್ಧ ಪೊಲೀಸರು ಅರೆಸ್ಟ್ ವಾರೆಂಟ್ ಹೊರಡಿಸಿದ್ದರು. ಶರಣಾಗತಿಗಾಗಿ ಅವರ ಮೇಲೆ ಒತ್ತಡ ಹೇರಲು ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದರು. ಇಒಯು ರಚಿಸಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಆರು ತಂಡಗಳು ಪಟಣಾ ಮತ್ತು ಚಂಪಾರಣ್ ಪೊಲೀಸರೊಂದಿಗೆ ಕಶ್ಯಪ್ನನ್ನು ಹುಡುಕುತ್ತಿದ್ದರು.
"ನಮ್ಮೆರಡು ತಂಡಗಳು ಕಳೆದ ಒಂದು ವಾರದಿಂದ ದೆಹಲಿ ಮತ್ತು ಹರಿಯಾಣದಲ್ಲಿ ಬೀಡುಬಿಟ್ಟಿದ್ದವು. ನೋಯ್ಡಾ, ಸೋನಿಪತ್, ದೆಹಲಿ ವಿಮಾನ ನಿಲ್ದಾಣ ಸಮೀಪದಲ್ಲಿ ಈತನನ್ನು ಹುಡುಕಲಾಗಿದೆ. ಆದರೆ, ಕಶ್ಯಪ್ ಹರ್ಯಾಣದಿಂದ ರಸ್ತೆ ಮಾರ್ಗವಾಗಿ ಬಿಹಾರಕ್ಕೆ ತೆರಳಿರುವ ನಿರ್ದಿಷ್ಟ ಮಾಹಿತಿ ಇತ್ತು. ಕಶ್ಯಪ್ ನ್ಯಾಯಾಲಯದಲ್ಲಿ ಶರಣಾಗಲು ಪ್ರಯತ್ನಿಸಬಹುದೆಂದು ಪೊಲೀಸರು ಪಟನಾ ಮತ್ತು ಬೆಟ್ಟಿಯಾದಲ್ಲಿ ಹುಡುಕಾಟ ಆರಂಭಿಸಿದ್ದರುʼʼ ಎಂದು ಇಒಯು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
"ಹುಡುಕಾಟ ಆರಂಭವಾದ ಬಳಿಕ ಈತ ಎಲ್ಲೆಲ್ಲಿ ಇದ್ದ, ಯಾರು ಈತನಿಗೆ ಆಶ್ರಯ ನೀಡಿದ್ದಾರೆ ಎಂದು ವಿಚಾರಣೆ ನಡೆಸಲಾಗುತ್ತದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. "ಕಶ್ಯಪ್ ವಿಚಾರಣೆಗಾಗಿ ತಮಿಳುನಾಡು ಪೊಲೀಸರು ಸಂಜೆಯ ವೇಳೆಗೆ ಪಟನಾ ತಲುಪಲಿದ್ದಾರೆ" ಎಂದು ಎಡಿಜಿ ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿ ನಡೆಯುವ ನಕಲಿ ವಿಡಿಯೋವನ್ನು ಕಶ್ಯಪ್ ಟ್ವೀಟ್ ಮಾಡಿದ್ದರು. ಅದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಆದರೆ, ಪ್ರಮುಖ ಆರೋಪಿ ಗೋಪಾಲ್ಗಂಜ್ ಜಿಲ್ಲೆಯವನಾದ ರಾಕೇಶ್ ರಂಜನ್ ಕುಮಾರ್ ಈ ವಿಡಿಯೋ ನಿರ್ಮಿಸಿರುವುದು ಬಳಿಕ ಪತ್ತೆಯಾಗಿತ್ತು. ಕಶ್ಯಪ್ ವಿರುದ್ಧ ಈಗಾಗಲೇ ಏಳು ಕ್ರಿಮಿನಲ್ ಪ್ರಕರಣಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿ ನಡೆಯುತ್ತಿರುವುದಕ್ಕೆ ಆಡಳಿತಾರೂಢ ಡಿಎಂಕೆ ಪಕ್ಷವನ್ನು ಹೊಣೆಗಾರರನ್ನಾಗಿ ಮಾಡಿದ ಭಾರತೀಯ ಜನತಾ ಪಕ್ಷದ ಮುಖ್ಯಸ್ಥ ಕೆ. ಅಣ್ಣಾಮಲೈ ವಿರುದ್ಧ ಅಲ್ಲಿನ ಪೊಲೀಸರು ದೂರು ದಾಖಲಿಸಿದ್ದರು. ಇವರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಆರೋಪ ಹೊರೆಸಿ ಕೇಸ್ ದಾಖಲಿಸಿದ್ದರು. ಈ ಕುರಿತ ವರದಿ ಇಲ್ಲಿದೆ ಓದಿ.